Advertisement

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

12:54 AM Oct 01, 2024 | Team Udayavani |

ಮಂಗಳೂರು: ಮೀನಿನ ಎಣ್ಣೆ, ದನದ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವುದನ್ನು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾದ ಧರ್ಮಾಗ್ರಹ ಸಭೆ ಖಂಡಿಸಲಾಯಿತು.

Advertisement

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ವ್ಯಕ್ತವಾಯಿತು.

ನಗರದ ಡೊಂಗರಕೇರಿ ವೆಂಕಟ ರಮಣ ದೇಗುಲದ ಪ್ರಾಂಗಣದಲ್ಲಿ ಸೋಮವಾರ ಜರಗಿದ ಧರ್ಮಾಗ್ರಹ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ.ಪುರಾಣಿಕ್‌ ಅವರು ನಿರ್ಣಯವನ್ನು ವಿವರಿಸಿದರು. ತಿರುಪತಿ ದೇವಸ್ಥಾನಕ್ಕೆ ಅಗತ್ಯ ಇರುವ ತುಪ್ಪವನ್ನು ದೇವಸ್ಥಾನದ ಟ್ರಸ್ಟ್‌ ವತಿಯಿಂದಲೇ ತಯಾರಿಸಲು ಅನುಕೂಲವಾಗುವಂತೆ 25 ಸಾವಿರ ದೇಸೀ ಹಸುಗಳಿರುವ ಬೃಹತ್‌ ಗೋಶಾಲೆ ತೆರೆಸಬೇಕು. ಇತರ ದೇವಸ್ಥಾನಗಳಲ್ಲೂ ಇದೇ ರೀತಿ ಗೋಶಾಲೆ ಆರಂಭಿಸಬೇಕು. ದೇವಸ್ಥಾನಗಳು ಸರಕಾರದ ಸುಪರ್ದಿಯಲ್ಲಿರುವುದರಿಂದಲೇ ಅದು ಅಪವಿತ್ರವಾಗುವುದು. ಆದ್ದರಿಂದ ಎಲ್ಲ ದೇವಸ್ಥಾನಗಳನ್ನು ರಾಜಕೀಯ ಹಾಗೂ ಸರಕಾರದ ಹಿಡಿತದಿಂದ ಮುಕ್ತಗೊಳಿಸಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು. ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ತು ಮತ್ತು ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕೆಂದು ಸಭೆ ಯಲ್ಲಿ ನಿರ್ಣಯಿಸಲಾಗಿದೆ ಎಂದರು.

ಹಿಂದೂಗಳು ಎಚ್ಚೆತ್ತುಕೊಳ್ಳಬೇಕು
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಆರೆಸ್ಸೆಸ್‌ನ ಹಿರಿಯ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅವರು, ಹಿಂದೂ ಧರ್ಮ, ಶ್ರದ್ಧಾಕೇಂದ್ರಗಳ ಮೇಲೆ ಕ್ರೂರ ಅಪಚಾರ ನಡೆಯುತ್ತಿದ್ದು, ಹಿಂದೂಗಳು ಇನ್ನೂ ಸಂಘಟಿತರಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ಸರಕಾರದ ಅಧೀನದ ದೇಗುಲಗಳ ಆಡಳಿತ ಮಂಡಳಿಗಳಿಗೆ ಅನ್ಯ ಮತೀಯರನ್ನು ನೇಮಕ ಮಾಡಿ, ಧರ್ಮದ ಅಚರಣೆಗಳ ಮೇಲೆ ಅಪಚಾರ ಮಾಡಲಾಗುತ್ತಿದೆ. ತಿರುಪತಿಯಂತಹ ಘಟನೆ ಇತರ ಮತೀಯರ ಶ್ರದ್ಧಾ ಕೇಂದ್ರದಲ್ಲಿ ನಡೆಯುತ್ತಿದ್ದರೆ ದೇಶವೇ ಹೊತ್ತಿ ಉರಿಯುತ್ತಿತ್ತು ಎಂದರು.

ರಾಜಕೀಯ ರಹಿತ ಹೋರಾಟ ಅಗತ್ಯ: ಒಡಿಯೂರು ಶ್ರೀ
ಒಡಿಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಮಾತನಾಡಿ, ಸನಾ ತನ ಹಿಂದೂ ಧರ್ಮಕ್ಕೆ ಧಕ್ಕೆಯಾ ದಾಗ ರಾಜಕೀಯ ರಹಿತವಾಗಿ ಹೋರಾಡಬೇಕು. ಇಚ್ಛಾಶಕ್ತಿಯ ಕೊರತೆ ಕಾರಣದಿಂದ ಅದು ನಮ್ಮಿಂದ ಸಾಧ್ಯ ವಾಗುತ್ತಿಲ್ಲ, ಸಮಾಜ ಹಾಗೂ ಸಂತರು ಜತೆಯಾಗಿ ಸಾಗಿದಾಗ ಮಾತ್ರ ಧರ್ಮಕ್ಕೆ ಜಯ ಸಿಗುತ್ತದೆ. ದೇವಾಲಯಗಳ ಆಡಳಿತ ನಾಸ್ತಿಕರ ಕೈಗೆ ಹೋಗದಂತೆ ತಡೆಯುವ ಅಗತ್ಯವಿದೆ ಎಂದರು.

