Advertisement

UV Fusion: ಉರಿ ಬಿಸಿಲೂ, ಮೊದಲ ಮಳೆಗೇ ಶಾಪವಿಡುವ ನಾವೂ!

03:38 PM Apr 17, 2024 | Team Udayavani |

ಕಳೆದ ಎರಡು ಮೂರು ತಿಂಗಳ ರಾಕ್ಷಸ ಬಿಸಿಲ ಬೇಗೆಗೆ ನಾವು ಬಳಲಿ ಬೆಂಡಾಗಿದ್ದೇವೆ.  ಬಿಳಿ ಚರ್ಮವನ್ನು ಹೊತ್ತು ತಿರುಗುತ್ತಿದ್ದವರೆಲ್ಲಾ ತಮ್ಮ ಮುಖದ ಕಾಂತಿಯ ಬಗ್ಗೆಯೇ ಚಿಂತಿಸುತ್ತಿದ್ದಾರೆ. ಇನ್ನೂ ನಮ್ಮಂತಹ ಕೃಷ್ಣವರ್ಣಿಯರ ಕಥೆಯನ್ನಂತೂ ಹೇಳುವುದೋ ಬೇಡವೋ ಎಂಬ ದ್ವಂದ್ವ ಮನಃಸ್ಥಿತಿ. ರೂಪದ ಮೇಲೆ ಅಷ್ಟೊಂದು ಕಾಳಜಿ ಇಲ್ಲದಿದ್ದರೂ  ಈ ವರುಷದ ಬಿಸಿಲು ಆ ಕಾಳಜಿಯೂ ಅನಿವಾರ್ಯ ಎಂಬುದನ್ನು ಕಲಿಸಿಯೇ ಬಿಟ್ಟಿದೆ.

Advertisement

ರೂಪದ ವಿಚಾರ ಒಂದು ಕಡೆಯಾದರೆ ಕುಡಿದಷ್ಟೂ ತೀರದ ದಾಹ ಇನ್ನೊಂದು ಕಡೆ.  ಕುಡಿದ ತಂಪು ಪಾನೀಯಗಳೆಷ್ಟೋ, ಕಸದ ಬುಟ್ಟಿಗೆ ಎಸೆದ ಬಿಸ್ಲೆರಿ ಬಾಟಲಿಗಳೆಷ್ಟೋ ಒಂದಕ್ಕೂ ಸರಿಯಾದ ಲೆಕ್ಕವನ್ನು ಕೊಡವುದಕ್ಕೆ ಈ ಬಾರಿ  ಅಸಮರ್ಥನಾಗಿ ಹೋಗಿರುವೆ. ಕೋಟಿ ಸೂರ್ಯ ಪ್ರಕಾಶ ಎಂದರೆ ಈ ವರುಷದ ಬಿಸಿಲೇ ಇರಬಹುದೆಂಬ ಆಲೋಚನೆ ಕೆಲವೊಮ್ಮೆ ನನ್ನ ಸ್ಮೃತಿಪಟಲದಲ್ಲಿ ಹಾದು ಹೋಗುತ್ತಿತ್ತು. ನಾವಿರುವ ಗ್ರಹ ಭೂಮಿಯೇ ಅಲ್ಲಾ ಸೂರ್ಯನ  ಆಪ್ತ ಬುಧ ಗ್ರಹವೇ ಎಂಬ ಸಂಶಯವೂ ಆಗಾಗ ಮೂಡುತ್ತಿತ್ತು!

