Advertisement

ಮಂಗಳಾ ಸಂಸ್ಥೆಯ ಹೆಗಲಿಗೆ ತ್ಯಾಜ್ಯ ನಿರ್ವಹಣೆ

11:13 AM May 19, 2022 | Team Udayavani |

ಮಂಗಳಾದೇವಿ: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಬರುವ ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ಪ್ರಕ್ರಿಯೆ ಅಂತಿಮಗೊಳ್ಳುವ ಮುನ್ನ, 1 ವಾರ್ಡ್‌ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯನ್ನು ಶ್ರೀ ರಾಮಕೃಷ್ಣ ಮಠದ ಮಾರ್ಗದರ್ಶನದ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಪ್ರೈ.ಲಿ.ಗೆ ಪ್ರಾಯೋಗಿಕ ವಾಗಿ ನೀಡುವ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.

Advertisement

ಮನೆ ಮನೆ ಕಸ ಸಂಗ್ರಹಣೆಗೆ ಆ್ಯಂಟೊನಿ ವೇಸ್ಟ್‌ ಹ್ಯಾಂಡ್‌ಲಿಂಗ್‌ ಸೆಲ್‌ ಪ್ರೈ.ಲಿ.ನ 7 ವರ್ಷಗಳ ಅವಧಿ 2022ರ ಜನವರಿಗೆ ಅಂತ್ಯಗೊಂಡಿದೆ. ಮುಂದೆ ಹೊಸ ಟೆಂಡರ್‌ ಆಗುವವರೆಗೆ ಆ್ಯಂಟೊನಿ ಸಂಸ್ಥೆಯೇ ತ್ಯಾಜ್ಯ ನಿರ್ವಹಣೆ ನಡೆಸಲಿದೆ. ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಪ್ರೈ.ಲಿ., ಪಾಲಿಕೆ ವತಿಯಿಂದ ಡಿಪಿಆರ್‌ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಇನ್ನಷ್ಟೇ ಅಂತಿಮ ವಾಗಬೇಕಿದೆ. ಇದೀಗ ಮಂಗಳಾ ರಿಸೋರ್ಸ್‌ ಸಂಸ್ಥೆಗೆ ಪ್ರಾಯೋಗಿಕವಾಗಿ ಮಂಗಳಾದೇವಿ ವಾರ್ಡ್‌ ನ ತ್ಯಾಜ್ಯ ನಿರ್ವಹಣೆ ಜವಾಬ್ದಾರಿಯನ್ನು ಪಾಲಿಕೆ ನೀಡಿದೆ. ಜುಲೈನಿಂದ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ.

ಪ್ರಸ್ತುತ ಆ್ಯಂಟನಿ ಸಂಸ್ಥೆಯವರು ತ್ಯಾಜ್ಯ ಸಂಗ್ರಹ, ಸಾಗಾಟವನ್ನು ನಡೆಸುತ್ತಿದ್ದು, ನಿರ್ವಹಣೆಯನ್ನು ಪ್ರತ್ಯೇಕವಾಗಿ ಮಾಡಲಾಗುತ್ತದೆ. ಆದರೆ ಮಂಗಳಾ ಸಂಸ್ಥೆಯು 1 ವಾರ್ಡ್‌ನ ತ್ಯಾಜ್ಯ ಸಂಗ್ರಹ, ಸಾಗಾಟ ಅದನ್ನು ಗೊಬ್ಬರವಾಗಿ ನಿರ್ವಹಿ ಸುವ ಮೂರೂ ಹಂತವನ್ನು ನಿರ್ವ ಹಿಸಲಿದೆ. “ಸ್ವಚ್ಛ ಮಂಗಳೂರು’ ಪರಿಕಲ್ಪನೆಯಲ್ಲಿ ಶ್ರೀ ರಾಮಕೃಷ್ಣ ಮಠ ಮಂಗಳೂರಿನಲ್ಲಿ ನಡೆಸಿದ ಸ್ವಚ್ಛತ ಕಾರ್ಯದ ಆಧಾರದಲ್ಲಿ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಇದರ ಜವಾಬ್ದಾರಿ ಹೊತ್ತುಕೊಂಡಿದೆ.

 4 ಎಲೆಕ್ಟ್ರಿಕ್‌ ವಾಹನ!

