Advertisement

UV Fusion: ಲಂಟಾನ ಕಲಿಸುವ ಪಾಠ

09:49 AM May 31, 2024 | Team Udayavani |

ನೀವು ಪರಿಸರದಲ್ಲಿ ಅತ್ತಿತ್ತ ನೋಡಿದರೆ ಕಣ್ಣುಸುಲಭವಾಗಿ ಗುರುತಿಸುವ ಗಿಡ ಲಂಟಾನಾ. ಗಿಡಕ್ಕಿಂತ ಸುಲಭವಾಗಿ ಮೋಹಕ ಆಕರ್ಷಣೆಯಿರುವುದು ಅದರ ಹೂಗಳಿಗೆ. ಕಳೆ ಸಸ್ಯವೆಂಬ ಅಪವಾದ. ಸಣ್ಣನೆಯ ಹೂಗುತ್ಛಗಳನ್ನು ಹೋಲುವ ವರ್ಣರಂಜಿತ ಗುಲಾಬಿ, ಹಳದಿ ಮತ್ತು ಕೆಂಪು ಹೂಗಳ ಗಣ. ದೊರಗು ಎಲೆ, ಮುಳ್ಳಿನ ಕಾಂಡದ ತೀಕ್ಷ್ಣ ವಾಸನೆಯ ಹೂಬಿಡುವ ಸಸ್ಯವಾದ ಲಂಟಾನ ಆಕ್ರಮಣಕಾರಿ ಜಾತಿಯ ಕಳೆ ಸಸ್ಯವರ್ಗಕ್ಕೆ ಸೇರಿದೆ.

Advertisement

ಇದು ಸ್ಥಳೀಯ ಸಸ್ಯವರ್ಗದ ಅಭಿವೃದ್ಧಿಗಿಂತಲೂ ವೇಗವಾಗಿ ನೆಲವನ್ನಾಕ್ರಮಿಸುವ ರಾಕ್ಷಸ ಗಿಡ. ಭೂಖಂಡಗಳನ್ನು ದಾಟಿ ಹರಡಿದ ಇದರ ಕತೆಯೂ ಸೋಜಿಗವೇ.

ಕನಿಷ್ಠ 50 ದೇಶಗಳಲ್ಲಿ ಲಂಟಾನ ವೀಸಾ ರಹಿತವಾಗಿ ಪ್ರಯಾಣಿಸಿದೆ ಎಂದರೆ ತಪ್ಪಾಗಲಾರದು. ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಇದನ್ನು ಅನ್ವೇಷಿಸಿದ ಯುರೋಪಿಯನ್‌ ಪ್ಲಾಂಟರ್‌ಗಳು, ಲಂಟಾನವನ್ನು ಅಲಂಕಾರಿಕ ಉದ್ಯಾನ ಸಸ್ಯವಾಗಿ ಭಾರತಕ್ಕೆ ಪರಿಚಯಿಸಿದರು. ಇಂದು ಲಂಟಾನ ಪ್ರಭಾವದಿಂದ ಮುಕ್ತವಾದ ಭಾರತದ ಭಾಗವನ್ನು ಕಂಡುಹಿಡಿಯುವುದೇ ಕಷ್ಟ.

ಕೃಷಿಗಾಗಿ ಸುಟ್ಟುಹೋದ ಅಥವಾ ತೆರವುಗೊಳಿಸಿದ ಕಾಡುಗಳ ಅಂಚಿನಲ್ಲಿ ತ್ವರಿತವಾಗಿ ಬೆಳೆಯುತ್ತದೆ, ಆಕ್ರಮಣಕಾರಿಯಾಗಿ ಹರಡುತ್ತದೆ ಮತ್ತು ಸ್ಥಳೀಯ ಸಸ್ಯವರ್ಗದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಈಗ ಇದು ಐದು ಖಂಡಗಳ 50ಕ್ಕೂ ಹೆಚ್ಚು ದೇಶಗಳಲ್ಲಿ ಬೆಚ್ಚನೆ ನಿಂತುಬಿಟ್ಟಿದೆ.

