Advertisement

ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದ ರಾಹುಲ್ ಹೇಳಿಕೆ; ಕಲಾಪದಲ್ಲಿ ಹೊಯ್, ಕೈ!

09:58 AM Feb 08, 2020 | Nagendra Trasi |

ನವದೆಹಲಿ: ಲೋಕಸಭಾ ಕಲಾಪದಲ್ಲಿ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರು ಕೈ-ಕೈ ಮಿಲಾಯಿಸಿದ ಘಟನೆ ಶುಕ್ರವಾರ ನಡೆದಿದ್ದು, ಸುಗಮ ಕಲಾಪಕ್ಕೆ ತೀವ್ರ ಅಡ್ಡಿಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಕಲಾಪದಲ್ಲಿ ವಾಕ್ಸಮರ, ಕೈ, ಕೈ ಮಿಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿರುವುದಾಗಿ ವರದಿ ಹೇಳಿದೆ.

ಏನಿದು ಕೋಲಾಹಲ, ಗದ್ದಲ:

ಲೋಕಸಭೆ ಕಲಾಪದ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಮುಖಂಡ ಮೆಡಿಕಲ್ ಕಾಲೇಜುಗಳಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರ ನೀಡುವ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದ್ದರು.

“ದೇಶದ ಯುವ ಜನತೆ ನಿರುದ್ಯೋಗದಿಂದ ರೋಸಿ ಹೋಗಿ ನರೇಂದ್ರ ಮೋದಿ ಅವರನ್ನು ದೊಣ್ಣೆಯಿಂದ ಹೊಡೆಯಲಿದ್ದಾರೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿಕೆ ನೀಡಿದ್ದರು ಎಂದು ವರದಿ ತಿಳಿಸಿದೆ.

Advertisement

ಸ್ಪೀಕರ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ ದಯವಿಟ್ಟು ನಾನು ಪ್ರಶ್ನೆಗೆ ಉತ್ತರ ಕೊಡುವ ಮೊದಲು ನಮ್ಮ ರಾಹುಲ್ ಗಾಂಧೀಜಿ ಅವರು, ದೇಶದ ಪ್ರಧಾನ ಮಂತ್ರಿ ಅವರ ವಿರುದ್ಧ ಬಳಸಿರುವ ಪದ ಹಾಗೂ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ್ದರು. ಏತನ್ಮಧ್ಯೆ ಸ್ಪೀಕರ್ ಬಿರ್ಲಾ ಅವರು, ಉತ್ತರ ಮಾತ್ರ ನೀಡಿ ಎಂದು ಸೂಚನೆ ನೀಡಿದ್ದರು.

ನಂತರವೂ ಆರೋಗ್ಯ ಸಚಿವ ರಾಹುಲ್ ಗಾಂಧಿ ಅವರನ್ನು ಖಂಡಿಸುವ ಪ್ರಕಟಣೆ ಓದುವುದನ್ನು ಮುಂದುವರಿಸಿದಾಗ ಕಾಂಗ್ರೆಸ್ ಸದಸ್ಯರು ಸದನದ ಬಾವಿ ಬಳಿ ತೆರಳಿ ಪ್ರತಿಭಟನೆ ನಡೆಸಿದರು. ತೀವ್ರ ಕೋಲಾಹಲ, ಗದ್ದಲ ಏರ್ಪಟ್ಟಾಗ ಸ್ಪೀಕರ್ ಅವರು ಕಲಾಪವನ್ನು ಮುಂದೂಡಿದ್ದರು.

ಸದನದ ಬಾವಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವು ಬಿಜೆಪಿ ಸಂಸದರು ಕೈ, ಕೈ ಮಿಲಾಯಿಸಿ, ಒಬ್ಬರು ಸಂಸದರು ಕೊಲ್ಲುವುದಾಗಿ ಬೆದರಿಯೊಡ್ಡಿರುವುದಾಗಿ ಕಾಂಗ್ರೆಸ್ ಸಂಸದರು ದೂರಿದ್ದಾರೆ.

ಸ್ಪೀಕರ್ ಓಂ ಬಿರ್ಲಾ ಅವರು ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಿ ತಕ್ಷಣವೇ ಯಾರು ಕೈ, ಕೈ ಮಿಲಾಯಿಸಿದ್ದಾರೋ ಆ ಸಂಸದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ತಿಳಿಸಿದರು.

ನಂತರ ಉತ್ತರ ಪ್ರದೇಶ ಬಿಜೆಪಿ ಸಂಸದ ಬ್ರಿಜಿಭೂಷಣ್ ಸಿಂಗ್ ಅವರು ಕಾಂಗ್ರೆಸ್ ಸಂಸದ ಮಾಣಿಕಂ ವಿರುದ್ಧ ದೂರು ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next