Advertisement

ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಯೋಜನೆ: ಪೂರ್ವ ತಯಾರಿ ಅಗತ್ಯ

08:41 AM Aug 30, 2017 | |

ಕೊನೆಗೂ ಸರಕಾರ ನಿರ್ದಿಷ್ಟ ಜಾತಿ, ಸಮುದಾಯಗಳಿಗೆ ಸೀಮಿತಗೊಳಿಸದೆ ಎಲ್ಲ ಪ್ರಜೆಗಳಿಗೂ ಅನ್ವಯಿಸುವ ಯೋಜನೆ ಘೋಷಿಸಿದೆ ಎನ್ನುವುದು ಸಮಾಧಾನ ಕೊಡುವ ಸಂಗತಿ.

Advertisement

ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ರಾಜೀವ್‌ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರದ 8 ರೀತಿಯ ಆರೋಗ್ಯ ಯೋಜನೆಗಳನ್ನು ವಿಲೀನಗೊಳಿಸಿ ಏಕರೂಪದ ಆರೋಗ್ಯ ಕಾರ್ಡ್‌ ನೀಡುವ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಯೋಜನೆಯ ಪರಿಕಲ್ಪನೆ ಅತ್ಯುತ್ತಮವಾಗಿದೆ. ಬಿಪಿಎಲ್‌, ಎಪಿಎಲ್‌ ಎಂದು ಬೇಧ ಮಾಡದೆ ಎಲ್ಲರಿಗೂ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಅಥವಾ ಮಿತದರದಲ್ಲಿ ಚಿಕಿತ್ಸೆ ಲಭಿಸುವಂತೆ ಮಾಡಲಿರುವ ಈ ಯೋಜನೆ ಆರಂಭದಲ್ಲೇ ಭಾರೀ ನಿರೀಕ್ಷೆಗಳನ್ನು ಹುಟ್ಟಿಸಿದೆ. ರಾಜ್ಯದ ಸುಮಾರು 1.48 ಕೋಟಿ ಕುಟುಂಬಗಳಿಗೆ ಯೋಜನೆಯಿಂದ ಪ್ರಯೋಜನವಿದೆ ಎನ್ನಲಾಗುತ್ತಿದೆ. ಅಂತೆಯೇ ಇಡೀ ದೇಶದಲ್ಲಿ ಇಂತಹ ಸಮಗ್ರ ಮತ್ತು ಸರ್ವರಿಗೂ ಅನ್ವಯಿಸುವಂತಹ ಆರೋಗ್ಯ ಯೋಜನೆಯೊಂದು ಜಾರಿಯಾಗುತ್ತಿರುವುದು ಇದೇ ಮೊದಲು. ಸಮರ್ಪಕವಾಗಿ ಅನುಷ್ಠಾನಿಸಿದರೆ ಇದು ದೇಶಕ್ಕೆ ಮಾದರಿ ಆಗಬಲ್ಲ ಯೋಜನೆ ಎನ್ನುವುದರಲ್ಲಿ ಅನುಮಾನವಿಲ್ಲ. 

  ಆದರೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆಯೇ ಅಥವಾ ಇದು ಚುನಾವಣೆ ಕಾಲಕ್ಕಾಗುವಾಗ ಜನರನ್ನು ಮರಳುಗೊಳಿಸಲು ರೂಪಿಸಿರುವ ಯೋಜನೆಯೇ? ಏಕೆಂದರೆ ಇಷ್ಟು ಬೃಹತ್‌ ವ್ಯಾಪ್ತಿಯ ಯೋಜನೆಯನ್ನು ಜಾರಿಗೊಳಿಸಲು ಸಾಕಷ್ಟು ತಯಾರಿಯ ಅಗತ್ಯವಿದೆ. ಆಸ್ಪತ್ರೆಗಳ ಮೂಲಸೌಕರ್ಯಗಳ ಸುಧಾರಣೆಯಿಂದ ಹಿಡಿದು ವೈದ್ಯರು ಮತ್ತು ಸಿಬ್ಬಂದಿಗಳ ನೇಮಕಾತಿ ತನಕ ಹತ್ತಾರು ಪ್ರಕ್ರಿಯೆಗಳು ಆಗಬೇಕು. ಇದಕ್ಕೂ ಮೊದಲು ಎಲ್ಲರನ್ನೂ ಯೋಜನೆಯೊಳಗೆ ತರಲು ಹೆಲ್ತ್‌ಕಾರ್ಡ್‌ ನೀಡುವ ಕೆಲಸವಾಗಬೇಕು. ಇಷ್ಟೆಲ್ಲ ಮಾಡಲು ಸರಕಾರದ ಬಳಿ ಇರುವುದು ಬರೀ ನಾಲ್ಕು ತಿಂಗಳು ಮಾತ್ರ. ಒಮ್ಮೆ ಚುನಾವಣೆ ಘೋಷಣೆಯಾದರೆ ಕೈಕಟ್ಟಿ ಹಾಕಿದಂತಾಗುತ್ತದೆ. ಇಷ್ಟು ಕಿರು ಅವಧಿಯಲ್ಲಿ ಆರೋಗ್ಯ ಭಾಗ್ಯ ಯೋಜನೆ ಜಾರಿಯಾಗಬಹುದೇ?

