Advertisement

ದ್ರಾಕ್ಷಿ ನಾಡಿಗೆ ಸಿಗುತ್ತಾ ಬಂಪರ್‌?

11:51 AM Feb 29, 2020 | Naveen |

ವಿಜಯಪುರ: ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದ ಹರಿಮೆ ಹೊಂದಿರುವ ಬಿ.ಎಸ್‌. ಯಡಿಯೂರಪ್ಪ ಅವರು ಮಂಡಿಸಲಿರುವ ಮುಂದಿನ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಪ್ರವಾಸಿಗರ ಸ್ವರ್ಗ, ದ್ರಾಕ್ಷಿನಾಡು, ಬಸವನಾಡು ಎಂದೆಲ್ಲ ಕರೆಸಿಕೊಳ್ಳುವ ವಿಜಯಪುರ ಜಿಲ್ಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದೆ.

Advertisement

ರಾಜ್ಯದಲ್ಲಿ ಈ ಹಿಂದಿನ ಮೂರು ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ಜಿಲ್ಲೆಗೆ ನೀಡಿದ್ದ ಬಹುತೇಕ ಭರವಸೆಗಳು ಈಡೇರದೇ ಘೋಷಿತ ಪಟ್ಟಿಗೆ ಸೇರಿಕೊಂಡಿವೆ. ಈ ಹಂತದಲ್ಲೇ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಜೆಟ್‌ ಮಂಡಿಸಿರುತ್ತಿರುವ ಯಡಿಯೂರಪ್ಪ ಅವರು ಕೊಡುವ ಭರವಸೆಗಳೇನು, ಹಿಂದಿನ ಬಜೆಟ್‌ನಲ್ಲಿ ಘೋಷಿತ ಯೋಜನೆಗಳು ಕೈಗೂಡದೇ ಕೊಳೆಯುತ್ತಿದ್ದು, ಮುಕ್ತಿ ಪಡೆಯುತ್ತವೆಯೇ ಎಂಬ ನಿರೀಕ್ಷೆ ಹೆಚ್ಚಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಡಿಸಿದ್ದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕುರಿಗಾರರ ಅನುಕೂಲಕ್ಕೆ ಕುರಿ ರೋಗ ತಪಾಷಣಾ ಕೇಂದ್ರ ಸ್ಥಾಪನೆಯಾಗಿಲ್ಲ. ಈಗಾಗಲೇ ಚಾಲನೆ ಪಡೆದಿರುವ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಕುಮಾರಸ್ವಾಮಿ ಸರ್ಕಾರ ಬಿಡಿಗಾಸಿನ ಅನುದಾನ ನೀಡಲಿಲ್ಲ ಎಂಬ ಆಕ್ರೋಶ ಬಸವನಾಡಿನ ಜನರಲ್ಲಿ ಮನೆ ಮಾಡಿದೆ.

ಅಡಿಗಲ್ಲು ಹಾಕಿಸಿಕೊಂಡ ನಾಗರಬೆಟ್ಟ ಏತ ನೀರಾವರಿ ಯೋಜನೆಗಳು ಚಾಲನೆ ಪಡೆದಿಲ್ಲ. ಜಿಲ್ಲೆಯಲ್ಲಿ 14 ಸಾವಿರ ಹೆಕ್ಟೇರ್‌ ದ್ರಾಕ್ಷಿ ಬೆಳೆಯುವ ಬೆಳಗಾರರು ಪ್ರಕೃತಿ ವಿಕೋಪ ಸೇರಿ ಹಲವು ಕಾರಣಗಳಿಂದ ನಿರಂತರ ನಷ್ಟ ಅನುಭವಿಸುತ್ತಿದ್ದಾರೆ. ದ್ರಾಕ್ಷಿ ಬೆಳೆಯಲು ರೈತರು ಮಾಡಿಕೊಂಡಿರುವ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಾಡಿರುವ ಬಡ್ಡಿ ಸಹಿತ ಸಾಲಮನ್ನಾ ಮಾಡಿ ಎಂಬ ಬೇಡಿಕೆ ಈಡೇರಿಲ್ಲ. ಕಳೆದ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು ದ್ರಾಕ್ಷಿ-ದಾಳಿಂಬೆ ಬೆಳೆಗಾರರಿಗೆ ಘೋಷಿಸಿದ್ದ ಪ್ಯಾಕೇಜ್‌ ಭರವಸೆ ಈಡೇರಿಲ್ಲ.

