Advertisement
ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊವರನಹಳ್ಳಿ ಶ್ರೀಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಭಾರತ ದೇಶ ಮತ್ತು ಕರ್ನಾಟಕ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನಿಂದ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
Related Articles
Advertisement
ಭಕ್ತರ ಸೆಳೆಯುವ ಪುಣ್ಯಕ್ಷೇತ್ರದ ಮಹಿಮೆ
ಮಹಾಲಕ್ಷ್ಮೀ ದೇವಾಲಯದ ಬಲಭಾಗದಲ್ಲಿ ತೀತಾ ಜಲಾಶಯ ಹಾಗೂ ಶ್ರೀಲಕ್ಷ್ಮೀ ಮೂಡಿಬಂದ ಅಬ್ಬಯ್ಯನ ಕೆರೆಯಿದೆ. ಎಡಭಾಗದಲ್ಲಿ ನಾಗಪ್ಪನ ಹುತ್ತ ಮತ್ತು ಕಲಿಯುಗದ ದೇವತೆ ಕಮಲಮ್ಮ ಅಜ್ಜಿಯ ದಿವ್ಯ ಬೃಂದಾನವನವಿದೆ. ದೇವಾಲಯದ ಹಿಂಭಾಗದಲ್ಲಿ ಆದಿಶಕ್ತಿ ಮಾರಮ್ಮ ದೇವಾಲಯ ಹಾಗೂ ದಕ್ಷಿಣದಲ್ಲಿ ಓಣಿನಾಗನ ಶಿಲೆ ಮತ್ತು ದೇವಿಯ ಕಮಲ ಪಾದವಿದೆ. ತೀತಾ ಜಲಾಶಯದ ಸಮೀಪದ ಹುಣಸೆ ಮರದಲ್ಲಿ ಗಣಪತಿ ಶಿಲೆಯು ಕಾಣಸಿಗಲಿದೆ.
ಪ್ರವಾಸಿಗರ ಸೆಳೆಯುವ ತೀತಾ ಜಲಾಶಯ
ಜಯಮಂಗಲಿ ನದಿಗೆ ತಡೆಯಾಗಿ ನಿರ್ಮಾಣವಾಗಿರುವ ತೀತಾ ಜಲಾಶಯವು ಕೊರಟಗೆರೆ ಕ್ಷೇತ್ರದ ರೈತರ ಜೀವನಾಡಿ. 25 ವರ್ಷಗಳ ನಂತರ ಸತತ ಎರಡನೇ ಸಲ ತೀತಾ ಜಲಾಶಯ ಕೋಡಿಬಿದ್ದು ಗ್ರಾಮೀಣ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ಬರುವ ಭಕ್ತರು ತೀತಾ ಜಲಾಶಯಕ್ಕೆ ಭೇಟಿ ನೀಡಿ ಪ್ರಕೃತಿಯ ಸೊಬಗು ಸವಿಯುತ್ತಾರೆ. ತುಮಕೂರು ಜಿಲ್ಲೆಯ ಏಕೈಕ ತೀತಾ ಜಲಾಶಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮೀಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಶ್ರಾವಣ ಮಾಸದ ಶುಭ ಶುಕ್ರವಾರ ಮಹಾಲಕ್ಷ್ಮೀ ದೇವಿಗೆ ಹೂವಿನ ಅಲಂಕಾರ ಮತ್ತು ಹೋಮ ಹವನ ಏರ್ಪಡಿಸಲಾಗಿದೆ. ಮಹಾಲಕ್ಷ್ಮೀ ಟ್ರಸ್ಟ್ನಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎನ್ನುತ್ತಾರೆ ಪ್ರಧಾನ ಅರ್ಚಕ ಸುಬ್ರಮಣ್ಯ ಶರ್ಮ
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ದೀಪಾಲಂಕಾರ ಮತ್ತು ದೇವಿಯ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾಲಕ್ಷ್ಮೀ ಟ್ರಸ್ಟ್ ಆಡಳಿತ ಮಂಡಳಿಯಿಂದ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯ ಜೊತೆಯಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಹಾಲಕ್ಷ್ಮೀ ಟ್ರಸ್ಟ್ ಅಧ್ಯಕ್ಷ ವಾಸುದೇವ ಹೇಳಿದರು.