Advertisement

ಇಂದು ವರ ಮಹಾಲಕ್ಷ್ಮೀ ವ್ರತ: ತೃಪ್ತಿ ಕರುಣಿಸುವ ಮಾತೆಯ ಆರಾಧನೆ

10:30 PM Aug 04, 2022 | Team Udayavani |

ಶ್ರಾವಣ ಮಾಸ ಬಂತೆಂದರೆ ಲಕ್ಷ್ಮೀಯ ಉಪಾಸನೆಯ ಸಂಭ್ರಮ. ಇದನ್ನು ವರ ಮಹಾಲಕ್ಷ್ಮೀವ್ರತ ಎಂದು ಆಚರಣೆ ಮಾಡುವ ಪದ್ಧತಿ. ಶ್ರಾವಣ ಮಾಸದ ಶುಕ್ರವಾರವು ಲಕ್ಷ್ಮೀಗೆ ವಿಶೇಷ ದಿನ.

Advertisement

ಸಾಮಾನ್ಯವಾಗಿ ಲಕ್ಷ್ಮೀ ಎಂದರೆ ಧನ ಧಾನ್ಯ ಸಂಪನ್ನತೆ ಎಂದೇ ಭಾವಿಸಲಾಗಿದೆ. ಅದೂ ಸರಿಯೇ. ತಪ್ಪೇನಲ್ಲ. ಆದರೆ ಲಕ್ಷ್ಮೀಯನ್ನು ಆರಾಧಿಸುವುದು ಸಂತೃಪ್ತತೆಗಾಗಿ. ತೃಪ್ತಿಯೇ ಲಕ್ಷ್ಮೀ ಕಟಾಕ್ಷ. ಆ ತೃಪ್ತಿಯನ್ನು ಕೆಲವರು ಶ್ರೀಮಂತಿಕೆಯ ರೂಪದಲ್ಲಿ, ಕೆಲವರು ಮನೆಯ ಸೌಕರ್ಯಗಳಿಂದ ಪಡೆಯಬಹುದು. ಇನ್ನು ಕೆಲವರು ಸಮಾಜ ಸೇವೆ ಮಾಡಿ ತೃಪ್ತರಾಗ ಬಹುದು. ಮತ್ತೆ ಕೆಲವರು ಭರ್ಜರಿ ಭಕ್ಷ್ಯಭೋಜ್ಯ ಗಳನ್ನು ತಿಂದೂ ತೃಪ್ತರಾಗಬಹುದು. ಒಟ್ಟಿನಲ್ಲಿ ಸಂತೃಪ್ತಿಯೇ ಲಕ್ಷ್ಮೀ.

ವರಲಕ್ಷ್ಮೀ ವ್ರತ ಎಂದು ಶ್ರಾವಣ ಮಾಸದಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಸಂಸ್ಕೃತದಲ್ಲಿ ಒಂದು ಶಬ್ದದ ಮುಂದೆ ಬರುವ ಇನ್ನೊಂದು ಶಬ್ದದ ಆಧಾರದಲ್ಲಿ ಅರ್ಥ ಕಲ್ಪನೆಯಾಗುತ್ತದೆ. ವರ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ವಧುವಿಗೆ ವರ, ವರದಾನ ಇತ್ಯಾದಿ ಶಬ್ದ ಪ್ರಯೋಗಗಳಲ್ಲಿ ವಿವಿಧ ಅರ್ಥ ಕಲ್ಪನೆ ಬರುತ್ತದೆ. ಇಲ್ಲಿ ವರ ಶಬ್ದದ ಅನಂತರ ಲಕ್ಷ್ಮೀ ಬಂದಿದ್ದಾಳೆ. ಅಂದರೆ ಹೇ ಲಕ್ಷ್ಮೀಯೇ ಸಂತೃಪ್ತಿಯನ್ನು ನೀಡು. ನೆಮ್ಮದಿಯನ್ನು ನೀಡು ಎಂಬುದಾಗಿದೆ.

ಶ್ರೀಮನ್ನಾ ರಾಯಣನ ಅರ್ಧಾಂಗಿಯೇ ಸಂತೃಪ್ತಿಯನ್ನು ನೀಡುವವಳು. ಹಾಗಾಗಿ ಲಕ್ಷ್ಮೀ ನಾರಾಯಣ ಎಂದರು.

