Advertisement

ಮಲ್ಯ ಗಡೀಪಾರು ಆದೇಶ: ಎಚ್ಚರಿಕೆಯ ಕರೆಗಂಟೆಯಾಗಲಿ

06:00 AM Dec 11, 2018 | |

ಉದ್ಯಮಿ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಲಂಡನ್‌ನ ನ್ಯಾಯಾಲಯ ಆದೇಶಿಸುವುದರೊಂದಿಗೆ ಈ ನ್ಯಾಯಾಂಗ ಹೋರಾಟದಲ್ಲಿ ಸಿಬಿಐ ಮೊದಲ ಸುತ್ತಿನ ಗೆಲುವು ದಾಖಲಿಸಿದೆ. ಭಾರತದ ಬ್ಯಾಂಕುಗಳಿಗೆ 9,000 ಕೋ. ರೂ.ಗೂ ಅಧಿಕ ಮೊತ್ತದ ಸಾಲ ಬಾಕಿಯಿಟ್ಟು 2016, ಮಾ. 2ರಂದು ಲಂಡನ್‌ ವಿಮಾನವೇರಿದ್ದ ಮಲ್ಯ ಪಲಾಯನ ಅನಂತರ ಸರಕಾರ ಮತ್ತು ವಿಪಕ್ಷಗಳ ನಡುವೆ ತೀವ್ರ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಮಲ್ಯ ಗಡಿಪಾರು ಆದೇಶ ಸರಕಾರಕ್ಕೂ ತುಸು ನೆಮ್ಮದಿ ನೀಡುವ ವಿಚಾರವೇ. ಹಾಗೆಂದು ತಕ್ಷಣವೇ ಮಲ್ಯರನ್ನು ಭಾರತಕ್ಕೆ ಕರೆತರಬಹುದು ಎಂದು ನಿರೀಕ್ಷಿಸುವಂತಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವರಿಗೆ 14 ದಿನಗಳ ಕಾಲಾವಕಾಶವಿದೆ. ಅಲ್ಲದೆ ಬ್ರಿಟನ್‌ನ ಗೃಹ ಇಲಾಖೆಯ ಕಾರ್ಯದರ್ಶಿ ಆದೇಶಿಸಿದರೆ ಮಾತ್ರ ಅವರು ಗಡಿಪಾರು ಆಗಬಹುದು. 

Advertisement

ಬ್ಯಾಂಕುಗಳಿಂದ ಸಾಲ ಎತ್ತಿ ಬಳಿಕ ವಿದೇಶಕ್ಕೆ ಪಲಾಯನ ಮಾಡುವ ಚಾಳಿಯನ್ನು ಪ್ರಾರಂಭಿಸಿದವರು ಮಲ್ಯ. ಅವರ ನಂತರ ನೀರವ್‌ ಮೋದಿ, ಮೆಹುಲ್‌ ಚೋಕ್ಸಿಯಂಥವರು ಈ ಹಾದಿಯನ್ನು ಅನುಸರಿಸಿದ್ದಾರೆ. ಇವರನ್ನು ಗಡಿಪಾರು ಮಾಡಿಕೊಳ್ಳುವ ಪ್ರಯತ್ನ ಜಾರಿಯಲ್ಲಿದೆ. ಮಲ್ಯ ಉದ್ಯಮಿಗಳು ಹೇಗಿರಬಾರದು ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುವವರು. ಅವರ ಐಷರಾಮದ ಜೀವನಶೈಲಿ, ಶೋಕಿಗಳು ದಂತಕತೆಗಳಂತೆ ಹರಡಿದ್ದವು. ಹೀಗೆ ದುಡ್ಡಿನ ಮೂಟೆಯಂತಿದ್ದ ಮಲ್ಯರನ್ನು ರಾಜಕೀಯ ಪಕ್ಷಗಳು ಮುತ್ತಿಕೊಂಡದ್ದು ವಿಶೇಷವಲ್ಲ. ಎರಡು ಅವಧಿಗೆ ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರು. ಯಾವ ಅರ್ಹತೆಯ ಆಧಾರದ ಮೇಲೆ ಅವರನ್ನು ರಾಜ್ಯಸಭೆಯಂಥ ಘನ ಸದನಕ್ಕೆ ಕಳುಹಿಸಲಾಯಿತು ಎನ್ನುವುದನ್ನು ಅವರನ್ನು ಆರಿಸಿದ ಪಕ್ಷವೇ ಹೇಳಬೇಕಷ್ಟೆ. 

ಕೆಲವೇ ಸಾವಿರ ಸಾಲ ಮಾಡಿದ ರೈತರು ಬರದಿಂದಲೋ ಅತಿವೃಷ್ಟಿಯಿಂದಲೋ ಅಥವಾ ಸಾಕಷ್ಟು ಬೆಲೆ ಸಿಗದೆ ಕಂಗಾಲಾದಾಗ ನಕ್ಷತ್ರಿಕರಂತೆ ಬೆನ್ನುಬೀಳುವ ಬ್ಯಾಂಕುಗಳ ಉಪಟಳ ತಾಳಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವ ದೇಶದಲ್ಲಿ ವಿಜಯ್‌ ಮಲ್ಯ ಅವರಂಥ ಉದ್ಯಮಿಗಳು ಕೋಟಿಗಟ್ಟಲೆ ಸಾಲ ತೆಗೆದು ಆರಾಮವಾಗಿ ವಿದೇಶಗಳಿಗೆ ಪಲಾಯನ ಮಾಡುತ್ತಾರೆ ಎನ್ನುವುದು ಕೂಡಾ ಒಂದು ರೀತಿಯಲ್ಲಿ ವ್ಯವಸ್ಥೆಯ ವಿಡಂಬನೆಯಂತಿದೆ. ವಿದೇಶಕ್ಕೂ ಪಲಾಯನ ಮಾಡಿದ ಬಳಿಕವೂ ಮಲ್ಯ ಭಾರತದ ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ಉದ್ಧಟತನವನ್ನು ತೋರಿಸಿರುವುದು ಅಕ್ಷಮ್ಯ. ಈಗಲೂ ಅವರು ನಾನು ಸಾಲ ಪಡೆದಿಲ್ಲ. ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಕಂಪೆನಿ ಸಾಲ ಎತ್ತಿದೆ, ಈ ಸಾಲಕ್ಕೆ ನಾನು ಖಾತರಿ ನೀಡಿದ್ದೆ ಎಂದು ವಾದಿಸುತ್ತಿರುವುದು ಈ ಉದ್ಧಟತನದ ಮುಂದುವರಿಕೆಯೇ ಆಗಿದೆ. 

