Advertisement

ಕಸ ಸಮಸ್ಯೆ ಚೆಂಡು ಸಿಎಂ ಅಂಗಳಕ್ಕೆ..!

12:24 PM Dec 07, 2021 | Team Udayavani |

ದೊಡ್ಡಬಳ್ಳಾಪುರ: “ತಾಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ನಮಗೆ ಮನವರಿಕೆಯಾಗಿದ್ದು ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದಿಲ್ಲ.

Advertisement

ವಿಧಾನಪರಿಷತ್‌ ಚುನಾವಣೆ ನಂತರ ಸ್ಥಳೀಯ ಮುಖಂಡರೊಂದಿಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿದರು.

ತಾಲೂಕಿನ ಚಿಗರೇನಹಳ್ಳಿಯಲ್ಲಿನ ಬಿಎಂಪಿ ಕಸ ವಿಲೇವಾರಿಯ ಎಂಎಸ್‌ಜಿಪಿ ಘಟಕ ಮುಚ್ಚುವಂತೆ, ತಾಲೂಕಿನ ಮೂಗೇನಹಳ್ಳಿ ಬಾರೆ ಬಳಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.ಈ ಮುನ್ನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಶಾಸಕರು, ಜಿಲ್ಲಾಧಿಕಾರಿ, ಬಿಬಿಎಂಪಿ ಅಧಿಕಾರಿಗ ಳೊಂದಿಗೆ ಭೇಟಿ ನೀಡಿ, ಕಸ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು.

ಇದನ್ನೂ ಓದಿ;-ಚುನಾವಣಾ ಸೂಕ್ಷ್ಮ ವೀಕ್ಷಕರಿಗೆ ತರಬೇತಿ

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಎಸ್ಪಿ ಡಾ.ಕೋನ ವಂಶಿಕೃಷ್ಣ, ಡಿವೈಎಸ್ಪಿ ನಾಗರಾಜ್‌, ಉಪವಿಭಾ ಗಾಧಿಕಾರಿ ಅರುಳ್‌ ಕುಮಾರ್‌, ತಹಶೀಲ್ದಾರ್‌ ಟಿ.ಎಸ್‌. ಶಿವರಾಜು, ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಸಫìರಾಜ್‌ ಮತ್ತಿತರರಿದ್ದರು.

Advertisement

ಕಸ ಬೇಡವೇ ಬೇಡ: ಸಚಿವರು ಸ್ಥಳಕ್ಕೆ ಆಗಮಿಸಿದ ವೇಳೆ, ಭಕ್ತರಹಳ್ಳಿ ಗ್ರಾಪಂ ಸದಸ್ಯ ಲತಾಶ್ರೀ ಮಾತನಾಡಿ, ಎಂಎಸ್‌ಜಿಪಿ ಘಟಕದಿಂದಾಗಿ ಇಲ್ಲಿ ಜನ ವಾಸಿ ಸಲು ಆಗುತ್ತಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಘಟಕದ ಕಸದ ನೀರು, ಮಳೆ ನೀರಿಗೆ ಸೇರಿ, ಕೆರೆ ಕುಂಟೆ ಕಾಲುವೆಗಳಲ್ಲಿ ವಿಷಕಾರಿ ನೀರು ಹರಿಯುತ್ತಿದೆ. ಕಾಲುವೆಗಳಲ್ಲಿ ವಿಷಯುಕ್ತ ನೀರು ಹರಿಯುತ್ತಿವೆ.

ಮಹಿಳೆಯರಿಗೆ ಗರ್ಭಪಾತದ ಸಮಸ್ಯೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ವಿವಿಧ ರೋಗ ರುಜಿನ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ದುಷ್ಪರಿಣಾಮ ಕುರಿತು ಸಂಬಂಧ ಪಟ್ಟವರ ಗಮನಕ್ಕೆ ತರಲಾಗಿದೆ. 2019ರಲ್ಲಿ ಟೆರ್ರಾಫರ್ಮಾ ಘಟಕದ ವಿರುದ್ಧ ಹೋ ರಾಟ ಮಾಡಿದಾಗ, ಅಂದು ಜಿಲ್ಲಾ ಉಸ್ತುವಾರಿ ಸಚಿವ ರಾಗಿದ್ದ ಆರ್‌.ಅಶೋಕ್‌ ಭರವಸೆ ನೀಡಿ ಘಟಕ ಸ್ಥಗಿತ ಗೊಳಿಸಲಾಗಿತ್ತು.

ಆಗ ಎಂಎಸ್‌ಜಿಪಿ ಸಹ ನಿಲ್ಲಿಸಲು ಭರವಸೆ ನೀಡಿದ್ದರು. ಆದರೆ ಈಡೇರಲಿಲ್ಲ ಎಂದರು. ಕರವೇ ಪ್ರವೀಣ್‌ ಕುಮಾರ್‌ ಶೆಟ್ಟಿ ಬಣದ ರಾಜ್ಯ ಕಾರ್ಯ ದರ್ಶಿ ರಾಜಘಟ್ಟ ರವಿ, ಕರವೇ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯಲ್ಲ. ಎಂಎಸ್‌ಜಿಪಿ ಘಟಕ ಸ್ಥಗಿತ ಮಾಡಲೇ ಬೇಕಾಗಿದ್ದು, ಹೋರಾಟಕ್ಕೆ ನಮ್ಮ ಸಂಘಟನೆಗಳ ಬೆಂಬಲವಿದೆ ಎಂದರು.

