Advertisement

Gopinatham;ನರಹಂತಕ ವೀರಪ್ಪನ್‌ ಹತನಾದ 19 ವರ್ಷದ ಬಳಿಕ ಗೋಪಿನಾಥಂ ಈಗ ಪ್ರವಾಸಿ ಕೇಂದ್ರ!

01:49 PM Nov 17, 2023 | Team Udayavani |

ಕಾಡುಗಳ್ಳ, ದಂತಚೋರ ವೀರಪ್ಪನ್‌ ಕೊನೆಯುಸಿರೆಳೆದು ಬರೋಬ್ಬರಿ 19 ವರ್ಷಗಳ ನಂತರ ಇದೀಗ ಅರಣ್ಯ ಇಲಾಖೆ ವೀರಪ್ಪನ್‌ ಹುಟ್ಟೂರಾದ ಗೋಪಿನಾಥಂನ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಸಾರ್ವಜನಿಕರಿಗೆ ಜಂಗಲ್‌ ಸಫಾರಿಗೆ ಅವಕಾಶ ನೀಡುವ ಮೂಲಕ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದೆ.

Advertisement

ಇದನ್ನೂ ಓದಿ:World Cup 2023; ದ.ಆಫ್ರಿಕಾ ತಂಡವು ಸೆಮಿ ಫೈನಲ್ ಆಡುವ ನಂಬಿಕೆಯೂ ಇರಲಿಲ್ಲ; ಡೇಲ್ ಸ್ಟೈನ್

ಸಾರ್ವಜನಿಕರಿಗೆ ಮುಕ್ತವಾದ ಗೋಪಿನಾಥಂ!

ಪ್ರಸಿದ್ಧ ಧಾರ್ಮಿಕ ತಾಣವಾದ ಮಲೆ ಮಹದೇಶ್ವರ ಬೆಟ್ಟ ಅಥವಾ ಹೊಗೇನಕ್ಕಲ್‌ ಜಲಪಾತಕ್ಕೆ ಭೇಟಿ ನೀಡುವ ಜನರು ಈ ಜಂಗಲ್‌ ಸಫಾರಿಯ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಸಫಾರಿಯ ಸಮಯ ಬೆಳಗ್ಗೆ 6ರಿಂದ 9-30 ಹಾಗೂ ಸಂಜೆ 4ರಿಂದ 6-30ರವರೆಗೆ ವನ್ಯಜೀವಿಗಳನ್ನು ವೀಕ್ಷಿಸಬಹುದಾಗಿದೆ.

Advertisement

ಬಂಡೀಪುರ, ಬಿಆರ್‌ ಹಿಲ್ಸ್‌ (ಬಿಳಿಗಿರಿ ರಂಗನ್‌ ಬೆಟ್ಟ)ನಂತೆ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲೂ ಪ್ರವಾಸಿಗರನ್ನು ಆಕರ್ಪಿಸುವುದು ಮುಖ್ಯ ಗುರಿಯಾಗಿದೆ. 1991ರಲ್ಲಿ ವೀರಪ್ಪನ್‌ ನಿಂದ ಶಿರಚ್ಛೇದನಕ್ಕೊಳಗಾಗಿದ್ದ ಹುತಾತ್ಮ ಐಎಫ್‌ ಎಸ್‌ ಅಧಿಕಾರಿ ಪಿ.ಶ್ರೀನಿವಾಸ್‌ ಅವರ ಪ್ರತಿಮೆ ಗೋಪಿನಾಥಂ ಅರಣ್ಯ ಕಚೇರಿಯ ಆವರಣದಲ್ಲಿದೆ. ಏತನ್ಮಧ್ಯೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಪ್ರಯೋಗಾರ್ಥ ಸಫಾರಿಯನ್ನು ಪರಿಚಯಿಸಲಾಗಿತ್ತು.

