Advertisement

ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಕಡ್ಡಾಯವೇ ಅಸ್ತ್ರ 

11:40 PM Jul 29, 2021 | Team Udayavani |

ಕೊರೊನಾ ಸಾಂಕ್ರಾಮಿಕವು ಕಳೆದ ನೂರು ವರ್ಷಗಳಲ್ಲಿ ನಾವು ಕಂಡ ಇತರ ಯಾವುದೇ ಸಾಂಕ್ರಾಮಿಕದಂತೆ ಇಲ್ಲ.  ಇದು ನಮ್ಮ ಜಗತ್ತನ್ನು ತಿರುಗು- ಮುರುಗಾಗಿಸಿದೆ. ಜತೆಗೆ ಆರೋಗ್ಯ ವ್ಯವಸ್ಥೆ, ಜನರ ಜೀವನೋ ಪಾಯ ಮತ್ತು ನಮ್ಮ ದೇಶದ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ ಮತ್ತು ತೊಂದರೆಗೀಡು ಮಾಡಿದೆ. ಎರಡನೇ ಅಲೆ ದುರಂತಮಯವಾಗಿತ್ತು. ಇದಕ್ಕೆ ಕಾರಣ ದಿನಕ್ಕೆ ಸುಮಾರು 4,00,000 ಪ್ರಕರಣಗಳು ಮತ್ತು 4000 ಸಾವು ವರದಿಯಾಗಿತ್ತು. ಇದು ನಮ್ಮ ದೇಶದ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಲುಗಾಡಿಸಿತು.

Advertisement

ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಕೊರೊನಾ ತಡೆ ನಿಯಮಗಳು ಅತ್ಯಂತ ಸರಳ, ಕಡಿಮೆ ವೆಚ್ಚದ ಮತ್ತು ಅತ್ಯಂತ ಪರಿಣಾಮ ಕಾರಿ ಸಾಧನಗಳಾಗಿವೆ ಎಂಬುದು ನಮಗೆ ತಿಳಿದಿದೆ. ನಿಯಂತ್ರಣ ಮತ್ತು ಕಾನೂನು ಜಾರಿ ಸಂಸ್ಥೆಗಳು ಕೊರೊನಾ ತಡೆ ನಿಯಮಗಳನ್ನು ಅತ್ಯಂತ ಜಾಗರೂಕತೆಯಿಂದ ಜಾರಿಗೆ ತರಬೇಕು. ಈ ನಿಯಮಗಳನ್ನು ಉಲ್ಲಂ  ಸಿದರೆ ಭಾರೀ ಮೊತ್ತದ ದಂಡಗಳನ್ನು ವಿಧಿಸಬೇಕು. ಈ ಕ್ರಮವು ಭವಿಷ್ಯದ ಅಲೆಗಳ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ದುರದೃಷ್ಟವಶಾತ್‌, ಮೊದಲ ಎರಡೂ ಅಲೆಗಳ ಸಮಯದಲ್ಲಿ, ಸಾರ್ವಜನಿಕರು ಕೊರೊನಾ ತಡೆ ನಿಯಮಗಳನ್ನು ಸಂಪೂರ್ಣವಾಗಿ ಅವಗಣಿಸಿ ದ್ದರಿಂದ ಲಾಕ್‌ಡೌನ್‌ ಹೇರಬೇಕಾಯಿತು. ಇದು ಸ್ವತಃ ವಿನಾಶಕಾರಿ ಪರಿಣಾಮಗಳನ್ನು ಬೀರಿತು. ಈ ಲಾಕ್‌ಡೌನ್‌ನಿಂದಾಗಿ ಸುಮಾರು 1.40 ಕೋಟಿ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ.  ಸಂಪೂರ್ಣ ಲಾಕ್‌ಡೌನ್‌ ಸಮಯದಲ್ಲಿ ಪ್ರತೀ ದಿನ ಸುಮಾರು 32,000 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸರಳ ಅಂಕ ಗಣಿತದ ಲೆಕ್ಕಾಚಾರದ ಪ್ರಕಾರ ನಮ್ಮ ಇಡೀ ವಯಸ್ಕ ಜನಸಂಖ್ಯೆಗೆ ಪೂರ್ಣ ಎರಡು ಡೋಸ್‌ ಲಸಿಕೆ ಕೊಡಲು 180 ಕೋಟಿ ರೂ.ಗಳನ್ನು ಮಾತ್ರ ವೆಚ್ಚ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ, 90 ಕೋಟಿ ವಯಸ್ಕರಿಗೆ ಪ್ರತೀ ಡೋಸ್‌ಗೆ 1,000 ರೂ.ನಂತೆ ವೆಚ್ಚ ಮಾಡಿದರೆ ಇಷ್ಟು ವೆಚ್ಚ ವಾಗುತ್ತದೆ. ಈ ಮೊತ್ತವು ಲಾಕ್‌ಡೌನ್‌ನ ಒಂದು ವಾರ ಆಗುವ ನಷ್ಟಕ್ಕಿಂತ ಬಹಳ ಕಡಿಮೆ.  ಆದ್ದರಿಂದ, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಲಾಕ್‌ಡೌನ್‌ ಉತ್ತರವಲ್ಲ ಎಂಬುದು ಖಂಡಿತವಾಗಿಯೂ ಸ್ಪಷ್ಟವಾಗಿದೆ.

