Advertisement

ಹಳ್ಳಿ ಹೈಕ್ಳ ಐಕ್ಯು ಜಾಸ್ತಿ

09:56 AM Nov 20, 2019 | mahesh |

ಹಳ್ಳಿ ಹುಡುಗರೂ ಬುದ್ಧಿ ವಂತಿಕೆ ಪೇಟೆ ಮಕ್ಕಳಿಗೇ ಸವಾಲು ಹಾಕುವಂತಿದೆ. ಇವರು ಹೈಳಿ ಹೈಕ್ಳು ಅನ್ನೋ ಹಾಗಿಲ್ಲ. ಏಕೆಂದರೆ, ಈಸಲದ ಪಿಯುಸಿಯಲ್ಲಿ ಇವರೇ ಮುಂದು. ದಿನೇ ದಿನ ನಗರ ಮತ್ತು ಗ್ರಾಮೀಣ ಮಕ್ಕಳ ಬುದ್ಧಿವಂತಿಕೆ ಅಂತರ ಕಡಿಮೆಯಾಗುತ್ತಿದೆ.

Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 95 ಅಂಕಗಳಿಸಿದ್ದ ಮೂವರು ವಿದ್ಯಾರ್ಥಿನಿಯರು ಪ್ರಥಮ ಪಿಯುಸಿಗೆ ಒಂದೇ ಕಾಲೇಜಿನಲ್ಲಿ ದಾಖಲಾಗಿದ್ದರು. ಅವರಲ್ಲಿ ಒಬ್ಟಾಕೆ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿನಿ. ಪ್ರಾರಂಭದಲ್ಲಿ ವಿಜ್ಞಾನ ವಿಭಾಗಕ್ಕೆ ಹೊಂದಿಕೊಳ್ಳಲು ತಿಣುಕಾಡಿದಳು. ಕೆಲವೇ ದಿನಗಳಲ್ಲಿ ಮಾನಸಿಕವಾಗಿ ಸಿದ್ಧಳಾಗಿ, ಹತ್ತನೇ ತರಗತಿಯಲ್ಲಿ ತನ್ನಷ್ಟೇ ಅಂಕ ಪಡೆದಿದ್ದವರನ್ನು ಹಿಂದಿಕ್ಕಿ, ದ್ವಿತೀಯ ಪಿಯುಸಿ ಹಾಗೂ ಸಿಇಟಿಯಲ್ಲೂ ಉತ್ತಮ ಅಂಕಗಳನ್ನೇ ಗಳಿಸಿದಾಗ ಪಾಠ ಮಾಡಿದ ನನಗೂ ಆಶ್ಚರ್ಯವಾಯಿತು.

ನಾನು ಕಣ್ಣಾರೆ ಕಂಡ ಬಾಗೇಪಲ್ಲಿಯ ಕುಗ್ರಾಮ ಪಾಳ್ಯಕೆರೆ ಭಾಸ್ಕರನ ಬದುಕು ರೋಮಾಂಚಕ.
ಇವನ ಊರಿಗೆ ಬಸ್ಸು ಬರುವುದೇ ಅನುಮಾನ. ಮೂಲಭೂತ ಸೌಕರ್ಯಗಳು ದೊರೆಯದಿದ್ದರೂ ಶ್ರಮಪಟ್ಟು ಎಸ್‌ ಎಸ್‌ ಎಲ್‌ ಸಿ ಯಲ್ಲಿ ದ್ವಿತೀಯ ದರ್ಜೆಗೆ ತೃಪ್ತಿಪಟ್ಟ, ತನ್ನ ಮಾವನ ಬಲವಂತದಿಂದ ಪಿ ಯು ಸಿ ಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡ. ಇಂಜಿನಿಯರಿಂಗ್‌ ಮುಗಿಸಿ ಎಅಖಉ ಪರೀಕ್ಷೆಯಲ್ಲಿ ಒಳ್ಳೆ ದರ್ಜೆಯಲ್ಲಿ ಪಾಸಾಗಿ ಬೆಂಗಳೂರಿನ ಐ ಐ ಎಸ್‌ಸಿ ಯಲ್ಲಿ ಎಂ ಟೆಕ್‌ ಮುಗಿಸಿ ಈಗ ಚೆನ್ನೈ ನಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಹಳ್ಳಿಗಾಡಿನ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತಿದ್ದನ್ನು ನೋಡಿದಾಗೆಲ್ಲ, ನಗರ ಪ್ರದೇಶ ಮಕ್ಕಳಿಗೆ ಇಂಥ ಕಷ್ಟ ಬಂದರೆ ಏನು ಮಾಡಬಹುದು? ಹೀಗೆ ಅನಿಸುತ್ತಲೇ ಇರುತ್ತದೆ.

