Advertisement

ಪರಿಸರ ಸಂರಕ್ಷಣೆ ನಿರ್ಲಕ್ಷಿಸಿದರೆ ಜಲಮೂಲ ನಾಶ

09:26 PM Jun 15, 2019 | Lakshmi GovindaRaj |

ಚಿಕ್ಕಬಳ್ಳಾಪುರ: ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯನ್ನು ಸಮಾರೋಪಾದಿಯಲ್ಲಿ ಕೈಗೊಳ್ಳದಿದ್ದರೆ ಭವಿಷ್ಯದ ದಿನಗಳಲ್ಲಿ ಇರುವ ಜಲಮೂಲಗಳು ಬರಿದಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್‌.ಹೆಚ್‌.ಶಿವಶಂಕರ ರೆಡ್ಡಿ ಎಚ್ಚರಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಆಯೋಜಿಸಲಾಗಿದ್ದ ಜಲಾಮೃತ ಹಾಗೂ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷವನ್ನು ರಾಜ್ಯ ಸರ್ಕಾರ ಜಲ ವರ್ಷ ಎಂದು ಘೋಷಣೆ ಮಾಡಿ ಜಲಮೂಲಗಳನ್ನು ಸಂರಕ್ಷಣೆ ಮಾಡಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಹವಾಮಾನ ವೈಪರೀತ್ಯದಿಂದ ಜಿಲ್ಲೆ ಬರ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ಎದುರಿಸಲಾಗುತ್ತಿದೆ. ಎಷ್ಟೇ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇದಕ್ಕೆ ನಮ್ಮಲ್ಲಿ ಗಿಡ, ಮರಗಳು ನಾಶವೇ ಕಾರಣವಾಗಿದೆ. ಪರಿಸರ, ನದಿ ಹಾಗೂ ಕೆರೆ ಮೂಲಗಳನ್ನು ಒತ್ತುವರಿ ಮಾಡಿಕೊಂಡು ಹಾಳು ಮಾಡಿದ್ದೇವೆ.

ಸಂರಕ್ಷಣೆ ಅಗತ್ಯ: ಕೆರೆಗೆ ಬರುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದೇವೆ. ಕೆರೆಗಳಲ್ಲಿ ಉಳುಮೆ ಮಾಡುವ ಪರಿಸ್ಥಿತಿ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಲಮೂಲಗಳು ಕಾಣೆಯಾಗುತ್ತಿರುವುದರಿಂದ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಪರಿಸರ ಸಂರಕ್ಷಣೆ ಮಾಡದಿದ್ದರೆ ನಮ್ಮ ಜಲಮೂಲಗಳು ಬರಿದಾಗಲಿವೆ ಎಂದರು. ಮಳೆ ನೀರನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಇದಕ್ಕಾಗಿ ಮಳೆ ಕೊಯ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಹಕಾರ ಮುಖ್ಯ: ಜಿಲ್ಲೆಯಲ್ಲಿ 1 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದ್ದು, ಸದ್ಯಕ್ಕೆ 50 ಲಕ್ಷ ಸಸಿ ಸಿದ್ಧವಾಗಿದೆ. ಈ ವರ್ಷದಲ್ಲಿ ಕನಿಷ್ಠ 60, 70 ಲಕ್ಷ ಸಸಿಗಳನ್ನು ನೆಡಬೇಕಿದೆ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ದಾರಿ ತೋರಿಸಬಹುದು. ಆದರೆ ಸಮುದಾಯ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

Advertisement

ಜನ ಸಮುದಾಯ ಪಾಲ್ಗೊಳ್ಳದೇ ಯಾವ ಕಾರ್ಯಕ್ರಮ ಕೂಡ ಯಶಸ್ಸು ಆಗುವುದಿಲ್ಲ. ಜಲ್ಲೆಯಲ್ಲಿ 100ಕ್ಕೆ 90 ಭಾಗ ಶೌಚಾಲಯಗಳ ನಿರ್ಮಾಣ ಆಗಿದೆ. ಗ್ರಾಮೀಣ ಭಾಗದಲ್ಲಿ ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ನಾಗರಿಕರು ಮನೆ ಹೊರಗಿನ ಪರಿಸರದ ಸ್ವಚ್ಛತೆ ಗಮನ ಕೊಡುವುದಿಲ್ಲ. ಪ್ರತಿ ಗ್ರಾಪಂ, ಹಳ್ಳಿ ಮಟ್ಟದಲ್ಲಿ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

