Advertisement

ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿರುವ ಮೋದಿಗೆ ವೋಟ್‌ ಮುಖ್ಯವಲ್ಲ: ಪ್ರತಾಪಸಿಂಹ

05:48 PM Oct 13, 2022 | Team Udayavani |

ಮೈಸೂರು: ಕೇಂದ್ರ ಸರ್ಕಾರದ 08 ವರ್ಷಗಳ ಸಾಧನೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಷನ್‌ 2047, ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವದ ಛಾಯಾಚಿತ್ರ ಪ್ರದರ್ಶನ ಹಾಗೂ ವಿಚಾರ ಸಂಕಿರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಚಾಲನೆ ನೀಡಿದರು.

Advertisement

ಕೇಂದ್ರ ಸಂವಹನ ಇಲಾಖೆ, ಮೈಸೂರು ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ  ಸಂಯುಕ್ತಾಶ್ರಯದಲ್ಲಿ ಮಹಾರಾಜ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 7 ದಿನಗಳ ಛಾಯಾಚಿತ್ರ, ಪ್ರದರ್ಶನ ವಿಚಾರ ಸಂಕಿರಣದಲ್ಲಿ ಕೇಂದ್ರ ಸರ್ಕಾರದ ಸಾಧನೆ, ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟದ ಕೊಡುಗೆಯನ್ನು ಬಿಂಬಿಸುವ 64 ಛಾಯಾಚಿತ್ರಗಳ ಪ್ರದರ್ಶನ ಹಾಗೂ 6 ಮಳಿಗೆಗಳಲ್ಲಿ ರಕ್ತದಾನ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಒದಗಿಸಲಾಗುತ್ತಿದೆ.

ಮೋದಿ ಕೊಡುಗೆ ಅಪಾರ:
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ ಮಾತನಾಡಿ, ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 8 ವರ್ಷದಲ್ಲಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗಾಂಧಿಕನಸಿನ ಸ್ವಚ್ಛ ಭಾರತ ಯೋಜನೆಗೆ ಮುನ್ನುಡಿ ಬರೆದು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು. ಮೈಸೂರಿನ ಸೂಯೇಜ್‌ ಫಾರಂ ಸೇರಿದಂತೆ ಕರ್ನಾಟಕದ ಹಲವೆಡೆ ಇರುವ ನೂರಾರು ಟನ್‌ ಕಸ ತೆರವಿಗೆ 2025ರ ಗಡುವು ನೀಡಿದ್ದಾರೆ. ಭವಿಷ್ಯದ ಮಕ್ಕಳಿಗೆ ಉತ್ತಮ ಪರಿಸರ ನೀಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿರುವ ಮೋದಿ ಅವರಿಗೆ ವೋಟ್‌ ಮುಖ್ಯವಲ್ಲ ಎಂದರು.

ಜನಧನ್‌ ಯೋಜನೆ, ಉಜ್ವಲ ಯೋಜನೆ, ಕಿಸಾನ್‌ ಸಮ್ಮಾನ್‌, ಆತ್ಮನಿರ್ಭರ, ಬೀದಿಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ ಜಾರಿಗೊಳಿಸಿ ಬಡವರಿಗೆ, ಧೀನದಲಿತರಿಗೆ ನೆರವಾಗಿದ್ದಾರೆ ಎಂದರು. ಇದೇ ವೇಳೆ ಐವರು ಫ‌ಲಾನು ಭವಿಗಳಿಗೆ ಶ್ರವಣದೋಷ ಉಪಕರಣ ನೀಡಲಾಯಿತು. ಚಾಮರಾಜ ಕ್ಷೇತ್ರದ ಕೋವಿಡ್‌ನಿಂದ ಮೃತಮಟ್ಟ ಕುಟುಂಬಸ್ಥರಿಗೆ ಒಂದು ಲಕ್ಷ ಪರಿಹಾರದ ಚೆಕ್‌ ವಿತರಿಸಲಾಯಿತು.

ಶಾಸಕ ಎಲ್‌.ನಾಗೇಂದ್ರ, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ. ರೂಪಾ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್‌, ದಕ್ಷಿಣ ವಲಯ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಹಾ ನಿರ್ದೇಶಕ ಎಸ್‌.ವೆಂಕಟೇಶ್ವರ, ಕರ್ನಾಟಕ ವಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ಎಸ್‌.ಜಿ.ರವೀಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಬಿ.ಆರ್‌.ಪೂರ್ಣಿಮಾ ಇದ್ದರು.

Advertisement

ಮೋದಿಗೆ ಮೈಸೂರಿನ ಬಗ್ಗೆ ಹೆಚ್ಚು ಪ್ರೀತಿ
ಮೈಸೂರಿನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಮೋದಿ ಅವರು, ನಗರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಮೈಸೂರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ, ಅಮೃತ ಯೋಜನೆಯಡಿ ಅನುದಾನ ನೀಡಿದ್ದಾರೆ. ಜಲಜೀವನ ಮಿಷನ್‌ ಅಡಿ ಮನೆ ಮನೆಗೆ ನಲ್ಲಿ ನೀರು ನೀಡಲಾಗುತ್ತಿದೆ. ವಿಮಾನ ನಿಲ್ದಾಣದ ಅಭಿವೃದ್ಧಿ, ರೈಲು ನಿಲ್ದಾಣದ ಅಭಿವೃದ್ಧಿಗೆ ಒತ್ತು ನೀಡಿದ್ದು, 10 ಹೊಸ ರೈಲು ನೀಡಿದ್ದಾರೆ. ಮನೆಮನೆಗೆ ಪೈಪ್‌ ಲೈನ್‌ ಮೂಲಕ ಗ್ಯಾಸ್‌ ತಲುಪಿಸುವ ಯೋಜನೆ ಪ್ರಗತಿಯಲ್ಲಿದೆ. ಮೈಸೂರಿನ ಸಂಪರ್ಕ ವ್ಯವಸ್ಥೆ ಉತ್ತಮಗೊಳಿಸಿ ಹೊಸ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜನ ನೀಡುತ್ತಿದ್ದು, 75 ಸಾವಿರ ಕೋಟಿ ಮೊತ್ತದ ಸೆಮಿ ಕಂಡಕ್ಟರ್‌ ಯೋಜನೆ ನೀಡಿದ್ದಾರೆ ಎಂದು ಸಂಸದ ಸಿಂಹ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next