Advertisement

ಏಳು ಬೀಳು ಕಂಡ ಹದಿನೇಳು

12:27 PM Dec 31, 2017 | |

ವಿಜಯಪುರ: ವಿಶ್ವವಿಖ್ಯಾತ ಗೋಲಗುಮ್ಮಟ ಐತಿಹಾಸಿಕ ಸ್ಮಾರಕವನ್ನು ಮಡಿಲಲ್ಲಿ ಇರಿಸಿಕೊಂಡಿರುವ ಬಸವಜನ್ಮಭೂಮಿ ವಿಜಯಪುರ ಜಿಲ್ಲೆಯ ಮಟ್ಟಿಗೆ 2017ನೇ ವರ್ಷ ಏಳು-ಬೀಳು ಕಂಡ ವರ್ಷ. ಜಿಲ್ಲೆಯನ್ನು ಸಂಪೂರ್ಣ ಸಸ್ಯಶಾಮಲೆ ಮಾಡುವ ಕನಸಿಗೆ ನೀರೆರೆಯಲು ದಶಗಳ ಹಲವು ಹೋರಾಟಗಳ ಫಲವಾಗಿ ಕೆರೆಗೆ ನೀರು ತುಂಬುವ ಯೋಜನೆಗಾಗಿ ಕಾಲುವೆ ನೀರು ಹರಿದ ವರ್ಷ ಹಾಗೂ ಹಲವು ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ದೊರೆತ ಸಂತಸದ ವರ್ಷ.

Advertisement

ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದ ವಿಜಯಪುರ ಜಿಲ್ಲೆಯ ಹೆಮ್ಮೆಯ ಕುವರಿ ರಾಜೇಶ್ವರಿ ಗಾಯಕವಾಡ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಮರೆಯಲಾರದ ವರ್ಷ. ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ಬಸವ ಧರ್ಮ-ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಕಿಚ್ಚು ಹೊತ್ತಿದ್ದು, ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲೇ. ಇದಕ್ಕಾಗಿ ಗಟ್ಟಿ ದನಿ ಎತ್ತಿದವರು ಜಿಲ್ಲೆಯವರಾದ ಸಚಿವ ಡಾ| ಎಂ.ಬಿ. ಪಾಟೀಲ.

ಮುಳವಾಡ-ಚಿಮ್ಮಲಗಿ ಏತ ನೀರಾವರಿ ಯೋಜನೆ ಕಾಲುವೆಗಳಿಗೆ ನೀರು ಹರಿದ ಸಂಭ್ರಮದ ವರ್ಷವಾದರೆ, ಚಡಚಣ, ನಾಗರಬೆಟ್ಟ, ಪೀರಾಪುರ-ಬೂದಿಹಾಳ ಹೀಗೆ ಹಲವು ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ದೊರೆತ ಸಂಭ್ರಮದ ವರ್ಷವಿದು. ಹಲವು ದಶಕಗಳಿಂದ ಜಿಲ್ಲೆಯ ರೈತರು ಕಂಡಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಜೀವಪಡೆದ ವರ್ಷ ಎಂಬ ಹಿರಿಮೆಗೆ ಪಾತ್ರವಾದ ಹದಿನೇಳು, ರಾಜ್ಯದ ಲಿಂಬೆ ಅಭಿವೃದ್ಧಿ ಮಂಡಳಿ ಕೇಂದ್ರ ಕಚೇರಿ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸ್ಥಾಪನೆಯಾದ ಐತಿಹಾಸಿಕ ವರ್ಷ.

ಇದರ ಹೊರತಾಗಿಯೂ ವಿಜಯಪುರ ಜಿಲ್ಲೆ ಹಲವು ಕಹಿ ಘಟನೆಗಳ ಮೂಲಕ ಬೀಳುಗಳನ್ನೂ ಕಂಡಿದೆ. ಹದಿನೇಳು
ಆರಂಭಗೊಂಡ ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಹೊಂದಿರುವ ರಾಜ್ಯದ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಅವರು ಚಲಿಸುತ್ತಿದ್ದ ವಾಹನ ಭೀಕರ ಅಪಘಾತಕ್ಕೆ ಸಿಕ್ಕಿದರೂ ಒಂದೇ ಒಂದು ಸಣ್ಣ ಗಾಯಗಳೂ ಆಗದೇ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು.

