ವೇಣೂರು: ದೇವಸ್ಥಾನಗಳ ಆದಾಯ ಸರಕಾರದ ಖಜಾನೆಗೆ ಸೇರುವುದಿಲ್ಲ. ಎ ಗ್ರೇಡ್ ದೇವಸ್ಥಾನಗಳ ಆದಾಯವನ್ನು ಆದಾಯ ಕಡಿಮೆ ಇರುವ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಖಾಸಗಿ ದೇವಸ್ಥಾನಗಳ ಅಭಿವೃದ್ಧಿಗೂ ಧಾರ್ಮಿಕ ಪರಿಷತ್ನಿಂದ ಅನುದಾನ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಭಕ್ತರ ಡ್ರೆಸ್ ಕೋಡ್ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.
ವೇಣೂರು ಶ್ರೀ ಶಾರದಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ಜರಗಿದ 14ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದಿರೆಯ ವಕೀಲ ನಾಗೇಶ್ ಶೆಟ್ಟಿ ಮಾತನಾಡಿ, ಹಿಂದೂ ಧಾರ್ಮಿಕ ಕೇಂದ್ರಗಳ ಕಡಿವಾಣ ಸಲ್ಲದು. ಈ ಬಗ್ಗೆ ರಾಜಕಾರಣಿಗಳು ಚಿಂತಿಸುವ ಆವಶ್ಯಕತೆ ಇದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವೇಣೂರಿನ ಖ್ಯಾತ ವೈದ್ಯ ಡಾ| ಶಾಂತಿಪ್ರಸಾದ್, ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ, ವೇಣೂರು ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ಧನುಷ್ ಕೆ.ಎಸ್., ವೇಣೂರು ಠಾಣೆಯ ಪೊಲೀಸ್ ಸಿಬಂದಿ ವಿಜಯ ಕುಮಾರ್ ರೈ, ಶಂಕರ ಎಸ್. ಸಂಕಲಿಕೆ, ಸಮಿತಿ ಪೂರ್ವಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ, ಶ್ರೀ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಅಶೋಕ ಪಾಣೂರು, ಕಾರ್ಯದರ್ಶಿ ಕೆ. ಲೋಕಯ್ಯ ಪೂಜಾರಿ ಮತ್ತಿತರರಿದ್ದರು. ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಪಿ. ಧರಣೇಂದ್ರ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಕೊರಗಪ್ಪ ಎಂ. ವಂದಿಸಿದರು. ಸಂತೋಷ್ ಕುಲಾಲ್ ಸಿದ್ದಕಟ್ಟೆ ನಿರೂಪಿಸಿದರು.
ವೈಭವದ ಶೋಭಾಯಾತ್ರೆ
ಇದಕ್ಕೂ ಮೊದಲು ಬಜಿರೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ವೈಭವದ ಶೋಭಾಯಾತ್ರೆಯೊಂದಿಗೆ ಶಾರದೆ ವಿಗ್ರಹವನ್ನು ವಿಸರ್ಜಿಸ ಲಾಯಿತು. ಶಾಸಕ ಹರೀಶ್ ಪೂಂಜ, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ ಭೇಟಿ ನೀಡಿದರು.
ಸಮ್ಮಾನ
ನಿವೃತ್ತ ಯೋಧ ಚಂದ್ರಹಾಸ ಕುಂಞೊಟ್ಟು ಅವರನ್ನು ಸಮ್ಮಾನಿಸಲಾಯಿತು. ರಾಜೇಶ್ ಪೂಜಾರಿ ಮೂಡುಕೋಡಿ ಹಾಗೂ ಜಗದೀಶ್ ಭಟ್ ಶ್ರೀನಿಧಿ ಅವರನ್ನು ಗೌರವಿಸಲಾಯಿತು.