Advertisement

ಸತತವಾಗಿ ಸಿಗದ ಗೆಲುವು ರಾಜ್ಯ ರಾಜಕಾರಣದ ವಿಶೇಷ

12:23 AM May 16, 2023 | Team Udayavani |

ಕರ್ನಾಟಕದ ಹಿಂದಿನ ನಾಲ್ಕು ದಶಕಗಳ ರಾಜಕಾರಣವನ್ನು ಅವಲೋಕಿಸಿದರೆ ಆಡಳಿತಾರೂಢ ಸರಕಾರ ಯಾವುತ್ತೂ ಅಧಿಕಾರಕ್ಕೆ ಬಂದಿಲ್ಲ. ಅಷ್ಟೇ ಅಲ್ಲ ಪ್ರತೀ ಅವಧಿಗೂ ಹೀನಾಯ ಸೋಲು ಅನುಭವಿಸಿವೆ. ಈ ಸಂಪ್ರದಾಯವು ಈ ಬಾರಿಯೂ ಮುಂದುವರಿದಿದೆ. ಈ ವಿದ್ಯಮಾನವನ್ನು ವಿಶ್ಲೇಷಿಸಿದರೆ 5 ವರ್ಷಗಳ ಒಂದು ಅವಧಿಗೆ ಅಧಿಕಾರ ಕಳೆದುಕೊಳ್ಳುವುದನ್ನು ಕೇವಲ ಆಡಳಿತ ವಿರೋಧಿ ಅಲೆ ಎನ್ನಲಾಗದು. ಸ್ಥಳೀಯ ವಿಷಯಗಳು, ಸೈದ್ಧಾಂತಿಕ ವಿಚಾರಗಳು, ಪಕ್ಷಾಂತರ, ಜಾತಿ, ಧಾರ್ಮಿಕ ವಿಷಯಗಳ ಮೇಲೆಯೇ ಫ‌ಲಿತಾಂಶ ಆಧರಿಸಿರುವುದು ಕಂಡು ಬಂದಿದೆ.

Advertisement

1989- ಜನತಾದಳ ಸರಕಾರ
ರಾಜ್ಯದಲ್ಲಿ 40 ವರ್ಷಗಳ ರಾಜಕಾರಣವನ್ನು ಗಮನಿಸಿದರೆ 1983-88ರ ಅವಧಿಯಲ್ಲಿ ಅಧಿಕಾರ ನಡೆಸಿದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾದಳ 89ರ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿತು. ದೇಶಕ್ಕೆ ಮಾದರಿಯಾದ ಪಂಚಾಯತ್‌ ರಾಜ್‌ ವ್ಯವಸ್ಥೆ, ಲೋಕಾಯುಕ್ತ ಇಲಾಖೆಯಲ್ಲಿ ಸುಧಾರಣೆ ಕ್ರಮಗಳನ್ನು ಅನುಷ್ಠಾನಗೊಳಿಸಿ, ಮೌಲ್ಯಾಧಾರಿತ, ಮುತ್ಸದ್ಧಿ ರಾಜಕಾರಣಿ ಎಂಬ ಖ್ಯಾತಿಗಳಿಸಿದ್ದ ರಾಮಕೃಷ್ಣ ಹೆಗಡೆ ಜತೆಗೆ ಹಲವು ಮಂದಿ ಉತ್ತಮ ನಾಯಕರುಗಳಿದ್ದರೂ ಮತ್ತೂಂದು ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತರಲಾಗಲಿಲ್ಲ. ಈ ಫ‌ಲಿತಾಂಶವನ್ನು ನೋಡುವುದಾದರೆ ಸ್ಥಳೀಯ ವಿಷಯಗಳ ಮೇಲೆಯೇ ಅವಲಂಬಿತವಾಗಿರುವುದು ಕಂಡು ಬರುತ್ತದೆ.