ಮಾನವ ನಡವಳಿಕೆಯನ್ನು ಮಾರ್ಪಡಿಸುವ ಮತ್ತು ಕೊರೊನಾ ತಡೆ ನಿಯಮಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳನ್ನು ನಮ್ಮ ಶಕ್ತಿ ಮೀರಿ ಮಾಡಬೇಕು. ಜತೆಗೆ, ಸೀಮಿತ ಅವಧಿಯಲ್ಲಿ ಸಾಮೂಹಿಕ ಲಸಿಕೆ ಹಾಕುವ ಕೆಲಸವನ್ನು ಮಾಡಬೇಕು. ಆದಾಗ್ಯೂ, ನಮ್ಮ ಅನುಭವವನ್ನೇ ನೋಡಿ ಹೇಳುವುದಾದರೆ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಪಡೆಯಲು ಈಗಲೂ ಹಿಂಜರಿಕೆ ಇದೆ. ಹೀಗಾಗಿ ಇಲ್ಲಿ ಲಸಿಕೆ ನೀಡುತ್ತಿರುವ ಪ್ರಮಾಣವೂ ಅತ್ಯಂತ ಕಡಿಮೆ ಇದೆ. ಲಸಿಕೆ ಕೊಡುವ ಪ್ರಕ್ರಿಯೆ ಶುರುವಾಗಿ ಈಗಾಗಲೇ 6 ತಿಂಗಳುಗಳಾಗಿವೆ. ಇದುವರೆಗೆ 36 ಕೋಟಿ ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ. ಅಲ್ಲದೇ ಕೇವಲ ಶೇ.6.82 ಕೋಟಿ ಜನರಿಗೆ (ಶೇ.5ರಷ್ಟು ಜನಸಂಖ್ಯೆ) ಮಾತ್ರ ಎರಡೂ ಡೋಸ್‌ ನೀಡಲಾಗಿದೆ.

ಲಸಿಕೆಗಳ ನಿಧಾನಗತಿಯ ಬಗ್ಗೆ ಹೆಚ್ಚಿನ ಸಾರ್ವಜನಿಕ ಚರ್ಚೆಯಾಗಿದೆ. ಅಂದರೆ ಲಸಿಕೆಗಳ ಕೊರತೆ, ಮೂಲಸೌಕರ್ಯದ ಕೊರತೆ, ಸಾಗಾಟ ಮತ್ತು ಲಸಿಕೆಯ ಸಮಾನ ಲಭ್ಯತೆಯಂಥ ಪೂರೈಕೆ ಕಡೆಯ ಅಡೆತಡೆಗಳ ಸುತ್ತ ಕೇಂದ್ರೀಕೃತವಾಗಿದೆ. ಇನ್ನು ಬೇಡಿಕೆ ಕಡೆಯಲ್ಲಿ ಹೇಳುವುದಾದರೆ ಲಸಿಕೆ ಪಡೆಯಲು ಹಿಂಜರಿಕೆ ಸೇರಿದಂತೆ ಇತರ ಕಾರಣಗಳ ಬಗ್ಗೆ ಕಡಿಮೆ ಚರ್ಚೆಯಾಗಿದೆ. ಕೊರೊನಾ ಬರುವ ಮೊದಲೇ ಜಾಗತಿಕ ಆರೋಗ್ಯಕ್ಕೆ ಇರುವ ಪ್ರಮುಖ 10 ಅಪಾಯಗಳಲ್ಲಿ ಲಸಿಕೆ ಪಡೆಯುವಲ್ಲಿನ ಹಿಂಜರಿಕೆಯೂ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿತ್ತು.

