Advertisement

ಖೇಲ್‌ರತ್ನಕ್ಕೆ ಕೊಹ್ಲಿ ಹೆಸರು ಶಿಫಾರಸು

07:20 AM Apr 27, 2018 | Team Udayavani |

ಕೋಲ್ಕತಾ: ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಶಿಫಾರಸು ಮಾಡಿದೆ. ಇದೇ ವೇಳೆ ರಾಜೀವ್‌ ಗಾಂಧಿ ಖೇಲ್‌ ರತ್ನ ಗೌರವಕ್ಕೆ ವಿರಾಟ್‌ ಕೊಹ್ಲಿ ಅವರ ಹೆಸರನ್ನು ಮತ್ತೂಮ್ಮೆ ಶಿಫಾರಸು ಮಾಡಿದೆ. ಲೆಜೆಂಡರಿ ಆರಂಭಿಕ ಸುನೀಲ್‌ ಗಾವಸ್ಕರ್‌ ಅವರ ಹೆಸರನ್ನು ಧ್ಯಾನ್‌ ಚಂದ್‌ ಜೀವಮಾನ ಸಾಧನೆ ಪ್ರಶಸ್ತಿಗೆ ಸೂಚಿಸಲಾಗಿದೆ.

Advertisement

ಹೌದು, ನಾವು ವಿವಿಧ ವಿಭಾಗಗಳಲ್ಲಿ ಆಟಗಾರರ ಹೆಸರನ್ನು ಸರಕಾರಕ್ಕೆ ಶಿಫಾರಸು ಮಾಡಿದ್ದೇವೆ. ದ್ರೋಣಾಚಾರ್ಯ ಪ್ರಶಸ್ತಿಗೆ ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ಬಿಸಿಸಿಐ ಸೂಚಿಸಿದೆ ಎಂದು ಆಡಳಿತಗಾರರ ಸಮಿತಿಯ ಮುಖ್ಯಸ್ಥ ವಿನೋದ್‌ ರೈ ಖಚಿತಪಡಿಸಿದ್ದಾರೆ.

ಈ ವರ್ಷ ಅಂಡರ್‌-19 ವಿಶ್ವಕಪ್‌ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಒಳ್ಳೆಯ ರೀತಿಯಲ್ಲಿ ಮಾರ್ಗದರ್ಶನ ನೀಡಿದ ಆಧಾರದಲ್ಲಿ ದ್ರಾವಿಡ್‌ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ದ್ರಾವಿಡ್‌ ಅವರ ಪ್ರೋತ್ಸಾಹ, ಬೆಂಬಲ, ಮಾರ್ಗದರ್ಶನದಡಿ 2016ರಲ್ಲಿ ಕಿರಿಯ ಆಟಗಾರರು ಫೈನಲಿಗೇರಿದ್ದರು. ಭಾರತ “ಎ’ ತಂಡದ ಜತೆಯೂ ಅವರು ಕೆಲಸ ಮಾಡಿದ್ದಾರೆ ಎಂದು ರೈ ವಿವರಿಸಿದರು.

ಆಟಗಾರರ ಯಶಸ್ಸಿಗೆ ನಾವು ಕಾರಣರಾಗಿದ್ದೇವೆ ಎಂದು ಹಲವು ಕೋಚ್‌ಗಳು ಹೇಳುತ್ತಿರುವ ಕಾರಣ ಬಿಸಿಸಿಐ ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರನ್ನು ಶಿಫಾರಸು ಮಾಡುವುದನ್ನು ನಿಲ್ಲಿಸಿತ್ತು. ಆದರೆ ರಾಜ್‌ಕುಮಾರ್‌ ಶರ್ಮ (ಕೊಹ್ಲಿ ಅವರ ಕೋಚ್‌) ದ್ರೋಣಾಚಾರ್ಯ ಪ್ರಶಸ್ತಿ ಪಡೆದಾಗ ದ್ರಾವಿಡ್‌ ಅವರಂತಹ ಸಮರ್ಥ ಕೋಚ್‌ಗೆ  ಈ ಪ್ರಶಸ್ತಿ ತಪ್ಪಬಾರದು ಎಂಬ ಕಾರಣಕ್ಕೆ ನಮ್ಮ ನಿಲುವು ಬದಲಿಸಿ ಅವರ ಹೆಸರನ್ನು ಶಿಫಾರಸು ಮಾಡಲು ನಿರ್ಧರಿಸಿದೆವು ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊಹ್ಲಿ ಕೋಚ್‌ ಹೆಸರನ್ನು ಬಿಸಿಸಿಐ ಸೂಚಿಸಿಲ್ಲ ಬದಲಾಗಿ ವೈಯಕ್ತಿಕವಾಗಿ ಶಿಫಾರಸು ಮಾಡಲಾಗಿತ್ತು.

ಕೊಹ್ಲಿ ಅವ ಹೆಸರನ್ನು ಎರಡನೇ ಬಾರಿ ಖೇಲ್‌ ರತ್ನಕ್ಕೆ ಶಿಫಾರಸು ಮಾಡಲಾಗಿದೆ. 2016ರಲ್ಲಿ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಒಲಿಂಪಿಕ್‌ ವರ್ಷವಾಗಿದ್ದರಿಂದ ರಿಯೋದ ತಾರೆಗಳಾದ ಪಿವಿ ಸಿಂಧು, ಸಾಕ್ಷಿ ಮಲಿಕ್‌ ಮತ್ತು ದೀಪಾ ಕರ್ಮಾಕರ್‌ ಅವರಿಗೆ ಖೇಲ್‌ ರತ್ನ ಗೌರವ ನೀಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next