ವಿಜಯಪುರ : ಕೊಯ್ಲಿನ ಹಂತದಲ್ಲಿದ್ದ ದ್ರಾಕ್ಷಿ ಬೆಳೆ ರೋಗ ನಿಯಂತ್ರಣಕ್ಕೆ ತಪ್ಪಾದ ಔಷಧಿ ಸಿಂಪರಣೆ ಮಾಡಿದ ರೈತರೊಬ್ಬರು ಬೆಳೆಹಾನಿ ಅನುಭವಿಸಿದ್ದು, ಆರ್ಥಿಕ ನಷ್ಟದ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಆತಂಕಕ್ಕೊಳಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ನಿವಾಸಿ ಮನೋಹರ ಆಯತವಾಡ (55) ಎಂದು ಗುರುತಿಸಲಾಗಿದೆ.
ತನ್ನ ತೋಟದಲ್ಲಿ ಕೊಯ್ಲಿಗೆ ಬಂದಿದ್ದ ದ್ರಾಕ್ಷಿ ಬೆಳೆ ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಣೆ ಮಾಡಿದ್ದರು. ಆದರೆ ತಾವು ಸಿಂಪಡಿಸಿದ್ದು ತಪ್ಪಾದ ಔಷಧಿ ಎಂಬ ಅರಿವಾಗುವ ಹಂತದಲ್ಲಿ ಇಡೀ ದ್ರಾಕ್ಷಿ ಬೆಳೇ ಹಾಗೂ ಬಳಿ ಒಣಗಿ ನಿಂತಿತ್ತು. ಇದರಿಂದ ಆರ್ಥಿಕ ಉನ್ನತೀಕರಣದ ನಿರೀಕ್ಷೆಯಲ್ಲಿದ್ದ ರೈತ ಮನೋಹರ ಏಕಾಏಕಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂಧ ಆತಂಕಕ್ಕೊಳಗಾಗಿದ್ದರು.
ಕುಟುಂಬದ ಮೂಲಗಳ ಪ್ರಕಾರ ರೈತ ಮನೋಹರ ದ್ರಾಕ್ಷಿ ಬೆಳೆ ಸಂರಕ್ಷಣೆಗಾಗಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ ಕೈಗೆ ಬಂದ ಬೆಳೆ ಹಾಳಾದ ಕಾರಣ ಮಾನಸಿಕವಾಗಿ ಕುಗ್ಗಿಹೋಗಿದ್ದ ಮನೋಹರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.