ಇದರ ನಂತರ ಇಂಡಿ ತಾಲೂಕಿನ ಹಳ್ಳಿಯೊಂದರಲ್ಲಿ ಅನುಮಾನದ ಮೇಲೆ ಮಹಿಳೆಯನ್ನು ಸಂಪೂರ್ಣ ಬೆತ್ತಲೆ ಮಾಡಿ ಥಳಿಸಿದ ಹೇಯ ಕೃತ್ಯ ಜರುಗಿದರೆ, ಸಿಂದಗಿ ತಾಲೂಕಿನಲ್ಲಿ ಅಂತರ್ಜಾತಿ ವಿವಾಹದ ಕಾರಣಕ್ಕೆ ದಲಿತ ಸಮುದಾಯದ ಯುವಕನ ಪಾಲಕರನ್ನು ಗಿಡಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆಯೂ ಈ ವರ್ಷದಲ್ಲೇ ನಡೆದಿದೆ. ವರ್ಷದ ಕೊನೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ-ಹತ್ಯೆ ಕೃತ್ಯದಂಥ ಅತ್ಯಂತ ಅವಮಾನಕರ ಕೃತ್ಯ ಜರುಗಿ ಇಡಿ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಯಿತು. 

Advertisement

ಇನ್ನು ಸುಪಾರಿ ಹತ್ಯೆ-ದೇಶಿ ಅಕ್ರಮ ಶಸ್ತ್ರಾಸ್ತ್ರಗಳಂಥ ಅಪರಾಧ ಕೃತ್ಯಗಳಿಂದ ಜಿಲ್ಲೆಗೆ ಕುಖ್ಯಾತಿ ತಂದಿರುವ ಜನರಿಂದ ಭಾಗಪ್ಪ ಹರಿಜನ ಮೇಲೆ ನಗರದ ಕೋರ್ಟ್‌ ಆವರಣಲ್ಲಿಯೇ ಗುಂಡಿನ ದಾಳಿ ನಡೆದು, ಐದು ಗುಂಡು ದೇಹ ಹೊಕ್ಕರೂ ಜೀವಾಪಾಯದಿಂದ ಪಾರಾಗಿದ್ದಾನೆ. ಚಡಚಣ ಬಳಿ ಇಂಥ ಅಪರಾಧ ಹಿನ್ನೆಲೆ ಹೊಂದಿದ್ದ ಧರ್ಮರಾಜ ಚಡಚಣ ಎನ್‌ಕೌಂಟರ್‌ನಲ್ಲಿ ಹತ್ಯೆಯಾದರೆ, ಸಾಯುವ ಮುನ್ನ ದಾಳಿ ನಡೆಸಿ ಪಿಎಸ್‌ಐ ಗೋಪಾಲ ಹಳ್ಳೂರ ತೀವ್ರ ಗಾಯಗೊಳ್ಳವಂತಹ ಕಹಿ ಘಟನೆಗೂ ಸಾಕ್ಷಿಯಾದ ವರ್ಷ ಹದಿನೇಳು.

ಕಳೆದ ಎರಡು ವರ್ಷಗಳಿಂದ ತಮ್ಮದೇ ಪಕ್ಷದ ಆಡಳಿತ ಸರ್ಕಾರಕ್ಕೆ ವಿಪಕ್ಷ ನಾಯಕರಂತೆ ಮಗ್ಗುಲ ಮುಳ್ಳಾಗಿ ಕಾಡಿದ ಕಾಂಗ್ರೆಸ್‌ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದು ಇದೇ ವರ್ಷ.

ಗುಡ್‌ನ್ಯೂಸ್‌
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಅಶ್ವಿ‌ನಿ ಗೋಟ್ಯಾಳ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ್ದು, ಇವರೊಂದಿಗೆಈ ಬಾರಿ ವಿಜಯಪುರ ನಗರದ ಅಜಯ  ಬಿದರಿ ಹಾಗೂ ಬಸವನಬಾಗೇವಾಡಿ ತಾಲೂಕ ಹಲಗುರ್ಕಿ ಗ್ರಾಮದ ಅವಿನಾಶ ನಡುವಿನಮನಿ ಆಯ್ಕೆಯಾಗಿ ಐತಿಹಾಸಿಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ

ವಿವಿಗೆ ನಾಮಕರಣ
ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಧಿಕೃತವಾಗಿ ಅಕ್ಕಮಹಾದೇವಿ ನಾಮಕರಣ ಮಾಡಲು
ಸ್ವಯಂ ಸಿಎಂ ಸಿದ್ದರಾಮಯ್ಯ ಅವರೇ ಆಗಮಿಸಿದ್ದರು. ಬಸವ ಜನ್ಮಭೂಮಿ ಬಸವನಬಾಗೇವಾಡಿ ಪಟ್ಟಣ ಅಭಿವೃದ್ಧಿಗೆ
ಪ್ರತ್ಯೇಕ ಪ್ರಾಧಿಕಾರ ರಚನೆ, ಕೇಂದ್ರ ಸರ್ಕಾರ ವಿದ್ಯುತ್‌ ಸ್ಥಾವರ ಕೂಡಗಿ ಎನ್‌ಟಿಪಿಸಿ ಕೇಂದ್ರಕ್ಕೆ ಬಸವೇಶ್ವರರ
ನಾಮಕರಣಕ್ಕೆ ಚಾಲನೆ ದೊರೆತಿರುವುದು 2017ರಲ್ಲಿ ಎಂಬುದು ಜಿಲ್ಲೆಯಲ್ಲಿ ನೆನಪಿನ ದೋಣಿಯಲ್ಲಿ ಅಚ್ಚಳಿಯದೇ
ಉಳಿಯುವಂತೆ ಮಾಡಿತು.

