ವಿಜಯಪುರ : ವಿಜಯಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಶಸ್ತ್ರ ಚಿಕಿತ್ಸೆ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಶನಿವಾರ ಸರ್ಕಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತೆಯರ ಅಹವಾಲು ಆಲಿಸಿದರು.
ಶನಿವಾರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾ.ಬಿ.ಎಸ್.ಪಾಟೀಲ, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ನೀಡಿದಾಗ ಸೋಂಕು ಕಾಣಿಸಿಕೊಂಡದ್ದು ಹೇಗೆ, ಇದಕ್ಕೆ ಕಾರಣ ಏನೆಂದು ಹಚ್ಚಿದ್ದೀರಾ ಎಂದು ಸ್ಥಳದಲ್ಲಿದ್ದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಎಸ್.ಎಲ್ಲಕ್ಕಣ್ಣವರ ಅವರನ್ನು ಪ್ರಶ್ನೆ ಮಾಡಿದ್ದಾರೆ ಅದಕ್ಕೆ ಪ್ರತಿಕ್ರಿಯಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆಯ ಬಳಿಕ ಕೆಲವರಲ್ಲಿ ಮಾತ್ರ ಸೋಂಕು ಕಾಣಿಸುತ್ತಿದ್ದು, ಬಳಿಕ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಸೋಂಕು ಕಾಣಿಸಿಕೊಂಡವರಲ್ಲಿ ಬಹುತೇಕರ ಆರೋಗ್ಯ ಸುಧಾರಿಸಿದ್ದು, ಕೆಲವರಿಗೆ ಮಾತ್ರ ಚಿಕಿತ್ಸೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಉತ್ತಮ ಶುಚಿತ್ವ ಕಾಯ್ದುಕೊಂಡಿದ್ದಕ್ಕೆ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಬಹುಮಾನ ಲಭಿಸಿದೆ. ಇದೀಗ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯವಿಲ್ಲ. ವೈದ್ಯರು ಮತ್ತು ನರ್ಸಗಳ ಕೊರತೆ ಕಾರಣದಿಂದಲೂ ಲೋಪ ಕಾಣಿಸುತ್ತದೆ ಎಂದು ಸಮಸ್ಯೆ ನಿವೇದಿಸಿಕೊಂಡರು.
ಈ ಹಂತದಲ್ಲಿ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮವರ ಅವರೊಂದಿಗೆ ಚರ್ಚಿಸಿದ ನ್ಯಾ.ಪಾಟೀಲ, ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಬಾಣಂತಿಯರಿಗೆ ಸೋಂಕು ಕಾಣಿಸಿಕೊಂಡ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಆಸ್ಪತ್ರೆಗೆ ಭೇಟಿ ನೀಡಿ ಸಮಗ್ರ ಪರಿಶೀಲಿಸಿದ್ದಾಗಿ ತಿಳಿಸಿದರು.
Related Articles
ಇದನ್ನೂ ಓದಿ : ಉತ್ತಮ ಮಳೆ: ಬಿತ್ತನೆಗಾಗಿ ಡಿಎಪಿ ಗೊಬ್ಬರ ಖರೀದಿಸಲು ಮುಗಿಬಿದ್ದ ರೈತರು
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಆಯಕ್ತರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ವರದಿ ತಯಾರಿಸಲಾಗಿದೆ. ಆಸ್ಪತ್ರೆಯಲ್ಲಿ ಒಂದೇ ಶಸ್ತ್ರಚಿಕಿತ್ಸಾ ಘಟಕ ಇರುವುದು ಸೋಂಕಿಗೆ ಕಾರಣವಾಗಿದೆ ಎನ್ನುವ ವರದಿ ಇದೆ. ಹೀಗಾಗಿ ಬೇರೆ ಕಡೆ ಶಸ್ತ್ರ ಚಿಕಿತ್ಸಾ ಘಟಕ ಸ್ಥಾಪಿಸಲು ಸೂಚಿಸಲಾಗಿದೆ ಎಂದರು.