Advertisement

ಸರಕಾರಗಳಿಂದ ನಿರ್ಲಕ್ಷ್ಯ: ಮಾಣಿಲ ಶ್ರೀ
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಹಿಂದೂ ವಿರೋಧಿ ಧೋರಣೆ ಹೊಂದಿರುವ ಕೆಲವು ರಾಜ್ಯ ಸರಕಾರಗಳಿಗೆ ದೇವಸ್ಥಾನದ ಹಣ ಬೇಕು. ಆದರೆ ದೇಗುಲಗಳ ಅಭಿವೃದ್ಧಿಗೆ ಸರಕಾರ ಮುಂದಾಗುವುದಿಲ್ಲ ಎಂದರು.

ಮಂಗಳೂರಿನ ಓಂ ಶ್ರೀಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಕನ್ಯಾನ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಓಂ ಶ್ರೀಮಠದ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ವಿಹಿಂಪ ಕ್ಷೇತ್ರೀಯ ಮಂದಿರ ಅರ್ಚಕ ಪುರೋಹಿತ ಸಂಪರ್ಕ ವಿಭಾಗ ಪ್ರಮುಖ್‌ ಬಸವರಾಜ್‌ ಜೀ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಎಚ್‌.ಕೆ. ಪುರುತೋಷತ್ತಮ್‌, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್‌ ನಾಗ್ವೇಕರ್‌, ಬಿ.ವರದರಾಯ ಎಸ್‌. ನಾಗ್ವೇಕರ್‌, ಬಿ.ಸಾಯಿದತ್ತ, ವಿಎಚ್‌ಪಿ ಪ್ರಮುಖರಾದ ಗೋಪಾಲ ಕುತ್ತಾರ್‌, ಕಟೀಲ್‌ ದಿನೇಶ್‌ ಪೈ, ರವಿ ಅಸೈಗೋಳಿ, ಭುಜಂಗ ಕುಲಾಲ್‌, ಮನೋಹರ್‌ ಸುವರ್ಣ, ಹರೀಶ್‌ ಶೇಟ್‌, ಗುರುಪ್ರಸಾದ್‌ ಕಡಂಬಾರು, ಪ್ರದೀಪ ಸರಿಪಳ್ಳ, ದೀಪಕ್‌ ಮರೋಳಿ, ಪೊಳಲಿ ಗಿರಿಪ್ರಕಾಶ್‌ ತಂತ್ರಿ, ಮುರುಳೀಧರ್‌ ರಾವ್‌, ಪ್ರವೀಣ್‌ ಕುತ್ತಾರ್‌ ಮೊದಲಾದವರು ಉಪಸ್ಥಿತರಿದ್ದರು.

“ಭಗವಾನ್‌’ ಯೋಚನೆಯೇ ರಾಕ್ಷಸೀಯ: ಭಟ್‌
ಪ್ರೊ| ಭಗವಾನ್‌ ಈ ಹಿಂದಿನಿಂದಲೂ ಹುಚ್ಚು ಹುಚ್ಚಾಗಿ ಏನೇನೋ ಮಾತನಾಡುತ್ತಿದ್ದ. ಅವನು ಎಲ್ಲಿ ಹುಟ್ಟಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ. ಅಪ್ಪ ಅಮ್ಮ ಯಾರೆಂದೂ ಗೊತ್ತಿಲ್ಲ. ಅದಕ್ಕಾಗಿ ಆ ರೀತಿ ಮಾತನಾಡುತ್ತಾನೆ. ಅವನಿಗೆ ಒಳ್ಳೆಯದಾಗಲಿ ಎಂದು “ಭಗವಾನ್‌’ ಎಂದು ಹೆಸರಿಟ್ಟಿದ್ದಾರೆ. ಆದರೆ ಆತ ರಾಕ್ಷಸನ ರೀತಿಯಲ್ಲಿ ಯೋಚಿಸುತ್ತಾನೆ ಎಂದು ಪ್ರೊ| ಕೆ.ಎಸ್‌.ಭಗವಾನ್‌ ವಿರುದ್ಧ ಆರೆಸ್ಸೆಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅವರು ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಮೈಸೂರಿನ ಮಹಿಷ ದಸರಾ ಆಚರಣೆ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅ ವರು, ಅದೊಂದು ರಾಕ್ಷಸಿ ವಂಶ. ಅದಕ್ಕಾಗಿ ರಾಕ್ಷಸರನ್ನು ಆರಾಧನೆ ಮಾಡುತ್ತದೆ. ಮನುಷ್ಯರ್ಯಾರೂ ರಾಕ್ಷಸರನ್ನು ಪೂಜಿಸುವುದಿಲ್ಲ. ರಾಕ್ಷಸರು ಮಾತ್ರ ರಾಕ್ಷಸರನ್ನೇ ಪೂಜಿಸುತ್ತಾರೆ ಮತ್ತು ಒಂದು ದಿನ ನಾಶವಾಗುತ್ತಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next