ಆಲಂಕಾರು: ಅಧಿಕಾರಿಗಳು ಭಿಕ್ಷುಕರ ಹಾಗೆ ಜನರಲ್ಲಿ ಬೇಡುವ ಆವಶ್ಯಕತೆಯಿಲ್ಲ. ಪ್ರತೀ ಕೆಲಸಕ್ಕೂ ಸಾರ್ವಜನಿಕರನ್ನು ಇಲಾಖಾಧಿಕಾರಿಗಳ ಬಳಿ ಕಳುಹಿಸಿ ಕಿರುಕುಳ ನೀಡಬಾರದು. ಒಂದು ಅರ್ಜಿ ಬಂದ ಬಳಿಕ ಅದರ ಜವಾಬ್ದಾರಿ ಅಧಿಕಾರಿಗಳದ್ದು, ಅದನ್ನು ಬಿಟ್ಟು ಅರ್ಜಿದಾರರನ್ನೇ ಪ್ರತೀ ಹಂತದ ಕೆಲಸಕ್ಕೆ ಕಳುಹಿಸುವುದು ಸರಿಯಲ್ಲ ಎಂದು ಆಲಂಕಾರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಹೇಳಿದರು.
ಅಧಿಕಾರಿಗಳು ಕಡತ ವಿಲೇವಾರಿಗೆ ಸಾರ್ವಜನಿಕರನ್ನು ಸತಾಯಿಸಿ ಹಣಕ್ಕೆ ಪೀಡಿಸಿದರೆ ನನ್ನ ಗಮನಕ್ಕೆ ತಂದಲ್ಲಿ ಅಂತಹ ಅಧಿಕಾರಿಗಳನ್ನು ನೇರವಾಗಿ ಮನೆಗೆ ಕಳುಹಿಸುತ್ತೇನೆ ಎಂದರು.
ಆಲಂಕಾರಿನಲ್ಲಿ ಎಂಡೋ ಸಂತ್ರಸ್ತ ರಿಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಲು ಸರಕಾರದಿಂದ ಮಂಜೂರಾತಿ ದೊರೆತು ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಪಹಣಿ ಕೂಡ ಆಗಿದೆೆ. ಆದರೆ ಕೇಂದ್ರ ಅನುಷ್ಠಾನ ಇನ್ನೂ ಆಗಿಲ್ಲ. ಆದ್ದರಿಂದ ತತ್ಕ್ಷಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಹಾಸಿಗೆ ಹಿಡಿರುವ ಎಂಡೋ ಸಂತ್ರಸ್ತರನ್ನು ಅವರ ತಾಯಂದಿರು ಆರೈಕೆ ಮಾಡುತ್ತಿದ್ದು, ಅಂಥ ತಾಯಂದಿರಿಗೆ ಮಾಸಾಶನ ಕೊಡಿಸಬೇಕು ಎಂದು ಹೋರಾಟಗಾರ ಪೀರ್ ಮಹಮ್ಮದ್ ಸಾಹೇಬ್ ಮನವಿ ಮಾಡಿದರು.
ಈ ಬಗ್ಗೆ ಉತ್ತರಿಸಿದ ಡಿ.ಸಿ., ಆಲಂಕಾರು, ಬೆಳ್ತಂಗಡಿಯಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣದ ಬೇಡಿಕೆ ಇದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
Related Articles
94ಸಿ ಹಕ್ಕುಪತ್ರ: ಸತಾಯಿಸುತ್ತಾರೆ
ಅಧಿಕಾರಿಗಳು 94ಸಿಯಲ್ಲಿ ಹಕ್ಕುಪತ್ರ ನೀಡಲು ಸತಾಯಿಸುತ್ತಾರೆ ಎಂದು ಪದ್ಮಾವತಿ ದೂರಿದರು. ಇದಕ್ಕೆ ಉತ್ತರಿಸಿದ ಡಿ.ಸಿ., 94ಸಿಯಲ್ಲಿ ಬೋಗಸ್ ಅರ್ಜಿಯೂ ಇದೆ.
ಅರ್ಹರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಸಮಸ್ಯೆಗಳನ್ನು ಎಡಿಸಿಯವರಲ್ಲಿ ತಿಳಿಸಿ ಪರಿ ಹರಿಸಿಕೊಳ್ಳಬೇಕು ಎಂದು ಹೇಳಿದರು.
ಧ್ವನಿವರ್ಧಕದ ಸಮಸ್ಯೆ-ದೂರು
ಪಕ್ಕದ ಮಸೀದಿಯಲ್ಲಿ ನಿಯಮ ಮೀರಿ ಧ್ವನಿವರ್ಧಕ ಬಳಸಲಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಲಿಖೀತ ಹಾಗೂ ಪೊಲೀಸ್ ಇಲಾಖೆಗೆ ಮೌಖೀಕ ದೂರು ನೀಡಲಾಗಿದೆ. ಮಸೀದಿಯವರು ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೊçಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ದೂರಿದರು. ನ್ಯಾಯಾಲಯದ ಆದೇಶ ಪ್ರಕಾರ 75 ಡೆಸಿಬಲ್ರಿಂದ ಜಾಸ್ತಿ ಶಬ್ದ ಬರುವ ಹಾಗಿಲ್ಲ, ನಿಯಮ ಮೀರಿದರೆ ಕ್ರಮ ಜರಗಿಸಿ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಅವರು ಪೊಲೀಸರಿಗೆ ಸೂಚನೆ ನೀಡಿದರು.
ಸಮಸ್ಯೆಗಳ ಬಗ್ಗೆ ಚರ್ಚೆ
ದಲಿತ ಮಹಿಳೆಯೊಬ್ಬರು ನಿವೇಶನ ದೊರೆಯದ ಬಗ್ಗೆ ದೂರಿದರು. ಅಡಿಕೆಗೆ ಹಳದಿ ರೋಗ ಇನ್ನಿತರ ಸಮಸ್ಯೆಗಳ ಬಗ್ಗೆ ಶಿವಣ್ಣ ಗೌಡ ಕಕ್ವೆ ಗಮನ ಸೆಳೆದರು. ಆಲಂಕಾರು ಹಾಗೂ ಬಲ್ಯ ಗ್ರಾಮದಲ್ಲಿ ಖಾಯಂ ಗ್ರಾಮ ಕರಣಿಕರ ನೇಮಕವಾಗಬೇಕು, ಆಲಂಕಾರನ್ನು ಹೋಬಳಿ ಮಾಡಬೇಕು, 110 ಕೆವಿ ವಿದ್ಯುತ್ ಸಬ್ಸ್ಟೇಶನ್ ಶೀಘ್ರ ಅನುಷ್ಠಾನವಾಗಬೇಕು ಮೊದಲಾದ ಬೇಡಿಕೆಗಳನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು. ಜಿಲ್ಲಾಧಿಕಾರಿಯವರು ತಡರಾತ್ರಿ ತನಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅರ್ಜಿಗಳ ವಿಲೇವಾರಿ ಮಾಡಿದರು. ಸಭೆಯಲ್ಲಿ ಸರಕಾರದ ವಿವಿಧ ಯೋಜನಗಳ 120 ಫಲಾನುಭವಿಗಳಿಗೆ ಹಕ್ಕುಪತ್ರ, ಪರಿಹಾರ ಧನ ವಿತರಿಸಲಾಯಿತು.