Advertisement

ದೇಣಿಗೆ ಸಂಗ್ರಹಿಸಿ ವನಮಹೋತ್ಸವ ಸಂಭ್ರಮ

07:01 PM Aug 27, 2021 | Team Udayavani |

ವರದಿ: ನಾಗರಾಜ ಹರಪನಹಳ್ಳಿ

Advertisement

ಕಾರವಾರ: ಇಲ್ಲಿನ ನಗರಸಭೆ ಘಜತ್ಯಾಜ್ಯ ವಿಲೇವಾರಿ ನಿರ್ಹಣೆಗೆ ಹೆಸರು ಮಾಡಿರುವಂತೆ, ರಸ್ತೆಬದಿಗೆ ಹಾಗೂ ಗಾರ್ಡನ್‌ಗಳಲ್ಲಿ ಸಸೀಕರಣ ಮಾಡುವ ಕಾರ್ಯಕ್ಕೂ ಮುಂದಾಗಿದೆ. ಇದರ ಫಲವಾಗಿ ನಗರದ ಹಲವು ಕಡೆ ಎರಡನೇ ತಲೆಮಾರಿನ ಸಸಿಗಳು ಈಗ ಗಿಡವಾಗಿ ನಗರದ ಹಲವು ಕಡೆ ನಳನಳಿಸುತ್ತಿವೆ.

ನಗರದಲ್ಲಿ 100 ವರ್ಷ, 40 ವರ್ಷ 60 ವರ್ಷಗಳಿಗೂ ಹಳೆಯದಾದ ಮರಗಳು ಭಾರೀ ಗಾಳಿ ಮಳೆಗೆ ಉರುಳಿ ಬಿದ್ದು, ಹಲವು ಸಮಸ್ಯೆಗಳನ್ನು ಮಳೆಗಾಲದಲ್ಲಿ ತರುತ್ತಿದ್ದವು. ಇದನ್ನು ಮನಗಂಡ ನಗರಸಭೆ ತೀರಾ ಹಳೆಯ ಮರಗಳಿಗೆ ಮುಕ್ತಿ ನೀಡಿತು. ಬೃಹದಾಗಿ ಬೆಳೆದು ಅದರ ಟೊಂಗೆಗಳು ರಸ್ತೆಯ ಮಧ್ಯಕ್ಕೆ ಸಹ ಚಾಚಿಕೊಂಡು ಸಂಚಾರಕ್ಕೆ ವ್ಯತ್ಯಯ ತರುತ್ತಿದ್ದವು. ಆಗ ನಗರಸಭೆ 2021 ರಲ್ಲಿ ಬೃಹತ್‌ ಮರಗಳ ಟೊಂಗೆ ಕಟಾವ್‌ ಹಾಗೂ ಮರಗಳ ಟ್ರಿಮ್‌ ಗೆ ಆದ್ಯತೆ ನೀಡಿ ಕೆಲಸ ಮಾಡಿತು.

ಈ ಪ್ರಕ್ರಿಯೆ ನಂತರ ನಗರದ ಹಲವು ರಸ್ತೆಗಳು ನೆರಳಿಲ್ಲದೆ ಬೋಳು ಬೋಳಾಗಿ ಕಾಣತೊಡಗಿದವು. ಅಲ್ಲದೇ ಏಪ್ರಿಲ್‌ -ಮೇ ಉರಿಬಿಸಿಲಿಗೆ ಜನ ಸಂಚರಿಸುವಾಗ ಕಷ್ಟ ಪಡುತ್ತಿರುವುದು ನಗರದ ಹಲವು ರಸ್ತೆ ಹಾಗೂ ಬಸ್‌ ನಿಲ್ದಾಣ ಮತ್ತು ಜಿಲ್ಲಾಧಿಕಾರಿ ಕಚೇರಿ ಬಳಿ ಕಂಡು ಬಂತು. ಆಗ ನಗರಸಭೆ ನಗರದ ರಸ್ತೆ ಬದಿ ಹಾಗೂ ರಸ್ತೆ ವಿಭಾಜಕ ಭಾಗದಲ್ಲಿ ಹೊಂದುವಂತಹ ಗಿಡಗಳನ್ನು ಬೆಳೆಸಲು ಆಲೋಚಿಸಿತು. ಇದರ ಹಿಂದೆ ಅಂದಿನ ಜಿಲ್ಲಾಧಿಕಾರಿ ಹರೀಶಕುಮಾರ್‌, ಮೊಹಮ್ಮದ್‌ ರೋಶನ್‌, ಪೌರಾಯುಕ್ತ ಆರ್‌.ಪಿ. ನಾಯ್ಕ ಹಾಗೂ ಡಿಎಫ್‌ಓ ವಸಂತ ರೆಡ್ಡಿ ಅವರ ಐಡಿಯಾ ಸಹ ಇತ್ತು.

