ಕಾರಟಗಿ: ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಮಗು ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಮಗುವಿನ ಪಾಲಕರಿಗೆ ದಂಡ ಹಾಕಿದ ಪ್ರಕರಣ ಮಾಸುವ ಮುನ್ನವೇ ಇಂತಹದ್ದೇ ಮತ್ತೂಂದು ಪ್ರಕರಣ ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ನಡೆದಿದೆ.
ದಲಿತ ವ್ಯಕ್ತಿ ದೇವಸ್ಥಾನ ಪ್ರವೇಶ ಮಾಡಿದ್ದಾರೆ ಎನ್ನುವ ಕಾರಣಕ್ಕೆ ದಂಡ ವಿಧಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಕಾರಟಗಿ ಠಾಣೆ ಪೊಲೀಸರು ದೇವಸ್ಥಾನದ ಅರ್ಚಕ ಸೇರಿ ಎಂಟು ಜನರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಹಿನ್ನೆಲೆ: ಸೆ. 16ರಂದು ತಾಲೂಕಿನ ನಾಗನಕಲ್ಲ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ದಲಿತ ವ್ಯಕ್ತಿ ಪ್ರವೇಶಿಸಿದ್ದರು. ಈ ಕಾರಣಕ್ಕೆ ಅರ್ಚಕ ಹಾಗೂ ಗ್ರಾಮದ ಇನ್ನುಳಿದ ಏಳು ಜನ ಸವರ್ಣೀಯ ಮುಖಂಡರು ಸಿಂಧೋಳಿ ಸಮಾಜದ ವ್ಯಕ್ತಿ ಮಾರೆಪ್ಪ ಪ್ರವೇಶ ಮಾಡಿದ್ದಕ್ಕೆ ದೇಗುಲ ಮೈಲಿಗೆ ಆಗಿದೆ. ಹೀಗಾಗಿ ಆ ವ್ಯಕ್ತಿಯ ತಂದೆ ಕರೆಮಾರೆಪ್ಪ ಸಿಂಧೋಳಿಯನ್ನು ಕರೆಸಿ ಪಂಚಾಯಿತಿ ನಡೆಸಿ ದಂಡ ಹಾಕಿದ್ದರು. ಈ ಪ್ರಕರಣವನ್ನು ಅಧಿಕಾರಿಗಳು ಮುಚ್ಚಿ ಹಾಕಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಎಚ್ಚೆತ್ತ ಅಧಿಕಾರಿಗಳು 8 ಜನರ ವಿರುದ್ಧ ಶನಿವಾರ ಕೇಸ್ ದಾಖಲಿಸಿದ್ದಾರೆ.
ತಹಶೀಲ್ದಾರ್ ರವಿ ಅಂಗಡಿ, ಗಂಗಾವತಿ ಸಿಪಿಐ ಉದಯ ರವಿ, ಸಮಾಜ ಕಲ್ಯಾಣ ಇಲಾಖೆ ತಾಲೂಕಾ ಧಿಕಾರಿ ತುಗಲೆಪ್ಪ ದೇಸಾಯಿ, ಇಒ ಚಂದ್ರಶೇಖರ, ಗ್ರೇಡ್-2 ವಿಶ್ವನಾಥ್ ಮುರಡಿ ರಾಜೀವ್ ಗಾಂಧಿ ನಗರದ ಸಿಂಧೋಳಿ ಸಮಾಜದ ನೊಂದ ವ್ಯಕ್ತಿಯನ್ನು ಕುಟುಂಬದವರನ್ನು ಭೇಟಿ ಮಾಡಿ ಚರ್ಚಿಸಿದರು. ಪ್ರಕರಣ: ಬಸವರಾಜ ಶಂಕ್ರಪ್ಪ ಬಡಿಗೇರ್, ರೇವಣಯ್ಯಸ್ವಾಮಿ ಶೇಖರಯ್ಯಸ್ವಾಮಿ ಗಾಲಿಮಠ, ಶೇಖರಪ್ಪ ಬಸಣ್ಣ ರ್ಯಾವಣಕಿ, ಬಸವರಾಜ ಹನುಮಂತಪ್ಪ ತಳವಾರ, ಕಾಡಪ್ಪ ನಾಯಕ್, ದುರುಗೇಶ ಅಂಬಣ್ಣ ಸಂಕನಾಳ, ಶರಣಪ್ಪ ವೀರಭದ್ರಪ್ಪ ಗುಂಜಳ್ಳಿ, ಪ್ರಶಾಂತ ರಾಯಪ್ಪ ಅಮ್ಮಣ್ಣನವರ್ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.