1994- ಕಾಂಗ್ರೆಸ್‌ ಸರಕಾರ
1989-1994ರ ಅವಧಿಯಲ್ಲಿ ವೀರೇಂದ್ರ ಪಾಟೀಲ್‌, ಬಂಗಾರಪ್ಪ, ವೀರಪ್ಪ ಮೊಲಿ ಮೂವರು ಮುಖ್ಯಮಂತ್ರಿಗಳ ಮೂಲಕ ಆಡಳಿತ ನಡೆಸಿದ ಕಾಂಗ್ರೆಸ್‌ ಕೂಡ ನೆಲಕಚ್ಚಿ ಜನತಾ ದಳ ಅಧಿಕಾರಕ್ಕೆ ಬರುವಂತಾಯಿತು. ಇಲ್ಲಿ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್‌ ಅವರನ್ನು ಸಿಎಂ ಸ್ಥಾನದಿಂದ ದಿಢೀರನೇ ಕೆಳಗಿಳಿಸಿದ್ದೇ ಸೋಲಲು ಪ್ರಮುಖ ಕಾರಣವಾಗಿತ್ತು.

1999- ಜನತಾ ದಳ
1994-1999ರ ಅವಧಿಯು ರಾಜ್ಯ, ರಾಷ್ಟ್ರ ರಾಜಕಾರಣ ಧ್ರುವೀಕರಣಕ್ಕೆ ಸಾಕ್ಷಿಯಾಯಿತು. 18 ತಿಂಗಳು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ದೇವೇಗೌಡರು ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಗದ್ದುಗೆಗೆ ಏರಿದಾಗ ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಿದರು. ಬಳಿಕ ಇಬ್ಭಾಗವಾದ ಜನತಾ ದಳ ಕೂಡ ಹೀನಾಯ ಸೋಲು ಕಂಡಿತು. ದೇವೇಗೌಡರು ಪ್ರಧಾನಿಯಾಗದೇ ಮುಖ್ಯಮಂತ್ರಿಯಾಗಿಯೇ ಮುಂದುವರಿದಿದ್ದರೆ ಇಂದಿನ ರಾಜಕೀಯ ಚಿತ್ರಣವೇ ಬೇರೆಯಾಗಿರುತ್ತಿತ್ತು.

2004- ಕಾಂಗ್ರೆಸ್‌ ಸರಕಾರ
1999ರಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಅವಧಿಯಲ್ಲಿ ಬರಗಾಲ, ರಾಜಕುಮಾರ್‌ ಅಪಹರಣ ಮತ್ತಿತರ ಸವಾಲುಗಳು ಎದುರಾದವು. ಇವುಗಳನ್ನು ನಿಭಾಯಿಸಿದ ಎಸ್‌.ಎಂ. ಕೃಷ್ಣ ಅವರಿಗೆ ತಾರಾ ವರ್ಚಸ್ಸು, ಒಕ್ಕಲಿಗ ಸಮುದಾಯದ ಬಲವಿದ್ದರೂ ಮತ್ತೂಂದು ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತರಲಾಗಲಿಲ್ಲ. 132 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಅರ್ಧದಷ್ಟು ಸ್ಥಾನ ಪಡೆದು ಸೋಲನ್ನಪ್ಪಿತು. 20ಕ್ಕೂ ಅಧಿಕ ಸಚಿವರು ಕೂಡ ಪರಾಜಿತರಾದರು.

Advertisement

2008- ಬಿಜೆಪಿ-ಜೆಡಿಎಸ್‌
2004ರಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿ ಅಧಿಕಾರ ನಡೆಸಿತು. ಬಳಿಕ ಬಿಜೆಪಿ-ಜೆಡಿಎಸ್‌ ಟ್ವೆಂಟಿ -20 ಸರಕಾರ ಅರ್ಧಕ್ಕೆ ಮುರಿದು ಬಿತ್ತು. ಎರಡೂ ರಾಷ್ಟ್ರೀಯ ಪಕ್ಷಗಳ ಜತೆ ಅಧಿಕಾರ ನಡೆಸಿದ ಜೆಡಿಎಸ್‌ ಸ್ಥಾನ 57ರಿಂದ 28ಕ್ಕೆ ಕುಸಿಯಿತು. ಮೊದಲಿಗೆ ಧರ್ಮಸಿಂಗ್‌ ನೇತೃತ್ವದ ಸರಕಾರ ರಚನೆಯಾಗಿತ್ತು. ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವರೇ ತಮ್ಮ ಪಕ್ಷದ ಶಾಸಕರ ಸಹಾಯ ಹಾಗೂ ಬಿಜೆಪಿ ನೆರವಿನಿಂದ ಸಿಎಂ ಆದರು. ಇದೇ ಸರಕಾರದಲ್ಲಿ ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಡಿಸಿಎಂ ಆದರು. ಟ್ವೆಂಟಿ-20 ತಿಂಗಳ ಒಪ್ಪಂದದಲ್ಲಿ ಸರಕಾರ ರಚನೆಯಾಗಿತ್ತು. ಕಡೆಗೆ ಬಿಜೆಪಿ ನೇತೃತ್ವದ ಸರಕಾರ ರಚನೆಯಾಗಲಿಲ್ಲ. ಇದು ಜೆಡಿಎಸ್‌ಗೆ ದೊಡ್ಡ ಅಡ್ಡಿಯಾಯಿತು.

