Advertisement

ಸಿಎಂ ಭೇಟಿ: ಅಗತ್ಯ ಸಿದ್ಧತೆಗೆ ಸೂಚನೆ

01:57 PM Nov 30, 2017 | Team Udayavani |

ಬೀದರ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಮತ್ತು ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮದ ಚಾಲನೆಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿ. 13ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಸಿಎಂ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಸಿಎಂ ನ.12ರ ಸಂಜೆ ಬೀದರಗೆ ಆಗಮಿಸಿ ರಾತ್ರಿ ನಗರದಲ್ಲಿಯೇ ವಾಸ್ತವ್ಯ ಮಾಡುವರು. 13ರಂದು ಬಸವಕಲ್ಯಾಣ, ಹುಮನಾಬಾದ ಹಾಗೂ ಭಾಲ್ಕಿ ತಾಲೂಕುಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವರು. ವಿವಿಧ ಯೋಜನೆಗಳ ಪ್ರಗತಿ
ಕುರಿತು ಈ ವೇಳೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವರು. ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು
ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆಗೆ ಅಣಿಗೊಳಿಸಬೇಕು. ಈಗ ಆರಂಭಿಸಬೇಕಾದ ಕಾಮಗಾರಿಗಳ ಶಂಕುಸ್ಥಾಪನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಸಭಾ ಭವನ, ವಿವಿಧ ಸ್ಮಾರಕಗಳ ಕಾಮಗಾರಿಗಳು, ಎಚ್‌ಕೆಆರ್‌ಡಿಬಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು, ರಾಜ್ಯ ಹೆದ್ದಾರಿ, ಆರೋಗ್ಯ ಇಲಾಖೆಯ ಹೊಸ ಪ್ರಾಥಮಿಕ ಕಟ್ಟಡಗಳ ನಿರ್ಮಾಣ ಮತ್ತು ನವೀಕರಣ ಕಾಮಗಾರಿಗಳು, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಡಿಯ ವಿವಿಧ ವಸತಿ ನಿಲಯ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಪ್ರಗತಿ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಯಾ ಕಾಮಗಾರಿಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಭಾಲ್ಕಿ ತಾಲೂಕಿನಲ್ಲಿ ಬೃಹತ್‌ ಕುಡಿಯುವ ನೀರಿನ ಯೋಜನೆ, ಎಚ್‌ಕೆಆರ್‌ಡಿಬಿ ಅಡಿಯಲ್ಲಿನ ಕೆರೆ ಅಭಿವೃದ್ಧಿ, ಬಡವರಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ, ಅರ್ಹ ಕಡುಬಡ ಫಲಾನುಭವಿಗಳಿಗೆ ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ್‌ ಸಂಪರ್ಕ ಒದಗಿಸುವುದು, ರೈತರ ಆತ್ಮಹತ್ಯೆಯ ಎಲ್ಲ ಪ್ರಕರಣಗಳಿಗೆ ಪರಿಹಾರ ಒದಗಿಸುವುದು. ಅವರ ಪರಿವಾರದವರಿಗೆ ಸೌಕರ್ಯ ಸಿಗುವ ವ್ಯವಸ್ಥೆ ಮಾಡುವುದು.

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಲಾಭ ಎಲ್ಲರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು. ಬೆಳೆವಿಮೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಚಿವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆಯಾ ಇಲಾಖೆಗಳು ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವಿವರ ಸಲ್ಲಿಸಬೇಕು. ಆಯಾ ಯೋಜನೆಗಳಡಿ ಸರ್ಕಾರ ನಿಗದಿಪಡಿಸಿದ ಅನುದಾನ ಎಷ್ಟು? ಬಿಡುಗಡೆಯಾದ ಅನುದಾನ ಎಷ್ಟು? ಇಲ್ಲಿವರೆಗೆ ಖರ್ಚಾದ ಅನುದಾನ ಎಷ್ಟು? ಎನ್ನುವ ಮಾಹಿತಿ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಪ್ರಗತಿ ಕುರಿತು ಆಯಾ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.

Advertisement

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ವಿವಿಧ ಇಲಾಖೆಗಳಿಗೆ ವಿವಿಧ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು.
ಕ್ರಿಯಾ ಯೋಜನೆಯಂತೆ ಸರ್ಕಾರದಿಂದ ಬಿಡುಗಡೆಯಾಗಿರುವ ಸಂಪೂರ್ಣ ಹಣ ಖರ್ಚಾಗುವಂತೆ ನೋಡಿಕೊಳ್ಳಬೇಕು. ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ಎಚ್ಚರ ವಹಿಸಬೇಕು. ಮುಖ್ಯಮಂತ್ರಿ ಅವರ ಕಾರ್ಯಕ್ರಮದಲ್ಲಿ ಈ ಬಾರಿ ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತಿದೆ. ಸಾಲಮನ್ನಾ ಯೋಜನೆ, ವಸತಿ ಯೋಜನೆ, ಮೈತ್ರಿ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆಗೆ ಕೂಡ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ಡಿಸಿ ಡಾ| ಎಚ್‌.ಆರ್‌.ಮಹಾದೇವ ಮಾತನಾಡಿ, ಸಿಎಂ ಪ್ರವಾಸದ ವೇಳೆ ಸರ್ಕಾರದ ಜನಪರ ಕಾರ್ಯಕ್ರಮ ಸಾಧನೆ ಬಿಂಬಿಸುವ ‘ನುಡಿದಂತೆ ನಡೆದಿದ್ದೇವೆ ಸಾಧನಾ ಸಂಭ್ರಮ’ ಎಂಬ ಪುಸ್ತಕವನ್ನು ಜಿಲ್ಲಾಡಳಿತದಿಂದ ಹೊರತರಲು ಉದ್ದೇಶಿಸಲಾಗಿದೆ. 2013-14ನೇ ಸಾಲಿನಿಂದ ನವೆಂಬರ್‌ 2017ರವರೆಗೆ ಆಯಾ ಇಲಾಖೆಗಳು ಸಾಧಿಸಿದ ಪ್ರಗತಿ ಮಾಹಿತಿಯನ್ನು ಆಯಾ ಇಲಾಖೆಗಳ ಅಧಿಕಾರಿಗಳು ಶೀಘ್ರ ಸಲ್ಲಿಸಬೇಕು ಎಂದು ಹೇಳಿದರು. ಎಂಎಲ್‌ಸಿ ವಿಜಯಸಿಂಗ್‌, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಸಿಇಒ ಡಾ| ಸೆಲ್ವಮಣಿ, ಎಸ್‌ಪಿ ಡಿ. ದೇವರಾಜ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next