ವರಲಕ್ಷ್ಮೀ ಪೂಜೆಯನ್ನು ಕಲ್ಪೋಕ್ತವಾಗಿ ಕಲಶದಲ್ಲಿ ಆವಾಹಿಸಿ ಪೂಜೆ ಮಾಡಬಹುದು. ಭಕ್ತಿ, ಶ್ರದ್ಧೆಯಿಂದ ಚಿತ್ರಪಟ ಗಳಲ್ಲೋ  ಬಿಂಬ ಗಳಲ್ಲೋ ಲಕ್ಷ್ಮೀಯನ್ನು ಭಜನೆಯ ಮೂಲ ಕವೂ ಆರಾಧಿಸಿ ನಾವು ತೃಪ್ತ ರಾದರೆ ಅದುವೇ ಪೂರ್ಣ ಸಂತೃಪ್ತಿ, ನೆಮ್ಮದಿ. ನೆಮ್ಮದಿಯೇ ಆಯು ರಾರೋಗ್ಯದ ಮೂಲ ಗುಟ್ಟು. ಲಕ್ಷ್ಮೀಗೆ ಪ್ರಿಯವಾದದ್ದು ಕಲ್ಲು ಸಕ್ಕರೆಯುಕ್ತವಾದ ಕ್ಷೀರ. ಇದನ್ನು ಸಮರ್ಪಿಸಲೇ ಬೇಕು. ಸುಮಂಗಲಿಗೆ ಏನೇನು ಸೌಭಾಗ್ಯವೋ ಅಂತಹ ಅಲಂಕಾರದಿಂದ ಲಕ್ಷ್ಮೀಯನ್ನು ವರ ಲಕ್ಷ್ಮೀಯಾಗಿ ಶ್ರಾವಣ ಶುಕ್ರವಾರದಂದು ಆರಾಧಿಸಿ ಸಂತೃಪ್ತಿ ಯನ್ನು ಪಡೆಯೋಣ.  ಕವಿಗಳು “ಚಪಲೆ ಸೊಡರ ಕುಡಿಯಂ ಪೋಲ್ವಳ್‌’ ಎಂದರು. ಚಪಲೆ ಎಂದರೆ ಲಕ್ಷ್ಮೀ, ಸಂಪತ್ತು. ಇವಳು ದೀಪದ ಕುಡಿಯಂತಿರುವವಳು. ನೆಟ್ಟಗೆ ನಿÇÉೋದಿಲ್ಲ. ಅದನ್ನು ರಕ್ಷಣೆ ಮಾಡಬೇಕಾದರೆ ಗಾಳಿಯನ್ನು ನಿಯಂತ್ರಣ ಮಾಡಬೇಕು. ಅದೇ ರೀತಿ ನಾವು ಪಡೆಯುವ ಇಷ್ಟಾರ್ಥ(ವರ)ವು ದುರು ಪಯೋಗ ಆಗದಂತೆ ರಕ್ಷಿಸಿಕೊಂಡರೆ ಶಾಶ್ವತ ನೆಮ್ಮದಿ ಸಿಗುತ್ತದೆ. ಇದನ್ನೇ “ಯೋಗಸ್ಯ ಪರಿರಕ್ಷಣಂ ಕ್ಷೇಮಃ’ ಎಂದು ಪ್ರಾಜ್ಞರು ಸಲಹೆ ನೀಡಿದರು.

Advertisement

ಲಕ್ಷ್ಮೀಯ ಕೃಪಾ ಕಟಾಕ್ಷವು ಹೆಚ್ಚುತ್ತಾ ಬಂತು. ದೇವೇಂ ದ್ರನು ಸ್ವರ್ಣ ರಾಶಿಯಲ್ಲೇ ಕುಳಿತನು. ಅದೊಂದು ದಿನ ದೂರ್ವಾಸ ಋಷಿ ಗಳು ದೇವೇಂದ್ರನ ಬಲ ವೃದ್ಧಿಗಾಗಿ ತನ್ನ ತಪೋಬಲವನ್ನು ಮಂದಾರ ಪುಷ್ಪದ ಮಾಲೆಗೆ ಆವಾಹಿಸಿ ದೇವೇಂದ್ರನಲ್ಲಿಗೆ ಬರುತ್ತಾರೆ. ದೇವೇಂದ್ರನು ಸರ್ವಾಭರಣ ಯುಕ್ತನಾಗಿ ಐರಾವತವನ್ನೇರಿ ಮೆರವಣಿಗೆಯಲ್ಲಿ ಇರುತ್ತಾನೆ. ದೂರ್ವಾಸರನ್ನು ಕಂಡ ತತ್‌ಕ್ಷಣ ಐರಾವತದಿಂದ ಇಳಿದು ನಮಸ್ಕರಿಸುತ್ತಾನೆ. ಪ್ರಸನ್ನರಾದ ದೂರ್ವಾಸರು, “ಹೇ ಸುರಾಧಿಪಾ, ಇದೋ ನಿನ್ನ ಬಲ ಇನ್ನಷ್ಟು ವೃದ್ಧಿಯಾಗಲೆಂದು ಈ ಮಂದಾರ ಪುಷ್ಪದ ಹಾರಕ್ಕೆ ನನ್ನ ತಪೋಶಕ್ತಿಯನ್ನು ಧಾರೆ ಎರೆದು ಕೊಡುತ್ತಿದ್ದೇನೆ. ನಿನ್ನ ಕಂಠಾಭರಣವಾಗಿ ಹಾಕಿಕೋ. ಎಂದಿಗೂ ಬಾಡದ ಹಾರವಿದು’ ಎಂದು ಹಾರವನ್ನು ದೇವೇಂದ್ರನ ಕೊರಳಿಗೆ ಹಾಕುತ್ತಾರೆ.

