Advertisement

ಗಲಾಟೆಗೆ ಸೇಡು ತೀರಿಸಿಕೊಳ್ಳಲು ಸೋದರರ ಮೇಲೆ ಹಲ್ಲೆ

11:44 AM Mar 04, 2017 | Team Udayavani |

ಕೆ.ಆರ್‌.ಪುರ: ಎರಡು ವರ್ಷಗಳ ಹಿಂದೆ ಪುಟ್ಬಾಲ್‌ ಪಂದ್ಯಾವಳಿಯೊಂದರ ಬೆಟ್ಟಿಂಗ್‌ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಗಲಾಟೆಗೆ ಪ್ರತೀಕಾ ರವಾಗಿ ದುಷ್ಕರ್ಮಿಗಳ ತಂಡವೊಂದು ಸಹೋದರರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕೆಆರ್‌ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಐಟಿಐ ಕಾಲೋನಿ ಬಳಿ ಗುರುವಾರ ತಡರಾತ್ರಿ ನಡೆದಿದೆ.

Advertisement

ಅರ್ಜುನ್‌ ಮತ್ತು ಮನೋಜ್‌ ಹಲ್ಲೆಗೊಳಗಾದವರು. ಅರ್ಜುನ್‌ ತಲೆಗೆ ಗಂಭೀರ ಗಾಯವಾಗಿದ್ದು, ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಎರಡು ವರ್ಷಗಳ ಹಿಂದೆ ಬಾಗಲೂರಿನಲ್ಲಿ ಪುಟ್‌ಬಾಲ್‌ ಪಂದ್ಯಾವಳಿಯೊಂದು ನಡೆಧಿದಿತ್ತು. ಪಂದ್ಯಾವಳಿಯ ಬೆಟ್ಟಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜುನ್‌ ಹಾಗೂ ರಾಜ್‌ ದೊರೈ, ಕೋಟಿ, ವಿಜಯ್‌ ತಂಡದವರೊಂದಿಗೆ ಗಲಾಟೆ ನಡೆದಿತ್ತು,

ಇದೇ ವಿಚಾರಕ್ಕೆ ದ್ವೇಷ ಸಾಧಿಸುತ್ತಿದ್ದ ದುಷ್ಕರ್ಮಿಗಳ ತಂಡ, ಈಗಾಗಲೇ ಅರ್ಜುನ್‌ ಮೇಲೆ ಎರಡು ಬಾರಿ ಹಲ್ಲೆಗೆ ಯತ್ನಿಸಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ ಅರ್ಜುನ್‌ ಮತ್ತು ಸಹೋದರ ಮನೋಜ್‌ ಐಟಿಐ ಕಾಲೋನಿಯಲ್ಲಿರುವ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಹಾಕಿ ಸ್ಟಿಕ್‌ ಮತ್ತು ಮಾರಕಾಸ್ತ್ರಗಳಿಂದ ಅರ್ಜುನ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಜಗಳ ಬಿಡಿಸಲು ಬಂದ ಮನೋಜನ ಮೇಲೂ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಅರ್ಜುನ್‌ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಹೀಗಾಗಿ ಆತನನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಸಂಬಂಧ ಪ್ರಕರಣ ದಾಖಲಿಕೊಂಡಿರುವ ಕೆಆರ್‌ ಪುರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next