ಮೇಲಿನ ಬಿಸಿಲು ಹಾಗಿರಲಿ ಸೂರ್ಯನ ಪ್ರಖರತೆಗೆ ನಡೆದಾಡುವ ರಸ್ತೆಗಳು ಕೂಡ ಕಾದ ಕಾವಲಿಯಂತಿವೆ. ಒಟ್ಟಿನಲ್ಲಿ ಅತ್ತ ,ಇತ್ತ , ಸುತ್ತಮುತ್ತ ಎತ್ತೆತ್ತ ನೋಡಿದರತ್ತ ಬಿಸಿಲೇ ಬಿಸಿಲು. ಕೆಲವೊಮ್ಮೆ ಈ ಉರಿಬಿಸಿಲು ದೇಹವನ್ನು ಅಪ್ಪಿ ಹಿಡಿದು ಮುದ್ದಾಡಿದ ಅನುಭವವಾಗುತ್ತದೆ. ಪಾಪ ಬಿಸಿಲು ಪ್ರೀತಿಯಿಂದ ಮುದ್ದು ಮಾಡಿದ್ದಿರಬಹುದು. ಆದರೆ ಈ ದೇಹ ಆ ಪ್ರೀತಿಯನ್ನು ಸಹಿಸಿಕೊಳ್ಳುವುದಾದರೂ ಎಂತು?!

ಎಲ್ಲಿಗೆ ಹೋದರೂ ಬೆನ್ನು ಬಿಡದ ಬೇತಾಳದಂತೆ ಈ ಬಿಸಿಲು ನಮ್ಮನ್ನೇ ಹಿಂಬಾಲಿಸುತ್ತಿದೆ.  ಒಮ್ಮೆ ತರಗತಿಯನ್ನು ಸೇರಿ ಆರಾಮದ ನಿಟ್ಟುಸಿರು ಬಿಡಬೇಕೆಂದು ದೇಹ ಹಪಹಪಿಸುತ್ತದೆ. ಆದರೆ ನಮ್ಮ ಹಣೆಬರಹಕ್ಕೆ ಹೊಣೆ ಯಾರು? ಒಂದು ಗಳಿಗೆ ಕುಳಿತರೂ  ಸಾಕು ದೇಹದ ಸೂಕ್ಷ್ಮಾತಿ ಸೂಕ್ಷ್ಮ ರಂಧ್ರಗಳು ಧಾರಾಕಾರವಾಗಿ ಬೆವರನ್ನು ಹೊರಸೂಸುತ್ತಿದ್ದವು. ಫ್ಯಾನ್‌ಗಳು ಅದರ ಪಾಡಿಗೆ ತನ್ನ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರೂ ಬಿಸಿಲಿನ ತಾಪವನ್ನು  ಎದುರಿಸುವ ಸಾಮರ್ಥ್ಯ ಅವುಗಳಿಗಿರಲಿಲ್ಲ. ಉಟ್ಟ ಬಟ್ಟೆಯೆಲ್ಲಾ ಬೆವರಿನಲ್ಲಿ ತೊಯ್ದು ಹೋಗಿದ್ದವು.

ನಿರಾಸಕ್ತ ಕಣ್ಣುಗಳು ಮೆಲ್ಲನೆ ಕಿಟಕಿಯಿಂದ ಹೊರಗಡೆ ಇಣುಕತೊಡಗಿದ್ದವು. ಸಮೀಪದಲ್ಲೇ ಇದ್ದ ಬಾದಾಮಿಯ ಮರವೊಂದು  ಯಾವುದೇ ರೀತಿಯ ಅಲುಗಾಟವಿಲ್ಲದೇ ಮಾನವ ಸಮುದಾಯಕ್ಕೆ ಬುದ್ಧಿ ಕಲಿಸಲೇಬೇಕು ಎಂಬ ದೃಢ ಸಂಕಲ್ಪವನ್ನು ಹೊತ್ತು ನಿಂತಂತೆ ನನಗೆ ಭಾಸವಾಗತೊಡಗಿತು. ಆ ಮರವಾದರೂ ಸ್ವಲ್ಪ ಕರುಣೆ ತೋರಿದ್ದರೆ ಸ್ವಲ್ಪವಾದರೂ ಸಮಾಧಾನವಾಗುತ್ತಿತ್ತೋ ಏನೋ? ಕಣ್ಣುಗಳು ಮತ್ತೆ  ಪಾಠದತ್ತ ಮರಳುವಾಗ ತರಗತಿಯೊಳಗೆ ಉಪನ್ಯಾಸಕರ ಆಗಮನವಾಗಿತ್ತು. ಆವತ್ತಿನ ತರಗತಿಗಳೆಲ್ಲಾ ಮಗಿದ ಬಳಿಕ ವಸತಿನಿಲಯಕ್ಕೆ ಮರಳಲು ಯಾಕೋ ಮನಸಾಗಲಿಲ್ಲ, ನೇರ ಬಸ್ಸು ಹಿಡಿದು ಊರಿನ ಕಡೆಗೆ ಹೊರಟೇಬಿಟ್ಟೆ!