ಸುಂದರವಾದ ಹೂಗಳನ್ನು ಬಿರಿಯುವ ಕಳೆಯಾದ ಲಂಟಾನವು ಕೆಲವು ಮ್ಯಾನೇಜೆ¾ಂಟ್‌ ಪಾಠಗಳನ್ನೂ ಹೇಳುತ್ತದೆ. ಬರವಿರಲಿ, ಮಳೆಯಿರಲಿ, ಹಸಿಭೂಮಿಯಿರಲಿ ಇಲ್ಲವೇ ಒಣಬರಡೇ ಇರಲಿ ವಿವಿಧ ಪರಿಸ್ಥಿತಿಗಳಲ್ಲಿ ಲಂಟಾನ ಬೆಳೆಯುತ್ತದೆ. ಪರಿಸರಕ್ಕೆ ಹೊಂದಿಕೊಳ್ಳುವ ವಿಷಯದಲ್ಲಿ ಲಂಟಾನಾ ಪರಿಪೂರ್ಣತೆಯನ್ನೇ ಹೊಂದಿದೆ. ಹೊಂದಿಕೊಂಡರೆ ಎಲ್ಲವೂ ಸಾಧ್ಯ ಎನ್ನುವ ಪಾಠ ಹೇಳುವುದು ಲಂಟಾನಾ.

Advertisement

ಲಂಟಾನವು ಟನ್‌ ಗಟ್ಟಲೆ ಬೀಜಗಳನ್ನು ಉತ್ಪಾದಿಸುತ್ತದೆ. ಲಂಟಾನಾ ಬದುಕುವುದಕ್ಕೆ ಅದರ ಕಾಂಡ ನೆಲತಾಕಿದರೂ ಸಾಕು. ಲಂಟಾನಾ ಬೀಜಪ್ರಸಾರವೂ ಅಷ್ಟೇ ಪರಿಣಾಮಕಾರಿ. ತಾನು ಉಳಿಯಲು, ಮರು ಉತ್ಪತ್ತಿಯಾಗಲು ತನ್ನದೇ ಬದುಕುವ ನಿಯಮ ಲಂಟಾನಕ್ಕಿದೆ. ಹೀಗಾಗಿ ಲಂಟಾನ ಕಳೆಯಾಗಿ ನಿರ್ವಹಿಸಲು ಬಹಳ ಕಷ್ಟದ ಕೆಲಸ.

ರಾಜ್ಯದ ಅರಣ್ಯ ಇಲಾಖೆಯು ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಯಕ್ರಮದ ಅಡಿಯಲ್ಲಿ ಬಂಡೀಪುರದಾದ್ಯಂತ ಹರಡಿರುವ ಲಂಟಾನವನ್ನು ತೆಗೆದುಹಾಕುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರಿಂದ ನೀವೇ ಆಲೋಚಿಸಬಹುದು ಕಳೆಯ ಪ್ರಭಾವವನ್ನು. ಎಳವೆಯಲ್ಲಿಯೇ ಕಿತ್ತು ನಿವಾರಿಸಿದರೆ ಆದೀತು, ಕೆಟ್ಟದ್ದನ್ನು ನೀಗಿಸಲು ಶ್ರಮ ಹೆಚ್ಚು ಎನ್ನುವ ಪಾಠವೂ ಇದರಲ್ಲಡಗಿದೆ.

ಲಂಟಾನದ ತ್ವರಿತ ಬೆಳವಣಿಗೆಯನ್ನು ಒಳ್ಳೆಯದಕ್ಕಾಗಿ ಬಳಸಿಕೊಳ್ಳಬಹುದು. ಕೆಲವು ಪ್ರದೇಶಗಳಲ್ಲಿ ಮಣ್ಣಿನಿಂದ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವುದಕ್ಕೆ ಜೈವಿಕ ಮಾಲಿನ್ಯಕ್ಕೆ ಪರಿಹಾರವಾಗಿಯೂ ಬಳಸಲಾಗಿದೆಯಂತೆ.