ವಿದ್ಯುತ್‌ ಉತ್ಪಾದನೆ
ಎನ್‌ಟಿಪಿಸಿ ಕೂಡಗಿ ಕೇಂದ್ರದಲ್ಲಿ ಮೊದಲ ಘಟಕದಿಂದ ವಿದ್ಯುತ್‌ ಉತ್ಪಾದನೆ ಆರಂಭಿಸಿ ಜಿಲ್ಲೆ ಐತಿಹಾಸಿಕ ಘಟನಾವಳಿಗೆ ಕಾರಣವಾದರೆ, ಇದೇ ಕೇಂದ್ರದಲ್ಲಿ ಎರಡನೇ ಘಟಕದಿಂದ ವಿದ್ಯುತ್‌ ಉತ್ಪಾದನೆಗೆ ಡಿ. 31 ಮಹೂರ್ತಕ್ಕೆ ಸಿದ್ಧತೆ ಮಾಡಿಕೊಂಡಿದೆ. 

ಸಿದ್ದೇಶ್ವರಜಾತ್ರೆ ಸಂಭ್ರಮ
ವಿಜಯಪುರ: ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಜಾತ್ರೆಗಳಲ್ಲಿ ಒಂದಾದ ಸಿದ್ದೇಶ್ವರ ಜಾತ್ರೆ ಎಂದರೆ ವಿಜಯಪುರ ತಕ್ಷಣ ನೆನಪಾಗುತ್ತದೆ. ಊರ ಹಬ್ಬ ಎಂದೇ ಕರೆಸಿಕೊಳ್ಳುವ ಸಿದ್ದೇಶ್ವರ ಜಾತ್ರೆ ಕಳೆದ ನಾಲ್ಕಾರು ವರ್ಷಗಳಿಂದ ಭೀಕರ ಬರದಿಂದ ಕ್ಷೀಣಿಸಿದ್ದ ವೈಭವ 2017ರ ಸಂದರ್ಭದಲ್ಲಿ ಕೊಂಚ ಉತ್ತಮವಾಗಿಯೇ ತನ್ನ ವೈಭವ ಮರಳಿಸಿಕೊಂಡಿತ್ತು. ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮದ್ದು ಸುಡುವ ಸಂಭ್ರಮ ಕಣ್ತುಂಬಿಕೊಂಡರೆ ಮಾತ್ರವೇ ವರ್ಣಿಸಲು ಸಾಧ್ಯ ಎಂಬಂತೆ ಮೆರುಗು ಪಡೆದಿತ್ತು.

ಬ್ಯಾಡ್‌ನ್ಯೂಸ್‌
ಮೇಲ್ಛಾವಣಿ ಕುಸಿದು ಮೂವರ ಸಾವು ಮಳೆಯಿಂದಾಗಿ ಮೇಲ್ಛಾವಣಿ ಕುಸಿದು ನಗರದ ಮಠಪತಿ ಗಲ್ಲಿಯ ಅಶೋಕ ಗೌಡನ್ನವರ (40) ವರ್ಷದ, ಪತ್ನಿ ಶಾಂತಾ (37) ಹಾಗೂ ಮೂರು ವರ್ಷದ ಪುತ್ರ ಚಂದ್ರಶೇಖರ (3) ಸ್ಥಳದಲ್ಲೇ
ಮೃತಪಟ್ಟ ಭೀಕರ ದುರಂತ ಸಂಭವಿಸಿತು. ಜಾನುವಾರುಗಳಿಗೆ ಮೇವು ತರಲು ಹೋಗಿದ್ದಾಗ ತುಂಬಿದ ಕೆರೆಯಲ್ಲಿ ನೀರು ಕುಡಿಲು ಇಳಿದು ಜಾರಿ ಬಿದ್ದು ಬಾರಾ ಕೊಟ್ರಿ ತಾಂಡಾದ ಪ್ರಿಯಾಂಕ ಚವ್ಹಾಣ ಹಾಗೂ ಮಂಜುಳಾ ಲಮಾಣಿ ಮೃತಪಟ್ಟ ಭೀಕರ ದುರಂತ ಸಂಭವಿಸಿತು.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next