Advertisement

ಇದು ನನಗೆ ಬ್ರೇಕ್‌ ಕೊಡುವ ಸಿನಿಮಾ: ಗಾಳಿಪಟ-2 ಚೆಲುವೆ ವೈಭವಿ ಮಾತು…

11:08 AM Aug 09, 2022 | Team Udayavani |

“ರಾಜ್‌ ವಿಷ್ಣು ‘ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿದ ಚೆಲುವೆ ವೈಭವಿ ಶಾಂಡಿಲ್ಯ. ಇದೀಗ ಯೋಗರಾಜ್‌ ಭಟ್‌ ನಿರ್ದೇಶನದ, ಗಾಳಿಪಟ 2 ಚಿತ್ರದ ಮೂಲಕ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ನಾಯಕಿಯಾಗಿ ಮತ್ತೆ ಬೆಳ್ಳಿ ಪರೆದ ಮೇಲೆ ಬರಲು ಸಜ್ಜಾಗಿದ್ದಾರೆ. ಹಿಟ್‌ ಜೋಡಿಯ, ಸೂಪರ್‌ ಹಿಟ್‌ ಸರಣಿಯ ಭಾಗವಾಗಿರುವ ವೈಭವಿ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. “ಗಾಳಿಪಟ-2’ ಸಿನಿಮಾದ ಪಾತ್ರ, ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ…

Advertisement

ಭಟ್ಟರ ಗಾಳಿಪಟ-1 ಸಿನಿಮಾ ನೋಡಿದ್ದೀರಾ?

ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಆದರೆ ನಾನು ಮಾಡುವ ಚಿತ್ರದ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳುವುದು ನನ್ನ ಮೊದಲ ಆದ್ಯತೆ ಆಗಿತ್ತು. ಹಾಗಾಗಿ ನಾನು ಗಾಳಿಪಟ ಚಿತ್ರವನ್ನು ನೋಡಿದೆ. ಮೊದಲ ಬಾರಿಗೆ ಚಿತ್ರವನ್ನು ಸಬ್‌ಟೈಟಲ್‌ ಜೊತೆ ನೋಡಿ ನಂತರ ಮತ್ತೂಮ್ಮೆ ಹಾಗೆ ನೋಡಿದೆ. ಇದರಿಂದ ನನಗೆ ಗಾಳಿಪಟ ಸಿನಿಮಾ ಒಂದು ಸುಂದರವಾದ ಫ್ಯಾಮಿಲಿ ಡ್ರಾಮಾ ಹಾಗೂ ಸಾಕಷ್ಟು ಎಲಿಮೆಂಟ್‌ ಇರುವ ಚಿತ್ರ ಎನಿಸಿತು. ಹಾಗೇ ಚಿತ್ರ ನೋಡಿದ್ದರಿಂದ ನಿರ್ದೇಶಕರ ವರ್ಕಿಂಗ್‌ ಸ್ಟೈಲ್‌ ಬಗ್ಗೆ ತಿಳಿದುಕೊಳ್ಳಲು ಸಹಾಯವಾಯಿತು.

“ಗಾಳಿಪಟ-2′ ಚಿತ್ರದಲ್ಲಿ ನಿಮ್ಮ ಪಾತ್ರ?

ಗಾಳಿಪಟ-2 ನನ್ನ ಎರಡನೇ ಕನ್ನಡ ಚಿತ್ರ. ಶ್ವೇತಾ ಅನ್ನುವ ಚಿಕ್ಕ ಪಟ್ಟಣದ ಸಾಮಾನ್ಯ ಹುಡುಗಿಯ ಪಾತ್ರ ನನ್ನದು. ಕನ್ನಡ ಸಾಹಿತ್ಯದ ವಿದ್ಯಾರ್ಥಿನಿಯಾದ ಶ್ವೇತಾಳಿಗೆ ಭಾಷೆಯ ಮೇಲೆ ಅಪಾರವಾದ ಪ್ರೀತಿ. ಶಾಂತ ಸ್ವಭಾವದ, ಪ್ರಬುದ್ಧ ವ್ಯಕ್ತಿತ್ವದ ಹುಡುಗಿ ಪಾತ್ರ ನನ್ನದು.

