ಗಂಗಾವತಿ: ಕೇಸರಟ್ಟಿ ಹಣವಾಳ ಗ್ರಾಮಗಳ ಮಧ್ಯೆ ಇರುವ 6 ಕಿ.ಮೀ. ರಸ್ತೆ ದುರಸ್ಥಿ ಕಾರ್ಯ ಅರ್ಧಂಬರ್ಧ ಮಾಡಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ 2023ರ ವಿಧಾನಸಭಾ ಚುನಾವಣೆಯನ್ನು ಇಡೀ ಗ್ರಾಮಸ್ಥರು ಬಹಿಷ್ಕಾರ ಮಾಡುವುದಾಗಿ ಗ್ರಾಮದ ಶಾಲೆ ಹತ್ತಿರ ಪ್ರತಿಭಟಿಸಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮರಕುಂಬಿ ಗ್ರಾಮದ ಮುಖಂಡ ಶರಣಪ್ಪ ಇಳಿಗೆರ್, ಬಸವರಾಜ್ ನಾಯಕ ಮಾತನಾಡಿ, ಕೇಸರಹಟ್ಟಿ ಹಣವಾಳ್ ಗ್ರಾಮಗಳ ಮಧ್ಯೆ ಮರಕುಂಬಿ ಗ್ರಾಮವಿದ್ದು, ಮರಕುಂಬಿ ಗ್ರಾಮ ಹಣವಾಳ ಹಾಗೂ ಕೇಸರಹಟ್ಟಿ ಸಮಾನಾಂತರ ದೂರದಲ್ಲಿದೆ. ಸುಮಾರು ಆರು ಕಿಲೋಮೀಟರ್ ಉದ್ದದ ರಸ್ತೆ ದುರಸ್ಥಿ ಮಾಡಲು ಕಳೆದ ಐದು ವರ್ಷಗಳ ಹಿಂದೆ ರಸ್ತೆಯನ್ನು ಬಗೆದು ಕಲ್ಲು ಮತ್ತು ಮಣ್ಣು ಹಾಕಲಾಗಿದ್ದು ನಂತರ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಅರ್ಧಂಬರ್ಧಾವಾಗಿದ್ದ ಗ್ರಾಮಸ್ಥರ ಸಂಚಾರಕ್ಕೆ ಬಹಳ ತೊಂದರೆಯಾಗಿದೆ ಎಂದರು.
ಪ್ರತಿನಿತ್ಯ ಕೇಸರಹಟ್ಟಿ ಮತ್ತು ಗಂಗಾವತಿಗೆ ಶಾಲಾ ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರು ಗರ್ಭಿಣಿಯರು ಚಿಕಿತ್ಸೆಗಾಗಿ ತೆರಳಲು ರಸ್ತೆ ಸರಿ ಇಲ್ಲದ ಕಾರಣ ಬಸ್ಸು ಸೇರಿದಂತೆ ಆಟೋಗಳು ಸಂಚಾರ ಮಾಡುತ್ತಿಲ್ಲ. ಇದರಿಂದ ಗ್ರಾಮಕ್ಕೆ ಮುಖ್ಯ ರಸ್ತೆಗೆ ಸಂಪರ್ಕ ಇಲ್ಲವಾಗಿದೆ ಎಂದರು.
ಕೆಸರಹಟ್ಟಿ ಹಣವಾಳ್ ರಸ್ತೆ ಕಾಮಗಾರಿ ಮಾಡಲು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಇಲಾಖೆ ಮೂಲಕ ಸುಮಾರು 3.5 ಕೋಟಿ ಹಣವನ್ನು ಬಿಡುಗಡೆ ಮಾಡಿ ಗುತ್ತಿಗೆಯನ್ನು ಕಾರಟಿಗಿ ಮೂಲದ ಗುತ್ತೇದಾರಿಗೆ ವಹಿಸಿದೆ ಎಂದು ಹೇಳಿದರು.
Related Articles
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಯೋಜನಾ ವರದಿ ತಯಾರು ಮಾಡಿದ್ದರಿಂದ ರಸ್ತೆಯ ಮಾರ್ಗಮಧ್ಯೆ ಬರುವ ಸಿಡಿ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಅಧಿಕ ವೆಚ್ಚವಾಗುತ್ತದೆ. ಈ ಹಣ ಸರ್ಕಾರ ಮಂಜೂರು ಮಾಡಿದ ಹಣದಲ್ಲಿ ಒಳಗೊಂಡಿಲ್ಲವಾದ್ದರಿಂದ ರಸ್ತೆ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಗುತ್ತಿಗೆದಾರ ಕೈ ತೊಳೆದುಕೊಂಡಿದ್ದಾರೆ ಎಂದರು.
ಇದರಿಂದ ಮರಕುಂಬಿ ಗ್ರಾಮಸ್ಥರು ಸೇರಿದಂತೆ ಕೇಸರಹಟ್ಟಿ, ಹಣವಾಳ್ ಮಧ್ಯೆ ಬರುವ ಗ್ರಾಮಸ್ಥರಿಗೆ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಈಗಾಗಲೇ ಹಲವು ಬಾರಿ ಕನಕಗಿರಿ ಶಾಸಕ ದಡೇಸೂಗುರು ಬಸವರಾಜ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ಎ.ಇ. ಇ. ಪಲ್ಲವಿ ಇವರಿಗೆ ಮನವಿ ಮಾಡಿದರು ಒಬ್ಬರ ಮೇಲೊಬ್ಬರು ಸುಳ್ಳುಗಳನ್ನ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸರಕಾರ ರಸ್ತೆ ದುರಸ್ತಿಗಾಗಿ ಹಣ ಮಂಜೂರ ಮಾಡಿದ್ದರು ಎಂದು ಹೇಳಿದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಹಣವನ್ನು ಭ್ರಷ್ಟಾಚಾರ ಮಾಡಿರುವ ಅನುಮಾನವಿದ್ದು ಕೂಡಲೇ ಸರಕಾರದ ಅಧಿಕಾರಿಗಳು ಗಮನ ಹರಿಸಿ ಕೇಸರಹಟ್ಟಿ ಹಣವಾಳ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ 2023ನೇ ಸಾಲಿನಲ್ಲಿ ಜರುಗುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶರಣೇಗೌಡ, ಬಸವರಾಜ್, ಈಡೀಗೇರ್, ಪಂಪಾಪತಿ, ಕೋರಿ ಶೆಟ್ಟರ್, ಬಸವರಾಜ್ ನಾಯಕ್ ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.