ಗಮನಿಸುತ್ತಲೇ ಇದ್ದೀನಿ. ಇತ್ತೀಚೆಗೆ ಗ್ರಾಮೀಣ ಭಾಗದ ಮಕ್ಕಳೆಲ್ಲರೂ ಪರೀಕ್ಷೆಗಳಲ್ಲಿ ನಾವೇನು ಕಮ್ಮಿ ಅನ್ನೋ ರೀತಿ ಫ‌ಲಿತಾಂಶ ಪಡೆಯುತ್ತಿದ್ದಾರೆ. 2018ರಲ್ಲಿ ಪಿಯುಸಿಯಲ್ಲಿ ಶೇ. 59.95ರಷ್ಟು ಫ‌ಲಿತಾಂಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳದ್ದೇ. ಈ ಸಲ ಹತ್ತನೇ ತರಗತಿಯಲ್ಲಿ ಶೇ.76ರಷ್ಟು ( ನಗರ ಪ್ರದೇಶ ಶೇ.70)ಗಳಿಸಿದ್ದು. ಇವೆಲ್ಲಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಹಳ ಚುರುಕಾಗಿದ್ದಾರೆ ಅನ್ನೋಕೆ ಸಾಕ್ಷಿಗಳಾಗಿ ನಿಲ್ಲುತ್ತವೆ. ಕಳೆದ ಐದು ವರ್ಷಗಳಲ್ಲಿ ವೈದ್ಯಕೀಯ ಪದವಿ ಹೊಂದಿದವರಲ್ಲಿ ಶೇ. 50 ಕ್ಕಿಂತ ಹೆಚ್ಚು ಗ್ರಾಮೀಣ ಭಾಗದವರೇ ಇದ್ದಾರೆ. ಇಂಜಿನಿಯರಿಂಗ್‌ ಮತ್ತು ವೈದ್ಯಕೀಯ ಅಲ್ಲದೇ ಕೃಷಿವಿಜ್ಞಾನ, ಪಶುವೈದ್ಯಕೀಯ, ಡೆಂಟಲ್, ಆಯುರ್ವೇದ ವೈದ್ಯಕೀಯ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈವರೆಗೂ, ಒಂದೇ ಸಿಲಬಸ್‌, ಒಂದೇ ರೀತಿಯ ಪರೀಕ್ಷೆ, ಒಂದೇ ಪಠ್ಯ ಕ್ರಮ ಇದ್ದರೂ ಗ್ರಾಮೀಣ, ನಗರ ಅನ್ನೋ ಅಂತರವಿತ್ತು. ಇಂದು ಇದು ಕಡಿಮೆಯಾಗುತ್ತಿದೆ. ನಗರ ಪ್ರದೇಶದ ಮಕ್ಕಳಿಗೆ ಸ್ಪರ್ಧೆ ಕೊಡುವುದರಲ್ಲಿ ಗ್ರಾಮೀಣ ಮಕ್ಕಳು ಮೇಲುಗೈ ಸಾಧಿಸಿಸುತ್ತಿದ್ದಾರೆ. ವಿದ್ಯೆ ಕುರಿತ ಕಾಳಜಿ, ಇವತ್ತು ನಗರದಷ್ಟೇ, ಗ್ರಾಮೀಣ ಭಾಗದಲ್ಲೂ ಹಬ್ಬಿದೆ. ನಗರದ ಪ್ರಭಾವ ಇದೆಯಲ್ಲ ಇದು ನೂರಾರು ಕಿ.ಮೀಯಷ್ಟು ವಿಸ್ತರಿಸಿಕೊಂಡಿದೆ. 2001ರ ಸಮೀಕ್ಷೆಯ ಪ್ರಕಾರ, ಶೇ.18ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದರಂತೆ. 2016ರ ಸಮೀಕ್ಷೆಯಲ್ಲಿ ಇದರ ಸಂಖ್ಯೆ ಶೇ. 70 ದಾಟಿದೆ ಅಂದರೆ ಕಾಳಜಿ ಎಷ್ಟಿರಬೇಡ?

