Advertisement

ಕೇಂದ್ರ ಬಸ್‌ನಿಲ್ದಾಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ

04:53 PM Aug 12, 2022 | Team Udayavani |

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದೇಶ ಭಕ್ತಿ ಹೆಚ್ಚಿಸಲು ಕಲಬುರಗಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಒಂದು ವಾರ ಹಮ್ಮಿಕೊಂಡಿರುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.

Advertisement

ಕೇಂದ್ರ ವಾರ್ತಾ ಮತ್ತು ಪ್ತಸಾರ ಸಚಿವಾಲಯದ ಪಿಐಬಿ ಸಂಸ್ಥೆಯ ಸಹಕಾರದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ. ರಾಚಪ್ಪ, ಸಾರ್ವಜನಿಕರಲ್ಲಿ ದೇಶಭಕ್ತಿ ಜಾಗೃತಿಗೊಳಿಸಲು ಸ್ಥಳೀಯ ಮತ್ತು ರಾಷ್ಟ್ರೀಯ ನಾಯಕರ ಭಾವಚಿತ್ರಗಳ ಪ್ರರ್ದಶನ, ಡಿಜಿಟಲ್‌ ಲೈಟ್‌ ಶೋ, ದಿನನಿತ್ಯ ದೇಶಭಕ್ತಿಗಳ ಗಾಯನ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಡಿಸಿಪಿ ಅಡೂರು ಶ್ರೀನಿವಾಸಲು ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟಗಾರರು ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು. ಇದೇ ವೇಳೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪೋಸ್ಟರ್‌ಗಳನ್ನು ಬಸ್ಸಿನ ಒಳಗೆ ಮತ್ತು ಹೊರಭಾಗದಲ್ಲಿ ಅಂಟಿಸಲಾಯಿತು. ಸಂಸ್ಥೆಯ ಸಂಚಾರಿ ಸಿಬ್ಬಂದಿಗೆ ರಾಷ್ಟ್ರ ಧ್ವಜದ ಬ್ಯಾಡ್ಜ್, ಧ್ವಜ, ಟಿ-ಶರ್ಟ್‌ಗಳನ್ನು ವಿತರಿಸಲಾಯಿತು.

ಹೋರಾಟಗಾರರ ಸಾಧನೆ ಪ್ರದರ್ಶನ: ಕಾರ್ಯಕ್ರಮದ ಅಂಗವಾಗಿ ಬಸ್‌ ನಿಲ್ದಾಣದಲ್ಲಿ ಸ್ಥಳೀಯ ಪ್ರಮುಖ ಸ್ಥಾತಂತ್ರ ಹೋರಾಟಗಾರರ ಮತ್ತು ರಾಷ್ಟ್ರೀಯ ನಾಯಕರ ಭಾವಚಿತ್ರ ಪ್ರದರ್ಶಿಸಲಾಯಿತು. ಬಸ್‌ ನಿಲ್ದಾಣದ ಆವರಣದಲ್ಲಿ ಎಲ್ಲಾ ರಾಷ್ಟ್ರೀಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಡಿಜಿಟಲ್‌ ಪೋಸ್ಟರ್‌ ಮತ್ತು ಬೋರ್ಡ್‌ ಸ್ಟ್ಯಾಂಡಲ್‌ಗ‌ಳನ್ನು ಹಾಕಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದೊಂದಿಗೆ ಅವರ ಜೀವನ-ಸಾಧನೆಗಳನ್ನು ಪ್ರದರ್ಶಿಸಲಾಯಿತು. ಒಂದು ವಾರಗಳ ಕಾಲ ಸತತವಾಗಿ ಬಸ್‌ ನಿಲ್ದಾಣದಲ್ಲಿ ರಂಗೋಲಿ, ಚಿತ್ರಕಲೆಗಳಂತಹ ಸ್ಪರ್ಧೆ ನಡೆಯಲಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ರಾಷ್ಟ್ರ ಭಕ್ತಿ ಮೂಡಿಸಲು ನವದೆಹಲಿಯ ಅಸೋಸಿಯೇಶನ್‌ ಆಫ್‌ ಸ್ಟೇಟ್‌ ರೋಡ್‌ ಟ್ರಾನ್ಸಪೋರ್ಟ್‌ ಅಂಡರ್‌ಟೇಕಿಂಗ್ಸ್‌ ಸಂಸ್ಥೆಯು ದೇಶದ 75 ಬಸ್‌ ನಿಲ್ದಾಣಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ ಕೇಂದ್ರ ಬಸ್‌ ನಿಲ್ದಾಣ ಸೇರಿದಂತೆ ರಾಜ್ಯದ ಐದು ಬಸ್‌ ನಿಲ್ದಾಣ ಆಯ್ಕೆಯಾಗಿವೆ.

Advertisement

ಕೆ.ಕೆ.ಆರ್‌.ಟಿ.ಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಜಾಗೃತ ಅಧಿಕಾರಿ ಆನಂದ ಬಂದರಕಳ್ಳಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಕೆ.ಅಶ್ರಫ್‌, ಎಂ. ಫೈಯಾಜ್‌, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸಿದ್ಧಪ್ಪ ಗಂಗಾಧರ, ಸುನೀಲ ಚಂದರಗಿ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next