ಅರಣ್ಯ ಇಲಾಖೆ ಉಚಿತವಾಗಿ ಸಸಿಗಳನ್ನು ನಗರಸಭೆಗೆ ನೀಡಿತು. ನಗರಕ್ಕೆ ಹೊಂದಿಕೊಳ್ಳುವಂತಹ ಗಿಡ ಮರಗಳನ್ನು ಬೆಳೆಸಲು ತಿರ್ಮಾನಿಸಿದ ನಗರಸಭೆ, ಸಸಿಗಳು ಬೆಳೆದು ಸಶಕ್ತವಾಗುವತನಕ ಸಸಿಗಳಿಗೆ ರಕ್ಷಣಾ ಕವಚ ಹಾಕಲು ಸಹ ಮುಂದಾಯಿತು. ರಕ್ಷಣಾ ಕವಚಕ್ಕೆ ತಗುಲವು ವೆಚ್ಚವನ್ನು ಸ್ವ ಇಚ್ಛೆಯಿಂದ ಮುಂದೆ ಬರುವ ಸಾರ್ವನಿಕರಿಂದ ದೇಣಿಗೆ ಸಂಗ್ರಹಿಸಿ, ಆ ಸಸಿಯನ್ನು ದೇಣಿಗೆ ಕೊಟ್ಟವರ ಹೆಸರಲ್ಲೇ ಸಂರಕ್ಷಿಸುವ ಯೋಜನೆ ಘೋಷಿಸಿತು. ಈ ಯೋಜನೆಯಿಂದ ಗಿಡ ಮುಂದೆ ಮರವಾದಾಗ ಆ ಮರವನ್ನು ಇಂಥವರು ಬೆಳೆಸಿದ್ದು ಎಂದು ಘೋಷಿಸಲು ನಗರಸಭೆ ತಿರ್ಮಾನಿಸಿತು. ಅಷ್ಟೇ ಅಲ್ಲ ರಕ್ಷಣಾ ಕವಚದ ಮೇಲೆ ದೇಣಿಗೆ ನೀಡಿದವರ ಹೆಸರು ಬರೆಸಲು ಮುಂದಾಯಿತು. ಅಲ್ಲದೇ ಸಸಿ ಬೆಳೆಸಿ, ಪೋಷಿಸುವ ಯೋಜನೆಯನ್ನು ಕಸ ಸಂಗ್ರಹದ ವಾಹನದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ ವ್ಯಾಪಾಕ ಪ್ರಚಾರ ಮಾಡಲಾಯಿತು.

Advertisement

ಕೋವಿಡ್‌ಜಾಗೃತಿ,ನಗರಸಭೆ ತೆರಿಗೆಮಾಹಿತಿಗಳನ್ನು ಹಾಗೂ ಆರೋಗ್ಯ ಮಾಹಿತಿಗಳನ್ನು, ನಿಷೇಧಾಜ್ಞೆ ಮಾಹಿತಿಗಳ ಪ್ರಚಾರಕ್ಕೆ ಕಸ ಸಂಗ್ರಹ ವಾಹನದ ಪ್ರಬಲ ಮಾಧ್ಯಮವಾಗಿದೆ. ನಗರಸಭೆ ಹಿಡಿತದಈಪ್ರಚಾರ ಮಾಧ್ಯಮದ ಮೂಲಕ ಸಸೀಕರಣ ಹಾಗೂ ಸಸಿಯ ಬೆಳವಣಿಗೆ ಜೊತೆ ದೇಣಿಗೆ ನೀಡಿದವರ ಹೆಸರು ಇಡಲು ನಿರ್ಧರಿಸಿದ್ದು, ಹಲವರನ್ನು ಆಕರ್ಷಿಸಿತು. ಪ್ರತಿ ಸಸಿಗೆ ಹೆಸರಿಡಬೇಕಾದರೆ, ದೇಣಿಗೆ 1000 ರೂ. ನೀಡಬೇಕು. ಇದು ಆಕರ್ಷಕ ಯೋಜನೆ ಆದ ಕಾರಣ ನಗರಸಭೆ ಸದಸ್ಯರು ತಮ್ಮ ತಮ್ಮ ಹೆಸರಲ್ಲಿ ಸಾವಿರ ರೂ. ದೇಣಿಗೆ ನೀಡಿ ಅವರ ಹೆಸರಿನಲ್ಲಿ ಒಂದೊಂದು ಸಸಿ ನೆಟ್ಟರು. ಇದನ್ನು ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಅನುಸರಿಸಿದರು.

