Advertisement

Rescue: ಮೂಟೆಯಡಿ ಸಿಲುಕಿದ್ದ ಐವರು ಕಾರ್ಮಿಕರ ಶವ ಪತ್ತೆ… ಮುಂದುವರೆದ ರಕ್ಷಣಾ ಕಾರ್ಯಾಚರಣೆ

09:29 AM Dec 05, 2023 | Team Udayavani |

ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಐವರು ಕಾರ್ಮಿಕರು ಮೃತಪಟ್ಡಿದ್ದು, ಇತರರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Advertisement

ಸೋಮವಾರ ಸಂಜೆ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಆಹಾರ ಸಂಸ್ಕರಣಾ ಘಟಕದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಆಹಾರ ಧಾನ್ಯಗಳ ಮೂಟೆಗಳು ಕುಸಿದು, ಕಾರ್ಮಿಕರು ಮೂಟೆಗಳ ಅಡಿಯಲ್ಲಿ ಸಿಲುಕಿದ್ದತು.

ಕೂಡಲೇ ಅಪಾಯದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಾಣೆಗಾಗಿ ಜಿಲ್ಲಾಡಳಿತ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಓರ್ವನನ್ನುಬರಕ್ಷಿಸಿತ್ತು.

ಘಟನಾ ಸ್ಥಳದಲ್ಲಿ ಪರಿಸ್ಥಿತಿ ಗಂಭಿರ ಸ್ವರೂಪದಲ್ಲಿದ್ದು, ಕಾರ್ಮಿಕರ ತ್ವರಿತ ರಕ್ಷಣೆಗಾಗಿ ಪುಣೆಯಿಂದ ಎನ್.ಡಿ.ಆರ್.ಎಫ್. ತಂಡವನ್ನು ಕರೆಸಲಾಗಿದೆ.

ಇಡೀ ರಾತ್ರಿ ಕಾರ್ಯಾಚರಣೆ ಬಳಿಕ ಐವರು ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮೃತರನ್ಬು ಬಿಹಾರ ಮೂಲದ ರಾಜೇಶ್ ಮುಖಿಯಾ(25), ರಾಮಬ್ರೀಜ್ ಮುಖಿಯಿ (29), ಶಂಭು ಮುಖಿಯಾ (26), ಲುಖೋ ಜಾಧವ (45) ಹಾಗೂ ರಾಮ ಬಾಲಕ್ (52) ಎಂದು ಗುರುತಿಸಲಾಗಿದೆ.

ಕಾರ್ಯಾಚರಣೆ ಹಂತದಲ್ಲಿ ಆಹಾರ ಸಂಸ್ಕರಣಾ ಘಟಕದ ಮೇಲ್ಭಾಗ ಕುಸಿದು, ಧಾನ್ಯ ತುಂಬಿದ ಚೀಲಗಳ ಮೇಲೆ ಬಿದ್ದಿದೆ. ಅದರ ಅಡಿಯಲ್ಲಿ ಕಾರ್ಮಿಕರು ಸಿಲುಕಿದ್ದಾರೆ.

ಇನ್ನೂ ಸುಮಾರು 9 ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದು, ಅವರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ.

ಈ‌ ಮಧ್ಯೆ ಘಟನೆಯ ಮಾಹಿತಿ ತಿಳಿಯುತ್ತಲೇ ಬೆಳಗಾವಿ ಅಧಿವೇಶನದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಡರಾತ್ರಿ 1 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಪಡೆದರು.

ಸಚಿವರ ಆಗಮನದ ಸುದ್ದಿ ಅರಿತ ಬಿಹಾರ ಮೂಲದ ಕಾರ್ಮಿಕರು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಪ್ರತಿಭಟನೆಗೆ ಮುಂದಾದರು. ತ್ವರಿತವಾಗಿ ತಮ್ಮವರನ್ನು ರಕ್ಷಿಸಬೇಕು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಈ ಹಿಂದೆ ದುರಂತದಲ್ಲಿ ನಮ್ಮವರು ಮೃತರಾದಾಗ ನೀಡಿಲ್ಲ. ಅವರ ಕುಟುಂಬಗಳಿಗೂ ಪರಿಹಾರ ನೀಡಬೇಕು. ಬಳಿಕವೇ ಶವಗಳನ್ನು ಸಾಗಿಸುವ, ಹಸ್ತಾಂತರಿಸುವ ಕೆಲಸ ಮಾಡಬೇಕು ಎಂದು ಪಟ್ಟು ಹಿಡಿದರು.

ಕಾರ್ಮಿಕರ ಭಾವನೆ ಆಲಿಸಿದ ಸಚಿವ ಎಂ.ಬಿ.ಪಾಟೀಲ, ಅಪಾಯದಲ್ಲಿ ಸಿಲುಕಿರುವವರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಮೃತ ಕಾರ್ಮಿಕರಿಗೆ ಕೈಗಾರಿಕಾ ಘಟಕದ ಮಾಲೀಕರು ಪರಿಹಾರ ನೀಡಲೇಬೇಕು. ಈ ವಿಷಯದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಸದರಿ ಘಟನೆಯಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದಿಂದಲೂ ಪರಿಹಾರ ಕೊಡಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಗಾಯಾಳು ಕಾರ್ಮಿಕರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಪ್ರತಿಭಟನಾ ನಿರತ ಬಿಹಾರ ಕಾರ್ಮಿಕರಿಗೆ ಭರವಸೆ ನೀಡಿದರು.

ಅಲ್ಲದೇ ಮೃತ ಕಾರ್ಮಿಕರ ಶವಗಳನ್ನು ಅವರವರ ಸ್ವಗ್ರಾಮಗಳಿಗೆ ತಲುಪಿಸಲಾಗುತ್ತದೆ. ಇದಕ್ಕಾಗಿ ಮೃತರ ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ಮಾತನಾಡಿ, ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಕಾರ್ಮಿಕರನ್ನು ಸಂತೈಸಿದರು.

ಇದನ್ನೂ ಓದಿ: Byju’s: 15 ಸಾವಿರ ಸಿಬ್ಬಂದಿಗಳಿಗೆ ವೇತನ ಕೊಡಲು ಮನೆಯನ್ನೇ ಅಡವಿಟ್ಟರಾ ಬೈಜುಸ್ ಸಂಸ್ಥಾಪಕ ?

Advertisement

Udayavani is now on Telegram. Click here to join our channel and stay updated with the latest news.

Next