Advertisement

Hunsur: ಮಹರ್ಷಿಗಳ ಆದರ್ಶಗಳನ್ನು ಸಾರುವ ಕಾರ್ಯಕ್ರಮವಾಗಲಿ: ಅಣ್ಣಯ್ಯನಾಯಕ

03:21 PM Oct 30, 2023 | Team Udayavani |

ಹುಣಸೂರು: ಮಹರ್ಷಿ ವಾಲ್ಮೀಕಿ ದರೋಡೆಕೋರರಲ್ಲ. ಅವರು ರಾಮಾಯಣ ರಚಿಸಿದ ಕರ್ತೃ ಎಂದು ತಾಲೂಕು ನಾಯಕ ಸಂಘದ ಅಧ್ಯಕ್ಷ ಅಣ್ಣಯ್ಯ ನಾಯಕ ಹೇಳಿದರು.

Advertisement

ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮಿಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಶೋಷಿತ ಸಮುದಾಯಗಳಲ್ಲಿ ಜನಿಸಿ ಕಷ್ಟಗಳನ್ನು ಅನುಭವಿಸಿ ಜ್ಞಾನ ಪಡೆದು ರಾಮಾಯಣವನ್ನು ರಚಿಸಿದರು. ಇವರು ರಚಿಸಿರುವ ರಾಮಾಯಣವನ್ನು ಅಥೈಸಿಕೊಂಡು ಸರಳ, ಸನ್ಮಾರ್ಗದಲ್ಲಿ ನಡೆದಲ್ಲಿ ಸುಖಿ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.

ಇಂತಹ ಮಹರ್ಷಿಯವರನ್ನು ಕೆಲವು ಪಟ್ಟಬದ್ರ ಹಿತಸಕ್ತಿಗಳು ದರೋಡೆಕೋರರಾಗಿದ್ದರೆಂದು ಬಿಂಬಿಸುತ್ತಿರುವುದು ಈ ಸಮುದಾಯಕ್ಕೆ ನೋವು ತಂದಿದೆ. ಮುಂದಾದರೂ ಅವರ ಆದರ್ಶಗಳನ್ನು ತಿಳಿಸಿ ಕೊಡುವ ಪ್ರಯತ್ನಗಳಾಗಲೆಂದು ಆಶಿಸಿದರು.

ಹಿರಿಯ ರಂಗಕರ್ಮಿ ಎಸ್.ಜಯರಾಂ ಮಾತನಾಡಿ, ರಾಮ, ಲಕ್ಷ್ಮಣ, ಸೀತೆಯರ ಆದರ್ಶ ಗುಣಗಳು ನಮ್ಮೆಲ್ಲರಿಗೂ ಮಾದರಿಯಾಗಿದ್ದು, ಮಹರ್ಷಿಗಳು ರಚಿಸಿರುವ ರಾಮಾಯಣವು ವಿಶ್ವಕ್ಕೆ ಉತ್ತಮವಾದ ಸಂದೇಶ ಸಾರಿದ್ದು, ಇಂತವರ ಕುರಿತು ಇಂದಿನ ಯುವ ಸಮುದಾಯ ಅರಿಯಬೇಕಿದೆ ಎಂದರು.

Advertisement

ದ.ಸಂ.ಸ ಮುಖಂಡ ನಿಂಗರಾಜ್‌ ಮಲ್ಲಾಡಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡುತ್ತಿದ್ದಾರೆ. ಆದರೆ ಇಂತಹ ಶೋಷಿತ ಸಮುದಾಯಗಳ ಸಮಸ್ಯೆಗಳು ಹಾಗೆಯೇ ಉಳಿದಿದ್ದು, ತಾಲೂಕಿನಲ್ಲಿ ಪರಿಶಿಷ್ಟ ಜಾತಿ-ಪಂಗಡದ ಸಮುದಾಯಗಳ ಭೂಮಿ, ಮೂಲಭೂತ ಸೌಲಭ್ಯಗಳ ಸಮಸ್ಯೆ ಇದೆ ಎಂದು ತಿಳಿಸಿದರು.

ವಾಲ್ಮೀಕಿ, ಬಾಬು ಜಗಜೀವನ ರಾಮ್ ಭವನ, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಹಲವಾರು ವರ್ಷಗಳಿಂದ ಬಗೆಹರಿಸಿಕೊಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡುತ್ತಾ ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ-ಪಂಗಡದ  ಮುಖಂಡರ ಸಭೆ ಕರೆದು ಆಧ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿದರು.

