Advertisement

2 ದಶಕಗಳಿಂದ ಸ್ವಂತ ನಿವೇಶನದ ನಿರೀಕ್ಷೆಯಲ್ಲಿ ಗ್ರಾಮಸ್ಥರು

10:20 AM Jul 25, 2022 | Team Udayavani |

ಮೂಡುಬಿದಿರೆ: ನಿಸರ್ಗ ರಮಣೀಯ ತಾಣ ತೆಂಕ ಮಿಜಾರು ಗ್ರಾಮದಲ್ಲಿ ಕೃಷಿಕರು, ಕೃಷಿ ಮತ್ತು ಇತರ ಕೂಲಿ ಕಾರ್ಮಿಕರೇ ಹೆಚ್ಚು. ವಿಶಿಷ್ಟ ಜಾನಪದ ಹಿನ್ನೆಲೆಯ ಕುಡುಬಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಗ್ರಾಮವಿದು. ಕುಡುಬಿ ಸಮುದಾಯದವರೂ ಸೇರಿದಂತೆ ಹಲವಾರು ಮಂದಿ ಸ್ವಂತ ಮನೆ ನಿವೇಶನ ಹೊಂದಲು ಕಳೆದ ಎರಡು ದಶಕಗಳಿಂದಲೂ ಕಾಯುತ್ತಿದ್ದಾರೆ.

Advertisement

ಪಲ್ಕಿಟ್ಲ ಸಮಸ್ಯೆ

ವಂಟಿಮಾರ್‌ನ ಸ.ನಂ. 263ರಲ್ಲಿ 25 ಮಂದಿಗೆ ಹಕ್ಕುಪತ್ರ ಕೊಟ್ಟು ಅಲ್ಲಿ ಅಮರ ನಗರದ ಫಲಕ ಬಿತ್ತು. ಉಳಿದಂತೆ 27 ಮಂದಿಗೆ ಸ.ನಂ. 164ರಲ್ಲಿ ಹಕ್ಕುಪತ್ರ ಕೊಡಲು ಉದ್ದೇಶಿಸಿದ್ದರೂ ನಿರ್ದಿಷ್ಟವಾಗಿ ಜಾಗ ಪ್ಲಾಟಿಂಗ್‌ ಮಾಡಿ ತೋರಿಸಿರಲಿಲ್ಲ. ಚುನಾವಣೆ ಬಂತು. ಅವರು ಸೋತರು, ಇವರು ಬಂದರು. ನೂತನ ಸೈಟ್‌ಗೆ “ನಾಮಕರಣ ವಿವಾದ’ ಅಂಟಿಕೊಂಡಿತು. 27 ಮಂದಿಯ ಹಕ್ಕುಪತ್ರ ರದ್ದಾಯಿತು. ಅಷ್ಟರಲ್ಲಿ ಕೆಲವರು ಪಲ್ಕಿಟ್ಲ ಗುಡ್ಡದಲ್ಲಿ ತಗಡು ಶೆಡ್‌ ಹಾಕಿಕೊಂಡು ನೆಲೆಯಾದರು. ಅಲ್ಲಿ ರಸ್ತೆ, ವಿದ್ಯುತ್‌ ಸಹಿತ ಯಾವುದೇ ಮೂಲ‌ ಸೌಕರ್ಯಗಳಿಲ್ಲ. ಈ ಬಗ್ಗೆ ಕೆಲವು ವರ್ಷಗಳ ಹಿಂದೆ ಗಾಂಧಿ ಜಯಂತಿಯಂದು ಗಾಂಧಿ ಟೋಪಿ ಧರಿಸಿ ಪ್ರತಿಭಟಿಸಿದ್ದೂ ಅಯಿತು. ಅದು ಸ.ನಂ. ಕೆರೆ ಪರಂಬೋಕು, ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಗೆ ಬರುವುದೆಂದು ಬಳಿಕ ಗೊತ್ತಾಯಿತು. ಈಗಿನ ಶಾಸಕರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿದಾಗ ಅವರು ಅದನ್ನು ಬಗೆಹರಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು. ಗ್ರಾಮವಾಸ್ತವ್ಯದಲ್ಲಿ ಸದ್ಯ ಪಲ್ಕಿಟ್ಲದಲ್ಲಿರುವವರಿಗೆ ಮತ್ತೆ ಸ.ನಂ. 164ರಲ್ಲಿ ನಿವೇಶನ ನೀಡಲು ಉಪಕ್ರಮಿಸಲಾಯಿತು. ಆದರೆ ಕೆಲವೇ ದಿನಗಳಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಕ್ರಮಕ್ಕೆ ತಾತ್ಕಾಲಿಕ ತಡೆ ಹಾಕಲಾಯಿತು. ಇದರ ಬಗ್ಗೆ ವಾದ ವಿವಾದಗಳೇನಿದ್ದರೂ ಮನೆ ನಿವೇಶನ ರಹಿತರಿಗೆ (ಈ ಹಿಂದೆ ಸೂಚಿಸಲಾದವರಿಗೆ) ಸ.ನಂ. 164ರಲ್ಲಿ ನಿವೇಶನ ನೀಡಬೇಕಾಗಿದೆ.

