Advertisement

ಯುಪಿಯಲ್ಲಿ ಹಾವು-ಮುಂಗುಸಿಯಾಟ!  “ಪ್ರಾಣಿ’ಗಳ ಹೆಸರಲ್ಲಿ ಬೈದಾಡುತ್ತಿರುವ ರಾಜಕೀಯ ನಾಯಕರು

08:15 PM Jan 14, 2022 | Team Udayavani |

ನವದೆಹಲಿ: ಈ ಬಾರಿಯ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ “ನಾಗರಹಾವು, ಮುಂಗುಸಿ’ಯೂ ಎಂಟ್ರಿಯಾಗಿವೆ, ಸೂರ್ಯ, ಅಂಧಕಾರವೂ ಕಣಕ್ಕಿಳಿದಿವೆ!

Advertisement

ಹೌದು, ರಾಜಕೀಯ ಪಕ್ಷಗಳ ನಾಯಕರು ಪರಸ್ಪರರ ವಿರುದ್ಧ ವಾಗ್ಧಾಳಿ ನಡೆಸುವ ಭರದಲ್ಲಿ “ಪ್ರಾಣಿ-ಪಕ್ಷಿ’ಗಳನ್ನೂ ಎಳೆದು ತರಲಾರಂಭಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ಅವರೂ ಈ ಪದಪುಂಜಗಳ ಬಳಕೆಗೆ ಚಾಲನೆ ನೀಡಿದ್ದು, ಉ.ಪ್ರದೇಶ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರನ್ನು “ಸೂರ್ಯ’ನೆಂದೂ, ಬಿಜೆಪಿ ಬಿಟ್ಟು ಎಸ್ಪಿಗೆ ಸೇರಿದ ಮಾಜಿ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯರನ್ನು “ಅಂಧಕಾರ’ ಎಂದೂ ಕರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ ಪ್ರಸಾದ್‌ ಮೌರ್ಯ, “ನಾಗರೂಪಿ ಆರೆಸ್ಸೆಸ್‌ ಹಾಗೂ ಹಾವುರೂಪದ ಬಿಜೆಪಿಯನ್ನು ಯುಪಿಯಿಂದ ಒಧ್ದೋಡಿಸುವ ಮುಂಗುಸಿಯೇ ಈ ಸ್ವಾಮಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರದೇವ್‌ ಸಿಂಗ್‌, “ಯಾರಿಗೆ ಡಬಲ್‌ ಎಂಜಿನ್‌ ರೈಲಿನಲ್ಲಿ ಟಿಕೆಟ್‌ ಸಿಗುತ್ತಿಲ್ಲವೋ, ಅವರಿಗೆ ಟಿಪ್ಪು ಸುಲ್ತಾನ್‌ ತನ್ನ ಗುಜಿರಿ ವಾಹನದಂಥ ಪಕ್ಷದ ಟಿಕೆಟ್‌ ಅನ್ನು ಬ್ಲ್ಯಾಕ್‌ನಲ್ಲಿ ನೀಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಮಾಜಿ ಸಚಿವರು ಎಸ್‌ಪಿಗೆ ಸೇರ್ಪಡೆ:
ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದ ಉತ್ತರಪ್ರದೇಶದ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್‌ ಮೌರ್ಯ ಮತ್ತು ಧರಂ ಸಿಂಗ್‌ ಸೈನಿ ಹಾಗೂ ಐವರು ಶಾಸಕರು ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಪಿ ನಾಯಕ ಅಖಿಲೇಶ್ ಯಾದವ್, ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಬಳಸಿದ್ದ “80 ವರ್ಸಸ್‌ 20′ ಪದವನ್ನೇ ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. “80 ವರ್ಸಸ್‌ 20 ಎಂದರೆ, ಚುನಾವಣೆಯಲ್ಲಿ ಶೇ.20ರಷ್ಟು ಜನರು ಬಿಜೆಪಿಗೆ ಬೆಂಬಲಿಸುತ್ತಾರೆ, ಉಳಿದ ಶೇ.80ರಷ್ಟು ಮಂದಿ ಎಸ್‌ಪಿಯನ್ನು ಬೆಂಬಲಿಸುತ್ತಾರೆ ಎಂದು. ಆದರೆ ಈಗ ಮೌರ್ಯ ಅವರ ಆಗಮನದಿಂದಾಗಿ ಆ ಶೇ.20 ಮಂದಿಯನ್ನೂ ಯೋಗಿ ಕಳೆದುಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತಕ್ಕೆ ತೆರಳುವ 2  ವಿಮಾನಗಳು ಒಂದೇ ರನ್‌ವೇಯಲ್ಲಿ: ದುಬೈನಲ್ಲಿ ತಪ್ಪಿದ ದುರಂತ