ಜಿಪಂ ಅಧ್ಯಕ್ಷ ಹೆಚ್‌.ವಿ.ಮಂಜುನಾಥ ಮಾತನಾಡಿ, ಕಳೆದ 10 ವರ್ಷಗಳಲ್ಲಿ 8 ವರ್ಷ ಬರಗಾಲದ ದವಡೆಗೆ ಸಿಲುಕಿದೆ. ಈ ಬಾರಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಕೋಟ್ಯಂತರ ರೂ. ಹಣ ತಂದು ಕೊಳವೆ ಬಾವಿ ಕೊರೆದರೂ ನೀರೇ ಸಿಗದ ದುಸ್ಥಿತಿ ನಿರ್ಮಾಣವಾಗಿದೆ.

ಜಲಾಮೃತ ಯೋಜನೆ: ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯು ಶಾಶ್ವತವಾಗಿ ಬರಗಾಲಕ್ಕೆ ತುತ್ತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿದರು. ಸರ್ಕಾರ ಎಚ್ಚೆತ್ತುಕೊಂಡು ಜಲಾಮೃತ ಯೋಜನೆಯನ್ನು ರೂಪಿಸುವ ಮೂಲಕ ಜನ ಸಾಮಾನ್ಯರಲ್ಲಿ ಜಲ ಸಾಕ್ಷರತೆ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ.

ಜಿಲ್ಲಾದ್ಯಂತ ಆಂದೋಲನವಾಗಿ ಈ ಕಾರ್ಯಕ್ರಮ ರೂಪಿಸಲಾಗುವುದು. ಕೆರೆ, ಕುಂಟೆಗಳ ಒತ್ತುವರಿ ತೆರವುಗೊಳಿಸುವುದರ ಜೊತೆಗೆ ಹರಿಯುವ ನೀರನ್ನು ತಡೆದು ಉತ್ತರ ಪಿನಾಕಿನಿ ಹಾಗೂ ಕುಮದ್ವತಿಯನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಜಿಪಂ ಉಪಾಧ್ಯಕ್ಷೆ ನಿರ್ಮಲ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಪಂ ಸಿಇಒ ಗುರುದತ್‌ ಹೆಗಡೆ, ಜಿಪಂ ಸದಸ್ಯರಾದ ಶಿವಣ್ಣ, ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್‌, ಬಂಕ್‌ ಮುನಿಯಪ್ಪ, ಸ್ಕೂಲ್‌ ಸುಬ್ಟಾರೆಡ್ಡಿ, ಎನ್‌.ಶ್ರೀನಿವಾಸ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲಿ ಸಮುದಾಯದ ಪಾತ್ರ ಇರುತ್ತದೆಯೋ ಅಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತವೆ. ಬಹಳಷ್ಟು ಕಡೆ ಸಸಿಗಳನ್ನು ನಾಟಿ ಮಾಡಿ ಅದರ ಸಂರಕ್ಷಣೆ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿ. ಪ್ರತಿಯೊಬ್ಬರು ಕೂಡ ನಾಟಿ ಮಾಡಿದ ಸಸಿಗಳನ್ನು ಸಂರಕ್ಷಣೆಗೆ ಮುಂದಾಗಬೇಕು.
-ಎನ್‌.ಹೆಚ್‌.ಶಿವಶಂಕರರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು

ಜಿಲ್ಲೆಯಿಂದ ಬೆಂಗಳೂರಿಗೆ ಹಾಲು, ಹಣ್ಣು, ತರಕಾರಿ, ರೇಷ್ಮೆ ಬೆಳೆದು ಕಳಿಸಬೇಕು. ಆದರೆ ಬೆಂಗಳೂರಿನಿಂದ ಹರಿಯುವ ಕೊಳಚೆ ನೀರಿಗೆ ನಾವು ಕಾಯಬೇಕಿದೆ. ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಗಣಿಗಾರಿಕೆಗಳು ಇಂದು ನಮ್ಮನ್ನು ಈ ಪರಿಸ್ಥಿತಿ ತಂದು ನಿಲ್ಲಿಸಿವೆ. ಜಿಲ್ಲೆಯ ಜನರೇ ದುರಾಸೆಗೆ ಒಳಗಾಗಿ ಕೆರೆ, ಕುಂಟೆಗಳನ್ನು ಹಾಗೂ ಜಲಮೂಲಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಈ ಪರಿಸ್ಥಿತಿ ಎದುರಾಗಿದೆ.
-ಹೆಚ್‌.ವಿ.ಮಂಜುನಾಥ, ಜಿಪಂ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next