ಎಪ್ಪತ್ತರ ದಶಕದ ಹಿಂದೆ ಗ್ರಾಮೀಣ ಭಾಗದಲ್ಲಿ ಅಭ್ಯಾಸ ಮಾಡಿದವರಿಗಿಂತ ತೊಂಬತ್ತರ ದಶಕದ ನಂತರ ಅಭ್ಯಾಸ ಮಾಡಿದವರು ಧನ್ಯರು ಎಂಬ ಭಾವನೆ ನಮ್ಮ ಶಿಕ್ಷಕರಲ್ಲಿ ಇತ್ತು. ಆದರೆ ಈಗಿನ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದಾಗ ಆಗಿನವರಿಗೆ ದೊರೆತ ಸೌಲಭ್ಯಗಳು ಕಡಿಮೆಯೇ. ಪ್ರಥಮ ಪಿಯುಸಿಗೆ ಸೇರಿದ ಪ್ರಾರಂಭದಲ್ಲಿ ಕಾಲೇಜು ಬಿಟ್ಟು ಬಿಡಬೇಕು ಅನಿಸುತ್ತಿತ್ತು. ಆಂಗ್ಲಭಾಷಾ ಮಾಧ್ಯಮದಿಂದ ಬಂದ ನಗರದ ವಿದ್ಯಾರ್ಥಿಗಳ ಜೊತೆ ನಾವು ಸ್ಫರ್ಧಿಸಲಾರೆವು ಎಂಬ ಭಾವನೆ ಬಲವಾಗಿ ಬೇರೂರುತ್ತಿತ್ತು. ವಿಜ್ಞಾನ ಕಲಿಯುವುದು ಎಂದರೆ ಅದೊಂದು ಚಂದ್ರಯಾನವೇ.

Advertisement

ಅದು ನಗರದವರಿಗೆ ಮಾತ್ರ ಎಂದೇ ಭಾವಿಸಲಾಗಿತ್ತು. ಆದರೆ, ಇವತ್ತು ಇಂಗ್ಲೀಷ್‌ ಮೀಡಿಯಂನಲ್ಲಿ ಓದುವ ಮಕ್ಕಳ ಸಂಖ್ಯೆ ಶೇ. 60ರಷ್ಟು ಆಗಿದೆ. ಆತ್ಮವಿಶ್ವಾಸದಿಂದ ಮಾತನಾಡುವ ಮಕ್ಕಳ ಸಂಖ್ಯೆ ಶೇ. 50ಕ್ಕಿಂತ ಹೆಚ್ಚು ಎಂದರೆ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹೇಗೆಲ್ಲ ವಿದ್ಯೆ ಸಂಚಾರ ಮಾಡುತ್ತಿದೆ ಎಂಬುದನ್ನು ಊಹಿಸಬಹುದು. ಇಂಗ್ಲೀಷ್‌ ಅನ್ನೋ ಮಾಯೆಯನ್ನು ಅರ್ಥ ಮಾಡಿಕೊಂಡಿರುವ ಗ್ರಾಮೀಣ ಭಾಗದವರೂ ಸಹ ನಗರದವರ ಹಾಗೆ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಬಲ್ಲರು. ನಾವು ಯಾರಿಗೇನು ಕಡಿಮೆ ಇಲ್ಲ ಎಂದು ಹೇಳಬಲ್ಲರು.