ಇನ್ನೊಂದೆಡೆ ಅಣ್ಣಪ್ಪ ನಗರದಲ್ಲಿ 150 ಸೈಟುಗಳು ಸಿದ್ಧ ಇವೆ. 63 ಮಂದಿಗೆ ನೀಡಲಾಗಿದೆ. ಉಳಿದುದರಲ್ಲಿ ಕೆಲವೆಡೆ ಅನ್ಯ ಗ್ರಾಮದವರು ಶೆಡ್‌ ಹಾಕಿಕೊಂಡು ತಳವೂರುವ ಪ್ರಯತ್ನ ನಡೆಸಿದ್ದಾರೆ. ಊರವರಿಗೆ ಆದ್ಯತೆ ನೀಡಬೇಕೆಂಬುದು ಇಲ್ಲಿನವರ ಆಗ್ರಹ. ಈಗಾಗಲೇ 800 ಅರ್ಜಿಗಳು ಬಂದಿವೆ. 260 ಮಂದಿ ಅರ್ಹರಿದ್ದಾರೆ. ಇವರಲ್ಲಿ ಕೆಲವರಿಗಾದರೂ ನಿವೇಶನ ನೀಡಬೇಕಾಗಿದೆ.

ಸಾರಿಗೆ ಸಮಸ್ಯೆ

Advertisement

ಜಿಲ್ಲಾ ಕೇಂದ್ರಕ್ಕೆ ನೇರ ಬಸ್‌ ವ್ಯವಸ್ಥೆ ಇಲ್ಲ, ಉನ್ನತ ಶಿಕ್ಷಣಕ್ಕೆ ಮತ್ತು ಉದ್ಯೋಗ ನಿಮಿತ್ತ ಮಂಗಳೂರಿಗೆ ಪ್ರಯಾಣಿಸುವವರು ಮೂಡುಬಿದಿರೆಯಾಗಿ ಸುತ್ತು ಬಳಸಿ ಹೋಗುವುದು ಅನಿವಾರ್ಯ. ಖಾಸಗಿ ಬಸ್‌ ಪರ್ಮಿಟ್‌ ಇದ್ದರೂ ಪ್ರಯೋಜನವಿಲ್ಲ, ಇಲ್ಲಿಗೆ ಸರಕಾರಿ ಬಸ್‌ ಸೌಕರ್ಯ ಒದಗಿಸಬೇಕೆಂಬ ಹಲವು ದಶಕಗಳ ಆಗ್ರಹ ಈಡೇರಿಲ್ಲ.

ಹೆಚ್ಚಿನ ರಸ್ತೆಗಳಿಗೆ ಕಾಯಕಲ್ಪ ನೀಡಲಾಗಿದ್ದು ಸದ್ಯ 1.17 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ನಡೆಸಲು ಟೆಂಡರ್‌ ಆಗಿದೆ.

ಆರೋಗ್ಯ

ತೆಂಕಮಿಜಾರು ಗ್ರಾಮದವರಿಗೆ ಹತ್ತಿರದ ಸರಕಾರಿ ಆಸ್ಪತ್ರೆ ಎಂದರೆ ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರ. ಅದಕ್ಕೆ ಉತ್ತರದ ಸಂಪಿಗೆಗೆ ಬಂದು ಮತ್ತೆ ಪಶ್ಚಿಮದಲ್ಲಿರುವ ಕಲ್ಲಮುಂಡ್ಕೂರು ಕಡೆಗೆ ಬರಲು ಎರಡು ವಾಹನ ಹಿಡಿಯಬೇಕು. ಈ ಸುತ್ತಾಟ ತಪ್ಪಿಸಲು ತೆಂಕಮಿಜಾರಿನ ಸಂತೆಕಟ್ಟೆಯಲ್ಲಿ ಒಂದು ನಿವೇಶನ ಗೊತ್ತುಪಡಿಸಲಾಗಿದೆ. ಆದರೆ ಅಸಲಿ ಸಮಸ್ಯೆ ಏನೆಂದರೆ ಅಲ್ಲಿ 30,000 ಜನಸಂಖ್ಯೆ ಇರಬೇಕಂತೆ!