ಮತ್ತೂಂದೆಡೆ ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ಕಾರಣಕ್ಕೆ ದ್ರಾಕ್ಷಿ ನಾಡು ಎಂದು ಹಿರಿಮೆ ತಂದುಕೊಟ್ಟಿರುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಸಂರಕ್ಷಣೆಗೆ ಶೈತ್ಯಾಗಾರಗಳು, ವೈನ್‌ ಪಾರ್ಕ್‌ ನಿರ್ಮಾಣದಂಥ ಬೇಡಿಕೆಗಳು ಈಡೇರಿಲ್ಲ.

Advertisement

ಪ್ರಸಕ್ತ ವರ್ಷದಿಂದ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಬೇಡಿಕೆ ಹೆಚ್ಚುವರಿಯಾಗಿ ಸೇರಿಕೊಂಡಿದೆ. ಯಡಿಯೂರಪ್ಪ ಕೊಡುವ ಪ್ರಸಕ್ತ ಬಜೆಟ್‌ನಲ್ಲಿ ದ್ರಾಕ್ಷಿ ಸಿಹಿ ಅಗುವುದೋ, ಹುಳಿ ಎನಿಸುವುದೋ ಕಾದು ನೋಡಬೇಕಿದೆ. ಇನ್ನು ಪ್ರವಾಸಿಗರ ಸ್ವರ್ಗ ಎನಿಸಿದ್ದರೂ ಸೌಲಭ್ಯಗಳ ಕೊರತೆಯಿಂದ ಬಲುತ್ತಿರುವ ವಿಜಯಪುರ ಪ್ರವಾಸೋದ್ಯಮದ ಅಭ್ಯುದಯಕ್ಕೆ ಘೋಷಿತ ಯೋಜನೆಗಳು ಕೈಗೂಡಿಲ್ಲ.

10 ಕೋಟಿ ರೂ. ಘೋಷಿಸಿತ್ತು. ಅದರಲ್ಲಿ 3.50 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದರೂ ಇನ್ನೂ ಈ ಅನುದಾನ ಬಳಕೆ ಕುರಿತು ಪ್ರಸ್ತಾವನೆ ಕಳಿಸಿದ್ದೇ ಸಾಧನೆ, ಪ್ರಗತಿ ಎಂಬಂತಾಗಿದೆ. ಇನ್ನು ಕಳೆದ ಬಜೆಟ್‌ ನಲ್ಲಿ ಘೋಷಿಸಿದ್ದ ಪ್ರವಾಸಿ ವ್ಯಾಖ್ಯಾನ ಕೇಂದ್ರ ಸ್ಥಾಪನೆ ಕನಸು ನನಸಾಗಿಲ್ಲ. ಇನ್ನು ಪ್ರವಾಸೋದ್ಯಮ ಹಾಗೂ ರಫ್ತು ಗುಣಮಟ್ಟದ ತೋಟಗಾರಿಕೆ ಬೆಳೆ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ದಶಕದ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಅಡಿಗಲ್ಲು ಹಾಕಿದ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಅದರೆ ವಾರದ ಹಿಂದೆ ರಾಜ್ಯಪಾಲರ ಭಾಷಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಚಾಲನೆ ನೀಡುವ ಭರವಸೆ ನೀಡಿದ್ದು, ಬಜೆಟ್‌ನಲ್ಲಿ ನಿರ್ಧಿಷ್ಟ ಅನುದಾನ ಘೋಷಣೆಯ ನಿರೀಕ್ಷೆ ಹುಟ್ಟು ಹಾಕಿದೆ.

ಇದರ ಹೊರತಾಗಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಬೇಡಿಕೆಗೆ ಯಾವ ಸರ್ಕಾರದ ಬಜೆಟ್‌ನಲ್ಲೂ ಸ್ಪಂದನೆ ಸಿಕ್ಕಿಲ್ಲ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎನಿಸಿರುವ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸಬಲೀಕರಣಕ್ಕೆ ಅಗತ್ಯ ಅನುದಾನ ನೀಡಬೇಕು.

ರಾಜಕೀಯ ಸಂದಿಗ್ಧತೆಯ ಕಾರಣಕ್ಕೆ ವಿಜಯಪುರ ಜಿಲ್ಲೆಗೆ ಒಂದೇ ಒಂದು ಮಂತ್ರಿ ಭಾಗ್ಯ ಕಲ್ಪಿಸದ ಯಡಿಯೂರಪ್ಪ ಅವರು, ಇದೀಗ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮದಂಥ ಪ್ರಮುಖ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡುವುದು ಅನಿವಾರ್ಯವಾಗಿದೆ.

