Advertisement

ಬಹುದಿನದ ಬೇಡಿಕೆಗೆ ಸ್ಪಂದಿಸದ ಸಿಎಂ

10:29 AM Feb 10, 2019 | |

ರಾಯಚೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ಹಳೇ ಯೋಜನೆಗಳ ಬಗ್ಗೆ ಸೊಲ್ಲೆತ್ತದೆ ಒಂದಷ್ಟು ಹೊಸ ಕೊಡುಗೆ ನೀಡಿದ್ದಾರೆ. ಸಿಕ್ಕಿರುವ ಸೌಲಭ್ಯದಿಂದ ಜಿಲ್ಲೆಗೆ ನಿರೀಕ್ಷಿತ ಮಟ್ಟದ ಅನುಕೂಲ ಆಗಲಿಕ್ಕಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

Advertisement

ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿದ್ದು, ಅದಕ್ಕೆ ಪರ್ಯಾಯ ಜಲಾಶಯ ನಿರ್ಮಿಸುವ ಕುರಿತು ಈ ಹಿಂದೆಯೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಅಂದಾಜು 6500 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಹಿಂದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ ಕೊನೆ ಬಜೆಟ್‌ನಲ್ಲಿ ಯೋಜನಾ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಮತ್ತೂಮ್ಮೆ ಡಿಪಿಆರ್‌ ಸಿದ್ಧಪಡಿಸಲು ಸಮಿತಿ ರಚಿಸಿದ್ದರು. ಆದರೆ, ಈ ಬಾರಿ ಆ ಬಗ್ಗೆ ಪ್ರಸ್ತಾವಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಒಂದು ವೇಳೆ ಈ ಯೋಜನೆ ಜಾರಿಯಾಗಿದ್ದೇ ಆದಲ್ಲಿ ಜಿಲ್ಲೆಯ ನೀರಾವರಿ ವಲಯಕ್ಕೆ ನೀರಿನ ಸಮಸ್ಯೆಯನ್ನು ಬಹುತೇಕ ನೀಗಿಸಬಹುದಾಗಿತ್ತು. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಗಮನಕ್ಕೆ ತಂದಿದ್ದರಾದರೂ ಉಪಯೋಗವಾಗಿಲ್ಲ.

ಕಾಲುವೆ ಆಧುನೀಕರಣ: ಇನ್ನು ಮಸ್ಕಿ ಮತ್ತು ಲಿಂಗಸುಗೂರು ಭಾಗದ ಎನ್‌ಆರ್‌ಬಿಸಿ ಕಾಲುವೆ ಆಧುನೀಕರಣಕ್ಕೆ ಮತ್ತೆ 200 ಕೋಟಿ ರೂ. ನೀಡಲಾಗಿದೆ. ಇದೇ ವಿಚಾರಕ್ಕೆ ಹಿಂದಿನ ಬಜೆಟ್‌ನಲ್ಲಿ 700 ಕೋಟಿ ಘೋಷಿಸಲಾಗಿತ್ತು. ಆದರೆ, ಕಾಲುವೆಗೆ ನೀರು ಬಿಟ್ಟಾಗ ಟೆಂಡರ್‌ ಕರೆಯುತ್ತಾರೆ. ಆಗ ದುರಸ್ತಿ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ರೈತ ಸಂಘದ ಮುಖಂಡರು ದೂರು ನೀಡಿದ್ದರೂ ಆ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಕಾಲುವೆ ಆಧುನೀಕರಣ ನೆಪದಲ್ಲಿ ಕೋಟ್ಯಂತರ ಹಣ ಪೋಲಾಗುತ್ತಿದೆ ಎಂಬ ಗಂಭೀರ ಆರೋಪಗಳಿವೆ.