ರಾಜ್ಯದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಸಹ ಕಾರವಾರಕ್ಕೆ ಭೇಟಿ ನೀಡಿದಾಗ ಅವರ ಹೆಸರಲ್ಲಿ ಸಸಿ ನೆಟ್ಟು ಸಾವಿರ ರೂ. ದೇಣಿಗೆ ನೀಡಿದರು. ಕಾರವಾರದಿಂದ ವರ್ಗಾವಣೆಯಾಗಿ ಹೋದ ಜಿಲ್ಲಾಧಿಕಾರಿ ಹರೀಶ ಕುಮಾರ್‌, ಸಿಇಒ ಎಂ.ರೋಶನ್‌, ಐಎಎಸ್‌ ಅಧಿಕಾರಿ ರವಿಶಂಕರ್‌, ಈಗಿನ ಜಿಪಂ ಸಿಇಒ ಪ್ರಿಯಂಕಾ ಸಹ ಸಾವಿರರೂ.ದೇಣಿಗೆನೀಡಿಸಸಿನೆಟ್ಟುಬೆಳೆಸುತ್ತಿರುವುದು ಕಾರವಾರದಲ್ಲಿ ಒಂದು ಆದರ್ಶವಾಗಿ ಮಾರ್ಪಟ್ಟಿದೆ.

ಕಳೆದ ವರ್ಷ 865 ಸಸಿ ನೆಟ್ಟರು: ಕಳೆದ ವರ್ಷ 2020ರಲ್ಲಿ ಕೋವಿಡ್‌ ಸಂಕಷ್ಟದ ನಡುವೆಯೂ 865 ಸಸಿಗಳನ್ನು ನೆಟ್ಟಿದ್ದು,ಅವುಗಳಲ್ಲಿ ಬಹುತೇಕ ಸಸಿಗಳು ಬೆಳೆಯುತ್ತಿವೆ. ಕಳೆದವರ್ಷಈ ಕಾರ್ಯಕ್ಕೆ ಸಾರ್ವಜನಿಕರಿಂದ65000 ರೂ. ದೇಣಿಗೆ ಬಂದಿತ್ತು. 2021 ಸಾಲಿನಲ್ಲಿ ಈಗಾಗಲೇ 500 ಸಸೀಕರಣ ಮುಗಿದಿದೆ. 1000 ಗಿಡಗಳನ್ನು ನೆಡುವ ಕಾರ್ಯ ಯೋಜನೆ ಜಾರಿಯಲ್ಲಿದೆ. ಈ ಕಾರ್ಯಕ್ಕೆ 2,78000.00 ರೂ, ದೇಣಿಗೆ ಬಂದಿದೆ. ರೋಟರಿ ಹಾಗೂ ಪಹರೆ ವೇದಿಕೆಈಕಾರ್ಯಕ್ಕೆ ಸಹಕಾರ ನೀಡಿವೆ. ಕಾರವಾರ ಕೋಡಿಬಾಗ ರಸ್ತೆಯ ಡಿವೈಡರ್‌ ಮಧ್ಯೆ ಅಶೋಕ ಸಸ್ಯಗಳು ಬೆಳೆದು ನಿಂತಿದ್ದು, ಇದಕ್ಕೆ ರೋಟರಿ ಕ್ಲಬ್‌ ಸದಸ್ಯರ ಹಾಗೂ ಪಹರೆ ವೇದಿಕೆ ಸಹಕಾರ ಮುಖ್ಯವಾದುದು. ರಸ್ತೆ ಬದಿ ಹೊರತುಪಡಿಸಿ ನಗರದ ವಿವಿಧ ವಾರ್ಡ್‌ಗಳಲ್ಲಿ ಅಗಲವಾದ ರಸ್ತೆಗಳ ಬದಿಗಳಲ್ಲಿ ಸಸಿಗಳನ್ನು ನೆಟ್ಟು ರಕ್ಷಿಸಲಾಗುತ್ತಿದೆ. ಅಲ್ಲದೇ ಗಾರ್ಡನ್‌ಗಳಲ್ಲಿ ಸಸಿಗಳನ್ನು ಹೊಸದಾಗಿ ಹಾಕಲಾಗಿದೆ. ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ ಜಾಗ ಬಿಟ್ಟು ವ್ಯವಸ್ಥಿವಾಗಿ ಸಸಿಗಳನ್ನು ‌ ನೆಡಲಾಗಿದೆ. ಅಲ್ಲದೇ ಬೇಸಿಗೆಯಲ್ಲಿ ಸಸಿಗಳಿಗೆ ಅಗತ್ಯ ನೀರು ಹಾಕಲು ಪ್ರತ್ಯೇಕ ‌ ಟ್ಯಾಂಕರ್‌ ಹಾಗೂ ಸಿಬ್ಬಂದಿ ಸಹ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಸಸಿಗಳನ್ನು ಪೋಷಿಸುವ ಪ್ರಜ್ಞೆ ಯುವಕರಲ್ಲಿ, ಯುವತಿಯರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next