ಆಕ್ರೋಶ: ತಾಲೂಕಿನ ಗುಂಡ್ಲಹಳ್ಳಿ ಕ್ರಾಸ್‌ ಬಳಿ ಪೊಲೀಸರು ಸೆ.144 ನಿಷೇಧಾಜ್ಞೆ ವಿಧಿಸಿರುವುದರಿಂದ ಪ್ರತಿಭಟನೆ ಮೂಗೇನಹಳ್ಳಿ ಬಾರೆ ಬಳಿ ನಡೆಯಿತು ಎನ್ನಲಾಗಿದೆ. ಈ ನಡುವೆ ಶನಿವಾರ ಮತ್ತು ಭಾನುವಾರ ನಡೆದ ವಿದ್ಯಮಾನಗಳ ಹಿನ್ನೆಲೆ ಸೋಮವಾರ ಮೂಗೇ ನಹಳ್ಳಿ ಬಾರೆ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಆದರೆ ಬಿಬಿಎಂಪಿ ಮಾರ್ಷಲ್‌ಗ‌ಳು ಸ್ಥಳದಲ್ಲಿದ್ದುದನ್ನು ಕಂಡು ಕೆರಳಿದ ಪ್ರತಿಭಟನಾಕಾರರು, ಪೊಲೀಸರಿಗೆ ಮಾತ್ರ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಯಿದೆ. ಪೊಲೀಸರ ಮೇಲೆ ನಂಬಿಕೆ ಇದೆ. ಇಲ್ಲಿ ಬಿಬಿಎಂಪಿ ಮಾರ್ಷಲ್‌ ಕರೆಸುವ ಅನಿವಾರ್ಯತೆ ಏನಿದೆ. ಮೊದಲು ಅವರನ್ನು ಬೆಂಗಳೂರಿಗೆ ಕಳಿಸಿ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಟಿಎಪಿಎಂಸಿಎಸ್‌ ಅಧ್ಯಕ್ಷ ಸಿದ್ದರಾಮಯ್ಯ, ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್‌, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಬಿಎಸ್‌ಪಿ ರಾಜ್ಯ ಮುಖಂಡ ಪುರುಷೋತ್ತಮ್‌, ಬಿಜೆಪಿ ಮುಖಂಡ ಕೆ.ಟಿ.ಕೃಷ್ಣಪ್ಪ, ಮುಖಂಡರಾದ ರಾಮಣ್ಣ, ಪು.ಮಹೇಶ್‌, ಬಶೀರ್‌, ನಂಜಪ್ಪ, ಹಲವು ಮುಖಂಡರು ಉಪಸ್ಥಿತರಿದ್ದರು.

ಕೊಟ್ಟ ಭರವಸೆ ಈಡೇರದಿದ್ದರೆ ಚುನಾವಣೆ ನಂತರ ಹೋರಾಟ

ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಚುನಾವಣೆ ನಂತರ ಮುಖ್ಯಮಂತ್ರಿಗಳ ಬಳಿ ತೆರಳಿ ಸಭೆ ನಡೆಸುವುದಾಗಿ ಹೇಳಿದ್ದಾರೆ. ನಾವು ಕಾನೂನನ್ನು ಗೌರವಿಸಬೇಕು. ಮುಖ್ಯಮಂತ್ರಿಗಳ ಸಭೆಯಲ್ಲಿ ನಮಗೆ ಘಟಕ ನಿಲ್ಲಿಸುವ ಕುರಿತು, ಧನಾತ್ಮಕ ಪ್ರತಿಕ್ರಿಯೆ ಬರಬೇಕು.

ಇಲ್ಲವಾದಲ್ಲಿ ಮತ್ತೆ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಹೋರಾಟ ಆರಂಭಿಸಲಾಗುವುದು ಎಂದು ಧರಣಿಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದರು.

“50ರಿಂದ 60 ಲಾರಿ ಬದಲು 200 ರಿಂದ 300 ಲಾರಿಗಳು ಬರುತ್ತಿವೆ. ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, 80 ಗ್ರಾಮಗಳ ಜನತೊಂದರೆ ಅನುಭವಿಸುತ್ತಿದ್ದಾರೆ. ದಿಢೀರ್‌ ಭೇಟಿ ನೀಡಿ ಪರಿಸ್ಥಿತಿ ತಿಳಿಯಿರಿ. ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇವೆ, ಘಟಕವನ್ನು ಬಂದ್‌ ಮಾಡಿಸಿ.”(ಸಚಿವರಿಗೆ ಮನವಿ ಮಾಡಿದ್ದು). – ವೆಂಕಟರಮಣಯ್ಯ, ಶಾಸಕರು