Advertisement

ಭಾರತದಲ್ಲಿ ಲಸಿಕೆ ಪಡೆಯುವಲ್ಲಿನ ಹಿಂಜರಿಕೆಗೆ ದಾರಿ ತಪ್ಪಿಸುವಿಕೆ ಮತ್ತು ತಪ್ಪು ಮಾಹಿತಿಯೇ ಕಾರಣವಾಗಿದೆ. ಹೀಗಾಗಿಯೇ ಈ ಹಿಂಜರಿಕೆಯು ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಇರುವ ದೊಡ್ಡ ಅಡ್ಡಿಯಾಗಿದೆ.  ಹೀಗಾಗಿ ಬಿಲಿಯನ್‌ ಡಾಲರ್‌ ಪ್ರಶ್ನೆ ಏನು ಎಂದರೆ ನಾವು ಲಸಿಕೆಯನ್ನು ಸಾರ್ವತ್ರಿಕವಾಗಿ ಅಥವಾ ಕನಿಷ್ಠ ಆಯ್ದ ಜನಸಂಖ್ಯೆಯ ಗುಂಪಿನಲ್ಲಿ ಕಡ್ಡಾಯಗೊಳಿಸಬೇಕೇ ಅಥವಾ ನಾಗರಿಕರಿಗೇ ನಿರ್ಧರಿಸಲು ಆಯ್ಕೆಯಾಗಿ ಬಿಡಬೇಕೇ ಎಂಬುದಾಗಿದೆ.

ಒಂದು ಪ್ರಮುಖ ವಿಷಯವೆಂದರೆ ಪ್ರಸ್ತುತ ಲಭ್ಯವಿರುವ ಎಲ್ಲ ಲಸಿಕೆಗಳು ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೇ ಸಾಕಷ್ಟು ಸುರಕ್ಷಿತವಾಗಿವೆೆ. ಲಸಿಕೆ ಪಡೆದ ಜನರು, ಲಸಿಕೆ ಪಡೆಯದವರಿಗಿಂತ ಕೊರೊನಾ ಮತ್ತು ಇತರ  ಗಂಭೀರ ರೋಗಕ್ಕೆ ತುತ್ತಾಗುವ ಅಪಾಯ ಕಡಿಮೆ ಎಂಬುದನ್ನು ಪ್ರಯೋಗಗಳು ತೋರಿಸಿವೆ. ಸಾವಿರಾರು ಸ್ವಯಂಸೇವಕರನ್ನು ಒಳಗೊಂಡ ವೈದ್ಯಕೀಯ ಪ್ರಯೋಗಗಳ ಪ್ರಕಾರ, ಲಸಿಕೆ ಪಡೆದವರಲ್ಲಿ ಕೊರೊನಾದ ಅಪಾಯವನ್ನು ಶೇ.70-95ನಷ್ಟು ಕಡಿಮೆ ಮಾಡಿದೆ ಎಂದು ತೋರಿಸಿದೆ. ಆದ್ದರಿಂದ ಲಸಿಕೆಯ ಸುರಕ್ಷತೆ, ಸಾಮರ್ಥ್ಯ ಮತ್ತು ಪರಿಣಾಮಕತ್ವವು ಲಸಿಕೆಯ ಹಿಂಜರಿಕೆಗೆ ಯಾವುದೇ ಅವಕಾಶವನ್ನು ನೀಡಬಾರದು. ಸಾರ್ವಜನಿಕ ಹಿತಾಸಕ್ತಿಗಾಗಿ ಈ ಹಿಂಜರಿಕೆಯನ್ನು ನಿವಾರಿಸಲು ಕಡ್ಡಾಯ ಲಸಿಕೆಯ ಅಗತ್ಯವಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಲಸಿಕೆಯನ್ನು ಕಡ್ಡಾಯಗೊಳಿಸುವುದರ ಜತೆಗೆ, ನಾವು ಮೊದಲಿಗೆ ಕೊರತೆಯಾಗದ ರೀತಿ ಪೂರೈಕೆ, ಪೂರೈಕೆಯ ಸರಪಳಿಯ ನಿರ್ವಹಣೆ ಮತ್ತು ಅರ್ಹ ಜನಸಂಖ್ಯೆಗೆ ಲಸಿಕೆ ನೀಡಲು ಬೇಕಾದ ಮೂಲ ಸೌಕರ್ಯವಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ವಿವಿಧ ಹಂತಗಳಲ್ಲಿ ನೈತಿಕ, ಪಾರದರ್ಶಕತೆಯ ಮೂಲಕ ವೈಜ್ಞಾನಿಕ ದತ್ತಾಂಶವನ್ನು ಸಾರ್ವಜನಿಕರ ಮುಂದಿಟ್ಟು ಅವರ ನಂಬಿಕೆಯನ್ನು ಗಳಿಸಿಕೊಳ್ಳಬೇಕು