ಈ ಬಗೆಯ ಬದಲಾವಣೆಗೆ ಕಾರಣ ಆಗಿರುವುದು ಗ್ರಾಮೀಣ ಭಾಗದಲ್ಲಿ ಸ್ಥಾಪನೆಗೊಂಡಿರುವ ಆಂಗ್ಲಭಾಷಾ ಮಾಧ್ಯಮ ಶಾಲೆಗಳು, ಕಡಿಮೆಯಾದ ಕೃಷಿ ಚಟುವಟಿಕೆ ಮತ್ತು ಹೆಚ್ಚಾದ ವಿದ್ಯಾಭ್ಯಾಸದ ಕಾಳಜಿ, ದುಡಿದು ಬಂದು ಅಭ್ಯಾಸ ಮಾಡಬೇಕು ಎನ್ನುವ ಕಾಲ ಹೋಗಿ ಅಭ್ಯಾಸಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು.

ಇವುಗಳ ಜೊತೆಗೆ, ಸರಕಾರ ವಿಜ್ಞಾನ, ಕ್ರೀಡೆ, ಗ್ರಂಥಾಲಯ, ಗಣಿತ, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕಲಿಕೆಗೆ ಪೂರಕವಾದ ಸಾಮಗ್ರಿಗಳನ್ನು ಖರೀದಿಸಲು ನೀಡುತ್ತಿರುವ ಅನುದಾನ. ಇದರಿಂದ ಶಾಲೆಯು ಕೇವಲ ಓದಿ ಅಂಕಗಳಿಸುವುದಕ್ಕಷ್ಟೇ ಸೀಮಿತವಾಗಿದ್ದ ಹಳ್ಳಿ ವಿದ್ಯಾರ್ಥಿಗಳನ್ನು ಜಾಣರನ್ನಾಗಿ ಮಾಡಿವೆ. ಪ್ರತಿ ವರ್ಷವೂ ನವೀನ ರೀತಿಯ ವಸ್ತುಗಳು ಶಾಲೆಗೆ ಅತಿಥಿಗಳಾಗಿ ಆಗಮಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿವೆ. ನಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಯಿಂದ ವರ್ಗಾವಣೆಗೊಂಡ ಮೇಲೆ, ಅಲ್ಲಿ ವಿಜ್ಞಾನ ಬೋಧಿಸುವ ಶಿಕ್ಷಕರು ಇರಲಿಲ್ಲ. ಅವರು ಮಾಡಿದ್ದೇನು ಗೊತ್ತಾ? ಆ ಶಾಲೆಯಲ್ಲಿದ್ದ ಕಂಪ್ಯೂಟರ್‌, ಲ್ಯಾಪ್‌ ಟಾಪ್‌, ಪೊ›ಜೆಕ್ಟರ್‌ಗಳನ್ನು ಬಳಸಿ, ಅಲ್ಲಿದ್ದ ಭಾಷಾ ಶಿಕ್ಷಕರು, ಕೂಡಾ ವಿಡಿಯೋ ತೋರಿಸಿ ವಿಜ್ಞಾನದ ಬೋಧನೆ ಮಾಡಿದರು. ಪರಿಣಾಮ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದರು. ಶಾಲೆಗಳಿಗೆ ಉಚಿತವಾಗಿ ನೀಡಿರುವ ಲ್ಯಾಪ್‌ ಟ್ಯಾಪ್‌ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಹೊಂದಿಸಲಾಗಿದೆ. ಇದು ಕೇವಲ ಗಣಿತ, ವಿಜ್ಞಾನಕ್ಕೆ ಅಲ್ಲದೇ, ಎಲ್ಲ ವಿಷಯಗಳಿಗೂ ಲಾಭವಾಗುತ್ತಿದೆ.

