Advertisement

ಸುಳ್ಳು ಸುದ್ದಿ ಸವಾಲಿಗೆ ಸನ್ನದ್ಧರಾಗಿ

04:32 PM Mar 06, 2020 | Naveen |

ವಿಜಯಪುರ: ಪತ್ರಿಕೋದ್ಯಮದ ಮಟ್ಟಿಗೆ ತಪ್ಪು ಮಾಹಿತಿ, ಸುಳ್ಳು ಸುದ್ದಿ ಎಂಬುದು ವಿಶ್ವದಾದ್ಯಂತ ಇದೀಗ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸವಾಲನ್ನು ಎದುರಿಸಲು ಪತ್ರಕರ್ತರೆಲ್ಲರೂ ಸನ್ನದ್ಧರಾಗಬೇಕು ಎಂದು ಅಮೆರಿಕನ್‌ ಕೌನ್ಸಲೇಟ್‌ ಜನರಲ್‌ನ ಪಬ್ಲಿಕ್‌ ಡಿಪ್ಲೋಮಸಿ ಆ್ಯಂಡ್‌ ಪಬ್ಲಿಕ್‌ ಅಫೆರ್ನ ಕಾನ್ಸುಲ್‌ ಲಾರೆನ್‌ ಲವ್‌ಲೇಸ್‌ ಕರೆ ನೀಡಿದರು.

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಭಾಂಗಣದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಪತ್ರಕರ್ತೆಯರು ಸಮಸ್ಯೆ-ಸವಾಲುಗಳು ಮತ್ತು ಅವಕಾಶಗಳು ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕದ ಪತ್ರಕರ್ತರ ಮತ್ತು ಸಂಪಾದಕರ ಬಳಕೆಗಾಗಿ ಚೆನ್ನೈ ನ  ಅಮೆರಿಕನ್‌ ಕೌನ್ಸ್‌ಲೇಟ್‌ ಜನರಲ್‌ ಅವರು ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಅವರ ಸಹಭಾಗಿತ್ವದಲ್ಲಿ ಪತ್ರಕರ್ತರ ಕೈಪಿಡಿ ಎಂಬ ಗ್ರಂಥವನ್ನು ಪ್ರಸ್ತುತಪಡಿಸಲು ಸಂತೋಷವೆನಿಸುತ್ತದೆ ಎಂದು ಅವರು ಹೇಳಿದರು.

ಮಹಿಳಾ ಪತ್ರಕರ್ತರು, ಸಂಪಾದಕರು, ಮಾಧ್ಯಮ ವೃತ್ತಿಪರರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಈ ವಿಚಾರ ಸಂಕಿರಣವನ್ನು ಆಯೋಜನೆ ಮಾಡಿದ್ದಕ್ಕಾಗಿ ನನಗೆ ಅತೀವ ಸಂತಸವಾಗಿದೆ. ಇಂತಹ ವಿಚಾರ ಸಂಕಿರಣಗಳು ನಮ್ಮಲ್ಲಿರುವ ಅನೇಕ ತೊಡಕುಗಳನ್ನು ಹೊಡೆದು ಹಾಕುತ್ತವೆ ಹಾಗೂ ಇಂತಹ ಒಂದು ಉತ್ತಮ ಪ್ರಯತ್ನ ಮಾಡಿದ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವನ್ನು ಈ ಸಂದರ್ಭದಲ್ಲಿ ಅವರು ಶ್ಲಾಘಿಸಿದರು.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ| ಎನ್‌.ಉಷಾರಾಣಿ ಮಾತನಾಡಿ, ಮಾಧ್ಯಮಗಳು ಮಹಿಳೆಯರನ್ನು ಲೈಂಗಿಕ ಬೊಂಬೆಗಳಂತೆ ರೂಪಿಸಿವೆ ಮತ್ತು ಪುರುಷ ಪ್ರಾಬಲ್ಯದ ಸಮಾಜದಲ್ಲಿ ಅವರನ್ನು ಸರಕುಗಳಾಗಿ ವ್ಯಾಪಾರ ಮಾಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಮಹಿಳೆಯರು ಲಿಂಗ ತಾರತಮ್ಯ, ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಸುದ್ದಿಯಲ್ಲಿ
ಮಹಿಳೆಯರ ಉಪಸ್ಥಿತಿಯು ಮುಖ್ಯವಾಹಿನಿಗೆ ಸೇರಲು ಅಡೆತಡೆಗಳನ್ನು ಎದುರಿಸುತ್ತಿರುವ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು. ಸುದ್ದಿಯಲ್ಲಿ ಮಹಿಳೆಯರ ರೂಢಿಗತ ಚಿತ್ರಣವು ಮಾಧ್ಯಮಗಳಲ್ಲಿ ಬದಲಾಗಿಲ್ಲ. ಭಾರತದಲ್ಲಿ ನಿರ್ವಹಣೆ ಮತ್ತು ಸಂಪಾದಕೀಯ ಸ್ಥಾನಗಳಲ್ಲಿನ ಜಾಗತಿಕ ವ್ಯಕ್ತಿಗಳಿಗಿಂತ ಮಾಧ್ಯಮದಲ್ಲಿ ಮಹಿಳೆಯರ ಉಪಸ್ಥಿತಿಯು ತುಲನಾತ್ಮಕವಾಗಿ ಕಡಿಮೆಯಾಗಿದೆ.