ಕಡ್ಡಾಯ ಲಸಿಕೆಗಳ ಕೆಲವು ನಿರ್ದಿಷ್ಟ  ಕ್ಷೇತ್ರಗಳನ್ನು ನೋಡೋಣ. ಆರೋಗ್ಯ ಕ್ಷೇತ್ರ ಮತ್ತು ಇತರ ಮುಂಚೂಣಿ ಕಾರ್ಯಕರ್ತರು ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದನ್ನು ಕಡ್ಡಾಯ ಮಾಡಬೇಕು ಮತ್ತು ಲಸಿಕೆ ಹಾಕಿಸಿಕೊಳ್ಳದಿದ್ದರೆ ರೋಗಿಯ ಆರೈಕೆ ಪ್ರದೇಶಗಳಲ್ಲಿ ಕೆಲಸ ಮಾಡಲು ಒಪ್ಪಿಗೆ ಕೊಡಬಾರದು. ಲಸಿಕೆ ಪಡೆದ ಅನಂತರ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗಲುವ, ಮರಣಕ್ಕೀ ಡಾಗಿರುವ ದರ ತುಂಬಾ ಕಡಿಮೆ ಇದೆ ಎಂಬುದನ್ನು ನಮ್ಮಲ್ಲಿರುವ ದತ್ತಾಂಶಗಳೇ ಸಾಬೀತು ಮಾಡಿವೆ.

ಶಾಲೆಗಳು: ಎಲ್ಲ ಶಿಕ್ಷಕರು ಮತ್ತು ಶಾಲೆಯಲ್ಲಿನ ಇತರ ವಯಸ್ಕ ಸಿಬಂದಿ ಲಸಿಕೆ ತೆಗೆದುಕೊಳ್ಳಬೇಕು. ಈ ಮೂಲಕ ಅವರ ನಡುವೆಯೇ ಕೊರೊನಾ ಹರಡದಂತೆ ಮತ್ತು ಮಕ್ಕಳಿಗೂ ಹರಡಿಸದಂತೆ ನೋಡಿಕೊಳ್ಳಬಹುದು.

ಸಾಮಾನ್ಯ ಜನತೆ: ಸಾಮಾನ್ಯವಾಗಿ ಎಲ್ಲ ಜನರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ನಿಯಮ ಮಾಡುವುದು ವಿರಳ. ಆದರೆ ಈಗ ಉದ್ಭವವಾಗಿರುವ ಸಾಂಕ್ರಾಮಿಕವನ್ನು ನಿಯಂತ್ರಣ ಮಾಡುವ ದೃಷ್ಟಿ ಯಿಂದ ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಇಂಥ ಕಠಿನ ನಿರ್ಧಾರ ತೆಗೆದು ಕೊಳ್ಳಲೇಬೇಕಾಗಿದೆ. ನಾನು ಕೂಡ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕು ಎಂಬುದನ್ನು ನಂಬುತ್ತೇನೆ. ಆದರೆ ಇದು ಲಭ್ಯತೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಅಂದರೆ ಯಾವ ಜನತೆ ದೊಡ್ಡ ಗುಂಪಿನೊಂದಿಗೆ ಸೇರುತ್ತಾರೋ ಅಂದರೆ ಪ್ರಯಾಣಿಕರು, ಕಚೇರಿಗೆ ತೆರಳುವವರು ಮತ್ತು ಗುಂಪಾಗಿ ಸೇರುವಂಥವರಿಗೆ, ಕೆಳವರ್ಗದ ಸಾಮಾಜಿಕ- ಆರ್ಥಿಕ ವಸತಿ ಗೃಹಗಳಲ್ಲಿ ಇರುವಂಥವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಈ ರೀತಿ ಮಾಡಿದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಒಂದು ಗೇಮ್‌ ಚೇಂಜರ್‌ ಆಗಲಿದೆ. ಈ ಸಾಂಕ್ರಾಮಿಕ ರೋಗದಲ್ಲಿ “ಎಲ್ಲರೂ ಸುರಕ್ಷಿತವಾಗಿರುವವರೆಗೆ ಯಾರೂ ಸುರಕ್ಷಿತರಲ್ಲ’ ಎಂಬ ಹೇಳಿಕೆಗಿಂತ ಹೆಚ್ಚು ಸತ್ಯವಾದುದು ಯಾವುದೂ ಇರಲಾರದು ಮತ್ತು ಲಸಿಕೆಗೆ ಅರ್ಹರಾದ ಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯ ಲಸಿಕೆ ಹಾಕುವ ಮೂಲಕ ಮಾತ್ರ ಇದನ್ನು ಸಾಧಿಸಬಹುದಾಗಿದೆ.

 

ಡಾ| ಸುದರ್ಶನ್‌ ಬಲ್ಲಾಳ್‌

ಮಣಿಪಾಲ್‌ ಆಸ್ಪತ್ರೆಗಳ ಸಮೂಹದ ಅಧ್ಯಕ್ಷರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next