Advertisement

ವಿಶ್ವನಾಥ್‌ ಕಡೆಗಣನೆ, ರಮೇಶ್‌ಗೌಡಕ್ಕೆ ಸ್ಥಾನ ಸರಿಯಲ್ಲ: ಮಧು ಬಂಗಾರಪ್ಪ

09:51 AM Mar 03, 2020 | Sriram |

ಬೆಂಗಳೂರು: ಕೆಲ ಗೊಂದಲ, ಬೇಸರದಿಂದಾಗಿ ಸದ್ಯ ಪಕ್ಷದ ನಿಷ್ಕ್ರಿಯ ಕಾರ್ಯಾಧ್ಯಕ್ಷನಾಗಿದ್ದೇನೆ. ಹಿರಿಯರಾದ ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ಕೊಡದಿದ್ದುದು, ಅಪರಾಧ ಹಿನ್ನೆಲೆಯುಳ್ಳ ರಮೇಶ್‌ಗೌಡ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ದು ಸರಿಯಲ್ಲ. ಕಾರ್ಯಕರ್ತರನ್ನು ಇದೇ ರೀತಿ ಕಡೆಗಣಿಸಿದರೆ ಮುಂದೆ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯ ಉಂಟಾಗುವ ಆತಂಕವಿದೆ ಎಂದು ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

Advertisement

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಗೊಂದಲವಿದ್ದಾಗ ಪ್ರತಿಕ್ರಿಯೆ ನೀಡಲು ಮುಜುಗರವಾಗುತ್ತದೆ. ಮನಸ್ಸಿಗೆ ಸ್ವಲ್ಪ ನೋವಿದೆ. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರ ಶ್ರಮದಿಂದಾಗಿ ಪಕ್ಷ ಇಷ್ಟು ಬೆಳೆದಿದೆ. ಆದರೆ ಮೈತ್ರಿ ಸರ್ಕಾರವಿದ್ದಾಗ ನಮ್ಮ ಕಾರ್ಯಕರ್ತರಿಗೆ ಸ್ಪಂದಿಸದೆ ಅವರ ವಿಶ್ವಾಸ ಕಳೆದುಕೊಂಡಿದ್ದೇವೆ. ಇದು ಹೀಗೆ ಮುಂದುವರಿದರೆ ಮುಂದ ಭಾರೀ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯರಾದ ಪಿ.ಜಿ.ಆರ್‌.ಸಿಂಧ್ಯಾ, ಬಸವರಾಜ ಹೊರಟ್ಟಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಹೇಳಿದ್ದೆ. ಹಾಗೆಯೇ ವಿಧಾನ ಪರಿಷತ್‌ ಸ್ಥಾನ ನನಗೆ ಬೇಡ. ರಮೇಶ್‌ ಬಾಬು, ವೈ.ಎಸ್‌.ವಿ.ದತ್ತ, ಕೋನರೆಡ್ಡಿ, ಸುರೇಶ್‌ ಬಾಬು, ಆರ್‌.ವಿ. ಹರೀಶ್‌ ಅವರಂತಹವರು ಆಯ್ಕೆಯಾಗಬೇಕು ಎಂದು ಹೇಳಿದ್ದೆ. ಆಗ ರಮೇಶ್‌ಗೌಡ ಹೆಸರಿರಲಿಲ್ಲ ಆದರೆ ಯಾವುದೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಪರಾಧ ಹಿನ್ನೆಲೆಯುಳ್ಳ ರಮೇಶ್‌ ಗೌಡ ಯಾವುದಕ್ಕೂ ಪ್ರಯೋಜನವಿಲ್ಲ. ಸದನದಲ್ಲಿ ಒಮ್ಮೆಯೂ ಚರ್ಚೆ ನಡೆಸುವ ಯೋಗ್ಯತೆ ಇಲ್ಲ. ನನ್ನ ಅಡಿಯಲ್ಲಿ ನಗರ ಘಟಕದ ಅಧ್ಯಕ್ಷನಾಗಿದ್ದಾಗ ಒಂದು ದಿನವೂ ಸಕ್ರಿಯನಾಗಿರಲಿಲ್ಲ. ಯೋಗ್ಯತೆ ಇಲ್ಲದ ವ್ಯಕ್ತಿಯನ್ನು ಮೇಲ್ಮನೆಗೆ ಆಯ್ಕೆ ಮಾಡಿದ್ದರಿಂದ ಪಕ್ಷಕ್ಕೆ ಭಾರಿ ಹೊಡೆತ ಬಿದ್ದು ತಲೆ ತಗ್ಗಿಸುವಂತಾಗಿದೆ. ಹಾಗೆಯೇ ಕುಮಾರಣ್ಣ ಹಾಗೂ ರಮೇಶ್‌ಗೌಡ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ನಡುವಿನ ವ್ಯವಸ್ಥೆ ಸರಿಯಿಲ್ಲ. ಅದಕ್ಕೆ ನಾನು ವಿರುದ್ಧವಾಗಿದ್ದೇನೆ. ರಮೇಶ್‌ಗೌಡನನ್ನು ಕೆಳಗಿಳಿಸಿ ಮತ್ತೂಬ್ಬರಿಗೆ ಅವಕಾಶ ಕೊಡುವುದು ಸೂಕ್ತ. ಹಾಗೆಯೇ ಧರ್ಮೇಗೌಡ ಅಂತಹವರೆಲ್ಲಾ ಪಕ್ಷ ಬಿಟ್ಟು ಹೋಗುವವರಿದ್ದರು. ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಎಚ್‌.ವಿಶ್ವನಾಥ್‌ ಅವರು ಪಕ್ಷಕ್ಕೆ ಬರಲು ನಾನೇ ಕಾರಣ. ಆದರೆ ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ನೀಡದಿದ್ದುದು ಸರಿಯಲ್ಲ. ವರ್ಗಾವಣೆ ಸೇರಿದಂತೆ ಇತರೆ ಕೆಲ ವಿಚಾರಗಳಲ್ಲಿ ಅವರಿಗೆ ಬೇಸರವಾದಂತಿತ್ತು. ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದೆ. ಆದರೆ ಕುಮಾರಣ್ಣ ಹಾಗೂ ಎಚ್‌.ವಿಶ್ವನಾಥ್‌ ಅವರ ಮಧ್ಯ ಇದ್ದವರು ಉಭಯ ನಾಯಕರ ಸಂಬಂಧ ಹಾಳು ಮಾಡಿದರು ಎಂದು ಕಿಡಿ ಕಾರಿದರು.

