Advertisement

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

02:42 PM Jan 16, 2022 | Team Udayavani |

ಚಿಕ್ಕಮಗಳೂರು: ಕೆಮ್ಮಿದರೆ ಕೊರೋನಾ ಅನ್ನೋ ಕಾಲವಿದು. ಆದರೆ, ಮಾಡೋ ಕೆಲಸವನ್ನು ಸರಿಯಾಗಿ ಮಾಡದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 10ಕ್ಕೂ ಹೆಚ್ಚು ಹಳ್ಳಿಯ ಜನರನ್ನ ಕೆಮ್ಮುತ್ತ ಮನೆಯಲ್ಲಿ ಕೂರುವಂತೆ ಮಾಡಿದ್ದಾರೆ.

Advertisement

ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರದವರೆಗೂ ಹೆದ್ದಾರಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿಗೆ ರಸ್ತೆ ಅಗೆದಿರೋ ಅಧಿಕಾರಿಗಳು ರಸ್ತೆಗೆ ಡಾಂಬರ್ ಹಾಕಿಲ್ಲ. ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಕ್ಕಾಗಿ ನಿತ್ಯ ನೂರಾರು ವಾಹನಗಳು ಓಡಾಡುವ ಈ ಮಾರ್ಗದಲ್ಲಿ 10ಕ್ಕೂ ಹೆಚ್ಚು ಹಳ್ಳಿಗಳು ಇವೆ. ಹೆಚ್ಚಾಗಿ ಟೂರಿಸ್ಟ್ ವಾಹನಗಳೇ ಓಡಾಡುವ ಈ ಮಾರ್ಗದಲ್ಲಿ ವಾಹನ ಚಾಲಕರು ಬೇಕಾಬಿಟ್ಟಿ ವೇಗವಾಗಿ ಓಡಾಡುವುದರಿಂದ ನಿತ್ಯ 10ಕ್ಕೂ ಹೆಚ್ಚಿನ ಹಳ್ಳಿಗಳು ಸಂಪೂರ್ಣ ಧೂಳಿನಲ್ಲಿ ಮುಳುಗುತ್ತಿವೆ.

ನೂರಾರು ಜನ ಧೂಳಿನ ಖಾಯಿಲೆಗೆ ಒಳಗಾಗಿ ಮನೆಯಿಂದ ಆಚೆ ಬರದಂತಹಾ ಸ್ಥಿತಿ ನಿರ್ಮಾಣವಾಗಿದೆ. ಕೆಮ್ಮಿದರೆ ಅಕ್ಕಪಕ್ಕದವರು ಹತ್ರ ಬರಲ್ಲ. ಆಸ್ಪತ್ರೆಗೆ ಹೋಗು ಅಂತಾರೆ. ಆಸ್ಪತ್ರೆಗೆ ಹೋದ್ರೆ ಕೋರೋನಾ ಅಂತಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಎಡವಟ್ಟಿನಿಂದ ಹಳ್ಳಿಗರು ಹೈರಾಣಾಗಿದ್ದಾರೆ.

ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ ಒಂದು ಮಾರ್ಗದಲ್ಲಿ ಡಾಂಬರ್ ಹಾಕಿ ವಾಹನಗಳು ಓಡಾಡಲು ಅವಕಾಶ ನೀಡಿದರೆ ಧೂಳು ಬರುವುದಿಲ್ಲ. ಆದರೆ, ಅಧಿಕಾರಿಗಳು ಅತ್ತ ಡಾಂಬರ್ ಕೂಡ ಹಾಕ್ತಿಲ್ಲ. ಇತ್ತ ರಸ್ತೆಗೆ ನೀರನ್ನಾದ್ರು ಹಾಕುತ್ತಿಲ್ಲ. ನಿತ್ಯ ಹಗಲಿರುಳೆನ್ನದೆ ಓಡಾಡುವ ಸಾವಿರಾರು ವಾಹನಗಳಿಂದ ಹಳ್ಳಿಗರು ಹಾಸಿಗೆ ಹಿಡಿಯುವಂತಾಗಿದೆ.

Advertisement

ಹೆದ್ದಾರಿ ಪ್ರಾಧಿಕಾರದ ಕಾಮಗಾರಿ ವೇಳೆ ಧೂಳು ನಿಯಂತ್ರಣಕ್ಕೆ ರಸ್ತೆಗೆ ನಿತ್ಯ ಎರಡ್ಮೂರು ಬಾರಿ ನೀರು ಹಾಕಬೇಕೆಂಬ ನಿಯಮವಿದೆ. ಆದರೆ, ಅಧಿಕಾರಿಗಳು ಅತ್ತ ನೀರನ್ನೂ ಹಾಕುತ್ತಿಲ್ಲ. ಇತ್ತ ಡಾಂಬರ್ ಕೂಡ ಹಾಕುತ್ತಿಲ್ಲ. ಇದರಿಂದ ಹಳ್ಳಿಗರು ಹಾಸಿಗೆ ಹಿಡಿದು ಆಸ್ಪತ್ರೆ ಅಲೆಯುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿರೋ ಹಳ್ಳಿಗರು ತಮ್ಮ ಮನೆಗಳ ಮುಂಭಾಗ ತಾವೇ ನೀರು ಹಾಕಿಕೊಳ್ಳುತ್ತಿದ್ದಾರೆ.

ನಿತ್ಯ ದಿನಕ್ಕೆ ನಾಲ್ಕೈದು ಬಾರಿ ತಮ್ಮ ಮನೆ ಮುಂದೆ ತಾವೇ ನೀರು ಹಾಕಿಕೊಳ್ಳುವಂತಾಗಿದೆ. ಹೀಗೆ ರಸ್ತೆ ನೀರು ಹಾಕಿಕೊಂಡರೇ ಮಾತ್ರ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಹಾಗಾಗಿ, ಹಳ್ಳಿಗರು ಕೂಡಲೇ ಅಧಿಕಾರಿಗಳು ಡಾಂಬರ್ ಹಾಕಿ ಅಥವ ದಿನಕ್ಕೆ ನಾಲ್ಕೈದು ಬಾರಿ ರಸ್ತೆ ನೀರು ಹಾಕಿ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next