ನಿಮ್ಮ ಹೊಸಕೋಟೆಗೇ ಕಸ ಕೊಂಡೊಯ್ಯಿರಿ…

ಸ್ವಾಮಿ, ನಮ್ಮ ಗ್ರಾಮದ ಹಳ್ಳಿಗಳ ಯುವಕರಿಗೆ ಹೆಣ್ಣು ಕೊಡಲು ಯಾರೂ ಬರುತ್ತಿಲ್ಲ. ಶಾಲೆಗಳಲ್ಲಿ ಮಕ್ಕಳು ಬಿಸಿಯೂಟ ಮಾಡಲಾಗುತ್ತಿಲ್ಲ. ವಿಷಕಾರಿ ತ್ಯಾಜ್ಯ ನೀರು ಅಂತರ್ಜಲಕ್ಕೆ ಮಾರಕವಾಗಿದೆ. ಕೊಳವೆ ಬಾವಿಗಳಲ್ಲಿಯೂ ವಿಷಕಾರಿ ನೀರು ಬರುತ್ತಿದೆ.

ಎಂಎಸ್‌ಜಿಪಿ ಘಟಕವನ್ನೂ ಹಂತ ಹಂತವಾಗಿ ನಿಲ್ಲಿಸಲಾಗುವುದು ಎಂದು ಈ ಹಿಂದೆ ನೀಡಿದ್ದ ಭರವಸೆಗಳಲ್ಲಾ ಹುಸಿಯಾಗಿವೆ. ಬಿಬಿಎಂಪಿಯಿಂದ ನಮಗೆ ಯಾವುದೇ ಹಣ, ಅಭಿವೃದ್ಧಿ ಬೇಡ. ಕಸ ಬರುವುದನ್ನು ನಿಲ್ಲಿಸಿ, ಆಗದಿದ್ದರೆ ಕಸದ ಲಾರಿಗಳನ್ನು ನಿಮ್ಮ ಹೊಸಕೋಟೆ ಯಲ್ಲಿಯೇ ಹಾಕಿಸಿಕೊಳ್ಳಿ ಎಂದು ನೆರೆದಿದ್ದ ಗ್ರಾಮಸ್ಥರು, ಸಚಿವರೊಂದಿಗೆ ಏರುಧ್ವನಿಯಲ್ಲಿ ತಿಳಿಸಿದರು

ಅಗತ್ಯ ಕ್ರಮ ಕೈಗೊಲು ಸಿಎಂ ಜತೆ ಚರ್ಚೆ:

ಈ ಘಟಕ 14 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಒಂದೆರಡು ದಿನಕ್ಕೆ ನಿಲ್ಲಿಸಲು ಅಸಾಧ್ಯ. ನಾವೇ ಆಗಲೀ ನಿಮ್ಮ ಶಾಸಕರೇ ಆಗಲೀ ಮುಖ್ಯಮಂತ್ರಿಗಳಾದರೂ ಯಾರಿಂದಲೂ ಆಗುವುದಿಲ್ಲ ಎಂದು ಸಚಿವ ಎಂ.ಟಿ.ಬಿ.ನಾಗರಾಜ್‌ ತಿಳಿಸಿದರು.

ಸೂಕ್ತ ನಿರ್ವಹಣೆ ಕೊರತೆ ಹಾಗೂ ಮಳೆ ಹೆಚ್ಚಾಗಿದ್ದರಿಂದ ಸಮಸ್ಯೆ ಉಂಟಾಗಿದೆ. ಘಟಕದಲ್ಲಿ ನಿಯಮಬಾಹಿರವಾಗಿ ಮಾಡುತ್ತಿರುವ ಹಾಗೂ ಸೂಕ್ತ ನಿರ್ವಹಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವ ಬಗ್ಗೆ ಬಿಬಿಎಂಪಿ ಹಾಗೂ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಘಟಕದ ಮಾಲಿಕರ ವಿರುದ್ಧ ಎಫ್‌ ಐಆರ್‌ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿದ್ದಾರೆ.

ಇಲ್ಲಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ಇಲ್ಲಿನ ಮುಖಂಡರ ನಿಯೋಗ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಚರ್ಚಿಸಲಾ ಗುವುದು. ಇಲ್ಲಿ ಕಸದ ಲಾರಿಗಳನ್ನು ತಡೆ ಹಿಡಿಯಲಾಗಿದೆ. ಅಲ್ಲಿ ನಗರದಲ್ಲಿ ಕಸ ವಿಲೇವಾರಿ ಆಗದೇ ಪ್ರತಿಭಟನೆ ಮಾಡಲಾಗುತ್ತಿದೆ. ದಯವಿಟ್ಟು ಕಸದ ಲಾರಿಗಳನ್ನು ಬಿಡಲು ವ್ಯವಸ್ಥೆ ಮಾಡಿ. ಧರಣಿಯನ್ನು ಹಿಂದಕ್ಕೆ ಪಡೆಯಿರಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next