Advertisement

ಯೋಗ ಪಾರ್ಕ್‌, ಜಿಲ್ಲೆಗೊಂದು ಆಯುಷ್‌ ಆಸ್ಪತ್ರೆ: ಶ್ರೀಪಾದ ನಾಯಕ್‌

06:00 AM Jun 17, 2018 | Team Udayavani |

ಉಡುಪಿ: ಕೇಂದ್ರ ಸರಕಾರದ ಆಯುಷ್‌ ಮಿಶನ್‌ ಯೋಜನೆಯ ಮೂಲಕ ದೇಶದ ಪ್ರತೀ ಜಿಲ್ಲೆಯಲ್ಲಿಯೂ ಆಯುಷ್‌ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲಾಗುವುದು. ಈಗಾಗಲೇ 100 ಜಿಲ್ಲೆಗಳಲ್ಲಿ ಆಸ್ಪತ್ರೆ ಪ್ರಾರಂಭಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ಎಲ್ಲ 640 ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆ ಆಯುಷ್‌ ಮಂತ್ರಾಲಯದ ಮುಂದಿದೆ ಎಂದು ಕೇಂದ್ರ ಆಯುಷ್‌ ಸಚಿವ ಶ್ರೀಪಾದ ನಾಯಕ್‌ ಅವರು ಉಡುಪಿಯಲ್ಲಿ ಶನಿವಾರ ಹೇಳಿದರು.

Advertisement

ಪ್ರತೀ ಆಸ್ಪತ್ರೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ತಲಾ 14 ಕೋ.ರೂ. ಮೀಸಲಿರಿಸಲಾಗಿದೆ. ಆಯುಷ್‌ ಚಿಕಿತ್ಸಾಲ
ಯದಲ್ಲಿ ಇಎಸ್‌ಐ ಸೌಲಭ್ಯವನ್ನೂ ಒದಗಿಸಲಾಗುತ್ತದೆ. 100 ನಗರಗಳಲ್ಲಿ ಯೋಗ ಪಾರ್ಕ್‌ ನಿರ್ಮಾಣವಾಗಲಿದೆ. ಮುಂದಿನ ವರ್ಷ ಮತ್ತೂ 150 ನಗರಗಳನ್ನು ಸೇರ್ಪಡೆ ಮಾಡಲಾಗುವುದು. ಸಹಭಾಗಿತ್ವ ಮತ್ತು ಸಂಶೋಧನೆಯ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಒಪ್ಪಂದವನ್ನೂ ಮಾಡಲಾಗಿದೆ ಎಂದರು.

ಯೋಗ ಗ್ರಾಮ ಘೋಷಣೆ
ಕೇರಳದ ಅಲೆಪ್ಪಿ ಜಿಲ್ಲೆಯ ಮೊಹಮಮ್‌ ಗ್ರಾಮವನ್ನು ಯೋಗ ಗ್ರಾಮವನ್ನಾಗಿ ಘೋಷಿಸಲಾಗಿದೆ. ಇಲ್ಲಿನ ಎಲ್ಲ ಮನೆಯಲ್ಲಿ ಎಲ್ಲರೂ ಯೋಗಮಾಡುತ್ತಾರೆ. ದೇಶದ ಪ್ರಪ್ರಥಮ ಯೋಗ ಗ್ರಾಮ ಇದಾಗಿದೆ ಎಂದರು.

ಯೋಗ ದಿನಕ್ಕೆ ತಯಾರಿ
ಹೊಸದಿಲ್ಲಿ, ಚಂಡೀಗಢ, ಲಕ್ನೋದ ಬಳಿಕ ಈ ಬಾರಿ 4ನೇ ವರ್ಷದ ಯೋಗ ದಿನಾಚರಣೆಯು ಉತ್ತರಾಖಂಡ್‌ನ‌ ಡೆಹ್ರಾಡೂನ್‌ನಲ್ಲಿ ನಡೆಯಲಿದೆ. ಸುಮಾರು 50 ಸಾವಿರ ಜನರ ನಿರೀಕ್ಷೆ ಇದೆ. ಯೋಗ ದಿನದಲ್ಲಿ ಎಷ್ಟು ಜನ ಭಾಗವಹಿಸಿದರೆನ್ನುವ ಕುರಿತು ದಾಖಲೀಕರಣ ನಡೆಯಲಿದೆ. ವಿವಿಧ ದೇಶಗಳಲ್ಲಿರುವ ರಾಯಭಾರ ಕಚೇರಿಗಳ ಮೂಲಕ ವಿದೇಶಗಳಲ್ಲಿ ಯೋಗದ ಮಾಹಿತಿಯನ್ನು ಪಸರಿಸಲಾಗುವುದು ಎಂದರು.

ಯೋಗ ಸಾಧಕರಿಗೆ ನಾಲ್ಕು ಪ್ರಶಸ್ತಿ
ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡವರು, ಸಾಮಾಜಿಕವಾಗಿ ಯೋಗವನ್ನು ಪ್ರಸಿದ್ಧಿಗೆತಂದ ಭಾರತೀಯರು ಮತ್ತು ವಿದೇಶೀಯರಿಗೆ ತಲಾ ಎರಡು ಪ್ರಧಾನ ಮಂತ್ರಿ ಪ್ರಶಸ್ತಿ ನೀಡಲು ಆಯುಷ್‌ ಮಂತ್ರಾಲಯ ನಿರ್ಧರಿಸಿದೆ ಎಂದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next