ಪ್ರತ್ಯೇಕ ವಿವಿ: ಪ್ರತ್ಯೇಕ ವಿವಿ ಆರಂಭವಾಗಿ ಎರಡು ವರ್ಷ ಕಳೆದಿದ್ದು, ಈವರೆಗೂ ಅನುಷ್ಠಾನಗೊಂಡಿಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ ಎರಡು ಹೊಸ ತಾಲೂಕು ಘೋಷಿಸಿದ್ದು, ಅವುಗಳಿಗೆ ಕನಿಷ್ಠ ಸ್ವಂತ ಕಟ್ಟಡ, ಪೀಠೊಪಕರಣ ಸೇರಿ ಯಾವೊಂದು ಸೌಲಭ್ಯ ಇಲ್ಲ.

ಜಲಧಾರೆರ ಯೋಜನೆ: ಇನ್ನು ಈ ಬಾರಿ ಜಿಲ್ಲೆಗೆ ಹೇಳಿಕೊಳ್ಳುವಂತ ಕೊಡುಗೆ ಸಿಕ್ಕಿಲ್ಲವಾದರೂ ಘೋಷಣೆಯಾದ ಯೋಜನೆಗಳನ್ನಾದರೂ ತ್ವರಿತಗತಿಯಲ್ಲಿ ಮಾಡಿದರೆ ಸೂಕ್ತ. ಜಲಧಾರೆ ಯೋಜನೆಯಡಿ ಆಯ್ಕೆಯಾದ ನಾಲ್ಕು ಜಿಲ್ಲೆಗಳಲ್ಲಿ ರಾಯಚೂರು ಕೂಡ ಒಂದು ಎನ್ನುವುದು ಗಮನಾರ್ಹ. ಈ ಯೋಜನೆಯಡಿ ಸಾವಿರ ಕೋಟಿ ಬಿಡುಗಡೆಯಾಗಲಿದೆ. ಇಂದಿಗೂ ಶುದ್ಧ ಕುಡಿಯುವ ನೀರಿಲ್ಲದೇ ಬಳಲುವ ಅನೇಕ ಹಳ್ಳಿಗಳು ಜಿಲ್ಲೆಯಲ್ಲಿದ್ದು, ಅವುಗಳಿಗೆ ಈ ಯೋಜನೆ ಅನುಕೂಲ ಕಲ್ಪಿಸಬಹುದು. ಎರಡು ನದಿಗಳಿದ್ದು, ಜಲಸಂಪನ್ಮೂಲ ಬಳಸಿಕೊಂಡಲ್ಲಿ ಪ್ರತಿ ಮನೆಗೂ ನೀರು ಪೂರೈಸಬಹುದು. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದೋ ನೋಡಬೇಕು.

Advertisement

ರೈತ ಪ್ರಾತ್ಯಕ್ಷಿಕೆ ಕೇಂದ್ರ: ಸಿಂಧನೂರಿನಲ್ಲಿ ರೈತ ಪ್ರಾತ್ಯಕ್ಷಿಕೆ ಕೇಂದ್ರ ಮಂಜೂರು ಮಾಡಲಾಗಿದೆ. ಗ್ರಾಮೀಣ ಕ್ಷೇತ್ರದ ಬಸಪ್ಪ ಕೆರೆ ತುಂಬಿಸಲು 70 ಕೋಟಿ ನೀಡಲಾಗಿದೆ.

ಗಣೇಕಲ್‌ ಜಲಾಶಯಕ್ಕೆ ನೀರು: ಇನ್ನು ಗಣೇಕಲ್‌ ಜಲಾಶಯಕ್ಕೆ ಕೃಷ್ಣಾ ನದಿಯಿಂದ ನೀರು ತುಂಬಿಸಲು 140 ಕೋಟಿ ನೀಡಲಾಗಿದೆ. ಇದರಿಂದ ಬೇಸಿಗೆಯಲ್ಲಿ ನಗರ ಸೇರಿ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಕೇವಲ ತುಂಗಭದ್ರಾ ಜಲಾಶಯವನ್ನು ಮಾತ್ರ ನೆಚ್ಚಿಕೊಳ್ಳದೆ ನಾರಾಯಣಪುರ ಜಲಾಶಯದಿಂದಲೂ ನೀರು ಪೂರೈಸಲು ಅನುಕೂಲವಾಗಲಿದೆ. ಅಲ್ಲದೇ, ಇದರಿಂದ ಕೃಷಿಗೂ ಸಂಕಷ್ಟ ಕಾಲದಲ್ಲಿ ನೀರುಣಿಸಬಹುದು.