ಕಾರ್ಪೊರೇಟ್‌ ಕಂಪೆನಿಗಳ ಸಾಲದಿಂದಾಗಿಯೇ ಬ್ಯಾಂಕುಗಳು ಇಂದು ಕಂಗಾಲಾಗಿವೆ. ವಸೂಲಾಗದ ಸಾಲದ ಮೊತ್ತ ಸುಮಾರು 12 ಲಕ್ಷ ಕೋಟಿಯಷ್ಟಿದ್ದು, ಇದರಲ್ಲಿ ಬಹುಪಾಲು ಕಾರ್ಪೊರೇಟ್‌ ಕಂಪೆನಿಗಳದ್ದು. ಈ ಲೆಕ್ಕದಲ್ಲಿ ನೋಡಿದರೆ ಮಲ್ಯ ಬಾಕಿಯಿಟ್ಟಿರುವ ಸಾಲ ಕಡಿಮೆಯೇ. ಭೂಷಣ್‌ ಸ್ಟೀಲ್‌, ಲ್ಯಾಂಕೊ ಇನ್‌ಫ್ರಾಟೆಕ್‌, ಎಸ್ಸಾರ್‌ ಸ್ಟೀಲ್‌, ವಿಡಿಯೋಕಾನ್‌, ಜೈಪ್ರಕಾಶ್‌ ಅಸೋಸಿಯೇಟ್ಸ್‌, ಅಲೋಕ್‌ ಇಂಡಸ್ಟ್ರೀಸ್‌ನಂಥ ದೊಡ್ಡ ಕಂಪೆನಿ ಗಳು ಇನ್ನೂ ದೊಡ್ಡ ಮೊತ್ತದ ಸಾಲಗಳನ್ನು ಹೊಂದಿವೆ. ಸಾಲ ಮಾಡಿ ಪಲಾಯನ ಮಾಡುವುದನ್ನು ತಡೆಯಲು ಕೆಲ ಸಮಯದ ಹಿಂದೆ ಹೊಸ ಕಾಯಿದೆಯೊಂದನ್ನು ರಚಿಸಲಾಗಿರುವುದು ಈ ನಿಟ್ಟಿನಲ್ಲಿ ಸರಕಾರ ಇಟ್ಟಿರುವ ದೃಢ ಹೆಜ್ಜೆ. ಆದರೆ ಈ ಸಾಲದಿಂದ ದೇಶದ ವಿತ್ತೀಯ ವ್ಯವಸ್ಥೆಯ ಮೇಲಾಗುತ್ತಿರುವ ಹಾನಿ ಮಾತ್ರ ಅಪಾರ. ಮಲ್ಯ, ಚೋಕ್ಸಿ ಅಥವಾ ಮೆಹುಲ್‌ರಂಥ ಉದ್ಯಮಿಗಳ ಸಂಖ್ಯೆ ಹೆಚ್ಚಾದರೆ ಬ್ಯಾಂಕುಗಳು ಕಾರ್ಪೋರೇಟ್‌ ಕಂಪೆನಿಗಳಿಗೆ ಸಾಲ ಕೊಡಲು ಹಿಂದೇಟು ಹಾಕುವ ಅಪಾಯವಿದೆ. ಇಂಥ ಪರಿಸ್ಥಿತಿಯಲ್ಲಿ ಅಂತಿಮವಾಗಿ ನಷ್ಟವಾಗುವುದು ಆರ್ಥಿಕತೆಗೆ, ಅದು ಉದ್ಯೋಗ ನಷ್ಟವಿರಬಹುದು ಅಥವಾ ಉತ್ಪಾದಕತೆ ಕುಂಠಿತವಾಗುವುದಿ ರಬಹುದು. ಈ ಪರಿಸ್ಥಿತಿ ಬಾರದಂತೆ ತಡೆಯಲು ಮಲ್ಯ, ಚೋಕ್ಸಿ, ಮೆಹುಲ್‌ರಂಥವರನ್ನು ಕಾನೂನಿನ ಕಟಕಟೆಗೇರಿಸುವುದು ಅಗತ್ಯವಿದೆ. ನ್ಯಾಯಲಾಯ ಗಳಲ್ಲಿ ಅವರ ಪ್ರಕರಣ ತ್ವರಿತವಾಗಿ ಇತ್ಯರ್ಥಗೊಂಡು ಶಿಕ್ಷೆಯಾದರೆ ಈ ರೀತಿ ವಂಚಿಸುವವರಿಗೆ ಎಚ್ಚರಿಕೆಯ ಕರೆಗಂಟೆಯಾದೀತು. 

Advertisement

Udayavani is now on Telegram. Click here to join our channel and stay updated with the latest news.

Next