Advertisement

ವಿಧಾನ ಪರಿಷತ್‌ಗೆ ಪಕ್ಷದ ಸದಸ್ಯರ ಆಯ್ಕೆಯಲ್ಲಿ ತಪ್ಪುಗಳಾಗಿದ್ದು, ಅದನ್ನು ಸರಿಪಡಿಸಬೇಕಿದೆ. ಆದರೆ ಸರಿಪಡಿಸುವ ಕಾರ್ಯ ಎಲ್ಲಿಂದ ಆರಂಭವಾಗಬೇಕೋ ಗೊತ್ತಿಲ್ಲ. ಹಾಗಾಗಿ ಗೊಂದಲದಲ್ಲಿದ್ದು, ವಿಶ್ವಾಸ ಕಳೆದುಕೊಂಡಿದ್ದೇವೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕೆಲವರಿಂದ ತಪ್ಪಾಗಿದೆ. ಆ ಬಗ್ಗೆ ಮುಂದೆ ಹೇಳುತ್ತೇನೆ ಎಂದು ಹೇಳಿದರು.

ಮೊದಲ ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಕುಮಾರಣ್ಣ ಅವರ ಸುತ್ತ ಹಿರಿಯರಾದ ಎಂ.ಪಿ.ಪ್ರಕಾಶ್‌ ಅವರಂತಹ ಸಚಿವರಿದ್ದರು. ಆದರೆ ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಣ್ಣನವರ ಸುತ್ತಮುತ್ತ ಎಚ್‌.ವಿಶ್ವನಾಥ್‌, ಬಸವರಾಜ ಹೊರಟ್ಟಿ ಅಂಥವರಿರಬೇಕಿತ್ತು. ಆದರೆ ಆ ರೀತಿ ಇರಲಿಲ್ಲ. ರಾಜ್ಯಾಧ್ಯಕ್ಷರಾದ ಎಚ್‌.ಕೆ. ಕುಮಾರಸ್ವಾಮಿಯವರು ಉತ್ತಮ ವ್ಯಕ್ತಿಯಾಗಿದ್ದು, ತಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ನಾನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅವರೇ ತೆಗೆದಾಗ ಕೆಳಗಿಳಿಯುತ್ತೇನೆ ಎಂದು ಹೇಳಿದರು.

ನಾಯಕರನ್ನು ಸೃಷ್ಟಿ ಮಾಡುವುದು ಜೆಡಿಎಸ್‌ ಪಕ್ಷ. ಹಾಗಾಗಿ ಪಕ್ಷ ನಾಯಕರನ್ನು ಉಳಿಸಿಕೊಳ್ಳಬೇಕು. ನಾಯಕರನ್ನು ಹೀಗೆ ಕಳೆದುಕೊಳ್ಳುತ್ತಾ ಹೋದರೆ ಪಕ್ಷ ಉಳಿಯುತ್ತದೆಯೇ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಸದ್ಯಕ್ಕೆ ನಾನು ಜೆಡಿಎಸ್‌ನಲ್ಲಿದ್ದೇನೆ. ಮುಂದೆ ಏನು ಎಂದು ಈಗ ಹೇಳಲಾಗದು ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next