ದೇವೇಂದ್ರ ದೂರ್ವಾಸರನ್ನು ಬೀಳ್ಕೊಟ್ಟು ಐರಾವತವೇರಿದ. ಆಗ ಏನಾಯಿತೋ ಇದ್ದಕ್ಕಿದ್ದಂತೆ ಈ ಹಾರವು ದೇವೇಂದ್ರನಿಗೆ ಅಷ್ಟು ಸರಿಕಾಣದೆ ಅದನ್ನು ಐರಾವತದ ಕೊರಳಿಗೆ ಹಾಕಿದ. ವೈಕುಂಠದಿಂದ ಇದನ್ನೆಲ್ಲ ಲಕ್ಷ್ಮೀಯು ನೋಡುತ್ತಾ ನಗುತ್ತಿದ್ದಳು. ಗ್ರಹಚಾರಕ್ಕೆ ದೂರ್ವಾಸರೂ ನೋಡಬೇಕೇ. ಆಗ ಐರಾವತವು ಮಂದಾರ ಹಾರವನ್ನು ಸೊಂಡಿಲಿನ ಮೂಲಕ ತೆಗೆದು ಬಾಯಿಗೆ ಇಟ್ಟು ನುಂಗುತ್ತದೆ. ಇದನ್ನೆಲ್ಲ ನೋಡುತ್ತಿದ್ದ ದೂರ್ವಾಸರಿಗೆ ಸಹಿಸಲಾರದ ಕೋಪ ಬರುತ್ತದೆ. ಎಲವೋ ಮದಾಂಧಾ. ನನಗೆ ನೀನು ಅವಮಾನ ಮಾಡಿದೆ. ನನ್ನ ತಪಸ್ಸಿಗೆ ಅವಮಾನಿಸಿದೆ. ಈ ಕ್ಷಣದಲ್ಲೇ ನಿನ್ನ ಗಜರಾಜನು ಹಾರವನ್ನು ನುಂಗಿದಂತೆ ನಿನ್ನ ಸರ್ವ ಸಂಪತ್ತು ಜಲಾಧಿ ವಾಸವಾಗಲಿ ಎಂದು ಶಾಪ ನೀಡಿದರು. ಇದು ಸಂತೃಪ್ತಿಯ ಅಹಂಕಾರದ ಒಂದು ದುರಂತದ ಮೂಲ. ಪುರಾಣ ಕಥೆಯು ಜೀವನದ ತತ್ತ್ವವಾದರ್ಶವನ್ನೇ  ಹೇಳಿದೆ ಎಂಬುದನ್ನು ನಾವಿಲ್ಲಿ ಕಾಣಬಹುದು. ಈ ಶಾಪವೇ ಸಮುದ್ರ ಮಥನಕ್ಕೊಂದು ಕಾರಣವಾಯಿತು.  ಅಂತಹ ದೇವ-ಸುರರ ಶ್ರಮದ ಸಮುದ್ರ ಮಥನದಲ್ಲಿ ಬಂದವಳೇ  ಲಕ್ಷ್ಮೀ ದೇವಿ.

ದೇವಾಸುರರಿಗೂ ಪ್ರಿಯವಾದ ಈ ದೇವಿಯ ಆರಾಧನೆ ಇಂದಿಗೂ ನಡೆಯುತ್ತಿದೆ. ಇಂತಹ ಶ್ರಾವಣ ಮಾಸದ ಶುಭ ಶುಕ್ರವಾರಗಳಲ್ಲಿ ವರ ಲಕ್ಷ್ಮೀಯಾಗಿ ಆರಾಧಿಸುತ್ತಾ ಬಂದಿದ್ದಾರೆ. ಎಲ್ಲ ಪ್ರಜೆಗಳಿಗೆ ಲಕ್ಷ್ಮೀ ಅನುಗ್ರಹ ಪ್ರಾಪ್ತಿಯಾಗಲಿ.

 

-ವಿದ್ವಾನ್‌ ಪ್ರಕಾಶ್‌ ಅಮ್ಮಣ್ಣಾಯ,ಕಾಪು

Advertisement

Udayavani is now on Telegram. Click here to join our channel and stay updated with the latest news.

Next