Advertisement

ಕೇಂದ್ರ ಸಚಿವ ಖೂಬಾ ಮತ್ತು ರೈತನ ನಡುವೆ ವಾಗ್ವಾದ: ಆಡಿಯೋ ವೈರಲ್, ಆಕ್ರೋಶ

06:32 PM Jun 16, 2022 | Team Udayavani |

ಬೀದರ್ : ರಸಗೊಬ್ಬರ ವಿಷಯವಾಗಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ತವರು ಕ್ಷೇತ್ರದ ರೈತರೊಬ್ಬರಿಗೆ ಉಡಾಫೆಯಾಗಿ ಮಾತನಾಡಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ರೈತ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

ಐದಾರು ದಿನಗಳ ಹಿಂದೆ ಔರಾದ್ ತಾಲೂಕಿನ ಹೆಡಗಾಪುರದ ರೈತ ಸಚಿವ ಖೂಬಾ ಅವರ ಮೊಬೈಲ್‌ಗೆ ಕರೆ ಮಾಡಿ ತಮ್ಮ ಗ್ರಾಮದಲ್ಲಿ ಗೊಬ್ಬರ ಕೊರತೆ ಕುರಿತು ಮಾತನಾಡಿದ್ದು, ಬೇಗ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಸಮಾಧಾನಕರ ಉತ್ತರ ನೀಡಬೇಕಿದ್ದ ಸಚಿವರು, ಅದಕ್ಕೆ ನಾನೇನು ಮಾಡಲಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಈ ವೇಳೆ ಸಚಿವರ ಮತ್ತು ರೈತ ಮಧ್ಯ ಏಕ ವಚನದಲ್ಲಿ ಮಾತಿನ ವಾಗ್ವಾದ ಆಗಿದ್ದು, ಒಬ್ಬರಿಗೊಬ್ಬರು ಅವಾಜ್ ಹಾಕಿದ್ದ ಸಂಭಾಷಣೆ ಆಡಿಯೋ ಚರ್ಚೆಗೆ ಗ್ರಾಸವಾಗಿದೆ.

ಗೊಬ್ಬರವನ್ನು ಕೇಂದ್ರದಿಂದ ನಾವು ಕರ್ನಾಟಕಕ್ಕೆ ಕಳುಹಿಸುತ್ತೇವೆ. ರೈತನ ಮನೆ-ಮನೆಗೆ ಗೊಬ್ಬರ ಕಳುಹಿಸುವ ಕೆಲಸ ನನ್ನದಲ್ಲ. ಕೆಳಗಿನ ಸಾವಿರಾರು ಜನ ನೌಕರರರಿದ್ದಾರೆ. ಅಲ್ಲಿನ ಶಾಸಕ ಇದಾನಲ್ಲ ಅವನಿಗೆ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ಲವೇ ಎಂದು ಏಕ ವಚನದಲ್ಲಿ ಮಾತನಾಡಿದ್ದಾರೆ. ನೀವು ನಮ್ಮವರೂ ಎಂದು ಜನ ನಿಮಗೆ ಕೇಳುತ್ತಾರೆ ಎಂದಿದಕ್ಕೆ ಖೂಬಾ, ನನಗ್ ಯ್ಯಾಕ್ ಕೇಳ್ತಾರಾ. ಗೊಬ್ಬರ ರಾಜ್ಯಕ್ಕೆ ಕಳಿಸೋದು ನನ್ನ ಕೆಲಸ, ಕಳಿಸಿದ್ದೇನೆ. ಬರುತ್ತದೆ ಬಿಡಿ ಎಂದಿದ್ದಾರೆ. ಇದರಿಂದ ಕೆರಳಿದ ರೈತ ಸಹ ಸಚಿವರಿಗೆ ಜೋರು ಧ್ವನಿಯಲ್ಲಿ ಮುಂದಿನ ಚುನಾವಣೆಯಲ್ಲಿ ನೋಡ್ಕೊತಿವಿ ಎಂದು ಅವಾಜ್ ಹಾಕಿದ್ದಾರೆ. ಇಂಥ ಚುನಾವಣೆಯನ್ನು ನಾನು ಎಷ್ಟೋ ನೋಡಿರುವೆ ಎಂದು ಖೂಬಾ ಸಹ ಜೋರಾಗಿಯೇ ಮಾತನಾಡಿದ್ದಾರೆ.

ಇದನ್ನೂ ಓದಿ :  ಕಾವೇರಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ರೈತನಲ್ಲ ಎಂದ ಖೂಬಾ

Advertisement

ಕೇಂದ್ರ ಸಚಿವರು ಮತ್ತು ರೈತರ ನಡುವೆ 4 ನಿಮಿಷದ ಆಡಿಯೋ ಸಂಭಾಷಣೆ ಇದಾಗಿದೆ. ಹೆಡಗಾಪುರದ ರೈತ ಎಂದು ಖೂಬಾ ಜತೆ ಮಾತನಾಡಿದ್ದು ಕುಶಾಲ ಪಾಟೀಲ ಎಂದು ಹೇಳಲಾಗುತ್ತಿದ್ದು, ಇವರು ಔರಾದ ತಾಲೂಕಿನ ಜೀರ್ಗಾ(ಕೆ) ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ರಸಗೊಬ್ಬರ ಕುರಿತಾಗಿ ನನ್ನೊಂದಿಗೆ ಮಾತನಾಡಿದ ವ್ಯಕ್ತಿ ರೈತನಲ್ಲ, ಒಬ್ಬ ಸರ್ಕಾರಿ ಶಾಲೆಯ ಸಹ ಶಿಕ್ಷಕ. ರಾತ್ರಿ ವೇಳೆ ಕರೆ ಮಾಡಿದ್ದ ವ್ಯಕ್ತಿ ರಸಗೊಬ್ಬರ ಬಗ್ಗೆ ಕೇಳುತ್ತಾ ಆಕ್ಷೇಪಾರ್ಯ ಪದಗಳು ಬಳಸಿದ್ದು, ನಾನು ಯಾವ ಮಾತುಗಳಿಗೆ ಉತ್ತರಿಸಬೇಕು ಅಷ್ಟಕ್ಕೆ ಮಾತ್ರ ಉತ್ತರಿಸಿದ್ದೇನೆ. ಆದರೆ, ಅವರಿಗೆ ಬೇಕಾದಷ್ಟು ಸಂಭಾಷಣೆಯನ್ನು ಎಡಿಟ್ ಮಾಡಿಕೊಂಡು ಇಂದು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಮ್ಮ ಸರ್ಕಾರಕ್ಕೆ ಹಾಗೂ ನನ್ನ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದ್ದು, ನಾನು ಮತ್ತು ನಮ್ಮ ಸರ್ಕಾರ ಸದಾಕಾಲ ರೈತ ಪರ ಕೆಲಸ ಮಾಡುತ್ತಿದೆ ಎಂದು ಭಗವಂತ ಖೂಬಾ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next