Advertisement

ಯೋಗರಾಜ್‌ ಭಟ್‌ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಯೋಗರಾಜ್‌ ಭಟ್‌ ಅವರ ಜೊತೆ ಕೆಲಸ ಮಾಡಿದ್ದು ಬಹಳ ಸಂತಸದ ಸಂಗತಿ. ಅವರು ಬರೆಯುವ ಪ್ರತಿಯೊಂದು ಸಾಲುಗಳು ಅದ್ಭುತವಾಗಿದ್ದು, ಮುತ್ತು ಪೋಣಿಸಿದಂತಿತ್ತು. ಆ ಸಾಲುಗಳನ್ನು ಅಚ್ಚುಕಟ್ಟಾಗಿ ತಪ್ಪಿಲ್ಲದೆ ಹೇಳುವ ಸವಾಲು ನನಗಿತ್ತು. ಹಾಗಾಗಿ ಒಂದು ದಿನ ಮೊದಲೇ ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡುತ್ತಿದ್ದೆ. ನನ್ನ ಕಡೆಯಿಂದ ಬೆಸ್ಟ್‌ ಕೊಡಬೇಕು ಎಂದು ನಿರ್ಧರಿಸಿ ಅಭಿನಯಿಸುತ್ತಿದ್ದೆ.

ಚಿತ್ರದ ಅನುಭವ ಹೇಗಿತ್ತು?

ಚಿತ್ರದಲ್ಲಿ ಸಾಕಷ್ಟು ಅನುಭವಿ ನಟ-ನಟಿಯರು ಅಭಿನಯಿಸಿದ್ದು, ಅವರೊಡನೆ ನಟಿಸಲು ನನಗೆ ಅವಕಾಶ ಸಿಕ್ಕಿದ್ದು ಖುಷಿಯ ಸಂಗತಿ. ಅದರಲ್ಲೂ ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಅವರ ಕಾಂಬಿನೇಷನ್‌ನಲ್ಲಿ ಅಭಿನಯಿಸಿದ್ದು ಖುಷಿಯ ವಿಷಯ. ಹಾಗೇ ನನಗೆ ಚಿತ್ರದಲ್ಲಿ ಒಳ್ಳೆ ಸ್ಪೇಸ್‌ ಕೂಡಾ ಸಿಕ್ಕಿದೆ. ನಟನೆಗೆ ಒಳ್ಳೆಯ ಸ್ಕೋಪ್‌ ಇತ್ತು. ಗಾಳಿಪಟ 2 ಕನ್ನಡ ಚಿತ್ರರಂಗದಲ್ಲಿ ಮುಂದುವರಿಯಲು ಸಿಕ್ಕ ಬ್ರೇಕ್‌, ಉತ್ತಮ ಅವಕಾಶ ಎಂದರೆ ತಪ್ಪಾಗಲಾರದು.

 ಮುಂದಿನ ನಿಮ್ಮ ಪ್ರಾಜೆಕ್ಟ್ ?

ಸದ್ಯ ಮಾರ್ಟಿನ್‌ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರ ಕೊನೆಯ ಹಂತದ ಚಿತ್ರೀಕರಣ ಬಾಕಿ ಇದೆ. ಇನ್ನು ಸಾಕಷ್ಟು ನಿರ್ದೇಶಕರು-ನಿರ್ಮಾಪಕರ ಜೊತೆಗೆ ಮುಂದಿನ ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುವ ಅವಕಾಶಗಳು ಒದಗಿ ಬರುತ್ತಿದೆ. ನಾನು ಬೇರೆ ಭಾಷೆಯಿಂದ ಬಂದವಳಾದರೂ ಕನ್ನಡಿಗರು ನನ್ನ ಮೇಲೆ ಇಷ್ಟೊಂದು ಪ್ರೀತಿ ಅಭಿಮಾನ ತೋರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next