ಇವಿಷ್ಟು ಅಪವಾದಗಳಿದ್ದರೂ ಸ್ಥಳೀಯವಾಗಿ ಲಂಟಾನವನ್ನು ಬಳಸಿಕೊಳ್ಳುವ ಅನೇಕ ವಿಧಾನಗಳನ್ನೂ ಕಂಡುಕೊಂಡಿದ್ದಿವೆ. ಲಂಟಾನಾ ಎಲೆಗಳು ಆಂಟಿಮೈಕ್ರೊಬಿಯಲ್, ಶಿಲೀಂಧ್ರನಾಶಕ ಮತ್ತು ಕೀಟನಾಶಕ ಗುಣಗಳನ್ನು ಹೊಂದಿವೆ ಮತ್ತು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಗಿಡಮೂಲಿಕೆ ಔಷಧಿಗಳಲ್ಲಿ ಬಳಸಲಾಗುತ್ತದೆ. ಹೇರಳವಾಗಿ ಎಲ್ಲೆಂದರಲ್ಲಿ ಸಿಗುವ ಲಂಟಾನವನ್ನು ಪೀಠೊಪಕರಣಗಳ ತಯಾರಿಕೆಯಲ್ಲಿಯೂ ಬಳಸಿ ಸೈ ಎಂದೆನಿಸಿಕೊಂಡಿದ್ದಿದೆ. ಲಂಟಾನದಿಂದ ತಯಾರಿಸಿದ ಪೀಠೊಪಕರಣಗಳು ಬಿದಿರು ಅಥವಾ ಬೆತ್ತದ ಪೀಠೊಪಕರಣಗಳಂತೆ ಕಾಣುತ್ತದೆ, ಆದರೆ ಹೆಚ್ಚು ಬಾಳಿಕೆ ಬರುತ್ತವೆ.

ತಮಿಳುನಾಡಿನ ಕೆಲವೆಡೆ, ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಲಂಟಾನದಿಂದ ತಯಾರಿಸುತ್ತಿರುವ ಪೀಠೊಪಕರಣಗಳು ಮತ್ತು ಅಲಂಕಾರಿಕ ವಸ್ತುಗಳು ಎಲ್ಲರ ಗಮನಸೆಳೆದಿವೆ. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಮಾರ್ಗಗಳನ್ನು ಹುಡುಕಲು ಇದು ಪ್ರೇರೇಪಿಸುತ್ತದೆ. ಉದ್ಯಾನವನಗಳಲ್ಲಿ ಅಲಂಕಾರಕ್ಕೆಂದು ಭಾರತಕ್ಕೆ ಬಂದ ಲಂಟಾನ, ಅರಣ್ಯ ಮತ್ತು ವೈವಿಧ್ಯತೆಗೂ ಕಂಟಕವಾಗಿದೆ. ಹೆಚ್ಚಾದರೆ ಅಮೃತವೂ ವಿಷ ಎಂಬುದಕ್ಕೆ ಇದೇ ಸಾಕ್ಷಿ.

ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದೊಂದಿಗೆ, ಲಂಟಾನಾ ಹೆಚ್ಚಿನ ತಾಪಮಾನ ಮತ್ತು ತೇವಾಂಶವನ್ನು ಸಹಿಸಿಕೊಳ್ಳಬಲ್ಲದು. ಈ ಪ್ರಭೇದವು ಈಗ ಸುಮಾರು ಮೂರು ಲಕ್ಷ ಚ. ಕಿ. ಮೀ. ಅರಣ್ಯದಲ್ಲಿ ಹರಡಿಬಿಟ್ಟಿವೆ. ಕಾಡು ಪ್ರಾಣಿ-ಮಾನವ ಸಂಘರ್ಷಕ್ಕೂ ಇದು ಕಾರಣವಾಗಿದೆ. ಹಾಗಾಗಿ ಲಂಟಾನ ಸಸ್ಯವಾಗಿ ಕೇವಲವಲ್ಲ. ತನ್ನನ್ನು ಯಾವಕಾಲಕ್ಕೂ ಪ್ರಸ್ತುತವಾಗಿಸಲು ಹೊರಟ ಕಳೆಯದ-ಕಳೆ.

-ವಿಶ್ವನಾಥ ಭಟ್‌

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next