Advertisement

ಸಮಸ್ಯೆ ಇತ್ಯರ್ಥಕ್ಕೆ ಗ್ರಾಮವಾಸ್ತವ್ಯ: ಮಹೇಶ್ವರಿ

05:36 PM Jul 21, 2022 | Team Udayavani |

ಆಳಂದ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನಪರ ಸಮಸ್ಯೆಗಳಿಗೆ ಸ್ಪಂದಿಸದೇ ಕಾಲಹರಣ ಮಾಡಿದ್ದು, ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪಕ್ಷದ ಪ್ರಣಾಳಿಕೆಯ ಜನಪರ ಯೋಜನೆಯಾದ ಪಂಚರತ್ನ ಯೋಜನೆಗಳು ಜಾರಿಗೊಳ್ಳಲಿವೆ ಎಂದು ಜೆಡಿಎಸ್‌ ನಾಯಕಿ ಮಹೇಶ್ವರಿ ವಾಲಿ ಹೇಳಿದರು.

Advertisement

ಆಳಂದ ವಿಧಾನಸಭೆ ಕ್ಷೇತ್ರದಾದ್ಯಂತ ಕೈಗೊಂಡ ಸರಣಿ ಗ್ರಾಮ ವಾಸ್ತವ್ಯ ಹಾಗೂ ಗ್ರಾಮಗಳ ಬಡಾವಣೆಯಲ್ಲಿ ನಡೆಸಿದ ಪಾದಯಾತ್ರೆ ಮಧ್ಯೆ ನಿರಂಬರಗಾ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಕೈಗೊಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಮ್ಮ ಮನೆಯೇ ನನ್ನ ತವರು ಮನೆ ಎಂಬಂತೆ ಜನರ ಸಮಸ್ಯೆಯೇ ನನ್ನ ಸಮಸ್ಯೆ ಎಂದುಕೊಂಡು ಗ್ರಾಮಗಳಲ್ಲಿ ಪಾದಯಾತ್ರೆ ಹಾಗೂ ವಾಸ್ತವ್ಯ ಕೈಗೊಂಡು ಜನರ ಸಮಸ್ಯೆ ಅರಿತು ಪರಿಹರಿಸಲು ಸಣ್ಣ ಪ್ರಯತ್ನ ಇದಾಗಿದೆ. ಹೋದೆಡೆ ಎಲ್ಲ ಸಮುದಾಯದ ಜನರು ಸ್ಪಂದಿಸುತ್ತಿದ್ದಾರೆ. ಸಮಸ್ಯೆ ಹಂಚಿಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಹೊಸಬರು ಸೇರ್ಪಡೆಗೊಳ್ಳುತ್ತಿದ್ದಾರೆ. ರಾಜ್ಯದಲ್ಲೂ ಪಕ್ಷ ಅಧಿಕಾರಕ್ಕೆ ಬಂದು ಮತ್ತೆ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ. ಕ್ಷೇತ್ರದಲ್ಲೂ ಪಕ್ಷದ ಶಾಸಕರು ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಗ್ರಾಮದ ಬಡಾವಣೆಯೊಂದಕ್ಕೆ ಭೇಟಿ ನೀಡಿದ ಮಹೇಶ್ವರಿ ವಾಲಿ ಅವರು, ಮನೆಯ ಮೇಲೆ ವಿದ್ಯುತ್‌ ತಂತಿ ಕಡಿದುಬಿದ್ದು ವಾರವಾದರೂ ಜೆಸ್ಕಾಂ ಸಿಬ್ಬಂದಿ ತೆರವುಗೊಳಿಸಿಲ್ಲ ಎಂದು ಮಹಿಳೆಯೊಬ್ಬರು ವಾಲಿ ಅವರ ಗಮನಕ್ಕೆ ತಂದಾಗ ಜೆಸ್ಕಾಂ ಅಧಿಕಾರಿಗಳನ್ನು ಮೊಬೈಲ್‌ನಿಂದ ಸಂಪರ್ಕಿಸಿ ತಂತಿ ತೆರವುಗೊಳಿಸಿ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹದಗೆಟ್ಟ ರಸ್ತೆ, ಚರಂಡಿ ಕುಡಿಯುವ ನೀರಿನ ಕೊರತೆಯಂತ ಸಮಸ್ಯೆಗಳನ್ನು ಜನರು ಹೇಳಿಕೊಂಡಾಗ ಈ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ಆಳಂಗಾ ಗ್ರಾಮದ ಹನುಮಾನ ದೇವಸ್ಥಾನ, ಬಸವಣ್ಣ ಸಂಗೋಳಗಿ ಬಸವೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಿ ಬಡಾವಣೆ ನಾಗರಿಕರನ್ನು ಭೇಟಿ ಮಾಡಿ ಕುಂದು ಕೊರತೆ ಆಲಿಸಿ ಕ್ರಮಕ್ಕೆ ಸಂಬಂಧಿತ ತಾಪಂ ಅಧಿಕಾರಿಗಳು, ತಹಶೀಲ್ದಾರ್‌ಗೆ ಒತ್ತಾಯಿಸಿದರು.

ಮುಖಂಡರಾದ ಶರಣ ಕುಲಕರ್ಣಿ ನಾವದಗಿ, ಸಂದೀಪ ಚವ್ಹಾಣ, ಫಯಾಜ್‌ ಶೇಖ, ಜೈರಾಮ ರಾಠೊಡ, ಉಮಾದೇವಿ ಹೂಗಾರ, ಶೀಲ್ಪಾ ಸಂಗೋಳಗಿ, ಲಕ್ಷ್ಮೀ ಪೂಜಾರಿ, ಸವಿತಾ ನಾಗಾ, ನಿರ್ಮಲಾ ತಳವಾರ, ಮಂಜು ಪೂಜಾರಿ, ಪ್ರವೀಣ ಕೋಣೆ ಮತ್ತಿತರರು ಜತೆಯಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next