Advertisement

ಮನೆ ತಲುಪುವ ಹೊತ್ತಿಗಾಗಲೇ ಬಾನಿನಲ್ಲಿ  ಕಾರ್ಮೋಡಗಳು ಮೆಲ್ಲನೆ  ಕಳ್ಳ ಹೆಜ್ಜೆಯನ್ನಿಡುತ್ತಾ ಬರುತ್ತಿದ್ದವು. ಬಿಸಿಲ ತಾಪವನ್ನೇ  ಕಂಡ  ದೇಹಕ್ಕೆ  ಆ ಕ್ಷಣದಲ್ಲಿ ಬೀಸಿದ ತಂಪಾದ ಗಾಳಿ ಮುದ ನೀಡತೊಡಗಿತು. ಈಗ ಮಳೆಯೇನಾದರೂ ಬಂದರೆ ಏನಾಗಬಹುದು ಎಂದು ಯೋಚಿಸುತ್ತಿದ್ದೆ.

ಈ ಮಾನವ ಎಷ್ಟೊಂದು ಅತೀ ಆಕಾಂಕ್ಷಿ, ಸ್ವಾರ್ಥಿ ಎಂದರೆ ಬಿಸಿಲು ಬಂದರೆ ಮಳೆ ಬೇಕು ಅನ್ನುತ್ತಾನೆ, ಒಂದೆರಡು ದೊಡ್ಡ ಮಳೆ ಬಂದರೆ ಏನು ಕರ್ಮದ ಮಳೆಯೋ ಏನೋ ನಿಲ್ಲುವುದೇ ಇಲ್ಲ ಎಂದು ಅಪರೂಪಕ್ಕೆ ಭುವಿಗಿಳಿದು ಬಂದ ಮಳೆರಾಯನನ್ನು ಶಪಿಸತೊಡಗುತ್ತೇವೆ. ಉಳಿದವರೂ ಹೌದೌದು ಎನ್ನುತ್ತೇವೆ. ಮಳೆ ಎಲ್ಲಿ ಸತ್ತು ಹೋಗಿದೆ ಒಮ್ಮೆ ಬಂದಿದ್ದರೆ  ಈ ಬಿಸಿಲಿನಿಂದಾದರೂ  ತಪ್ಪಿಸಿಕೊಳ್ಳಬಹುದಿತ್ತು ಎಂದು ಈಗ ಹೇಳುವ ನಾವುಗಳು ಮಳೆಯನ್ನು ಹಿಗ್ಗಾಮುಗ್ಗ ಜರೆಯುವುದು ಎಷ್ಟರ ಮಟ್ಟಿಗೆ ಸರಿ?

ಭುವಿಯ ಜನರು ಮಾಡಿದ ಅನ್ಯಾಯಗಳನ್ನು ಹೊಟ್ಟೆಯೊಳಗಿರಿಸಿ ಕರುಣೆಯ ಸುಧೆಯನ್ನು ಹರಿಸುವ ಆ ರವಿಯನ್ನೂ ಮಳೆಯನ್ನೂ, ಅದೂ ಕೂಡ ಮೊದಲ ಮಳೆಯನ್ನೇ ತೆಗಳುವ ಮನಸ್ಥಿತಿ ವಿಚಿತ್ರ. ಮಳೆ ಒಂಚೂರು ಜಾಸ್ತಿ ಬಂದರೆ, ಈ ರೀತಿಯೇ ಮಳೆ ಬಂದರೆ ಒಣಗುವುದಕ್ಕೆ ಹಾಕಿದ ಹಪ್ಪಳಗಳ ಅವಸ್ಥೆಯಾದರೂ ಏನು?