ಮುಖಂಡ ಪುಟ್ಟರಾಜು ಮಾತನಾಡಿ, ಪ್ರತಿಯೊಂದು ಜಯಂತಿ ಸಂದರ್ಭದಲ್ಲೂ ಮುಖಂಡರು ನೀಡುವ ಮನವಿಗಳು ಕಾರ್ಯಗತವಾಗಿಲ್ಲ. ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಿದಲ್ಲಿ ಸಣ್ಣ-ಪುಟ್ಟ ದ್ವನಿ ಇಲ್ಲದ ಸಮಾಜಗಳ ಸಮಸ್ಯೆಗಳು ನಿವಾರಿಸಬಹುದಾಗಿದೆ. ಆದರೆ ಅದಾಗುತ್ತಿಲ್ಲ.  ದ್ವನಿ ಇಲ್ಲದ ಶೋಷಿತ ಸಮಾಜಗಳ ಕಷ್ಟಗಳನ್ನು ಹೇಳಿಕೊಳ್ಳಲು ತಾಲೂಕಿನ ಶಾಸಕ ಜಿ.ಡಿ. ಹರೀಶ್‌ ಗೌಡರು ಬರುತ್ತಿಲ್ಲವೆಂಬ ಆಕ್ಷೇಪ ವ್ಯಕ್ತಪಡಿಸಿದರು.

ತಹಶೀಲ್ದಾರ್ ಡಾ.ಅಶೋಕ್ ಮಾತನಾಡಿ, ಶಾಸಕರು ಅನಾರೋಗ್ಯದಿಂದ ಜಯಂತಿಗೆ ಬರಲು ಸಾಧ್ಯವಾಗಿಲ್ಲ. ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದು ಬೇಡ. ಇಲ್ಲಿ ಸರಕಾರದ ವತಿಯಿಂದ ಜಯಂತಿ ಆಯೋಜಿಸಲಾಗಿದ್ದು, ಸಭೆಯನ್ನು ಬೇರೆಡೆಗೆ ಕೊಂಡೊಯ್ಯ ಬೇಡಿರೆಂಬ ಮನವಿಗೆ ಹಾಗಾದರೆ ಸಂಘ-ಸಂಸ್ಥೆಗಳವರನ್ನೇ ಏಕೆ ಕರೆದಿದ್ದೀರಾ? ಹೀಗಾದರೆ ಅಧಿಕಾರಿಗಳೇ ಜಯಂತಿಗಳನ್ನು ಮಾಡಿಕೊಳ್ಳಿರೆಂದು ಸಭೆಯಲ್ಲಿದ್ದ ಶ್ರೀನಿವಾಸ್, ಪ್ರಭಾಕರ್ ಸೇರಿದಂತೆ ಅನೇಕರು  ಬೇಸರ ವ್ಯಕ್ತಪಡಿಸಿದರು. ತಾಪಂ.ಇಓ ಮನು ಎಲ್ಲರನ್ನು ಸಮಾಧಾನಿಸಿದರು.

ನಂತರವಷ್ಟೆ ಶಾಸಕರು ಕಳುಹಿಸಿದ್ದ ಸಂದೇಶವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು ಶಾಸಕರು ಅನಾರೋಗ್ಯದಿಂದಾಗಿ ಜಯಂತಿಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಮುಂದೆ ಸಮಾಜದವರು ಆಯೋಜಿಸುವ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸೋಣವೆಂದು ಶಾಸಕ ಜಿ.ಡಿ.ಹರೀಶ್‌ಗೌಡರು ಕಳುಹಿಸಿದ್ದ ಸಂದೇಶ ಪತ್ರ ಓದಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಇಓ ಮನು ಬಿ.ಕೆ., ನಗರಸಭೆ ಪೌರಾಯುಕ್ತೆ ಎಂ.ಮಾನಸ, ಬಿ.ಇ.ಓ.ರೇವಣ್ಣ, ಎಇಇ ಬೋಜರಾಜ್, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಬಸವರಾಜು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ನಾಯಕ ಸಂಘದ ಗೌರವಾಧ್ಯಕ್ಷ ಚೌಡನಾಯಕ,   ಪ್ರಧಾನ ಕಾರ್ಯದರ್ಶಿ ಕಲ್ಕುಣಿಕೆರವಿ, ಮುಖಂಡರಾದ ಪ್ರಭಾಕರ್, ಪುರಸಭೆ ಮಾಜಿ ಸದಸ್ಯ ದೇವರಾಜು, ಮುಖಂಡರಾದ ಗೋವಿಂದನಾಯಕ, ಎಚ್.ಎಸ್. ವರದರಾಜು, ಪಿಎಲ್‌ಡಿ ಬ್ಯಾಂಕಿನ ಸತ್ಯನಾರಾಯಣ್, ದೇವೇಂದ್ರಕುಳುವಾಡಿ, ಬಲ್ಲೇನಹಳ್ಳಿಕೆಂಪರಾಜು, ಆದಿವಾಸಿ ಮುಖಂಡ ಶೇಖರ, ದೇವರಾಜು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಜಯರಾಮು, ಸುಬ್ಬರಾವ್, ರಾಚಪ್ಪ, ಉಪತಹಶೀಲ್ದಾರ್ ಶ್ರೀವಾಸ್ತವ್ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next