ಗ್ರಂಥಾಲಯದ ಕಲ್ಪನೆಯೇ ಇಲ್ಲದ ವಿದ್ಯಾರ್ಥಿಗಳೂ ಒಂದು ಕಾಲದಲ್ಲಿ ಇದ್ದರು ಎಂಬುದು ಇಂದಿನ ವಿದ್ಯಾರ್ಥಿಗಳಿಗೆ ದೊರೆತಿರುವ ಕಲಿಕೆಯ ವಾತಾವರಣದ ಅನಾವರಣ ಮಾಡುತ್ತದೆ. ಇವುಗಳಲ್ಲಿ ಕೆಲವೊಂದು ಸೌಲಭ್ಯಗಳು ಕೆಲವು ವಿದ್ಯಾರ್ಥಿಗಳಿಗೆ (ಕೆಲವು ಖಾಸಗಿ ಶಾಲೆಗಳವರಿಗೆ) ದೊರೆಯದೇ ಹೋದರೂ ಶಿಕ್ಷಣ ರಂಗದಲ್ಲಿ ಕ್ರಾಂತಿ ಆಗಿದೆ. ಕಲಿಕೆಯ ಮಟ್ಟದ ವಿಚಾರಕ್ಕೆ ಬಂದರೆ ಎಲ್ಲರಿಗೂ ಸಮಾನಾವಕಾಶಗಳು ಇವೆ. ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸ ದಿನೇ ದಿನೆ ಕ್ಷೀಣಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣಿಸಲಾರಂಭಿಸಿದೆ.

ಹಾಗೆ ನೋಡಿದರೆ, ಮಾನಸಿಕವಾಗಿ, ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳೇ ಮೇಲು. ಬದುಕಿನ ತಿರುವುಗಳನ್ನು ಸಹಜವಾಗಿ ತೆಗೆದುಕೊಳ್ಳುತ್ತಾರೆ. ಉತ್ತೀರ್ಣ, ಅನುತ್ತೀರ್ಣಗಳನ್ನೂ ಅಷ್ಟೇ ಸಮನಾಗಿ ನೋಡುತ್ತಾರೆ. ಇವಕ್ಕೆಲ್ಲಾ ಕಾರಣ, ಗ್ರಾಮೀಣ ಪ್ರದೇಶದಲ್ಲಿರುವ ಬದುಕಿನ ಸ್ವಾತಂತ್ರ್ಯ ಹಾಗೂ ಒತ್ತಡ ರಹಿತ ಶಿಕ್ಷಣ. ನಗರ ಪ್ರದೇಶದ ಮಕ್ಕಳಿಗೆ ಪ್ರೀ ನರ್ಸರಿಯಿಂದಲೇ ಕಲಿಕೆಯ ಒತ್ತಡ ಶುರುವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ( ಈಗ ಇದ್ದರೂ ಕಡಿಮೆಯೇ) ಈ ರೀತಿ ಒತ್ತಡ ಗಣನೀಯವಾಗಿ ಕಡಿಮೆಯಾಗಿದೆ. ವಿದ್ಯಾಭ್ಯಾಸದ ಗುರಿ ಹುಟ್ಟುವುದೇ 5, 7 ನೇತರಗತಿಗೆ. ಆದರೆ ನಗರ ಪ್ರದೇಶ ಈ ರೀತಿ ಇಲ್ಲ. ಹೆತ್ತವರ ಅತಿಯಾದ ಕಾಳಜಿ ಕೂಡ ಇವರ ಬೌದ್ಧಿಕ ಸ್ವಾತಂತ್ರವನ್ನು ಎಲ್ಲೋ ಒಂದು ಕಡೆ ಬೇಲಿಯಾಗಿಬಿಟ್ಟಿದೆ.

ಮಂಜುನಾಥ ಸು. ಮ.

Advertisement

Udayavani is now on Telegram. Click here to join our channel and stay updated with the latest news.

Next