ಹೊಸದಾಗಿ ತ್ಯಾಜ್ಯ ನಿರ್ವಹಣೆ ಮಾಡುವಾಗ ಎಲೆಕ್ಟ್ರಿಕ್‌ ವಾಹನವನ್ನೇ ಬಳಸಲು ಉದ್ದೇಶಿಸಲಾಗಿದೆ. ಇದು ಸಾಧ್ಯವಾದರೆ ತ್ಯಾಜ್ಯ ನಿರ್ವಹಣೆಯಲ್ಲಿ ಮಂಗಳೂರಿನಲ್ಲಿ ಮೊದಲ ಪ್ರಯೋಗವಾಗಲಿದೆ. ಒಟ್ಟು 4 ಎಲೆಕ್ಟ್ರಿಕ್‌ ವಾಹನವನ್ನು ಖರೀದಿಸಿ ನಿರ್ವಹಣೆ ಮಾಡಲಾಗುತ್ತದೆ. ಪರಿಸರ ಪೂರಕ ಅಂಶಗಳಿಗೆ ಒತ್ತು ನೀಡಿದಂತಾಗುತ್ತದೆ.

Advertisement

ನಿರ್ವಹಣೆ: ವರ್ಮಿ ಕಂಪೋಸ್ಟಿಂಗ್‌

ಹಸಿ ಕಸವನ್ನು ಮನೆಯವರಿಂದ ‘ಕ್ರೇಟ್‌ ‘ನಲ್ಲಿ ಸಂಗ್ರಹಿಸಿದರೆ, ಒಣಕಸವನ್ನು ಚೀಲದ ಮುಖೇನ ಪಡೆಯಲಾಗುತ್ತದೆ. ಹಸಿ ಕಸವನ್ನು ಪಡೆದ ಅನಂತರ ಅದನ್ನು ಪಚ್ಚನಾಡಿಯ ನಿಗದಿತ ಸ್ಥಳದಲ್ಲಿ ‘ವರ್ಮಿ ಕಂಪೋಸ್ಟಿಂಗ್‌ ಟೆಕ್ನಾಲಜಿ’ ಮುಖಾಂತರ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಸುಮಾರು 4-5 ಟನ್‌ ತ್ಯಾಜ್ಯ ನಿರ್ವಹಣೆಗಾಗಿ 18 ಫೀಟ್‌ನ ವರ್ಮಿ ಕಂಪೋಸ್ಟಿಂಗ್‌ ಅಗತ್ಯವಿದೆ. ಇದರ ಮೇಲ್ದರ್ಜೆಗೇರುವ ಕೆಲಸವನ್ನು ಪಾಲಿಕೆ ಮಾಡಿಕೊಡಬೇಕಿದೆ. ಬೀದಿ ಬದಿ ಗುಡಿಸುವ ಕಾರ್ಯವನ್ನು ಪೌರಕಾರ್ಮಿಕರು ನಡೆಸಿದರೆ ಅದರ ತ್ಯಾಜ್ಯವನ್ನು ಮಂಗಳಾ ಸಂಸ್ಥೆಯೇ ಸಾಗಾಟ ನಡೆಸಲಿದೆ.

ಪ್ರತೀದಿನವೂ ಒಣ ಕಸ ಸಂಗ್ರಹ

ಪ್ರತೀದಿನವೂ ಹಸಿ, ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಒಣಕಸವನ್ನು ಕಾವೂರಿನಲ್ಲಿರುವ ಡ್ರೈ ವೇಸ್ಟ್‌ ಕಲೆಕ್ಷನ್‌ ಸೆಂಟರ್‌ಗೆ ನಿರ್ವಹಣೆಗಾಗಿ ಕಳು ಹಿಸಲಾಗುತ್ತದೆ. ಅಲ್ಲಿ ಇದನ್ನು ಕಂಪ್ರಸ್‌ ಮಾಡಿ ಮರು ಬಳಕೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಮರು ಬಳಕೆಗೆ ಯೋಗ್ಯವಿಲ್ಲದಿದ್ದರೆ ಅದನ್ನು ಸಿಮೆಂಟ್‌ ಫ್ಯಾಕ್ಟರಿಗೆ ನೀಡಲು ಉದ್ದೇಶಿಸಲಾಗಿದೆ.