ರೈತರ ಸಾಲ ಮನ್ನಾ ಸ್ಪಷ್ಟತೆ ಸಿಕ್ಕಿಲ್ಲ. ಸಂಪೂರ್ಣ ಸಾಲಮನ್ನಾ ಮಾಡಬೇಕು. ಎಂ.ಬಿ. ಪಾಟೀಲ ಅವರು ಚಾಲನೆ ನೀಡಿದ್ದ ನೀರಾವರಿ ಯೋಜನೆಗಳು ಕುಂಠಿತವಾಗಿದ್ದು, ನೀರಿನ ಮರು ಹಂಚಿಕೆ ಮಾಡಿ, ಆಲಮಟ್ಟಿ ಶಾಸ್ತ್ರಿ ಜಲಾಶಯದ 524 ಮೀ.ವರೆಗೆ ನೀರು ನಿಲ್ಲಿಸಲು ಅಗತ್ಯ ಇರುವ ಅನುದಾನ ನೀಡಿ, ಭೂಸ್ವಾಧೀನ ಪುನರ್ವಸತಿ ಸೇರಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಅನುದಾನ ನೀಡಬೇಕು.
ಅರವಿಂದ ಕುಲಕರ್ಣಿ,
ರಾಜ್ಯ ಪ್ರಧಾನ ಕಾರ್ಯದರ್ಶಿ
ಅಖಂಡ ಕರ್ನಾಟಕ ರೈತ ಸಂಘ

ಹಿಂದುಳಿದ ಜಿಲ್ಲೆ ಎಂಬ ಅವಕೃಪೆಗೆ ಕಾರಣವಾಗಿರುವ ವಿಜಯಪುರ ಜಿಲ್ಲೆಯಲ್ಲಿ ಶ್ರಮ ಆಧಾರಿತ ಕೈಗಾರಿಕೆ ಸ್ಥಾಪನೆ ಆಗಬೇಕು. ಸರ್ಕಾರಿ ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಆಗಬೇಕು. ತರಬೇತಿ ಪಡೆಯಲು ನಗರಕ್ಕೆ ಬರುವ ಹಳ್ಳಿ ಅಭ್ಯರ್ಥಿಗಳಿಗೆ ಕಡಿಮೆ ವೆಚ್ಚದ ಊಟ-ವಸತಿಗಾಗಿ ಸರ್ಕಾರಿ ಡಾರ್ಮೆಟರಿ ಸ್ಥಾಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಉತ್ತಮ ದರ್ಜೆಯ ಗ್ರಂಥಾಲಯ, ಕೆಪಿಎಸ್‌ಸಿ ಪರೀಕ್ಷಾ ಕೇಂದ್ರ ಶಾಸ್ವತವಾಗಿ ಸ್ಥಾಪನೆ ಆಗಲಿ.
ಸಿದ್ಧಲಿಂಗ ಬಾಗೇವಾಡಿ,
ಜಿಲ್ಲಾಧ್ಯಕ್ಷ, ಎಐಡಿವೈಒ, ವಿಜಯಪುರ

ಪ್ರವಾಸೋದ್ಯಮ ಬಲವರ್ಧನೆಗೆ ಅಗತ್ಯ ಅನುದಾನ ನೀಡಿಕೆ ಜೊತೆಗೆ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುವ ಹಾಗೂ ಮೂಲಭೂತ ಸೌಲರ್ಭಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ರಾಜ್ಯದ ಎಲ್ಲ ಮಹಿಳಾ ಕಾಲೇಜುಗಳನ್ನು ಸೇರಿಸಿ ಅಗತ್ಯ ಅನುದಾನ ನೀಡಬೇಕು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಅನುದಾನ ಘೋಷಿಸಬೇಕು.
ಶ್ರೀನಾಥ ಪೂಜಾರಿ,
ರಾಜ್ಯಾಧ್ಯಕ್ಷ, ದಲಿತ ವಿದ್ಯಾರ್ಥಿ ಪರಿಷತ್‌

ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿದ್ದು ಯುಕೆಪಿ ಯೋಜನೆಗಳ ಸಂಪೂರ್ಣ ಮಾಡಲು ಅಗತ್ಯ ಅನುದಾನ ನೀಡಬೇಕು. ನಿರುದ್ಯೋಗ ಸಮಸ್ಯೆ ಹೆಚ್ಚಿರುವ ಕಾರಣ ಜಿಲ್ಲೆಯಿಂದ ಗುಳೆ ತಡೆಯಲು ಮಾನವ ಸಂಪನ್ಮೂಲ ಆಧಾರಿತ ಉದ್ಯೋಗ ಸೃಷ್ಟಿಗೆ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು.
ಲಕ್ಷ್ಮಣ ಹಂದ್ರಾಳ,
ಪ್ರಧಾನ ಕಾರ್ಯದರ್ಶಿ,

ಸಿಐಟಿಯು, ವಿಜಯಪುರ ಜಿಲ್ಲೆ

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next