Advertisement

ಮತದಾರರೇ ಭ್ರಷ್ಟರಾಗಿದ್ದಾರೆ ನಾನು ಚುನಾವಣೆಗೆ ನಿಲ್ಲಲಾರೆ: ಹಳ್ಳಿ ಹಕ್ಕಿ ಹೊಸ ರಾಗ

10:26 PM Jan 31, 2023 | Team Udayavani |

ಧಾರವಾಡ: ಇಂದು ಸ್ಥಿತಿವಂತರೂ ಮತ ಮಾರಿಕೊಳ್ಳುವ ಕೆಟ್ಟ ಪರಿಸ್ಥಿತಿಗೆ ಬಂದಿದ್ದೇವೆ. ರಾಜಕಾರಣ ಹಾಗೂ ರಾಜಕಾರಣಿಗಳು ಇಂದಿನ ಜನರನ್ನು ಭ್ರಷ್ಟಗೊಳಿಸಿದೆ. ಜನರೂ ಭ್ರಷ್ಟರಾಗಿದ್ದಾರೆ. ಚುನಾವಣೆಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

Advertisement

ನಗರದ ಬೇಂದ್ರೆ ಭವನದಲ್ಲಿ ಮಂಗಳವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ವರಕವಿ ಡಾ.ದ.ರಾ.ಬೇಂದ್ರೆ ಅವರ 127 ನೇ ಜನ್ಮದಿನಾಚರಣೆ ಪ್ರಯುಕ್ತ ಡಾ.ದ.ರಾ.ಬೇಂದ್ರೆ ರಾಷ್ಟೀಯ ಸ್ಮಾರಕ ಟ್ರಸ್ಟ ವತಿಯಿಂದ ಕೊಡ ಮಾಡುವ ಪ್ರಸಕ್ತ 2023 ನೇ ಸಾಲಿನ ಅಂಬಿಕಾತನಯದತ್ತ ರಾಷ್ಟೀಯ ಪ್ರಶಸ್ತಿಯನ್ನು ಸಾಹಿತಿಗಳಿಗೆ ಪ್ರದಾನಗೊಳಿಸಿ, ಅವರು ಮಾತನಾಡಿದರು.

2500 ವರ್ಷಗಳ ಹಿಂದೆ ಗ್ರೀಸ್ ದೇಶದಲ್ಲಿ ಜನಾತಂತ್ರ ವ್ಯವಸ್ಥೆ ಜಾರಿಯಲ್ಲಿತ್ತು. 80 ಹಾಗೂ 90ರ ದಶಕದ ಹಿಂದೆ ನಡೆದ ಚುನಾವಣೆಗಳೂ ಅತ್ಯಂತ ಪಾವಿತ್ರ್ಯದ ರೀತಿಯಲ್ಲಿ ಮತದಾನ ನಡೆದ ಉದಹಾರಣೆಗಳಿವೆ. ಅಂದು ಊಟ ಕೊಟ್ಟು ಓಟು ಕೊಟ್ಟು ಹಳುಹಿಸುತ್ತಿದ್ದರು. ಆದರೆ ಇಂದು ಒಂದು ಮತಕ್ಕೆ 6ಸಾವಿರ ಕೊಡುವ ಕಾಲ ಬಂದಿದೆ ಎಂದರು.

ಟಿಕೆಟ್‌ಗಾಗಿ 20 ಕೋಟಿ ಕೊಡಲು ಸಿದ್ಧ ಎಂಬುದಾಗಿ ಆಕಾಂಕ್ಷಿಯೊಬ್ಬರು ಹೇಳಿದ್ದು ವರದಿಯಾಗಿದೆ. ಚುನಾವಣೆಗೆ ಎಷ್ಟು ಖರ್ಚು ಮಾಡಬಲ್ಲರು ಎಂಬುದನ್ನು ಊಹಿಸಿದರೆ ಅವರಿಂದ ಜನರು ಏನು ನಿರೀಕ್ಷಿಸಬಹುದು ಎಂಬುದನ್ನೂ ಊಹಿಸಬಹುದು. ರಿಯಲ್ ಎಸ್ಟೇಟ್ ಕುಳಗಳು ರಾಜಕಾರಣಕ್ಕೆ ಇಳಿದಿರುವುದರಿಂದ ನಾವು ಎಲ್ಲಿ ನಿಂತಿದ್ದೇವೆ ಎಂಬುದೇ ಅರ್ಥವಾಗದಾಗಿದೆ ಎಂದರು.