ಈ ಹಾಳಾದ ಮಳೆ ಇವತ್ತೇ ಬರಬೇಕೇ? ಎಂದು ಶಪಿಸುವವನು  ಇನ್ನೊಬ್ಬ. ಇದನ್ನೆಲ್ಲಾ ಗಮನಿಸಿದ ನನಗೆ ಅನ್ನಿಸಿದ್ದಿಷ್ಟೇ, ಯಾರ ಮನೆಯಲ್ಲಿ ಹಪ್ಪಳ ಒಣಗುವುದಕ್ಕೆ ಹಾಕಿದ್ದಾರೆ, ಎಲ್ಲಿ ಬಟ್ಟೆ ಒಣಗಳು ಹಾಕಿದ್ದಾರೆ, ಯಾರ ಮನೆಯಲ್ಲಿ ಸಮಾರಂಭ ಇದೆ ಇದನ್ನೆಲ್ಲಾ ತಿಳಿದುಕೊಂಡು ಮಳೆ ಇಳೆಗಿಳಿಯಲು ಸಾಧ್ಯವೇ? ಅದೇನು ನಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲಸದಾಳೇ?

ಯೋಚನೆಯಿಂದ ಹೊರಬಂದು ವಾಸ್ತವಕ್ಕೆ ಬಂದೆ. ನನಗೆ ಗೊತ್ತಿಲ್ಲದಂತೆ ನಗುವೊಂದು ಹಾದುಹೋಯಿತು. ಪ್ರಕೃತಿಯು ಸಮತೋಲನದಲ್ಲಿರಬೇಕಾದರೆ ನಮ್ಮೆಲ್ಲರ ಶ್ರಮ ಅತ್ಯಗತ್ಯ. ನಾವು ಪ್ರಕೃತಿಮಾತೆಯನ್ನು ಪ್ರೀತಿಯಿಂದ ಕಂಡರೆ  ಅವಳು ನಮಗೆ ಯಾವ ಸಂಕಷ್ಟವನ್ನು ಒದಗಿಸದೇ ಸದಾ ನಮ್ಮನ್ನು ಪೊರೆಯುವಳು. ಮುನಿದರೆ ಅನಾವೃಷ್ಠಿವೋ  ಮಾಹಾಬಿಸಿಲಿನಂತೆಯೋ  ನಮ್ಮನ್ನೆಲ್ಲಾ ಕಾಡುವಳು.

ಒಟ್ಟಿನಲ್ಲಿ ಬಿಸಿಲಿನ ಝಳಕ್ಕೆ ಬಗ್ಗದೆ ತಾಳ್ಮೆ ವಹಿಸೋಣ. ಮೊದಲ ಮಳೆಗಾಗಿ ಪ್ರೀತಿಯಿಂದ ಕಾಯೋಣ. ನಾವು ಮಾಡಿರುವ ತಪ್ಪನ್ನೆಲ್ಲಾ ಮನ್ನಿಸು ಮುಂದೆಂದಿಗೂ ನಿನಗೆ ನೋವನ್ನುಂಟು ಮಾಡಲಾರೆ ಎಂದು ಪ್ರಕೃತಿಮಾತೆಯಲ್ಲಿ ಬೇಡಿಕೊಳ್ಳೋಣ ಮತ್ತು ಅದರಂತೆ ನಡೆದುಕೊಳ್ಳೋಣ.

-ವಿಕಾಸ್‌ ರಾಜ್‌ ಪೆರುವಾಯಿ

ವಿ.ವಿ. ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next