Advertisement

ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರ ದುಸ್ತರ

08:36 PM Jul 26, 2021 | Team Udayavani |

ಮಹಾನಗರ: ರಾಬಜಪೆ, ಜು. 26: ಇಲ್ಲಿನ ಮುರನಗರ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣದ ವರೆಗಿನ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಭಾರೀ ತೊಂದರೆಯಾಗಿ, ಸಂಚಾರ ದುಸ್ತರ ಎನಿಸಿದೆ.

Advertisement

ಈ ರಸ್ತೆಯಲ್ಲಿ ಹೊಂಡಗಳು ಬಿದ್ದು, ಸುಮಾರು ಒಂದು ವರ್ಷ ಕಳೆದಿದೆ. ಈ ಹೊಂಡಗಳಿಗೆ ಸ್ಥಳೀಯರು ಕಲ್ಲು, ಮಣ್ಣು ಹಾಕಿ ತೇಪೆ ಹಾಕುತ್ತಿದ್ದಾರೆ, ವಿನಃ ಪೂರ್ಣ ಪ್ರಮಾಣದ ಕಾಮಗಾರಿ ಇನ್ನೂ ಆಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇಲ್ಲದಿರುವುದು ಮಳೆಯ ನೀರು ರಸ್ತೆಯಲ್ಲಿಯೇ ಹರಿದು ಹೊಂಡಗಳು ಸೃಷ್ಟಿಯಾಗುತ್ತಿವೆ.

ಈ ರಸ್ತೆಯ ನಿರ್ವಹಣೆ ಕಾಮಗಾರಿಗಳು ಈ ಹಿಂದೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಡೆಯುತ್ತಿದ್ದವು. ಈ ಪ್ರಾಧಿಕಾರ ಕೆಂಜಾರಿಗೆ ಸ್ಥಳಾಂತರಗೊಂಡ ಬಳಿಕ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಮೂರು ವರ್ಷಗಳ ಹಿಂದೆ ಬಜಪೆಯ ಕಿನ್ನಿಪದವಿನಿಂದ ಮುರನಗರ ಜಂಕ್ಷನ್‌ವರೆಗೆ ಡಾಮರು ಕಾಮಗಾರಿ ನಡೆದಿತ್ತು. ಬಳಿಕ ವಿಮಾನ ನಿಲ್ದಾಣ ರಸ್ತೆಯ ಒಂದೆಡೆಯಿಂದ ಸ್ವಲ್ವ ಪ್ರಮಾಣದಲ್ಲಿ ಡಾಮರು ಕಾಮಗಾರಿ ನಡೆದಿತ್ತು.

ಶಾಸಕರ ಸಮನ್ವಯ ಕಾರ್ಯ ಅಗತ್ಯ:

ಹಳೆ ವಿಮಾನ ನಿಲ್ದಾಣ ರಸ್ತೆಯು ಮೂಲ್ಕಿ- ಮೂಡುಬಿದಿರೆ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಗಡಿ ಗ್ರಾಮಗಳ ರಸ್ತೆಯಾಗಿದೆ. ಮುರ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣದವರೆಗೆ ರಸ್ತೆಯ ಬಲ ಬದಿ (ಪಶ್ಚಿಮಕ್ಕೆ)ಮಳವೂರು ಗ್ರಾಮವು (ಬಜಪೆ ಪಟ್ಟಣ ಪಂ. ವ್ಯಾಪ್ತಿ) ಮೂಲ್ಕಿ -ಮೂಡುಬಿದಿರೆ ಕ್ಷೇತ್ರಕ್ಕೆ, ರಸ್ತೆಯ ಎಡಬದಿ (ಪೂರ್ವಕ್ಕೆ) ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕೊಳಂಬೆ ಗ್ರಾಮಕ್ಕೆ ಸೇರುತ್ತದೆ. ಅದೇ ರೀತಿ ಬಜಪೆ ಪೊಲೀಸ್‌ ಠಾಣೆಯಿಂದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಲಬದಿ ಬಜಪೆ ಪಟ್ಟಣ ಪಂಚಾಯತ್‌, ಎಡಬದಿ ಕೊಳಂಬೆ ಗ್ರಾಮಕ್ಕೆ ಸೇರುತ್ತದೆ. ಒಟ್ಟಿನಲ್ಲಿ ಈ ಗಡಿಭಾಗದ ರಸ್ತೆಯನ್ನು ಎರಡು ಕ್ಷೇತ್ರಗಳ ಶಾಸಕರು ಸಮನ್ವಯದಿಂದ ಅಭಿವೃದ್ಧಿಗೊಳಿಸಬೇಕಾಗಿದೆ. ಈ ರಸ್ತೆ ಕೊಳಂಬೆ, ಅದ್ಯಪಾಡಿಗೆ ಹೋಗುವ ಜನರಿಗೆ ಹೆಚ್ಚು ಉಪಯೋಗವಾಗಿದೆ. ಈ ರಸ್ತೆಯಲ್ಲಿ ನಾಲ್ಕು ಬಸ್‌ಗಳು ಅಲ್ಲದೆ ದ್ವಿಚಕ್ರ ವಾಹನಗಳು, ರಿಕ್ಷಾಗಳು, ಟಿಪ್ಪರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ.

