Advertisement

Sagara ನಗರಸಭೆಗೆ ಪ್ರಕಟಗೊಳ್ಳದ ಮೀಸಲಾತಿ; ನ್ಯಾಯಾಲಯದ ಮೊರೆಗೆ ಬಿಜೆಪಿ ನಿರ್ಧಾರ

06:57 PM Jan 19, 2024 | Shreeram Nayak |

ಸಾಗರ: ರಾಜ್ಯ ಸರ್ಕಾರ ಮೀಸಲಾತಿಯನ್ನು ಪ್ರಕಟಿಸದಿರುವುದರಿಂದ ನಗರಸಭೆಯ ನಮ್ಮ ಎಂಟು ತಿಂಗಳ ಆಡಳಿತಾವಧಿ ವ್ಯರ್ಥವಾದಂತಾಗಿದೆ. ಸರ್ಕಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ತಕ್ಷಣ ಪ್ರಕಟಿಸದಿದ್ದರೆ ಸದ್ಯದಲ್ಲೇ ನಾವೂ ಕೂಡ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಕೆ.ಆರ್. ಗಣೇಶಪ್ರಸಾದ್ ಪ್ರಕಟಿಸಿದರು.

Advertisement

ಶುಕ್ರವಾರ ಅಣಲೆಕೊಪ್ಪದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮುನ್ನ ಇತರ ಕೆಲವರು ನ್ಯಾಯಾಲಯಕ್ಕೆ ಹೋದ ಹಿನ್ನೆಲೆಯಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ನ್ಯಾಯಾಲಯ ತೀರ್ಪು ನೀಡಲಿದೆ ಎಂದು ನಮ್ಮ ವಕೀಲರು ಆಶಯ ವ್ಯಕ್ತಪಡಿಸಿದ್ದರು. ಆದರೆ ಹೊಳೆನರಸೀಪುರದ ಪ್ರಕರಣದಲ್ಲಿ ನ್ಯಾಯಾಲಯ ಆ ಸ್ಥಳೀಯ ಸಂಸ್ಥೆಗೆ ಮಾತ್ರ ಅನ್ವಯಿಸಿ ತೀರ್ಪು ನೀಡಿದೆ. ಸರ್ಕಾರ ತನಗೆ ಬೇಕಾದ ಕೆಲವೆಡೆ ಮೀಸಲಾತಿ ಪ್ರಕಟಿಸಿದೆ.

ಈ ಹಿನ್ನೆಲೆಯಲ್ಲಿ ಜ. 22ರ ನಂತರ ಸಾಗರ ನಗರ ಬಿಜೆಪಿ ಕೂಡ ನ್ಯಾಯಾಲಯದಲ್ಲಿ ಮೀಸಲಾತಿ ಇತ್ಯರ್ಥಕ್ಕೆ ಪ್ರಕರಣ ದಾಖಲಿಸಲಿದೆ. ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ವಿಳಂಬದಿಂದ ಸದಸ್ಯರು ತಮ್ಮ ಅಧಿಕಾರದ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಗೋಪಾಲಕೃಷ್ಣ ಬೇಳೂರು ಶಾಸಕರಾಗಿ ಎಂಟು ತಿಂಗಳಾಯಿತು. ಈತನಕ ಸರ್ಕಾರದಿಂದ ಯಾವುದೇ ಹೊಸ ಅನುದಾನ ತಂದಿಲ್ಲ. ಅನುದಾನ ಬರದೆ ಇರುವುದರಿಂದ ಅಭಿವೃದ್ಧಿ ಕೆಲಸಗಳು ಮರಿಚಿಕೆಯಾಗಿದೆ. ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಶಾಸಕರು ಪ್ರಯತ್ನ ನಡೆಸಬೇಕು. ಎರಡು ದಿನಗಳ ಹಿಂದೆ ವಿನೋಬಾನಗರದಲ್ಲಿ ನಡೆದ ಅಂಗನವಾಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರ ಕೆಲಸವನ್ನು ಹಾಲಿ ಶಾಸಕರು ಪ್ರಶಂಸಿಸಿದ್ದರು. ಈಗ ನೋಡಿದರೆ ಅವರು ತಂದ ಅನುದಾನ ತಾವು ತಂದಿದ್ದು ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ನಮಗೆ ಅರ್ಥವಾಗುತ್ತಿಲ್ಲ. ಅಧಿಕಾರಿಗಳು ಅವರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ನಗರೋತ್ಥಾನ ಸೇರಿದಂತೆ ನಗರವ್ಯಾಪ್ತಿ ಅಭಿವೃದ್ಧಿಗೆ ಹಿಂದಿನ ಶಾಸಕರಾದ ಹರತಾಳು ಹಾಲಪ್ಪ ಮಂಜೂರು ಮಾಡಿಸಿದ್ದ ಅನುದಾನವನ್ನು ತಾವೇ ತಂದಿದ್ದಾಗಿ ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ನೀಡುತ್ತಿರುವುದು ಆಶ್ಚರ್ಯ ಉಂಟು ಮಾಡುತ್ತಿದೆ. ನಗರೋತ್ಥಾನ ಕಾಮಗಾರಿಯ ೩೦ ಕೋಟಿ ಹಾಗೂ ವಿಶೇಷ ಅನುದಾನ ೭ ಕೋಟಿ ರೂ.ಯನ್ನು ಹಾಲಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಮಂಜೂರು ಮಾಡಿಸಿದ್ದರು. ಈಗಾಗಲೆ ಅದಕ್ಕೆ ಸಂಬಂಧಪಟ್ಟಂತೆ ಕ್ರಿಯಾಯೋಜನೆ ಸಹ ಸಿದ್ಧಪಡಿಸಿ ಕೆಲವು ಕಡೆ ಕಾಮಗಾರಿ ನಡೆಯುತ್ತಿದೆ. ಆದರೆ ಶಾಸಕರು ಈ ಅನುದಾನ ತಂದಿದ್ದು ತಾವೇ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುತೇಕ ಅಭಿವೃದ್ಧಿ ಕೆಲಸಗಳು 2022ರಲ್ಲಿ ಹಾಲಪ್ಪ ಅವರು ಶಾಸಕರಾಗಿ, ಎಂಎಸ್‌ಐಎಲ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಂಜೂರಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಬಹುತೇಕ ವಾರ್ಡ್‌ಗಳಲ್ಲಿ ಕಾಮಗಾರಿ ಸಹ ನಡೆಯುತ್ತಿದೆ. ಹಣ ಇದ್ದರೂ ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಚುರುಕುಗೊಳಿಸಲು ಶಾಸಕರು ಯಾಕೋ ಮನಸ್ಸು ಮಾಡುತ್ತಿಲ್ಲ. ನಗರದ ಬಹುತೇಕ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣ ಇದೆ. ತಕ್ಷಣ ಶಾಸಕರು ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ವಿ.ಮಹೇಶ್, ಅರವಿಂದ ರಾಯ್ಕರ್, ಭಾವನಾ ಸಂತೋಷ್, ಪ್ರೇಮ ಕಿರಣ್ ಸಿಂಗ್, ಸತೀಶ್ ಮೊಗವೀರ, ಸಂತೋಷ್ ಶೇಟ್, ದೀಪಕ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next