ಇಸ್ಲಾಮಾಬಾದ್ : ”ಭಾರತ – ಪಾಕ್ ನಡುವಿನ ಸಂಘರ್ಷಕ್ಕೆ ಯುದ್ಧ ವು ಒಂದು ಪರಿಹಾರವೇ ಅಲ್ಲ, ಶಾಂತಿಯುತ ಮಾತುಕತೆಯಲ್ಲೇ ಪರಿಹಾರವನ್ನು ಕಾಣಬೇಕಿದೆ” ಎಂದು ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಹೇಳಿದ್ದಾರೆ.
ಅಲ್ ಜಜೀರಾ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅವರು “ಪರಸ್ಪರ ನೆರೆಹೊರೆಯ ಭಾರತ, ಪಾಕಿಸ್ಥಾನ ಅಣುಶಕ್ತ ರಾಷ್ಟ್ರಗಳಾಗಿವೆ. ಇವುಗಳ ನಡುವಿನ ಬಿಕ್ಕಟ್ಟು, ಸಂಘರ್ಷಕ್ಕೆ ಯುದ್ಧದಲ್ಲಿ ಯಾವುದೇ ಪರಿಹಾರವಿಲ್ಲ. ಇದನ್ನು ಉಭಯತರೂ ಮನಗಾಣುವುದರಲ್ಲೇ ವಿವೇಕವಿದೆ. ಅಂತೆಯೇ ನಾವು ಮಾತುಕತೆಗೆ ಸಿದ್ಧರಾಗಿದ್ದೇವೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆ ಬಿಟ್ಟರೆ ನಮಗೆ ಬೇರೆ ಆಯ್ಕೆಯೇ ಇಲ್ಲ’ ಎಂದು ಹೇಳಿದರು.
ಇಮ್ರಾನ್ ಖಾನ್ ನೇತೃತ್ವದ ನೂತನ ಪಾಕ್ ಸರಕಾರ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸಿದೆ.ಈ ದಿಶೆಯಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಇಟ್ಟರೆ ಪಾಕಿಸ್ಥಾನ ಎರಡು ಹೆಜ್ಜೆ ಮುಂದೆ ಇಡಲು ಸಿದ್ಧವಿದೆ ಎಂದು ಇಮ್ರಾನ್ ಖಾನ್ ಈಗಾಗಲೇ ಭಾರತಕ್ಕೆ ತಿಳಿಸಿದ್ದಾರೆ. ಮಾತ್ರವಲ್ಲದೆ ಭಾರತದೊಂದಿಗೆ ರಚನಾತ್ಮಕ, ಶಾಂತಿಯುತ ಮಾತುಕತೆ ನಡೆಸುವ ಇಚ್ಛೆಯನ್ನು ತಾನು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ ಪ್ರಕಟಿಸಿದ್ದಾರೆ ಎಂದು ಕುರೇಶಿ ಹೇಳಿದರು.
ಇದೇ ವೇಳೆ ಕುರೇಶಿ ಅವರು ಭಾರತ ಮತ್ತು ಪಾಕಿಸ್ಥಾನದ ನಡುವಿನ ಮೂಲಭೂತ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕೆಂದೂ ಅಲ್ ಜಜೀರಾ ಸಂದರ್ಶನದಲ್ಲಿ ಹೇಳಿದರು.
ಕಾಶ್ಮೀರ ಜನರ ಇಚ್ಛಾನುಸಾರ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸುವಂತೆ ಅವರು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಅವರನ್ನು ಕೋರಿದರು.