ಶೃಂಗೇರಿ : ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 05 ರ ವರೆಗೆ ಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗದ ಆಮಂತ್ರಣ ಪತ್ರಿಕೆಯನ್ನು ಇಂದು ಸೋಮವಾರ ಶ್ರೀ ಶೃಂಗೇರಿ ಶಾರದಾಪೀಠದಲ್ಲಿ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ಆಶೀರ್ವಚನ ನೀಡಿದ ಶ್ರೀಗಳು, ಲೋಕ ಕಲ್ಯಾಣಾರ್ಥವಾಗಿ ಅತಿರುದ್ರ ಮಹಾಯಾಗ ನಡೆಸುತ್ತಿರುವುದು ಒಂದು ಮಹತ್ಕಾರ್ಯ, ಈ ಮಹಾ ಕಾರ್ಯದಲ್ಲಿ ಅತ್ಯಂತ ಸಂಭ್ರಮದಿಂದ ಭಾಗಿಯಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿಅತಿರುದ್ರ ಮಹಾ ಯಾಗ ಸಮಿತಿಯ ಅಧ್ಯಕ್ಷರಾದ ಉಡುಪಿ ಶಾಸಕ ಕೆ.ರಘುಪತಿ ಭಟ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ , ಶ್ರೀ ಕ್ಷೇತ್ರ ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್ ಶಾಸ್ತ್ರಿ, ಶಾಂಕರ ತತ್ವ ಪ್ರಸಾರ ಅಭಿಯಾನ ಉಡುಪಿ ಜಿಲ್ಲಾ ಸಂಚಾಲಕ ವಿಶ್ವನಾಥ್ ಶ್ಯಾನುಭೋಗ್, ಮಹಾಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ,ಮಂಜುನಾಥ್ ಹೆಬ್ಬಾರ್, ದೇಗುಲದ ಆಡಳಿತ ಮೊಕ್ತೇಸರರಾದ ಸುಭಾಕರ ಸಾಮಂತ್,ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ದೇವಾಲಯದ ಟ್ರಸ್ಟಿಗಳು, ರತ್ನಾಕರ್ ಇಂದ್ರಾಳಿ, ಯಾಗ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮಾರ್ಚ್ 04, ಶನಿವಾರ ಸಾಯಂಕಾಲ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಭವ್ಯ ಶೋಭಾಯಾತ್ರೆ ಮೂಲಕ ಶಿವಪಾಡಿ ಶ್ರೀ ಉಮಾ ಮಹೇಶ್ವರ ಕ್ಷೇತ್ರಕ್ಕೆ ಬರಮಾಡಿಕೊಂಡು ಧೂಳಿ ಪಾದಪೂಜೆ ಬಳಿಕ ಸಾರ್ವಜನಿಕ ಸಮಾರಂಭ, ರಾತ್ರಿ ಚಂದ್ರಮೌಳೀ ದೇವರ ಪೂಜೆ, ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿದೆ. ಮಾರ್ಚ್ 05, ಆದಿತ್ಯವಾರ ಬೆಳಗ್ಗೆ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅತಿ ರುದ್ರ ಮಹಾಯಾಗ ಪೂರ್ಣಾಹುತಿ ನಡೆಯಲಿದೆ.
ಫೆ. 12: “ಬಾಲಶಿವ’ ವೇಷ ಸ್ಪರ್ಧೆ ಮತ್ತು ಸಮರ್ಪಣ ದಿವಸ್
ಜಿಲ್ಲಾಮಟ್ಟದ “ಬಾಲಶಿವ’ ವೇಷ ಸ್ಪರ್ಧೆ ಹಾಗೂ ಶ್ರೀ ಅತಿರುದ್ರ ಮಹಾಯಾಗದ ಸಮರ್ಪಣ ದಿವಸ್ ಫೆ. 12ರ ಬೆಳಗ್ಗೆ 9ರಿಂದ ಶಿವಪಾಡಿ ಉಮಾಮಹೇಶ್ವರ ದೇಗುಲದ ವಠಾರದಲ್ಲಿ ನಡೆಯಲಿದೆ. ಫೆ. 12ರಂದು ಪ್ರಾರಂಭಗೊಳ್ಳಲಿರುವ ಸಮರ್ಪಣೆಯು ಫೆ. 22ರ ತನಕ ಇರಲಿದೆ. ಭಕ್ತರು ತುಪ್ಪ, ಎಳ್ಳು, ಅಕ್ಕಿ, ಭತ್ತ, ತೆಂಗಿನಕಾಯಿಯನ್ನು ಸಮರ್ಪಿಸಬಹುದು. ಸಮರ್ಪಣೆಗೆ ಬೇಕಾದ ವಸ್ತುಗಳು ದೇಗುಲದಲ್ಲಿ ಲಭ್ಯವಿರಲಿದೆ.