ಬಿಎಸ್‌ ಯಡಿಯೂರಪ್ಪ ನೇತೃತ್ವದ ಸರಕಾರ ಗೋಪಿನಾಥಂ ಪ್ರದೇಶದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ 5 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈಗ ಪ್ರವಾಸಿಗರಿಗೆ ಗೋಪಿನಾಥಂ ಮುಕ್ತವಾಗಿದ್ದರಿಂದ ಕೇವಲ ಕರ್ನಾಟಕದ ಪ್ರವಾಸಿಗರು ಮಾತ್ರವಲ್ಲ, ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಪಿನಾಥಂ ಪ್ರದೇಶದ ಕಾವೇರಿ ವನ್ಯಜೀವಿ ಅಭಯಾರಣ್ಯದ ಸಫಾರಿ ಮಾಡಲು ಒಬ್ಬ ವ್ಯಕ್ತಿಗೆ 500 ರೂಪಾಯಿ ಶುಲ್ಕ ಹಾಗೂ ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ 300 ರೂಪಾಯಿ ಶುಲ್ಕ ನೀಡಬೇಕು. ಈ ಅಭಯಾರಣ್ಯದಲ್ಲಿ ಚಿರತೆಗಳು, ಆನೆಗಳು, ಜಿಂಕೆ, ಕರಡಿ ಸೇರಿದಂತೆ ಹಲವು ಜಾತಿಯ ಪ್ರಾಣಿ, ಪಕ್ಷಿಗಳಿವೆ. ಈ ಹಿಂದೆ ದಂತಚೋರನ ಅಟ್ಟಹಾಸದಿಂದಾಗಿ ನಿರ್ಬಂಧಿತ ಪ್ರದೇಶವಾಗಿದ್ದ ಗೋಪಿನಾಥಂ ಈಗ ಪ್ರವಾಸಿಗರನ್ನು ಸೆಳೆಯುವ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಿದೆ ಎಂದು ವರದಿ ವಿವರಿಸಿದೆ.

ನರಹಂತಕ ವೀರಪ್ಪನ್:‌

ಕರ್ನಾಟಕದ ಗೋಪಿನಾಥಂನಲ್ಲಿ ಕೂಸೆ ಮುನಿಸ್ವಾಮಿ ವೀರಪ್ಪನ್‌ 1952ರ ಜನವರಿ 18ರಂದು ಜನಿಸಿದ್ದ. ತನ್ನ 18ನೇ ವಯಸ್ಸಿಗೆ ಅಕ್ರಮ ಶಿಕಾರಿ, ಪ್ರಾಣಿ ಹತ್ಯೆಯಲ್ಲಿ ತೊಡಗಿಸಿಕೊಂಡಿದ್ದ.

ವರ್ಷಗಳು ಉರುಳಿದಂತೆ ತಮಿಳುನಾಡು, ಕರ್ನಾಟಕದ ಮಧ್ಯೆ ಇರುವ ಸುಮಾರು 6,000 ಚದರ ಕಿಲೋ ಮೀಟರ್‌ ಕಾಡಿನಲ್ಲಿ ಅಟ್ಟಹಾಸ ಮೆರೆಯುವ ಮೂಲಕ 2000ಕ್ಕೂ ಅಧಿಕ ಆನೆಗಳನ್ನು ಹತ್ಯೆಗೈದು ದಂತ ಹಾಗೂ ಶ್ರೀಗಂಧ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿದ್ದ. ಹಲವಾರು ಅರಣ್ಯಾಧಿಕಾರಿ, ಪೊಲೀಸರನ್ನು ಹತ್ಯೆಗೈದಿದ್ದು. 1989ರಲ್ಲಿ ಸೆರೆಸಿಕ್ಕಿದ್ದ ನರಹಂತಕ ವೀರಪ್ಪನ್‌ ಬೂದಿಪಾಡ ಕಾಡಿನ ಗೆಸ್ಟ್‌ ಹೌಸ್‌ ನಿಂದ ನಿಗೂಢವಾಗಿ ಪರಾರಿಯಾಗಿದ್ದ.  ಬಳಿಕ ಅರಣ್ಯಾಧಿಕಾರಿಗಳು, ಪೊಲೀಸರ ಮಾರಣ ಹೋಮ ನಡೆಸಿದ್ದ. 2000ನೇ ಇಸವಿಯಲ್ಲಿ ಡಾ.ರಾಜ್‌ ಕುಮಾರ್‌ ಅವರನ್ನು ಗಾಜನೂರು ಮನೆಯಿಂದ ಅಪಹರಿಸಿದ್ದ. ಕೊನೆಗೂ 2004ರಲ್ಲಿ ಕರ್ನಾಟಕ ಟಾಸ್ಕ್‌ ಪೋರ್ಸ್‌ ಕಾರ್ಯಾಚರಣೆಯಲ್ಲಿ ದಂತಚೋರ ವೀರಪ್ಪನ್‌ ಹತ್ಯೆಗೀಡಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next