ವೈದ್ಯಾಧಿಕಾರಿಗಳಿಗೆ ನಿರ್ದೇಶನ: ಆಸ್ಪತ್ರೆಯಲ್ಲಿ ಕಳೆದ 6 ತಿಂಗಳಿನಿಂದ ಸಿಜರಿಯನ್ ಮಾಡಿಸಿಕೊಂಡ ಮಹಿಳೆಯರ ಸಂಖ್ಯೆ ಎಷ್ಟು, ಹಿಂದೆ ಎಷ್ಟು ಜನರಿಗೆ ಸೋಂಕು ಕಾಣಿಸಿತ್ತು, ಅದಕ್ಕೆ ಏನು ಕಾರಣವಿತ್ತು, ಹೀಗೆ ಪ್ರತಿಯೊಂದರ ಮಾಹಿತಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಲಕ್ಕಣ್ಣವರ ಅವರಿಗೆ ನಿರ್ದೇಶನ ನೀಡಿದರು.
ವೈದ್ಯರು ಮಾಡುವ ಸಣ್ಣ ಲೋಪವೂ ಬಡ ರೋಗಿಗಳು ಜೀವಕ್ಕೆ ಸಮಸ್ಯೆ ಉಂಟು ಮಾಡುತ್ತದೆ. ಪ್ರಸೂತಿ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಗಾಯದಿಂದ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಆಗುತ್ತಿಲ್ಲ. ಭವಿಷ್ಯದಲ್ಲಿ ಸಣ್ಣ ಲೋಪವೂ ಆಗದಂತೆ ಎಚ್ಚರಿಕೆ ವಹಿಸುವಂತೆ ವೈದ್ಯರಿಗೆ ತಾಕೀತು ಮಾಡಿದರು.
ಶಸ್ತಚಿಕಿತ್ಸಾ ಘಟಕಕ್ಕೆ ಭೇಟಿ: ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಕೆಲವೇ ಶಸ್ತ್ರಚಿಕಿತ್ಸ ತಜ್ಞರಿಂದ ಹೆಚ್ಚಿನ ರೋಗಿಗಳ ಪರಿಸ್ಥಿತಿ ನಿರ್ವಹಣೆ ಸಾಧ್ಯವಿಲ್ಲ. ಹೀಗಾಗಿ ಅಗತ್ಯದಷ್ಟು ಶಸ್ತ್ರ ಚಿಕಿತ್ಸಕರು ಹಾಗೂ ಇನ್ನೊಂದು ಶಸ್ತಚಿಕಿತ್ಸಾ ಘಟಕ ತೆರೆಯುವಂತೆ ಶಸ್ತಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಸಾವಳಗಿ ಅವರಿಗೆ ಸೂಚಿಸಿದ್ದಾರೆ.
ಆಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರ, ಎಚ್ಡಿಯು ಸೇರಿದಂತೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಿದ್ದಲ್ಲದೇ ವೈದ್ಯಕೀಯ ದಾಖಲೆಗಳ ಕೋಣೆ, ಆಡಳಿತಾತ್ಮಕ ಕಡತಗಳ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಮೊದಲ ಮತ್ತು ಎರಡನೇ ಮಹಡಿಯಲ್ಲಿರುವ ವಿವಿಧ ವಾರ್ಡಗಳಲ್ಲಿನ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನವಜಾತ ಶಿಶು ಆರೈಕೆ ಕೇಂದ್ರ ಪರಿಶೀಲನೆ ವೇಳೆ, ಸದರಿ ವಿಭಾಗದಲ್ಲಿ 20 ಶಿಶುಗಳಿಗೆ ವಿಶೇಷ ವೈದ್ಯರು ಮತ್ತು ಎನ್ಎಚ್ಎಂ ತರಬೇತಿ ಪಡೆದ ಸಿಬ್ಬಂದಿಯಿಂದ ಆರೈಕೆ ನಡೆಯುತ್ತಿದೆ ಎಂದು ಡಾ.ಮನೀಶ್ ರೋಡಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮವರ ಜಿ.ಪಂ. ಸಿಇಒ ರಾಹುಲ್ ಶಿಂಧೆ, ಎಸ್ಪಿ ಆನಂದಕುಮಾರ, ಡಿಎಚ್ಒ ಡಾ.ರಾಜುಕುಮಾರ ಯರಗಲ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.