ಎಲ್ಲಾ ಬಗೆಯ ಸಾಹಿತ್ಯಗಳು ನಮ್ಮಲ್ಲಿವೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿರುವ ನಮಗೆ ರಾಜಕೀಯ ಸಾಹಿತ್ಯದ ಅಗತ್ಯವಿದೆ. ಆದರೆ ನಮ್ಮಲ್ಲಿರುವ ಸಾಹಿತಿಗಳು ರಾಜಕಾರಣ ಮತ್ತು ರಾಜಕೀಯ ಸಾಹಿತ್ಯವನ್ನು ಮೈಲಿಗೆಯಿಂದ ನೋಡುವುದು ಜನತಂತ್ರ ವ್ಯವಸ್ಥೆಗೆ ಅಪಾಯಕಾರಿ. ಹೀಗಾಗಿ ರಾಜಕೀಯ ಸಾಹಿತ್ಯದ ಮೂಲಕ ಜನತಂತ್ರ ವ್ಯವಸ್ಥೆ ಎಚ್ಚರಿಸುವ ಕೆಲಸವನ್ನು ಸಾಹಿತಿಗಳೂ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ1 ಲಕ್ಷ ನಗದು, ಸ್ಮರಣಿಕೆ ಫಲಕ ಒಳಗೊಂಡ ಈ ಪ್ರಶಸ್ತಿಯನ್ನು ಪ್ರತ್ಯೇಕ ತಲಾ 50 ಸಾವಿರದಂತೆ ಮೂಲತ: ಧಾರವಾಡದವರೇ ಆದ ವಿಮರ್ಶಕ, ಚಿಂತಕರಾದ ಡಾ.ರಾಜೇಂದ್ರ ಚೆನ್ನಿ ಹಾಗೂ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಕವಿ ಡಾ.ಜಿನದತ್ತ ದೇಸಾಯಿ ಅವರಿಗೆ ಪ್ರದಾನ ಮಾಡಲಾಯಿತು.

ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿದರು. ಡಾ.ದ.ರಾ.ಬೇಂದ್ರೆ ರಾಷ್ಟೀಯ ಸ್ಮಾರಕ ಟ್ರಸ್ಟ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಡಾ.ಜಿನದತ್ತ ದೇಸಾಯಿ ಅವರ ಕುರಿತು ಡಾ.ಶಾಂತಾ ಇಮ್ರಾಪೂರ ಹಾಗೂ ಡಾ.ರಾಜೇಂದ್ರ ಚೆನ್ನಿ ಅವರ ಕುರಿತು ಕುಮಟಾದ ಡಾ.ಎಂ.ಜಿ.ಹೆಗಡೆ ಅಭಿನಂದನಾಪರ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಶಿರಸಿಯ ಪ್ರೊ.ಎಚ್.ಆರ್.ಅಮರನಾಥ ಸಂಪಾದಕತ್ವದ ಪ್ರೊ.ಬೇಂದ್ರೆ ಮಾಸ್ತರರ ಅಮರವಾಣಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಡಾ|ಎನ್.ವೈ.ಮಟ್ಟಿಹಾಳ, ಡಾ.ದ.ರಾ. ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿಯಾದ ಕುಮಾರ ಬೆಕ್ಕೇರಿ, ಪ್ರಕಾಶ ಬಾಳಿಕಾಯಿ ಪಾಲ್ಗೊಂಡಿದ್ದರು.

ಜಗದ ಕವಿ, ಯುಗದ ಕವಿ ಎಂಬುದಾಗಿ ಬೇಂದ್ರೆ ಅವರನ್ನು ನಾವು ಬಣ್ಣಿಸಿ ಹಾಡಿ ಹೊಗಳಿದರೂ, ಅವರನ್ನು ಕರ್ನಾಟಕ ಅಷ್ಟು ಆತ್ಮೀಯವಾಗಿ ಒಪ್ಪಿಕೊಳ್ಳದ ಬೇಸರ ಅವರನ್ನು ಕಾಡಿತ್ತು. ಹೀಗಾಗಿ ಅವರು ಅತ್ಯಂತ ನೋವಿನಿಂದ ‘ಧಾರವಾಡದ ಬೆಣ್ಣೆಗೆ ಧಾರಣೆ ಆಗಲಿಲ್ಲ’ ಅಂದಿದ್ದರು. ಸರ್ಕಾರಕ್ಕೆ ಹೃದಯ ಹಾಗೂ ಸಾಂಸ್ಕೃತಿಕ ಲೋಕದ ಸ್ಪರ್ಶ ಇದ್ದರೆ, ವಿಶ್ವ ಕವಿ ದಿನವನ್ನು ಒಪ್ಪಿಕೊಂಡು ಆಚರಿಸಬೇಕು. ಬೇಂದ್ರೆ ಅವರ ಹೆಸರನ್ನು ನಾಡು ನೆನೆಯಬೇಕೆಂದ ಎಚ್.ವಿಶ್ವನಾಥ ಅವರು, ‘ಮೂಡಲ ಮನೆಯ ಮುತ್ತಿನ ನೀರಿನ…’ ಹಾಡನ್ನು ಹಾಡಿದರು.

ಇದನ್ನೂ ಓದಿ: ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next