ಕಲಬುರಗಿ: ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಯಾರೂ ಆಗಿಲ್ಲ. ಆದ್ದರಿಂದ ಈ ಸಲವಾದರೂ ರಾಜ್ಯದ ಮುಖ್ಯಮಂತ್ರಿ ಸ್ಥಾನ ವೀರಶೈವ- ಲಿಂಗಾಯತ ರಿಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾ ವೀರಶೈವ ಸಮಾಜ ಆಗ್ರಹಿಸಿದೆ.
ಬಿಜೆಪಿಯಲ್ಲಿ ವೀರಶೈವ- ಲಿಂಗಾಯತರ ಕುರಿತಾಗಿ ನಡೆದುಕೊಂಡಿದ್ದನ್ನು ಬೇಸತ್ತು ವೀರಶೈವ- ಲಿಂಗಾಯಿತರು ಬೆಂಬಲಿಸಿದ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದರಿಂದ ಈ ಸಲ ಮುಖ್ಯ ಮಂತ್ರಿ ಮಾಡುವುದರ ಮುಖಾಂತರ ನ್ಯಾಯ ಕಲ್ಪಿಸಬೇಕೆಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಪತ್ರಿಕಾಗೋಷ್ಠಿ ಆಗ್ರಹಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮುಖ್ಯಮಂತ್ರಿ ಕುರ್ಚಿಗೆ ಯೋಗ್ಯರಾಗಿದ್ದಾರೆ. ಇವರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡಿದರು.
ವೀರಶೈವ-ಲಿಂಗಾಯತ ಸಮಾಜ ಬೆಂಬಲಿಸಿದ ಪರಿಣಾಮ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 39 ಜನ ಲಿಂಗಾಯತ ಶಾಸಕರಾಗಿ ಆಯ್ಕೆಯಾಗಿದ್ದು, ಚಿಂಚೋಳಿಯವರಾದ ದಿ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದ ಬಳಿಕ ಕಾಂಗ್ರೆಸ್ನಲ್ಲಿ ಯಾರೊಬ್ಬ ಲಿಂಗಾಯತ ಮುಖ್ಯಮಂತ್ರಿಗಳಾಗಿಲ್ಲ. ಹೀಗಾಗಿ, ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಲಿಂಗಾಯತ ಸಿಎಂ ಪ್ರಸ್ತಾಪ ಮಾಡದಿರುವುದು ಬೇಸರ ತಂದಿದೆ. ರಾಜ್ಯದಲ್ಲಿ ಲಿಂಗಾಯತ ಬಹುಸಂಖ್ಯಾತ ಶಾಸಕರಿದ್ದಾರೆ. ಹೀಗಾಗಿ ಎಲ್ಲರ ಮನಸ್ಸಿನಗುಣವಾಗಿ ಸಿಎಂ ಸ್ಥಾನ ಕಲ್ಪಿಸಬೇಕೆಂದರು.
ಬಿಜೆಪಿಯವರು ಲಿಂಗಾಯತರಿಗೆ ನಡೆಸಿಕೊಂಡ ರೀತಿ ನೀತಿಯಿಂದ ಬೇಷತ್ತು ಕಾಂಗ್ರೆಸ್ ಬೆಂಬಲಕ್ಕೆ ನಿಂತು ಬಹುಮತದ ಸರ್ಕಾರ ರಚನೆಯಲ್ಲಿ ಲಿಂಗಾಯತರ ಪಾತ್ರ ದೊಡ್ಡದಿದೆ. ಸಿಎಂ ಸ್ಥಾನದ ಜತೆಗೆ ಜಿಲ್ಲೆಗೆ 2 ರಿಂದ 3 ಸಚಿವ ಸ್ಥಾನ ಸಹ ದೊರಕಲಿ.
ಜಿಲ್ಲೆಯಲ್ಲಿ ಡಾ. ಶರಣಪ್ರಕಾಶ ಪಾಟೀಲ್, ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್ ಮತ್ತು ಅಲ್ಲಮಪ್ರಭು ಪಾಟೀಲ್ ಲಿಂಗಾಯತ ಶಾಸಕರಾಗಿದ್ದು, ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಕನಿಷ್ಠ 2 ರಿಂದ 3 ಸಚಿವ ಸ್ಥಾನ ಸಿಗಬೇಕು. ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡದೆ ಅನ್ಯಾಯ ಎಸಗಿತ್ತು. ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿರಲಿಲ್ಲ, ಹೀಗಾಗಿ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸಿ, ಲಿಂಗಾಯತರಿಗೆ ಮಣೆ ಹಾಕಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶಶಿಕಾಂತ ಪಾಟೀಲ್, ಸೋಮುಗೌಡ ಪಾಟೀಲ್, ಡಾ. ಶ್ರೀಶೈಲ್ ಘೂಳಿ, ಮಂಜುರಡ್ಡಿ, ಸಂಗಮೇಶ ನಾಗನಹಳ್ಳಿ, ಚಂದ್ರಶೇಖರ ತಳ್ಳಳ್ಳಿ ಮುಂತಾದವರಿದ್ದರು.