Advertisement

ಎಲ್ಲೆಂದರಲ್ಲಿ ಕಸ :

ಹಲವು ಸಂಘ-ಸಂಸ್ಥೆಗಳಿಂದ ವರ್ಷವಿಡೀ ಸ್ವಚ್ಛತೆ ಅಭಿಯಾನ ಕೈಗೊಂಡರು ಕೂಡ ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಕಸ ಬಿಸಾಡುವ ಪ್ರವೃತ್ತಿ ಮುಂದುವರಿದಿದೆ.

ರಸ್ತೆಯ ಇಕ್ಕೆಲಗಳಲ್ಲಿ ಕಸ, ಮದ್ಯದ ಬಾಟಲ್‌ಗ‌ಳು ಕಾಣಸಿಗುತ್ತವೆ.   ಬಜಪೆ ಪೊಲೀಸ್‌ ಠಾಣೆ-ಮುರನಗರ ಜಂಕ್ಷನ್‌ ಹಳೆ ವಿಮಾನ ನಿಲ್ದಾಣ ಕಾಂಕ್ರೀಟ್‌ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕಾಂಕ್ರೀಟ್‌ ಕಾಮಗಾರಿ ನಡೆಸಿದ ರಸ್ತೆಯಲ್ಲಿ ಏಕ ಕಾಲಕ್ಕೆ ಎರಡೂ ಕಡೆಗಳಿಂದ ವಾಹನ ಸಂಚಾರ ಮಾಡಲು ಕಷ್ಟಕರವಾಗಿದೆ. ಎದುರಿನಿಂದ ಬಂದ ವಾಹನಕ್ಕೆ ದಾರಿ ನೀಡಬೇಕಾದ ಸಂದರ್ಭ ರಸ್ತೆ ಬದಿಯಲ್ಲಿ ಒಂದೆಡೆ ನಿಲ್ಲಿಸಬೇಕಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ನೀರು ನಿಂತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ.  ಸಂತ ಜಾನ್‌ ಪ್ಲಾವ್‌ ದ್ವಿತೀಯ ಅವರ ಪುಣ್ಯ ಕ್ಷೇತ್ರ, ಫಾದರ್‌ ಮುಲ್ಲರ್‌ ಆಸ್ಪತ್ರೆ ಈ ರಸ್ತೆಯಲ್ಲಿ ಬದಿಯಲ್ಲಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚಿನ ವಾಹನ ಸಂಚರಿಸುತ್ತಿವೆ. ರಸ್ತೆ ವಿಸ್ತರಣೆ, ಮಳೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಆಗಬೇಕಾಗಿದೆ.

ಬಜಪೆ-ಕೊಳಂಬೆ ಮುರನಗರ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣದವರೆಗೆ ರಸ್ತೆಯಲ್ಲಿ ಹೊಂಡಗಳು ಬಿದ್ದ ಬಗ್ಗೆ ಜನರಿಂದ ಮನವಿಗಳು ಬಂದಿದ್ದವು. ಈ ರಸ್ತೆಯ ನಿರ್ವಹಣೆ ವಿಮಾನ ನಿಲ್ದಾಣ ಪ್ರಾಧಿಕಾರ ಮಾಡುತ್ತಿತ್ತು. ಈ ರಸ್ತೆ ದುರಸ್ಥಿಯ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಅವರಲ್ಲಿ ಮಾತನಾಡಿ ದ್ದೇನೆ. ಭಾರೀ ಮಳೆಯಾಗುತ್ತಿರುವ ಕಾರಣ ತೇಪೆ ಕಾರ್ಯಕ್ಕೆ ಅಡಚಣೆಯಾಗಿದೆ. ಮುರನಗರದಲ್ಲಿ ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಈ ರಸ್ತೆಗೆ ತೇಪೆ ಹಾಕುವ ಕಾರ್ಯ ಶೀಘ್ರ ಮಾಡಲಾಗುವುದು. .ಡಾ| ಭರತ್ ಶೆಟ್ಟಿ , ಶಾಸಕ

 

-ಸುಬ್ರಾಯ ನಾಯಕ್ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next