ದೇವದುರ್ಗ: ತಾಲೂಕಿನ ಉನ್ನತೀಕರಿಸಿದ ಏಳು ಪ್ರೌಢಶಾಲೆಗಳು ಇದೀಗ ಪದವಿ ಪೂರ್ವ ಕಾಲೇಜುಗಳನ್ನಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮೇಲ್ದರ್ಜೆಗೇರಿಸಿದೆ.
ಇದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಕನಸು ಈಡೇರಿದೆ. ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿದ ನಂತರ ಪಾಸಾದ ವಿದ್ಯಾರ್ಥಿಗಳು ದೂರದ ಊರು ಅಥವಾ ಬೇರೊಂದು ತಾಲೂಕಿಗೆ ಪ್ರವೇಶ ಪಡೆದು ಅಲೆದಾಡುವಂತ ಸ್ಥಿತಿ ಇತ್ತು. ಈಗ ಸ್ವಗ್ರಾಮದಲ್ಲೇ ಕಾಲೇಜು ವಿದ್ಯಾಭ್ಯಾಸ ಮಾಡುವ ಕನಸು ಈಡೇರಿದಂತಾಗಿದೆ.
ಯಾವ ಶಾಲೆಗಳು?
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರಂತರ ಪ್ರಸ್ತಾವನೆ, ಅಗತ್ಯ ಮೂಲ ಸೌಲಭ್ಯಗಳನ್ನು ಅಳೆದು ತೂಗಿ ಏಳು ಪ್ರೌಢಶಾಲೆಗಳನ್ನು ಪಿಯು ಕಾಲೇಜಗಳನ್ನಾಗಿ ಮೇಲ್ದರ್ಜೆಗೇರಿಸಿದೆ. ಕೊಪ್ಪರ, ಸಂಕೇಶ್ವರಹಾಳ, ನಾಗಡದಿನ್ನಿ, ಹೇಮನೂರು, ಮುಷ್ಟೂರು, ಬಿ.ಗಣೇಕಲ್, ಆಲ್ಕೋಡ್ ಸೇರಿ ಏಳು ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
Related Articles
ಸ್ವಗ್ರಾಮದಲ್ಲೇ ಶಿಕ್ಷಣ
ಪ್ರೌಢಶಾಲೆ ವಿದ್ಯಾಭ್ಯಾಸ ಮುಗಿಸಿದ ನಂತರ ದೂರದ ಗ್ರಾಮಗಳಿಗೆ ಅಥವಾ ಬೇರೊಂದು ತಾಲೂಕಿಗೆ ಕಾಲೇಜು ಪ್ರವೇಶಕ್ಕೆ ಬಹುತೇಕ ಪಾಲಕರು ವಿದ್ಯಾಭ್ಯಾಸ ಮೊಟಕುಗೊಳಿಸುವ ಪರಿಪಾಠವಿತ್ತು. ಆದರೀಗ ಸ್ವಗ್ರಾಮದಲ್ಲೇ ಕಾಲೇಜು ಪ್ರಾರಂಭವಾಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಪ್ರೌಢಶಾಲೆ ಮುಗಿಸಿದ ನಂತರ ಕಾಲೇಜಗಳಿಗೆ ತೆರಳಲು 25ರಿಂದ 30 ಕಿ.ಮೀ. ದೂರದವರಿಗೆ ಹೋಗಬೇಕಿತ್ತು.
ಮೂಲ ಸೌಲಭ್ಯಗಳು
ಇಲ್ಲಿನ ಏಳು ಪ್ರೌಢಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳು ಹೊಂದಿದೆ. ಕೆಲ ಶಾಲೆಗಳಲ್ಲಿ ಅಲ್ಪಸ್ವಲ್ಪ ಸೌಲಭ್ಯ ಕೊರತೆ ಮಧ್ಯೆಯೂ ಗುಣಮಟ್ಟದ ಶಿಕ್ಷಣ ಸೌಲಭ್ಯವೊ ವಿದ್ಯಾರ್ಥಿಗಳಿಗೆ ಕೊರತೆ ಇಲ್ಲವಾಗಿದೆ. ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಸೇರಿದಂತೆ ಅಗತ್ಯ ಸೌಲಭ್ಯಗಳು ಹೊಂದಿವೆ.
ಗ್ರಾಮೀಣ ಭಾಗದ ಕೆಲ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿದ ನಂತರ ಕಾಲೇಜ್ ಪ್ರವೇಶ ಪಡೆಯಲು ದೂರದ ಊರಿಗೆ ಹೋಗಬೇಕಿದೆ. ಹೀಗಾಗಿ ಪ್ರೌಢಶಾಲೆಗಳು ಮೇಲ್ದರ್ಜೆಗೇರಿಸಬೇಕು ಎಂದು ಕಲಬುರಗಿ ವಿಭಾಗಿ ಅಪರ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. -ರಾಮಣ್ಣ ಎನ್. ಗಣೇಕಲ್ ಕಲ್ಯಾಣ ಕರ್ನಾಟಕ ವಿಮೋಚನಾ ವೇದಿಕೆ ತಾಲೂಕಾಧ್ಯಕ್ಷ
ತಾಲೂಕಿನಲ್ಲಿ ಏಳು ಪ್ರೌಢಶಾಲೆಗಳು ಪದವಿ ಪೂರ್ವ ಕಾಲೇಜಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾದಂತಾಗಿದೆ. ಶಾಸಕರ ನಿರಂತರ ಪ್ರಯತ್ನದಿಂದ ಗ್ರಾಮೀಣ ವಿದ್ಯಾರ್ಥಿಗಳ ಕನಸು ಈಡೇರಿದಂತಾಗಿದೆ. -ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