ಎಂಆರ್‌ಪಿಎಲ್‌ ತ್ಯಾಜ್ಯ ನಿರ್ವಹಣೆ!

ಕಾರ್ಕಳದ ನಿಟ್ಟೆಯಲ್ಲಿ ಸ್ಥಳೀಯ 45 ಗ್ರಾಮ ಪಂಚಾಯತ್‌ ಗಳಿಂದ ಸಂಗ್ರಹಿಸಿದ ಒಣತ್ಯಾಜ್ಯವನ್ನು ಮಂಗಳಾ ರಿಸೋರ್ಸ್‌ ಮ್ಯಾನೆಜ್‌ಮೆಂಟ್‌ ವತಿಯಿಂದ ಎಂಆರ್‌ ಎಫ್‌ (ಸಮಗ್ರ ಘನತ್ಯಾಜ್ಯ ನಿರ್ವಹಣೆ) ಘಟಕ ನಿರ್ಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ಶ್ರೀ ಕ್ಷೇತ್ರ ಕಟೀಲು, ಉಪ್ಪಿನಂಗಡಿಯ ಗ್ರಾ.ಪಂ. ಸಹಿತ ಕೆಲವು ಕಡೆಯಲ್ಲಿ ಇಂತಹ ಪರಿಕಲ್ಪನೆ ಅನುಷ್ಠಾನದಲ್ಲಿದೆ. ಮುಂದೆ ಎಂಆರ್‌ಪಿಎಲ್‌, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಕ್ಯಾಂಪಸ್‌, ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಸಹಿತ ವಿವಿಧ ಕಡೆಗಳಲ್ಲಿ ಅನುಷ್ಠಾನವಾಗಲಿದೆ.

ಪ್ರಾಯೋಗಿಕ ಜಾರಿ
ರಾಮಕೃಷ್ಣ ಮಠದ ಮಾರ್ಗದರ್ಶನದ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ ಮೆಂಟ್‌ ಸಂಸ್ಥೆಗೆ ಪ್ರಾಯೋಗಿಕವಾಗಿ ಮಂಗಳಾದೇವಿ ವಾರ್ಡ್‌ನಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಈ ಸಂಬಂಧ ಮಾಹಿತಿ ವಿನಿಮಯ, ಪೂರಕ ಪ್ರಕ್ರಿಯೆ ಸದ್ಯ ನಡೆಯುತ್ತಿದೆ. 1 ವಾರ್ಡ್‌ನ ಅನುಷ್ಠಾನ ಸ್ವರೂಪ ಪರಿಶೀಲಿಸಿ ಇತರ ವಾರ್ಡ್‌ ಬಗ್ಗೆ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

ಸಚ್ಛ –ಸುಂದರ ವಾರ್ಡ್‌ ಸಂಕಲ್ಪ

ಮಂಗಳಾದೇವಿ ವಾರ್ಡ್‌ನ ತ್ಯಾಜ್ಯ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ನಡೆಸುವಂತೆ ಈಗಾಗಲೇ ಪಾಲಿಕೆಯಿಂದ ಬಹುತೇಕ ಒಪ್ಪಿಗೆ ದೊರೆತಿದೆ. ಸ್ವಚ್ಛ ಮಂಗಳೂರು ಪರಿಕಲ್ಪನೆ ಜಾರಿಗೊಳಿಸಿದ ರಾಮಕೃಷ್ಣ ಮಠದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ 1 ವಾರ್ಡ್‌ ಅನ್ನು ಸ್ವಚ್ಛ-ಸುಂದರ ವಾರ್ಡ್‌ ಆಗಿ ಮಾದರಿ ಸ್ವರೂಪದಲ್ಲಿ ಬದಲಿಸುವ ಸಂಕಲ್ಪ ನಮ್ಮದು. ದಿಲ್‌ರಾಜ್‌ ಆಳ್ವ, ವ್ಯವಸ್ಥಾಪಕ ನಿರ್ದೇಶಕರು ಮಂಗಳಾ ರಿಸೋರ್ಸ್‌ ಮ್ಯಾನೆಜ್‌ಮೆಂಟ್‌ ಪ್ರೈ.ಲಿ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next