ಸಿಬಂದಿ ಕೊರತೆ

ತೆಂಕ ಮಿಜಾರು ಗ್ರಾಮದ ನೀರ್ಕೆರೆಯಲ್ಲಿರುವ ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಕಾರ್ಯದರ್ಶಿ, ದ್ವಿ.ದ. ಸಹಾಯಕರ ಹುದ್ದೆ ಗಳು ಖಾಲಿ ಇವೆ. ಪೂರ್ಣಕಾಲಿಕ ಪಿಡಿಒ ಬೇಕಾಗಿದ್ದಾರೆ. ಸದ್ಯ ಪಾಲಡ್ಕದ ಪಿಡಿಒ ಇಲ್ಲಿ ಪ್ರಭಾರಿ.

ವಿಶೇಷತೆ

ಕೃಷಿ ಪ್ರಧಾನ ಗ್ರಾಮವಿದು. ನಂದಿನಿ ನದಿ ಈ ಗ್ರಾಮದ ಜೀವಾಳ. ಕುಡುಬಿ ಸಮುದಾಯ ಬಹುಸಂಖ್ಯಾಕರು (6,500), ಇತರರು ಸೇರಿ ಸುಮಾರು 8,000 ಜನಸಂಖ್ಯೆ ಇದೆ. ಕುಡುಬಿಯವರ ಹೋಳಿ ಅದರೊಂದಿಗೆ ಹಾಸುಹೊಕ್ಕಾದ ಗುಮ್ಟೆ, ಕೋಲಾಟಾದಿ ಧಾರ್ಮಿಕ ಕಲೆಗಳೊಂದಿಗೆ ಯಕ್ಷಗಾನದಲ್ಲೂ ಸಾಕಷ್ಟು ಮಂದಿ ಸಾಧನೆ ತೋರಿದ್ದಾರೆ. ನೀರ್ಕೆರೆ ಜಾರಂದಾಯ ದೈವಸ್ಥಾನ ಈ ಗ್ರಾಮದ ಮಾತ್ರವಲ್ಲ ಆಸುಪಾಸಿನ ಗ್ರಾಮಗಳ ಕಾರಣಿಕದ ನಂಬಿಕೆಯ ತಾಣ.

ನೀರ್ಕೆರೆ ಮತ್ತು ನೀರು

ನೀರಿರುವ ಕೆರೆ ನೀರ್ಕೆರೆ. ಇಲ್ಲಿನ ನೀರ್‌ಕೆರೆ, ಪೂಮಾವರ ಕಟ್ಟ ಸಹಿತ ಹಲವು ಜಲನಿಧಿಯ ತಾಣಗಳಿಗೆ ಕಾಯಕಲ್ಪ ನೀಡಬೇಕಾಗಿದೆ. ಜಲಜೀವನ ಮಿಷನ್‌ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ. ಪೈಪ್‌ ಲೈನ್‌ಗಳು ಒಡೆದುಹೋಗುತ್ತಿವೆ. ಎಷ್ಟೋ ಕಡೆ ದುರಸ್ತಿ ಮಾಡದೆ ಬಿಡಲಾಗಿದೆ ಇಲ್ಲವೇ ಅರ್ಧಂಬರ್ಧ ತೇಪೆ ಹಾಕಲಾಗಿದೆ. ನೀರ್ಕೆರೆ ಸೇತುವೆ ರಚನೆಯಾಗಿ ನಾಲ್ಕು ದಶಕ ಕಳೆದಿರಬಹುದು. ಈ ಸೇತುವೆ ದುರ್ಬಲವಾಗಿರುವ ಸಂಶಯ ಜನರಿಗೆ ಕಾಡುತ್ತಿದೆ. ಈ ಸೇತುವೆಯ ದೃಢತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ.