ಗೋವಾದಲ್ಲಿ 38ರಲ್ಲಿ ಮಾತ್ರ ಸ್ಪರ್ಧೆ:
ಆಡಳಿತಾರೂಢ ಬಿಜೆಪಿ ಗೋವಾ ವಿಧಾನಸಭೆ ಚುನಾವಣೆಯಲ್ಲಿ 40ರ ಪೈಕಿ ಕೇವಲ 38 ಸ್ಥಾನಗಳಲ್ಲಿ ಮಾತ್ರವೇ ಕಣಕ್ಕಿಳಿಯಲು ನಿರ್ಧರಿಸಿದೆ. ಜ.16ರ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಆದರೆ, ಬೆನಾಲಿಮ್‌ ಮತ್ತು ನುವೇಮ್‌ ಕ್ಷೇತ್ರಗಳಲ್ಲಿ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಪಕ್ಷ ತಿಳಿಸಿದೆ. ಈ ಎರಡೂ ಕ್ರಿಶ್ಚಿಯನ್‌ ಬಾಹುಳ್ಯದ ಕ್ಷೇತ್ರಗಳಾಗಿದ್ದು, ಬಿಜೆಪಿಯೇತರ ಅಭ್ಯರ್ಥಿಗಳೇ ಆಯ್ಕೆಯಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ.

2 ಕ್ಷೇತ್ರಗಳಲ್ಲಿ ಛನ್ನಿ ಸ್ಪರ್ಧೆ?
ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ ಅವರನ್ನು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅದಾಂಪುರ ಮತ್ತು ಚಮ್‌ಕೌರ್‌ ಸಾಹಿಬ್‌ನಲ್ಲಿ ಛನ್ನಿ ಅವರನ್ನು ಕಣಕ್ಕಿಳಿಸುವ ಮೂಲಕ ದಲಿತ ಮತಗಳನ್ನು ಸೆಳೆಯುವುದು ಪಕ್ಷದ ಲೆಕ್ಕಾಚಾರವಾಗಿದೆ. ಅದಾಂಪುರವು ಅಕಾಲಿದಳದ ಭದ್ರಕೋಟೆಯಾಗಿದ್ದು, ಅಲ್ಲಿ ಛನ್ನಿಯಂಥ ಪ್ರಬಲ ನಾಯಕನನ್ನು ಕಣಕ್ಕಿಳಿಸಿ ಆ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ. 2011ರ ಗಣತಿ ಪ್ರಕಾರ, ಪಂಜಾಬ್‌ನಲ್ಲಿ 2.77 ಕೋಟಿ ದಲಿತರಿದ್ದಾರೆ. ಈ ನಡುವೆ, ಶುಕ್ರವಾರ ಕಾಂಗ್ರೆಸ್‌ನ ಹಿರಿಯ ನಾಯಕ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಜೋಗಿಂದರ್‌ ಸಿಂಗ್‌ ಮನ್‌ ರಾಜೀನಾಮೆ ನೀಡಿದ್ದಾರೆ. ಅವರು ಆಪ್‌ಗೆ ಸೇರುವ ಸಾಧ್ಯತೆಯಿದೆ.

ದಲಿತರ ಮನೆಯಲ್ಲಿ ಸಿಎಂ ಯೋಗಿ ಊಟ
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಗೋರಖ್‌ಪುರದ ದಲಿತ ಸಮುದಾಯದ ವ್ಯಕ್ತಿಯ ಮನೆಯಲ್ಲಿ ಭೋಜನ ಸವಿದಿದ್ದಾರೆ. ಈ ವೇಳೆ, ಅಖೀಲೇಶ್‌ ವಿರುದ್ಧ ಕಿಡಿಕಾರಿದ ಅವರು, “ಸಮಾಜವಾದಿ ಪಕ್ಷದ ಆಡಳಿತದಲ್ಲಿ “ಸಾಮಾಜಿಕ ದೌರ್ಜನ್ಯ’ವಿತ್ತೇ ವಿನಾ “ಸಾಮಾಜಿಕ ನ್ಯಾಯ’ ಎಂಬುದು ಇರಲಿಲ್ಲ. ಆದರೆ, ಬಿಜೆಪಿಯು ಯಾವುದೇ ತಾರತಮ್ಯ ಮಾಡದೇ ಪ್ರತಿಯೊಂದು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದಿದ್ದಾರೆ. “ಎಸ್ಪಿ ಸರ್ಕಾರವು ದಲಿತರು ಮತ್ತು ಬಡವರ ಹಕ್ಕುಗಳನ್ನೇ ದರೋಡೆ ಮಾಡಿತು. ವಂಶಾಡಳಿತದ ಹಿಡಿತದಲ್ಲಿರುವವರು ಸಮಾಜದ ಯಾವುದೇ ವರ್ಗಕ್ಕೂ ನ್ಯಾಯ ಕೊಡಿಸಲು ಸಾಧ್ಯವಿಲ್ಲ’ ಎಂದೂ ಯೋಗಿ ಹೇಳಿದ್ದಾರೆ.

ಗಳಗಳನೆ ಅತ್ತ ಬಿಎಸ್ಪಿ ಕಾರ್ಯಕರ್ತ!
ಉ.ಪ್ರದೇಶ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿದ್ದರಿಂದ ನೊಂದ ಬಿಎಸ್‌ಪಿ ಕಾರ್ಯಕರ್ತ ಅರ್ಷಾದ್‌ ರಾಣಾ ಗಳಗಳನೆ ಅತ್ತ ಘಟನೆ ಶುಕ್ರವಾರ ನಡೆದಿದೆ. “ಪಕ್ಷದ ನಾಯಕರು ನನ್ನನ್ನು ತಮಾಷೆಯಾಗಿ ಸ್ವೀಕರಿಸಿದರು. 24 ವರ್ಷಗಳಿಂದಲೂ ಪಕ್ಷಕ್ಕಾಗಿ ದುಡಿದಿದ್ದೇನೆ. ಟಿಕೆಟ್‌ ಕೊಡುವುದಾಗಿ ಹೇಳಿ ಕೊನೇ ಕ್ಷಣದಲ್ಲಿ ಕೈಕೊಟ್ಟರು’ ಎಂದು ಕಣ್ಣೀರಿಟ್ಟಿದ್ದಾರೆ.

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾರದ್ದು “ಆಯ್ಕೆಯ ರಾಜಕಾರಣ.’ ಉತ್ತರಪ್ರದೇಶದಲ್ಲಿ ಹೆಣ್ಣುಮಕ್ಕಳ ಪರ ಮಾತನಾಡಿ “ಲಡ್ಕಿ ಹೂಂ ಲಡ್‌ ಸಕ್ತೀ ಹೂಂ’ ಎನ್ನುತ್ತಾರೆ. ಕಾಂಗ್ರೆಸ್‌ ಆಡಳಿತದ ರಾಜಸ್ಥಾನದಲ್ಲಿ ಹೆಣ್ಣುಮಗಳ ಮೇಲೆ ಅತ್ಯಾಚಾರವಾದರೆ ಅವರಿಗೆ ಮಾತೇ ಬರುವುದಿಲ್ಲ.
– ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next