2013- ಬಿಜೆಪಿ ಸರಕಾರ
2008ರಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಯಿತು. ಬಳಿಕ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಯಡಿಯೂರಪ್ಪ ಕೂಡ ಯಶಸ್ಸು ಕಾಣಲಿಲ್ಲ. 120 ಸ್ಥಾನಗಳಿದ್ದ ಬಿಜೆಪಿ 40ಕ್ಕೆ ಕುಸಿಯುವುದರೊಂದಿಗೆ ಹೀನಾಯ ಸೋಲು ಅನು ಭವಿಸಿತು. ಇಲ್ಲಿ ಬಿಜೆಪಿಯಿಂದ ಹೊರ ಬಂದು ಕೆಜೆಪಿ, ಬಿಎಸ್‌ಆರ್‌ ಪಾರ್ಟಿ ಸ್ಥಾಪಿಸಿದ್ದೇ ಬಿಜೆಪಿ ನೆಲಕಚ್ಚಲು ಕಾರಣವಾಗಿತ್ತು.

2018- ಕಾಂಗ್ರೆಸ್‌ ಸರಕಾರ
2013ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌, ಹಲವು ಉಚಿತ ಭಾಗ್ಯಗಳ ಹೊರತಾಗಿಯೂ ಸೋಲನ್ನಪ್ಪಿತು. 120 ಸ್ಥಾನಗಳಿಸಿದ್ದ ಕಾಂಗ್ರೆಸ್‌ ಬಳಿಕ ನಡೆದ ಚುನಾವಣೆಯಲ್ಲಿ 80ಕ್ಕೆ ಕುಸಿಯಿತು. ಆಗ ಕಾಂಗ್ರೆಸ್‌ ವಿರುದ್ಧ ಅಷ್ಟೇನು ಜನವಿರೋಧಿ ಅಭಿಪ್ರಾಯ ಇಲ್ಲದಿದ್ದರೂ ಸ್ಥಳೀಯ ವಿಷಯಗಳು, ಬಿಜೆಪಿ ಒಗ್ಗಟ್ಟು, ತಕ್ಕಮಟ್ಟಿಗೆ ಮೋದಿ ಅಲೆ ಕೆಲಸ ಮಾಡಿದ್ದರಿಂದ ಸೋಲು ಕಂಡಿತು.

2023- ಬಿಜೆಪಿ ಸರಕಾರ
2018ರಲ್ಲಿ 104 ಸ್ಥಾನ ಗೆದ್ದ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾಯಿತು. 11 ತಿಂಗಳಲ್ಲಿ ಈ ಮೈತ್ರಿ ಮುರಿದು ಬಿದ್ದು, ಅಪರೇಷನ್‌ ಕಮಲ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿ ಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಎರಡು ವರ್ಷಕ್ಕೆ ಪದಚ್ಯುತಗೊಳಿಸಿ ಆ ಸ್ಥಾನಕ್ಕೆ ಅದೇ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮಾಡಿದಂತಹ ಪ್ರಯೋಗಗಳನ್ನು ಮಾಡಿದ ಬಿಜೆಪಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಭಾರೀ ಮುಖಭಂಗ ಅನುಭವಿಸಿದೆ. ಕಳೆದ ಬಾರಿಗಿಂತ ಅರ್ಧದಷ್ಟು ಸ್ಥಾನವನ್ನು ಕಳೆದುಕೊಂಡಿದೆ.

-ಎಂ.ಆರ್‌. ನಿರಂಜನ್‌

Advertisement

Udayavani is now on Telegram. Click here to join our channel and stay updated with the latest news.

Next