ದೇಶದಲ್ಲಿ ಇತ್ತೀಚೆಗೆ ನಡೆದ ಆಂದೋಲನಗಳು ಮತ್ತು ಗಲಭೆಗಳನ್ನು ಒಳಗೊಂಡ ಘಟನೆಗಳು ಮಹಿಳಾ ಪತ್ರಕರ್ತರಿಗೆ ಬೆದರಿಸುವಿಕೆ, ಹಿಂಸೆ ಮತ್ತು ನಿಂದನೆಯನ್ನು ಅನುಭವಿಸುತ್ತಿರುವುದರಿಂದ ಅವರಿಗೆ ತರಬೇತಿ ನೀಡುವ ಅಗತ್ಯವನ್ನು ಒತ್ತು ಕೊಟ್ಟು ಹೇಳುತ್ತದೆ. ವೈಯಕ್ತಿಕ ಸುರಕ್ಷತೆ, ಅಪಾಯದ ಮೌಲ್ಯಮಾಪನ, ಲೈವ್‌ ಮತ್ತು ನಂತರದ ಘಟನೆಗಳ ತರಬೇತಿ ವೃತ್ತಿಪರ ನಿರ್ವಹಣೆಯ ಅಗತ್ಯವಿರುತ್ತದೆ ಎಂದು ಅವರು ಪ್ರತಿಪಾದಿಸಿದರು.

ಮಹಿಳೆಯರು ವೆಬ್‌ ಮಾಧ್ಯಮ ಉತ್ಪನ್ನಗಳ ಗ್ರಾಹಕರು ಮಾತ್ರವಲ್ಲದೇ ಅದರ ಉತ್ಪಾದಕರಾಗಿ ತಯಾರಕರಾಗಬೇಕು ಎಂದು ಬಲವಾಗಿ ಪ್ರತಿಪಾದಿಸುವ ಡಿಜಿಟಲ್‌ ಮಾಧ್ಯಮದ ಸ್ಟಾರ್ಟ್  ಅಪ್‌  ಗಳ ಜಗತ್ತಿನಲ್ಲಿ ಇಂದು ಮಹಿಳೆಯರು ಪ್ರವೇಶಿಸಿದ್ದಾರೆ.

ಪತ್ರಿಕೋದ್ಯಮದ ಬಗ್ಗೆ ಆಸಕ್ತಿ, ಉದ್ಯಮಶೀಲತೆಯ ಕೌಶಲ್ಯವನ್ನು, ರಚಿಸುವ ಸಾಮರ್ಥ್ಯವನ್ನು ಹೊಂದಿರುವ ಮಹಿಳೆಯರು ಭಾರತೀಯ ಪತ್ರಿಕೋದ್ಯಮಕ್ಕೆ ವೈವಿಧ್ಯತೆಯನ್ನು ತಂದಿದ್ದಾರೆ ಎಂದು ಅವರು ಹೇಳಿದರು. ಪತ್ರಿಕೋದ್ಯಮದಲ್ಲಿ ಮಹಿಳೆಯರ ದೃಷ್ಟಿಕೋನವು ಕ್ರಮೇಣ ಗೋಚರತೆಯನ್ನು ಪಡೆಯುತ್ತಿದೆ. ಮಹಿಳಾ ಪತ್ರಕರ್ತರು ಡಿಜಿಟಲ್‌ ಕ್ರಾಂತಿಯ ಸಾಹಸ ಮಾಡಿದ್ದಾರೆ. ಜೊತೆಗೆ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡುವ ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿವಿಯ ಕುಲಪತಿ ಪ್ರೊ| ಸಬಿಹಾ ಭೂಮಿಗೌಡ ಮಾತನಾಡಿ, ಇಂತಹ ವಿಚಾರ ಸಂಕಿರಣಗಳು ಮುಂಬರುವ ಭಾವಿ ಪತ್ರಕರ್ತೆಯರಲ್ಲಿರುವ ಹಲವಾರು ಸಮಸ್ಯೆಗಳಿಗೆ ಉತ್ತರ ನೀಡುತ್ತವೆ ಎಂದು ಹೇಳಿದರು.

ಕುಲಸಚಿವೆ ಪ್ರೊ|ಆರ್‌.ಸುನಂದಮ್ಮ, ಚೆನೈನ ಯುಎಸ್‌
ಕೌನ್ಸಲೇಟ್‌ ಜನರಲ್‌ನ ಕನ್ನಡ ಸಂಪಾದಕರು ಹೇಮಲತಾ, ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ಇತರರು ಉಪಸ್ಥಿತರಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿಭಾಗ ಮುಖ್ಯಸ್ಥ ಪ್ರೊ|ಓಂಕಾರ ಕಾಕಡೆ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಧ್ಯಾಪಕಿ ಡಾ| ತಹಮೀನಾ ಕೋಲಾರ ಸ್ವಾಗತಿಸಿದರು. ಸೃಷ್ಟಿ ಜವಳಕರ ಪರಿಚಯಿಸಿದರು. ಸುವರ್ಣ ಕಂಬಿ, ಸುಷ್ಮಾ ನಾಯಕ ನಿರೂಪಿಸಿದರು, ದೀಪಾ ತಟ್ಟಿಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next