ತೆಂಕ ಮಿಜಾರು ಗ್ರಾಮದಲ್ಲಿ ಜನಿಸಿ ಸಾಧಕರೆನಿಸಿದವರು

ಕನ್ನಡದಲ್ಲಿ ಮೊತ್ತ ಮೊದಲು “ಕಾಮಶಾಸ್ತ್ರ’ದ ಬಗ್ಗೆ ಪುಸ್ತಕಗಳನ್ನು ಬರೆದ “ಧನ್ವಂತರಿ’ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ| ಮಳಿಯೆ ಗೋಪಾಲಕೃಷ್ಣ ರಾವ್‌, ವಿಧಾನ ಪರಿಷತ್‌ ಸದಸ್ಯ, ಸ್ವಾತಂತ್ರ್ಯ ಹೋರಾಟಗಾರ ಮಳಿಯೆ ಗೋವರ್ಧನ ರಾವ್‌, ಹುಬ್ಬಳ್ಳಿ ಸಾಹಿತ್ಯ ಭಂಡಾರ ಮಂಜನಬೈಲು ಗೋವಿಂದ ರಾವ್‌, ಮೊತ್ತ ಮೊದಲು ಕಂಬಳ, ನಾಗಮಂಡಲ ಆಯೋಜಿದ ಮಿಜಾರುಗುತ್ತು ಆನಂದ ಆಳ್ವ, ಮೂಡುಬಿದಿರೆಯನ್ನು ಶಿಕ್ಷಣ ಕಾಶಿಯಾಗಿಸಿದ ಡಾ| ಮೋಹನ ಆಳ್ವ, ಪ್ರಧಾನಿ ಇಂದಿರಾ ಗಾಂಧಿಗೆ ಆರ್ಥಿಕ ಸಲಹೆಗಾರರಾಗಿದ್ದ ಮುಂಡಾಡಿ ಶ್ರೀನಿವಾಸ ರಾವ್‌, ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯ, ಮೇರು ಸಾಹಿತಿ ಜನಾರ್ದನ ಗುರ್ಕಾರ್‌, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶ್ರೀಪತಿ ಮಂಜನಬೈಲು, ಯಕ್ಷಗಾನದ ಮೇರು ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ, ಹಾಸ್ಯಗಾರ ಮಿಜಾರು ತಿಮ್ಮಪ್ಪ, ಕಂಬಳ ಕೋಣದ ಮಿಂಚಿನ ಓಟಗಾರ ಅಶ್ವತ್ಥಪುರ ಮಿಜಾರು ಶ್ರೀನಿವಾಸ ಗೌಡ ಮೊದಲಾದವರು ಊರಿಗೆ ಹೆಸರು ತಂದಿತ್ತವರು.

ಶಿಕ್ಷಣ ಸರಕಾರಿ ಪ.ಪೂ. ಕಾಲೇಜಿಗೆ ಬೇಡಿಕೆ

ನೀರ್ಕೆರೆಯಲ್ಲಿ ಹೈಸ್ಕೂಲು ವರೆಗೆ ಸರಕಾರಿ ಶಿಕ್ಷಣಾಲಯವಿದೆ. ಉತ್ತಮ ಫಲಿತಾಂಶವಿದೆ. ಹಾಗಾಗಿ ದೂರದ ಪುತ್ತಿಗೆಯಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೈಸ್ಕೂಲಿಗೆ ಹೆಚ್ಚುವರಿ ಕೊಠಡಿಗಳ ಆವಶ್ಯಕತೆ ಇದೆ. ಇದರೊಂದಿಗೆ ಇಲ್ಲೊಂದು ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಬೇಡಿಕೆ ಇದೆ. ಜಾಗವೂ ಇದೆ. ಈ ಬಗ್ಗೆ ಪ್ರಯತ್ನಿಸಬೇಕಾಗಿದೆ. ರಾ.ಹೆ. 169 ಹಾದು ಹೋಗುವ ಮಿಜಾರು ಬಂಗಬೆಟ್ಟಿನಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ (ಎಲ್‌ಕೆಜಿಯಿಂದ ಪಿಯು ವರೆಗೆ) ಇದೆ. ಆದರೆ ನೀರ್ಕೆರೆ, ವಂಟಿಮಾರು, ಕೊಂಪದವು, ಮುಚ್ಚಾರು ಕಡೆಗಳಿಂದ ಬರುವಾಗ ಕಾಡಿನ ನಡುವೆ ಹಾದಿ ಇದೆ. ಬಸ್‌ ಸೌಕರ್ಯ ಇಲ್ಲ.

ಉತ್ತಮ ಪಂಚಾಯತ್‌ ರೂಪಿಸುವ ಕನಸು: ಸಾಕಷ್ಟು ಅಭಿವೃದ್ಧಿ ಆಗುತ್ತ ಇದೆ. ಶಾಸಕರ ಅನುದಾನ, ಮಾರ್ಗದರ್ಶನ ನಮಗಿದೆ. ಎಲ್ಲ ಸದಸ್ಯರ ಸಹಮತದೊಂದಿಗೆ ರಸ್ತೆ, ನೀರು ಪೂರೈಕೆ, ನಿವೇಶನ ಹಂಚಿಕೆ ಒಳ್ಳೆಯ ರೀತಿ ನಡೆಸುತ್ತ ಉತ್ತಮ ಪಂಚಾಯತ್‌ ರೂಪಿಸುವ ಕನಸಿದೆ. ನಮಗೆ ಪೂರ್ಣಕಾಲಿಕ ಪಿಡಿಒ ಬೇಕು. ಖಾಲಿ ಬಿದ್ದಿರುವ ಕಾರ್ಯದರ್ಶಿ, ಗುಮಾಸ್ತರ ಹುದ್ದೆ ಭರ್ತಿ ಆಗಬೇಕಾಗಿದೆ. –ರುಕ್ಮಿಣಿ, ಅಧ್ಯಕ್ಷರು, ತೆಂಕಮಿಜಾರು ಗ್ರಾ.ಪಂ.

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next