ವಿಜಯಪುರ: ಹುಟ್ಟುತ್ತಲೇ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಈ ಮಗುವಿಗೆ 11 ವಯದಲ್ಲೇ 4 ಶಸ್ತ್ರಚಿಕಿತ್ಸೆ ಆಗಿದೆ. ಇದೀಗ 5ನೇ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ತನ್ನ ಕೂಲಿಯನ್ನೇ ನಂಬಿರುವ ಕುಟುಂಬ ಸಾಗಿಸುವ ಆ ತಾಯಿ ಮಗನನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದು, ಸಾರ್ವಜನಿಕರ ನೆರವಿಗೆ ಅಂಗಲಾಚುತ್ತಿದ್ದಾಳೆ.
ಹೊಲ-ಮನೆ ಇಲ್ಲದಿದ್ದರೂ ಬಾಡಿಗೆ ಮನೆಯಲ್ಲಿರುವ ಲಕ್ಷ್ಮೀ ಹಾಗೂ ರಮೇಶ ಸರಸಂಬಿ ಅವರ ಕುಟುಂಬ ಕೂಲಿ ಮಾಡಿಕೊಂಡು ನೆಮ್ಮದಿ ಜೀವನ ನಡೆಸುತ್ತಿತ್ತು. ಆದರೆ 11 ವರ್ಷಗಳ ಹಿಂದೆ ಎರಡನೇ ಮಗ ಗಣೇಶನಿಗೆ ಹುಟ್ಟುತ್ತಲೇ ಉಂಟಾಗಿರುವ ವಿಚಿತ್ರ ದೈಹಿಕ ಸಮಸ್ಯೆ ಬಡ ಕುಟುಂಬವನ್ನು ಜರ್ಜರಿತ ಮಾಡಿದೆ. ಗಣೇಶನಿಗೆ ಜನ್ಮತಃ ಗುದದ್ವಾರವಿಲ್ಲದೇ ಮಲವಿಸರ್ಜನೆ ಸಮಸ್ಯೆ ಕಾಣಿಸಿಕೊಂಡಾಗ ವಾರದಲ್ಲಿ ಹೊಟ್ಟೆಯಲ್ಲಿ ಕೊಳವೆ ಹಾಕಿ ಮಲವಿಸರ್ಜನೆಗೆ ದಾರಿ ಮಾಡಿಕೊಟ್ಟಿದ್ದರು.
ಇದಾದ ಬಳಿಕ ಸಮಸ್ಯೆ ಪರಿಹಾರ ಆಗುವ ಬದಲು ಮತ್ತಷ್ಟು ಉಲ್ಬಣಗೊಂಡಿತು. ಹೀಗಾಗಿ 11 ವರ್ಷದ ಆ ಮಗುವಿಗೆ ಇದೀಗ ಒಟ್ಟು 4 ಶಸ್ತ್ರಚಿಕಿತ್ಸೆ ಆಗಿದ್ದು, ಆರ್ಥಿಕ ಸಂಕಷ್ಟದಿಂದ ಬಳಲುವಂತೆ ಮಾಡಿದೆ. ಕುಟುಂಬದ ಯಜಮಾನ ರಮೇಶಗೂ ದುಡಿಮೆ ಹಂತದಲ್ಲಿ ಕಾಣಿಸಿಕೊಂಡಿರುವ ಸೊಂಟದ ಸಮಸ್ಯೆ ಕೂಲಿ ಕೆಲಸಕ್ಕೂ ಸಂಚಕಾರ ತಂದಿದೆ. ಹೀಗಾಗಿ ಇಡೀ ಕುಟುಂಬಕ್ಕೆ ಇದೀಗ ಲಕ್ಷ್ಮೀ ಸರಸಂಬಿ ದುಡಿಯುವ ನಿತ್ಯದ 150 ರೂ. ಕೂಲಿಯೇ ಒಲೆ ಹೊತ್ತಿಸಿ, ಗಂಜಿಗೂ ಪರದಾಡುವಂತೆ ಮಾಡಿದೆ.
ಈ ಹಂತದಲ್ಲಿ ಅನಾರೋಗ್ಯ ಪೀಡಿತ ಮಗ ಹಾಗೂ ಪತಿಗೆ ನಿರಂತರ ಆರೈಕೆಯ ಕಾರಣ ಹಲವು ಸಂದರ್ಭದಲ್ಲಿ ಕೂಲಿಗೂ ಸಂಚಕಾರ. ಮತ್ತೂಂದೆಡೆ ಕಾಯಿಲೆ ಪೀಡಿತ ಮಗ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಗಣೇಶ ಶಾಲೆಗೆ ಹೋಗುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಶೈಕ್ಷಣಿಕ ಭವಿಷ್ಯದ ಮೇಲೂ ಪರಿಣಾಮ ಬೀರಿದೆ. ಇದೀಗ ಮೈಸೂರಿನ ಖಾಸಗಿ ಆಸ್ಪತ್ರೆಯ ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸಕ ಡಾ| ಕೆ.ಎಸ್. ಕುಮಾರ ಗಣೇಶನಿಗೆ ಮತ್ತೂಂದು ಚಿಕಿತ್ಸೆ ಅಗತ್ಯವಿದೆ ಎಂದು ಸೂಚಿಸಿದ್ದು, ತಾಯಿ ಲಕ್ಷ್ಮೀ ಕಂಗಾಲಾಗಿದ್ದಾರೆ.
ಯಾರಾದರೂ ನೆರವು ನೀಡಿ ಕುಟುಂಬದ ಕುಡಿ ಉಳಿಸಿಕೊಡುವಂತೆ ಅಂಗಲಾಚುತ್ತಿದ್ದಾಳೆ. ಸಹಾಯ ಮಾಡಲು ಇಚ್ಛಿಸುವ ಸಾರ್ವಜನಿಕರು ಲಕ್ಷ್ಮೀ ರಮೇಶ ಸರಸಂಬಿ, ಮೊ. 9482261459, ವಿಜಯಪುರ ಕಾರ್ಪೋರೇಶನ್ ಬ್ಯಾಂಕ್, ಬ್ಯಾಂಕ್ ಖಾತೆ ಸಂಖ್ಯೆ: 520101251112339, ಐಎಫ್ಎಸ್ಸಿ ಸಂಖ್ಯೆ : ಸಿಓಆರ್ಪಿ0003423 ಇಲ್ಲಿಗೆ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದಾರೆ.