ರಬಕವಿ-ಬನಹಟ್ಟಿ: ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರ ನೆರವಿಗೆ ನಿಂತಿದ್ದು, ಕಾರ್ಮಿಕರೆಲ್ಲರೂ ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಹಾಗು ಕಾರ್ಮಿಕರ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಅವರು ಶುಕ್ರವಾರ ಬನಹಟ್ಟಿಯ ಶಾಸಕರ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ, ಬಡಿಗತನ, ಸೆಂಟ್ರಿಂಗ್, ಪ್ಲಂಬಿಂಗ್ ಸೇರಿದಂತೆ ಇತರೆ ಕಾರ್ಮಿಕ ವರ್ಗದ ಸದಸ್ಯರಿಗೆ ಸುರಕ್ಷತಾ ಹಾಗು ಇತರೆ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ಅತ್ಯಂತ ಶ್ರಮಿಕ ವರ್ಗವಾಗಿರುವ ಕಾರ್ಮಿಕರಿಗೆ ತಮ್ಮ ಕಾರ್ಯದಲ್ಲಿ ತೊಡಗುವ ಸಾಮಗ್ರಿಗಳ ಅವಶ್ಯಕತೆಗಳನ್ನು ನೀಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಳಜಿಪೂರ್ವಕವಾಗಿ ರಾಜ್ಯಾದ್ಯಂತ ವಿತರಿಸುತ್ತಿದ್ದಾರೆ. ಇದೇ ರೀತಿ ತೇರದಾಳ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾರ್ಮಿಕರಿಗೂ ಸುರಕ್ಷತಾ ಕಿಟ್ಗಳು ತಲುಪಲಿದ್ದು ಸಾಂಕೇತಿಕವಾಗಿ ಇಂದು ನೀಡಲಾಯಿತೆಂದು ತಿಳಿಸಿದರು.
ದೇಶದಲ್ಲಿ ಶೇ.40 ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದು, ಅವರ ಏಳ್ಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ಹೆಚ್ಚಾಗಿ ಗ್ರಾಮೀಣ ಪ್ರದೇಶ ಹಾಗು ಉತ್ತರ ಕರ್ನಾಟಕದಲ್ಲಿಯೇ ಇದ್ದಾರೆ. ಕಾರ್ಮಿಕರಿಗೆ ಯಾವದೇ ತೊಂದರೆಯಾಗದಂತೆ ನೆರವು ಪಡೆಯಲು ಕಾರ್ಮಿಕ ಇಲಾಖೆ ಅಡಿಯಲ್ಲಿ ಕಡ್ಡಾಯವಾಗಿನೊಂದಣಿಯಾಗಿರಬೇಕೆಂದರು. ಈ ಶ್ರಮ ಹಾಗೂ ಕಾರ್ಮಿಕ ಮಕ್ಕಳಿಗೆ ಸ್ಕಾಲರಶಿಪ್ ಯೋಜನೆಯನ್ನು ಸರಕಾರ ತಂದಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗುತ್ತಿಗೆದಾರರು ನೀಡುವ ಕಡಿಮೆ ಸಂಬಳಕ್ಕೆ ಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ತಮಗಿರುವ ಹಲವಾರು ಕಾನೂನುಗಳನ್ನು ತಿಳಿದುಕೊಳ್ಳಬೇಕು. ಎಂದರಲ್ಲದೆ ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಮಹಿಳಾ ಕಾರ್ಮಿಕರು ಇರುವಂತಹ ಸ್ಥಳಗಳಲ್ಲಿ ಅವರಿಗೆ ವಿಶ್ರಾಂತಿ ಸ್ಥಳ ಹಾಗು ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಒಟ್ಟಾರೆಯಾಗಿ ಕಾರ್ಮಿಕರಿಗೆ ಕಾರ್ಯದ ಪ್ರತಿರೂಪವಾಗಿ ವೇತನ ದೊರಕುವಲ್ಲಿ ಸರ್ಕಾರ ಸಕಲರೀತಿಯಲ್ಲಿ ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಪಿ.ವಿ. ಮಾವರಕರ, ದುರ್ಗವ್ವ ಹರಿಜನ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.