ಬ್ರಿಡ್ಜ್ ಕಂ ಬ್ಯಾರೇಜ್‌: ಚಿಕ್ಕಮಂಚಾಲಿಯಿಂದ ಮಂತ್ರಾಲಯಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲು 50 ಕೋಟಿ ನೀಡಲಾಗಿದೆ. ಇದರಿಂದ ಮಂತ್ರಾಲಯಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಬಹುದು. ಆದರೆ ಬ್ಯಾರೇಜ್‌ನಿಂದ ಆಂಧ್ರ ಜನ ಕೂಡ ನೀರು ಬಳಸಿಕೊಳ್ಳುವ ಸಾಧ್ಯತೆ ಅಲ್ಲಗಳೆಯಲಾಗದು.

ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿಲ್ಲ
ಬಜೆಟ್‌ನಲ್ಲಿ ಕುಡಿಯುವ ನೀರಿಗೆ ಬಿಟ್ಟರೆ ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿಲ್ಲ. ಹಳೇ ಯೋಜನೆಗಳಲ್ಲಿ ಕೆಲವಾದರೂ ಹಂತ ಹಂತವಾಗಿ ಈಡೇರಿಸಲಿ ಎಂಬುದು ರೈತರ ಹಕ್ಕೊತ್ತಾಯ. ಇನ್ನು ಕೈಗಾರಿಕೆ ವಲಯವೂ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದೆ. ಕೈಗಾರಿಕೆ ವೃದ್ಧಿಯಲ್ಲಿ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿದ್ದರೂ ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವುದು ವಾಣಿಜ್ಯೋದ್ಯಮಿಗಳ ಆಕ್ಷೇಪ.

ಹೈಕ ಅನುದಾನಕ್ಕೇ ಕೊಕ್ಕೆ
ನಂಜುಂಡಪ್ಪ ವರದಿಯನ್ವಯ ಅತಿ ಹಿಂದುಳಿದ ಹೈದರಾಬಾದ್‌-ಕರ್ನಾಟಕ ಭಾಗದ ಜಿಲ್ಲೆಗಳ ಪ್ರಗತಿಗೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇಲ್ಲಿಗೆ ನೀಡುವ ವಿಶೇಷ ಅನುದಾನ ಕೇವಲ ಮೂಲ ಸೌಕರ್ಯಗಳನ್ನು ಕಲ್ಪಿಸಲು ಬಳಸಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರ ಪ್ರತಿ ವರ್ಷ 1500 ಕೋಟಿ ಅನುದಾನ ಮೀಸಲಿಡುತ್ತದೆ. ಅದೇ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿದೆ. ಈ ಬಾರಿಯೂ 150 ಕೋಟಿ ಹಣವನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ನೀಡುವುದಾಗಿ ಸಿಎಂ ಘೋಷಿಸಿದ್ದು, ಪ್ರತ್ಯೇಕ ನೀಡಿ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡಿದೆ. ಒಟ್ಟಾರೆ ಮೂಗಿಗೆ ತುಪ್ಪ ಸವರಿದಂತೆ ಸಿಎಂ ಪದೇ ಪದೇ ರಾಯಚೂರು ಹೆಸರು ಉಲ್ಲೇಖೀಸಿದರಾದರೂ ಹೇಳಿಕೊಳ್ಳುವಂಥ ಯೋಜನೆಗಳನ್ನೇನು ಕೊಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next