ರೈತರು, ಅಸಂಘಟಿತ ವಲಯದ ಕಾರ್ಮಿಕರು, ಚಿಂದಿ ಆಯುವವರು, ರಸ್ತೆ ಬದಿ ವ್ಯಾಪಾರಿಗಳು, ಕಟ್ಟಡ ನಿರ್ಮಾಣ ಕೆಲಸಗಾರರು, ನೈರ್ಮಲ್ಯ ಕಾರ್ಮಿಕರು, ಪೌರ ಕಾರ್ಮಿಕರು ಮತ್ತಿತರ ದುರ್ಬಲ ವರ್ಗದವರೆಲ್ಲ  ಸದಾ ಸೌಲಭ್ಯ ವಂಚಿತರ ಸಾಲಲ್ಲೇ ಇರುತ್ತಾರೆ. ಅದರಲ್ಲೂ ಅನಾರೋಗ್ಯದ ಸಂದರ್ಭಗಳಲ್ಲಿ ಅವರಿಗೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ಗಗನಕುಸುಮವೇ ಸರಿ. ಇಷ್ಟವಿದ್ದರೂ ಇಲ್ಲದಿದ್ದರೂ ಸರಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಅವರದ್ದು. ಇಂಥವರಿಗೆಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ದೊರಕುವಂತೆ ಮಾಡಲಿದೆ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಯೋಜನೆ. ಇದರ ಸದಸ್ಯತ್ವಕ್ಕೆ ಸರಕಾರ ಆಧಾರ್‌ ಕಡ್ಡಾಯ ಮಾಡಿದೆ. ಆದರೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಘೋಷಿಸಿ ನೀಡಿದ ತೀರ್ಪಿನಿಂದಾಗಿ ಆಧಾರ್‌ ಅನ್ನು ಸರಕಾರಿ ಯೋಜನೆಗಳಿಗೆ ಬಳಸುವ ಕುರಿತು ಅನಿಶ್ಚಿತತೆ ಎದುರಾಗಿದೆ.  ಒಂದು ವೇಳೆ ಆಧಾರ್‌ ಅನ್ನು ಸರಕಾರಿ ಸೌಲಭ್ಯಗಳಿಗೆ ಸಂಯೋಜಿಸಬಾರದು ಎಂಬ ತೀಪೆìನಾದರೂ ಬಂದರೆ ಏನು ಮಾಡುವುದು? ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಗೆ ಒಡಂಬಡುವಂತೆ ಹೇಗೆ ಮಾಡುವುದು ಎಂಬ ಪ್ರಶ್ನೆಯೂ ಇಲ್ಲಿದೆ. ಸರಕಾರ ನಿಗದಿಪಡಿಸಿದ ದರಕ್ಕೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಒಪ್ಪುವುದು ಅನುಮಾನ. ಒಂದು ವೇಳೆ ಒಪ್ಪಿದರೂ ಚಿಕಿತ್ಸೆಯ ಗುಣಮಟ್ಟವೂ ಅದಕ್ಕೆ ತಕ್ಕಂತಿರಬಹುದು. ಈ ಅಂಶವನ್ನೂ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸಬೇಕು. ಖಾಸಗಿ ಆಸ್ಪತ್ರೆಗೆ ಹೋದ ಬಡವನಿಗೆ ಅನಾದರದ ಅನುಭವವಾದರೆ ಒಟ್ಟಾರೆ ಆಶಯವೇ ವಿಫ‌ಲಗೊಂಡಂತೆ.  ಆರಂಭದಲ್ಲೇ ಯೋಜನೆ ಕುರಿತು ಹಲವು ಗೊಂದಲಗಳು ಎದುರಾಗಿವೆ. ಯಶಸ್ವಿನಿಯಂತಹ ಯಶಸ್ವಿ ಕಾರ್ಯಕ್ರಮವನ್ನು ಕೈಬಿಡುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಬೇಕಾದರೆ ಸರಕಾರಿ ವೈದ್ಯರು ಶಿಫಾರಸು ಪತ್ರ ಕೊಡಬೇಕು ಎಂಬಂತಹ ನಿಯಮಗಳಿಂದಾಗುವ ತೊಡಕುಗಳ ನಿವಾರಣೆಯ ಬಗ್ಗೆಯೂ ಸರಕಾರ ಸ್ಪಷ್ಟನೆ ನೀಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಸರಕಾರಿ ವೈದ್ಯರ ಬಳಿ ವಶೀಲಿಬಾಜಿ ನಡೆಸುವ ಅಂತೆಯೇ ಸರಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳ ಜತೆಗೆ ಕೈಜೋಡಿಸುವಂತಹ ಭ್ರಷ್ಟಾಚಾರಗಳಿಗೂ ಎಡೆಮಾಡಿಕೊಡುವ ಸಾಧ್ಯತೆಯೂ ಇದೆ. ಏನೇ ಆದರೂ ಅಧಿಕಾರದ ಕಡೆಯ ಘಟ್ಟದಲ್ಲಾದರೂ ಸರಕಾರ ನಿರ್ದಿಷ್ಟ ಜಾತಿ, ಸಮುದಾಯಗಳಿಗೆ ಸೀಮಿತಗೊಳಿಸದೆ ರಾಜ್ಯದ ಎಲ್ಲ ಪ್ರಜೆಗಳಿಗೂ ಅನ್ವಯಿಸುವ ಯೋಜನೆಯೊಂದನ್ನು ಘೋಷಿಸಿದೆ ಎನ್ನುವುದು ಸಮಾಧಾನ ಕೊಡುವ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next